ಕ್ಯಾಲಿಫೋರ್ನಿಯಾದಲ್ಲೊಂದು ಕನ್ನಡ ಬಳಗ
ಸನಿವೇಲ್ : ಉತ್ತರ ಕ್ಯಾಲಿಫೋರ್ನಿಯಾದ ಸನಿವೇಲ್ನಲ್ಲಿ ಕಳೆದ ಭಾನುವಾರ ವಿಶಿಷ್ಟ ಹಾಗೂ ವಿನೂತನ ರೀತಿಯಲ್ಲಿ ಕನ್ನಡ ಕೆಲಸ ಮಾಡಲು ಹೊಸ ಕನ್ನಡ ಬಳಗವನ್ನು ಹುಟ್ಟು ಹಾಕಲಾಯಿತು. ಇಲ್ಲಿ ಏರ್ಪಡಿಸಲಾಗಿದ್ದ ಪುರಂದರ ದಾಸರ ದಿನಾಚರಣೆಯ ಸಂದರ್ಭದಲ್ಲಿ ಈ ಹೊಸ ಸಂಘಟನೆ ರೂಪುತಾಳಿತು.
ಕನ್ನಡ ಸಂಸ್ಕೃತಿ - ಪರಂಪರೆಯ ವೈಶಿಷ್ಟ್ಯವನ್ನು ಬಿಂಬಿಸಲು ಒಂದು ಸಂಘಟನೆ ಇರಬೇಕು ಎಂಬ ಉತ್ತರ ಕ್ಯಾಲಿಫೋರ್ನಿಯಾದ ಕನ್ನಡಿಗರ ಬಹುದಿನಗಳ ಕನಸು ಈ ಮೂಲಕ ನನಸಾಯಿತು. ಕನ್ನಡ ಮತ್ತು ಸಂಸ್ಕೃತ ಪಂಡಿತರಾದ ವಿದ್ವಾನ್ ಗಜಾನನ ಜೋಷಿಯವರ ಮಾರ್ಗದರ್ಶನದಲ್ಲಿ ಉದಯವಾಗಿರುವ ಈ ಬಳಗದ ಧ್ಯೇಯೋದ್ದೇಶಗಳ ಬಗ್ಗೆ ಈ ಸಂದರ್ಭದಲ್ಲಿ ವಿವರಿಸಲಾಯಿತು.
ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಕನ್ನಡ ಶಾಲೆಗಳನ್ನು ನಡೆಸುವುದು, ಕವಿಗೋಷ್ಠಿ, ವಿಚಾರ ಸಂಕಿರಣ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ಕನ್ನಡನಾಡಿನಿಂದ ಅಮೆರಿಕೆಗೆ ಬರುವ ಸಾಹಿತಿಗಳನ್ನು ಬಳಗಕ್ಕೆ ಬರಮಾಡಿಕೊಂಡು ಉಪನ್ಯಾಸ ಕಾರ್ಯಕ್ರಮ ಏರ್ಪಡಿಸುವುದು, ಕನ್ನಡಕ್ಕಾಗಿ ಅಮೆರಿಕೆಯಲ್ಲಿ ದುಡಿಯುತ್ತಿರುವವರನ್ನು ಗುರುತಿಸಿ ಸನ್ಮಾನಿಸುವುದು, ವಿದೇಶವಾಸಿಗಳಾದ ಕನ್ನಡಿಗರು ಸಂಕಷ್ಟದಲ್ಲಿದ್ದಾಗ ನೆರವಾಗುವುದು ಬಳಗದ ಉದ್ದೇಶವಾಗಿದೆ ಎಂದು ಜೋಷಿಯವರು ಹೇಳಿದರು.
ಮುನ್ನೂರಕ್ಕೂ ಹೆಚ್ಚು ಕನ್ನಡಿಗರು ಪಾಲ್ಗೊಂಡಿದ್ದ ಈ ಕಾರ್ಯಕ್ರಮದಲ್ಲಿ ವೇದ ಘೋಷಗಳ ನಡುವೆ ವಿಧ್ಯುಕ್ತವಾಗಿ ದೀಪ ಬೆಳಗಿಸಿ ಶಿಕಾರಿಪುರ ಹರಿಹರೇಶ್ವರ ಅವರು ಬಳಗವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈಗಾಗಲೇ ಕನ್ನಡ ಕೆಲಸದಲ್ಲಿ ತೊಡಗಿರುವ ಕನ್ನಡ ಕೂಟಗಳ ಸಹಕಾರ ಹಾಗೂ ಸಹಯೋಗದೊಂದಿಗೆ ಈ ನೂತನ ಕನ್ನಡ ಬಳಗ ಬೆಳೆಯಲಿ, ಎಲ್ಲ ಕನ್ನಡ ಸಂಘಟನೆಗಳ ಕಾರ್ಯಕ್ರಮಗಳೂ ಪರಸ್ಪರ ಪೂರಕವಾಗಿರಲಿ ಎಂದು ಹಾರೈಸಿದರು.