ಯಾದಗಿರಿ: ಕುಂಬಾರರ ಬದುಕನ್ನು ಬೆಳಗುತ್ತಿಲ್ಲ ಈ ಹಣತೆಗಳು!
ಯಾದಗಿರಿ, ಅಕ್ಟೋಬರ್ 19: ನಾಡಿನಲ್ಲಿಗ ಬೆಳಕಿನ ಹಬ್ಬದ ಸಡಗರ. ಈ ಹಬ್ಬದಲ್ಲಿ ಕತ್ತಲೆಯನ್ನು ಕಳೆದು ಬೆಳಕನ್ನು ಬೆಳಗುವು ಹಣತೆಗಳದ್ದೇ ದರ್ಬಾರ್. ಬೆಳಕಿನ ಹಬ್ಬದ ಸಂಭ್ರಮ ಎಲ್ಲರಲ್ಲೂ ಮನೆ ಮಾಡಿದೆ. ವ್ಯಾಪಾರ-ವಹಿವಾಟು ಜೋರಾಗಿ ನಡೆಯುತ್ತಿದೆ.
ಹಣತೆ ತಯಾರಿಸುವ ಕುಂಬಾರ ಬದುಕಲ್ಲಿ ಬರಲಿಲ್ಲ ದೀಪಾವಳಿ!
ಎರಡು ದಿನಗಳ ದೀಪಾವಳಿ ರಂಗು ರಂಗಾಗಿರುತ್ತದೆ. ಈ ಬಾರಿ ದೀಪಾವಳಿಯೂ ರಂಗೇರುತ್ತಿದೆ. ಬೆಳಕಿನ ಹಬ್ಬ ದೀಪಾವಳಿಯನ್ನು ಸಡಗರದಿಂದ ಜನರು ಆಚರಿಸುತ್ತಿದ್ದಾರೆ. ದೀಪಾವಳಿ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಹೊಸ ಬಟ್ಟೆ, ಆಕಾಶ ಬುಟ್ಟಿ, ಪಟಾಕಿ, ಹಣತೆ, ಹಣ್ಣುಗಳ ಮಾರಾಟ ಜೋರಾಗಿದೆ. ಜನ ಸಂಭ್ರಮದಿಂದ ಕುಟುಂಬ ಸಮೇತ ಹಬ್ಬ ಆಚರಿಸುವ ಸಿದ್ಧತೆಯಲ್ಲಿದ್ದಾರೆ.
ಇದರ ಮಧ್ಯೆ ಆಧುನಿಕತೆಯೂ ಹಂತ ಹಂತವಾಗಿ ಅಟ್ಟಹಾಸ ಮೆರೆಯುತ್ತಿದೆ. ಇದರಿಂದ ಗುಡಿ ಕೈಗಾರಿಕೆ, ಕುಲ ಕಸಬುಗಳು ಅವಸಾನದತ್ತ ತಲುಪುತ್ತಿವೆ. ಕಳೆದ ಇಪ್ಪತ್ತು ವರ್ಷಗಳಲ್ಲಿ ಗುಡಿ ಕೈಗಾರಿಕೆಯಿಂದ ತಯಾರಿಸಿದ ವಸ್ತುಗಳ ಬೇಡಿಕೆ ಕಡಿಮೆಯಾಗುತ್ತಿದೆ. ಮಣ್ಣಿನಿಂದ ತಯಾರಿಸಿದ ಹಣತೆಗಳ ಅಸ್ತಿತ್ವವನ್ನು ಫ್ಲಾಸ್ಟಿಕ್ ಹಣತೆಗಳು ನುಂಗುತ್ತಿವೆ. ಹೀಗಾಗಿ ಕುಂಬಾರರ ಬದುಕು ಕಷ್ಟದಾಯಕವಾಗುತ್ತಿದೆ.
ಕುಂಬಾರರ ಮನೆಯಲ್ಲಿ ಎಷ್ಟೊಂದು ಹಣತೆಗಳಿವೆ. ಅವುಗಳು ಕತ್ತಲೆಯನ್ನು ಕಳೆದು ಬೆಳಕನ್ನು ತೋರುತ್ತವೆ. ಆದರೆ ಕುಂಬಾರರ ಬದುಕಿಗೆ ಮಾತ್ರ ಹಣತೆಗಳು ಬೆಳಕಾಗುತ್ತಿಲ್ಲ. ಹಬ್ಬಗಳು ಸಾಂಪ್ರದಾಯಿಕತೆ ಮೀರಿ ಆಧುನಿಕವಾಗುತ್ತಿದೆ. ಹೀಗಾಗಿ ಮಣ್ಣಿನ ಹಣತೆಗಳು ನಮ್ಮಿಂದ ದೂರವಾಗುತ್ತಿವೆ. ಹೀಗಾದಾಗ ಸಹಜವಾಗಿಯೇ ಕುಂಬಾರರು ಕುಲ ಕಸಬಿನಿಂದ ವಿಮುಖವಾಗುವ ವಾತಾವರಣ ಸೃಷ್ಟಿಯಾಗುತ್ತಿದೆ. ಇದುವೇ ಆಧುನಿಕ ಭರಾಟೆಯ ಹೊಡೆತ!