‘ಬ್ಯಾಂಟರ್ ಬಾಬು’ ಅವರೇ, ನಿಮ್ಮ ವ್ಯಂಗ್ಯಚಿತ್ರ ನೋಡಿದೆ, ಚೆನ್ನಾಗಿವೆ
- ಶಾಮ್
ಇವರೆಲ್ಲ ದೇಶಾದ್ಯಂತ ಪರಿಚಿತರು. ನಮ್ಮ ನಾಡಿನಲ್ಲಿ ಹೆಸರು ಮಾಡಿದವರ ಹೆಸರುಗಳು ನಿಮಗೆ ಗೊತ್ತಿದೆ. ನಾಡಿಗ್, ಹುಬ್ಲೀಕರ್, ನರೇಂದ್ರ, ಬಿ.ವಿ. ರಾಮಮೂರ್ತಿ, ಜೇಮ್ಸ್ ವಾಜ್, ಮಂಜುನಾಥ್, ಪ್ರಕಾಶ್ ಶೆಟ್ಟಿ , ಗುಜ್ಜಾರ್, ಪಿ. ಮಹಮದ್ , ಪೊನ್ನಪ್ಪ. . ಇವರೆಲ್ಲ ಕನ್ನಡ -ಇಂಗ್ಲೀಷ್ ಪತ್ರಿಕೆ ಓದುಗರಿಗೆ ಗೊತ್ತಿರುವವರೇ. ಇವರ ಸಾಲಿನಲ್ಲಿ ನಿಲ್ಲಬಲ್ಲ, ಆದರೆ ಜಾಗತಿಕ ಮಾಧ್ಯಮದಲ್ಲಿ ಸ್ಥಾನ ಪಡೆದಿರುವ ಪ್ರತಿಭೆ ನಾಗೇಂದ್ರ ಬಾಬು ಉರುಫ್ ಬ್ಯಾಂಟರ್ ಬಾಬು.
ನಾವಿವತ್ತು ಮಾತನಾಡುತ್ತಿರುವುದು ಸ್ಟಾರ್ ಆಫ್ ಮೈಸೂರು ಪತ್ರಿಕೆಯ ಎಂ.ವಿ. ನಾಗೇಂದ್ರಬಾಬು ಕುರಿತು. ಆತ ನಮ್ಮ ನಡುವಿನ ಭರವಸೆಯ ವ್ಯಂಗ್ಯಚಿತ್ರಕಾರರಲ್ಲಿ ಮೊದಲಿಗ. ಅವರ ರೇಖೆಗಳಲ್ಲಿ ಸುದ್ದಿ ಇದೆ, ಸೂರಿದೆ. ಮಿಗಿಲಾಗಿ ಪಂಚ್ ಇದೆ. ಕಳೆದ ವರ್ಷ ಆಸ್ಟಿನ್ ಕನ್ನಡಸಂಘ ತನ್ನ http://www.kannadasangha.com/ನಲ್ಲಿ ನಾಗೇಂದ್ರಕುಮಾರ್ಗೊಂದು ಪುಟ ಮೀಸಲಿಟ್ಟು, ಅವರ ಕಾರ್ಟೂನ್ಗಳನ್ನು ಪ್ರಕಟಿಸಿತು. ಬುಷ್, ಒಸಾಮಾ, ಆಫ್ಗನ್ ಯುದ್ಧ ಮುಂತಾದ ಸಾಮಾಜಿಕ ವಸ್ತು ಸಂಗತಿಗಳನ್ನು ಹೆಕ್ಕಿಕೊಂಡು ಬಾಬು ಬರೆಯುವ ಚಿತ್ರಗಳು ಖುಷಿ ಕೊಡುತ್ತವೆ. ಕನ್ನಡಸಂಘ ಡಾಟ್ಕಾಂನಲ್ಲಿ ಬಾಬು ಅವರ ಚಿತ್ರಗಳು ಆಗಾಗ ಪ್ರಕಟವಾಗುತ್ತಿರುತ್ತವೆ. ಮೇಲಿನ ವೆಬ್ ವಿಳಾಸಕ್ಕೆ ಭೇಟಿ ಕೊಟ್ಟು ವ್ಯಂಗ್ಯಚಿತ್ರಗಳನ್ನೊಮ್ಮೆ ಅವಲೋಕಿಸಿ.
ಖ್ಯಾತ ಅಂಕಣಕಾರ ಪ್ರೊ. ಎಚ್ಚೆಸ್ಕೆ ಅವರು ಮೌಸ್ ಕ್ಲಿಕ್ ಮಾಡುವ ಮೂಲಕ ಈ ವೆಬ್ಸೈಟ್ನಲ್ಲಿ ಅಡಕವಾಗಿರುವ ಬಾಬು ಕಾರ್ಟೂನ್ ಅಂಕಣವನ್ನು ಮೈಸೂರಿನಲ್ಲಿ ಸಾಂಕೇತಿಕವಾಗಿ ಉದ್ಘಾಟಿಸಿ ಪ್ರೋತ್ಸಾಹಿಸಿದ್ದಾರೆ. ಸುಧಾ ವಾರಪತ್ರಿಕೆಯಲ್ಲಿ ನಾಗೇಂದ್ರರ ಬಗ್ಗೆ ‘ಬ್ಯಾಂಟರ್ ಬಾಬು’ ಪುಟ್ಟ ಲೇಖನವನ್ನೂ ಬರೆದಿದ್ದಾರೆ. (ಬ್ಯಾಂಟರ್ ಎಂದರೆ - ವಿನೋದ, ಕಟಕಿ, ಹರಟೆ, ವ್ಯಂಗ್ಯ ಎಂದರ್ಥ) ತಮ್ಮ ವ್ಯಂಗ್ಯಚಿತ್ರದ ಮೂಲಕ ಬಾಬು ಕೊಡುವ ಮೆಸೇಜ್ ಎಂಥದು ?
ನೀವೇ ನೋಡಿ : http://www.kannadasangha.com/html/Cartoons/CART5.HTM
ಮೂಲತಃ ಎಲೆಕ್ಟ್ರಿಕಲ್ ಎಂಜಿನಿಯರ್ ಆದ ನಾಗೇಂದ್ರಬಾಬು ಅವರ ಹಲವು ವ್ಯಂಗ್ಯಚಿತ್ರಗಳು ಕನ್ನಡಪ್ರಭ, ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ಕರ್ಮವೀರ, ವಿಸ್ಡಮ್, ಬ್ಲಿಟ್ಜ್, ಸಂಡೆ ಅಬ್ಸರ್ವರ್, ಒಮಾನ್ ಡೈಲಿ ಅಬ್ಸರ್ವರ್ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಇವರ ವ್ಯಂಗ್ಯ ಚಿತ್ರಕಲೆ, ಆ ಕಲೆಯಲ್ಲಿನ ತೀಕ್ಷ್ಣತೆ, ಪಂಚ್ ಗುರುತಿಸಿದವರು ಸ್ಟಾರ್ ಆಫ್ ಮೈಸೂರು ಪತ್ರಿಕೆಯ ಸಂಪಾದಕ ಕೆ.ಬಿ. ಗಣಪತಿ. ‘ಬಾಬು ಗೆರೆಗಳಿಂದಲೇ ಓದುಗರೊಂದಿಗೆ ಮಾತನಾಡುತ್ತಾರೆ. ಗೆರೆಗಳೇ ಡೋಲು, ಡಮರುಗವಾಗಿ ಬಾರಿಸುತ್ತದೆ. ಮನಸ್ಸನ್ನು ಮುಟ್ಟುವ ಸೂಕ್ಷ್ಮತೆ ಅವುಗಳಲ್ಲಿವೆ’ ಎಂದು ಅಭಿಮಾನದಿಂದ ಹೇಳುತ್ತಾರೆ.
ಅಮೆರಿಕದ ಆರ್ಟ್ ಇನ್ಸ್ಟಿಟ್ಯೂಟ್ಸ್ ಇಂಟರ್ನ್ಯಾಷನಲ್ ಪಿಟ್ಸ್ಬರ್ಗ್ನಿಂದ ಮೆರಿಟ್ ಸರ್ಟಿಫಿಕೇಟ್ ಪಡೆದಿರುವ ಬಾಬು, ಓದಿದ್ದು ಎಂಜನಿಯರಿಂಗ್. ಆದರೂ ಜಗತ್ತಿನ ಹಿರಿಯ ವ್ಯಂಗ್ಯಚಿತ್ರಕಾರರ ರೇಖೆಗಳಿಗೆ ಮಾರುಹೋಗಿ ಕುಂಚವನ್ನು ಕೈಯಲ್ಲಿ ಹಿಡಿದವರು.
ಕೈ ತಪ್ಪಿದ ಗಿನಿಸ್ : ರೇಖೆಗಳಿಂದಲೇ ವಿಶ್ವವಿಖ್ಯಾತಿ ಗಳಿಸುವ ಸಾಹಸಕ್ಕೂ ಕೈಹಾಕಿದರು ಬಾಬು. ತಮ್ಮ ಕುಂಚದಿಂದ 276 ಅಡಿ ಉದ್ದದ ಶುಭಾಶಯ ಪತ್ರ (ಗ್ರೀಟಿಂಗ್ ಕಾರ್ಡ್) ರಚಿಸಿ, ಗಿನಿಸ್ ದಾಖಲೆಯ ಬಾಗಿಲು ತಟ್ಟಿದರು. ಇವರ ಅತಿ ಉದ್ದದ ಗ್ರೀಟಿಂಗ್ ತಯಾರಿಕಾ ಶ್ರಮಕ್ಕೆ ದೇಶವಿದೇಶಗಳಿಂದ ಪ್ರತಿ ಶುಭಾಶಯಗಳ ಮಳೆಯೇ ಸುರಿಯಿತು. ಆದರೆ, ಬಾಬು ದುರದೃಷ್ಟಕ್ಕೆ ಗಿನಿಸ್ ಸಂಸ್ಥೆ ಆ ಸ್ಪರ್ಧಾ ವಿಭಾಗವನ್ನೇ ತೆಗೆದುಹಾಕಿತ್ತು. ಈ ಪ್ರಯತ್ನದಲ್ಲಿ ಬಾಬುಗೆ ಕೈಗೆಬಂದ ತುತ್ತು ಬಾಯಿಗೆ ಇಲ್ಲದಂತಾಯ್ತು.
ಆದರೆ ಆಸ್ಟಿನ್ ಕನ್ನಡ ಸಂಘ ಬಾಬು ಕೃತಿಗಳನ್ನು ಗೌರವಿಸಿತು. ಮನ್ನಿಸಿತು. ವಿಶ್ವವೇ ಇವರ ರೇಖೆಗಳ ಸವಿ ಸವಿಯಲೆಂದು ಕನ್ನಡಸಂಘ.ಕಾಂನಲ್ಲಿ ಸ್ಥಾನ ನೀಡಿತು. ಈ ಪ್ರೋತ್ಸಾಹ ದೊರೆತಿದ್ದು ಆಸ್ಟಿನ್ ಕನ್ನಡಿಗ ಎಂಜಿನಿಯರ್ ಪ್ರಸನ್ನರಾಘವೇಂದ್ರರಿಂದ. ಬಾಬು ಅವರಿಗೆ ಮತ್ತು ಅವರನ್ನು ಪ್ರೋತ್ಸಾಹಿಸುತ್ತಿರುವ ಪ್ರಸನ್ನರಿಗೆ ನಮ್ಮ ಶುಭಕಾಮನೆಗಳು.