ಅನಿವಾಸಿ ಕನ್ನಡಿಗರಿಂದ ನಾಟಕ-ಕರ್ನಾಟಕ
"ರಂಗಧ್ವನಿ" ಹವ್ಯಾಸಿ ನಾಟಕ ಸಂಸ್ಥೆ ವಲ್ಲೀಶ ಶಾಸ್ತ್ರಿಯವರ ನೇತೃತ್ವದಲ್ಲಿ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ನಾಟಕಗಳನ್ನು ಪ್ರದರ್ಶಿಸುವುದಲ್ಲದೇ ಅಮೆರಿಕೆಯ ಹಲವಾರು ನಗರಗಳಲ್ಲೂ ಪ್ರದರ್ಶಿಸುತ್ತಾ ರಂಗ ಚಟುವಟಿಕೆಗಳಲ್ಲಿ ತೊಡಗಿ ಕನ್ನಡ ಸೇವೆ ಮಾಡುತ್ತಿರುವ ಸಂಸ್ಥೆ.
"ಹಾಲಿವುಡ್ನಲ್ಲಿ ಯಮ", "ಕೃಷ್ಣ ಸಂಧಾನ", "ಪಶ್ಚಾತ್ತಾಪ", "ಗೋವಿನ ಕಥೆ".. ಹೀಗೆ ಹಲವಾರು ನಾಟಕ ಪ್ರದರ್ಶನಗಳಿಂದ ಅಮೆರಿಕೆಯ ಕನ್ನಡಿಗರಿಗೆ ಚಿರಪರಿತರಾಗಿರುವ ಈ ಕಲಾವಿದರು, ಈಗ ತಾಯ್ನಾಡಿನಲ್ಲಿ ತಮ್ಮ ಕಲಾಪ್ರದರ್ಶನಕ್ಕೆ ಬರುತ್ತಿದ್ದಾರೆ. ಬೆಂಗಳೂರು ಮತ್ತು ಮೈಸೂರಿನಲ್ಲಿ ನಾಟಕಗಳನ್ನು ಪ್ರದರ್ಶಿಸಲು ರೆಡಿಯಾಗಿದ್ದಾರೆ.
ಈ ಸಾಗರೋತ್ತರ ಕನ್ನಡ ನಾಟಕ ಪ್ರದರ್ಶನಕ್ಕೆ ಕರ್ನಾಟಕದಲ್ಲಿ ಹೆಗಲು ಕೊಟ್ಟು ನಿಂತಿದೆ ಬೆಂಗಳೂರಿನ ಕಲಾವೇದಿಕೆ ಸಂಸ್ಥೆ ಹಾಗೂ ವಲ್ಲೀಶ ಶಾಸ್ತ್ರಿಯವರ ಸ್ನೇಹಿತರ ಸಮೂಹ.
ಮೊದಲ ನಾಟಕ ಜೇಮ್ಸ್ ಹ್ಯಾಡ್ಲಿ ಚೇಸ್ ನ ಖ್ಯಾತ ಕಥೆ "There is Always a Price Tag"ನ ಕನ್ನಡ ನಾಟಕ ರೂಪಾಂತರ "ತಿರುಗೇಟು". ಈ ಕುತೂಹಲಕಾರಿ ನಾಟಕವನ್ನು ಕನ್ನಡಕ್ಕೆ ರೂಪಾಂತರಿಸುವವರು ವಲ್ಲೀಶ ಶಾಸ್ತ್ರಿ ಹಾಗೂ ರವಿ ಶೇಷಾದ್ರಿ.
ಎರಡನೇ ನಾಟಕ, IT ಯುಗದಲ್ಲಿ ಯಮನ ಅವತಾರದ ಒಂದು ವಿಡಂಬನೆ "ಯಮನ Call Center". ಅನಿವಾಸಿ ಹೈಟೆಕ್ ಕನ್ನಡಿಗರನ್ನೊಡಗೂಡಿಸಿ ನಿರ್ದೇಶಿಸಿರುವವರು ವಲ್ಲೀಶ ಶಾಸ್ತ್ರಿ. ಅಮೆರಿಕೆಯಂತಹ ದೇಶದಲ್ಲಿ ಕನ್ನಡದ ಕಂಪನ್ನು ರಂಗ ಚಟುವಟಿಕೆಯ ಮೂಲಕ ಅಮೆರಿಕೆಯ ಉದ್ದಗಲಕ್ಕೂ ಹಬ್ಬಿಸುತ್ತಿರುವ ಈ ಸಂಸ್ಥೆ ಸ್ತುತ್ಯಾರ್ಹ. ಕನ್ನಡಿಗರೆಲ್ಲರು ಬಂದು ನಾಟಕ ನೋಡಿ ಪ್ರೋತ್ಸಾಹಿಸಬೇಕೆಂದು ರಂಗಧ್ವನಿ ಕಲಾವಿದರು ಮನವಿಮಾಡಿದ್ದಾರೆ. [ಸ್ಥಳ, ದಿನಾಂಕ, ಸಮಯದ ವಿವರಗಳು]