ಯಾದಗಿರಿ: ಚಿಂತನಹಳ್ಳಿ ಜಲಪಾತ, ಸಿದ್ದಲಿಂಗೇಶ್ವರರ ಐಕ್ಯಸ್ಥಳ ಕಾಣಿರಿ
ಕಲ್ಲು, ಬಂಡೆಗಳ ನಡುವೆ ಹರಿದು ಬರುವ ಜಲಧಾರೆ. ಧುಮ್ಮಿಕಿ ಹರಿದು ಸಾಗುವ ಹಾಲ್ನೋರೆ. ಮಳೆಗಾಲದಲ್ಲಿ ಭೋರ್ಗರೆದರೆ. ವರ್ಷಪೂರ್ತಿ ಶಾಂತವಾಗಿ ಜುಳು, ಜುಳು ಅಂಥ ಹರಿಯುವ ಗಂಗೆ. ಈ ಜಲಸೌಂದರ್ಯ ಕಾಣಸಿಗುವುದು ಯಾದಗಿರಿ ತಾಲೂಕಿನ ಚಿಂತನಹಳ್ಳಿ ಗ್ರಾಮದ ಬಳಿ.
ಜಿಲ್ಲಾ ಕೇಂದ್ರ ಯಾದಗಿರಿಯಿಂದ ಸುಮಾರು 35 ಕಿಲೋ ಮೀಟರ್ ಅಂತರದಲ್ಲಿ ಚಿಂತನಹಳ್ಳಿ ಗ್ರಾಮವಿದೆ. ಹಳ್ಳಿಯಿಂದ ಮೂರು ಕಿಲೋ ಮೀಟರ್ ದೂರದಲ್ಲಿ ಹಚ್ಚ ಹಸಿರು ಆವರಸಿಕೊಂಡಿರುವ ಬೆಟ್ಟ, ಸುಂದರ ಗಿರಿಗಳಿವೆ.
ದುರ್ಗದ ಹೊಂಡ, ಕೆರೆ ಭರ್ತಿ, ಪ್ರವಾಸಿಗರೇ ಬನ್ನಿ ಒಂದ್ಸರ್ತಿ!
ಹಸಿರು ತಪ್ಪಲಿನ ಮಧ್ಯೆ ಶರಣ ಗವಿ ಸಿದ್ದಲಿಂಗೇಶ್ವರರ ಐಕ್ಯಸ್ಥಳವಿದೆ. ಮಠಕ್ಕೆ ಆಗಮಿಸುವ ಭಕ್ತರು, ಹಸಿರು ಹೊದ್ದು ಮಲಗಿರುವ ಗಿರಿಶಿಖರ, ಜಲಧಾರೆ ಕಂಡು ಸಂಭ್ರಮಿಸುತ್ತಾರೆ.
ಶರಣ ಸಿದ್ದಲಿಂಗೇಶ್ವರರ ಸನ್ನಿಧಿ
ನೂರಾರು ವರ್ಷಗಳ ಹಿಂದೆ ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ವನಗುಂಟಿ ಗ್ರಾಮದಲ್ಲಿ ಜನಿಸಿದ ಶರಣ ಸಿದ್ದಲಿಂಗೇಶ್ವರರು, ಲೋಕ ಪರ್ಯಟನೆ ಕೈಗೊಂಡರಂತೆ. ತಮ್ಮ ಕೊನೆಯ ಕಾಲಘಟ್ಟದಲ್ಲಿ ಚಿಂತನಹಳ್ಳಿ ಹೊರವಲಯದ ಬೆಟ್ಟದಲ್ಲಿರುವ ಕಲ್ಲಿನ ಗುಹೆಯಲ್ಲಿ ನೆಲೆಸಿದರು. ಅದೇ ಗುಹೆಯಲ್ಲಿ ಕಾಲವಾದರಂತೆ.
ಗವಿ ಸಿದ್ದಲಿಂಗೇಶ್ವರ ಐಕ್ಯಸ್ಥಳ
ಅಲ್ಲಿನಿಂದ ಗವಿ ಸಿದ್ದಲಿಂಗೇಶ್ವರ ಎಂದು ಹೆಸರಾಯಿತು ಎಂಬುದು ಹಿರಿಯರ ಮಾತು. ದರ್ಶನಕ್ಕೆ ತೆರಳುವ ಭಕ್ತರು ಗವಿಯ ಮೇಲ್ಭಾಗದಲ್ಲಿ ಹರಿಯುವ ಜಲಧಾರೆಯ ಅಡಿಯಲ್ಲಿ ಮಿಂದೆದ್ದು ಹೋಗಬೇಕು. ಯಾದಗಿರಿ ಜಿಲ್ಲೆಯೂ ಆಗಾಗ ಬರಗಾಲಕ್ಕೆ ತುತ್ತಾಗುವುದು ಸಾಮಾನ್ಯ. ಆದರೆ ಗವಿ ಸಿದ್ದಲಿಂಗೇಶ್ವರ ಮಠದ ಬಳಿಯ ನೀರಿನ ತೊರೆ ಹರಿಯುವುದನ್ನು ಮಾತ್ರ ನಿಲ್ಲಿಸಿಲ್ಲ.
ಚಿಂತನಹಳ್ಳಿಯ ಮಠ
ಚಿಂತನಹಳ್ಳಿಯ ಮಠ ಹಾಗೂ ಜಲಪಾತ ನೋಡಲು ರಾಜ್ಯದ ವಿವಿಧ ಜಿಲ್ಲೆ ಮತ್ತು ನೆರೆಯ ಸೀಮಾಂಧ್ರ, ತೆಲಂಗಾಣದಿಂದ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಆದರೆ ಧಾರ್ಮಿಕ ಹಾಗೂ ಪ್ರವಾಸಿ ತಾಣದಲ್ಲಿ ಕನಿಷ್ಠ ಮೂಲಸೌಕರ್ಯಗಳಿಲ್ಲ.
ಕನಿಷ್ಠ ಮೂಲಸೌಕರ್ಯಗಳಿಲ್ಲ
ಇಲ್ಲಿ ಕನಿಷ್ಠ ಮೂಲಸೌಕರ್ಯಗಳಿಲ್ಲ ಇದು ಭಕ್ತರು ಮತ್ತು ಪ್ರವಾಸಿಗರಿಗೆ ಸಮಸ್ಯೆಯಾಗುತ್ತಿದೆ. ಇಲ್ಲಿಯವರೆಗೆ ಕೈಗೊಂಡಿರುವ ಅಭಿವೃದ್ಧಿ ಕೆಲಸಗಳು ಗೋಲ್ಮಾಲ್ಗೆ ಬಲಿಯಾಗಿವೆ. ಐತಿಹಾಸಿ ಧಾರ್ಮಿಕ, ನಿಸರ್ಗದತ್ತ ಸ್ಥಳಕ್ಕೆ ಅಭಿವೃದ್ಧಿಯ ಕಾಯಕಲ್ಪಬೇಕಿದೆ.