ಹೆಂಡತಿಯಿಂದ ಡೈವೋರ್ಸ್ ನಿರಾಕರಣೆ, ಮಾವನಿಗೆ ಬೆಂಕಿಯಿಟ್ಟ ಭೂಪ..!
ಯಾದಗಿರಿ, ಜೂನ್ 29: ಸರಸ ಜನನ, ವಿಸರ ಮರಣ, ಸಮರಸವೇ ಜೀವನ ಅಂತಾರೆ. ಮದುವೆಯನ್ನು ಮಾಡಿಕೊಡುವುದು ದಂಪತಿ ನೆಮ್ಮದಿಯಾಗಿ ಸಾಮರಸ್ಯದಿಂದ ಜೀವನವನ್ನು ಮಾಡಲಿ ಎನ್ನುವ ಕಾರಣಕ್ಕೆ. ಆದರೆ ದಂಪತಿಯ ಜಗಳ ವಿಕೋಪಕ್ಕೆ ಹೋಗಿ ಪತ್ನಿ ಡಿವೋರ್ಸ್ ಕೊಡಲು ನಿರಾಕರಿಸಿದ ಕಾರಣ ವ್ಯಕ್ತಿಯೊಬ್ಬ ತನ್ನ ಮಾವ, ಬಾಮೈದರನ್ನು ಮಾತುಕತೆಗೆ ಕರೆದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.
ಯಾದಗಿರಿ ಜಿಲ್ಲೆಯ ನಾರಾಯಣಪುರದ ಛಾಯ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ತನ್ನ ಮಾವನಿಗೆ ಶರಣಪ್ಪ ಎಂದ ಆರೋಪಿ ಜೀವಂತ ಬೆಂಕಿಯನ್ನಿಟ್ಟಿದ್ದಾನೆ. ಸಂಸಾರವನ್ನು ಸರಿ ಮಾಡುವ ದೃಷ್ಟಿಯಿಂದ ಅಳಿಯನಿದ್ದ ಮನೆಗೆ ಮಾವ ಮತ್ತು ಇತರ ಮೂವರು ಬುದ್ದಿ ಹೇಳಲು ಬಂದಿದ್ದಾರೆ. ಈ ವೇಳೆ ಮನೆಯಲ್ಲಿ ಮೂವರ ಮೇಲೆ ಪೆಟ್ರೋಲ್ ಸುರಿದು ಬೆಂಕಿಯನ್ನು ಹಚ್ಚಿದ್ದಾನೆ.
ಆರೋಪಿ ಶರಣಪ್ಪ ಬೆಂಕಿಯನ್ನು ಹಚ್ಚಿ ಕೆಲವು ಸಮಯ ಅಲ್ಲೇ ಇದ್ದಾನೆ. ಮನೆಯಲ್ಲಿನ ಬೆಂಕಿ ಮತ್ತು ಚೀರಾಟವನ್ನು ಕೇಳಿ ಸ್ಥಳೀಯರು ರಕ್ಷಣೆಗೆ ಧಾವಿಸಿದ್ದಾರೆ. ಆಗ ಶರಣಪ್ಪ ಪರಾರಿಯಾಗಿದ್ದಾನೆ. ಸ್ಥಳೀಯರು ನಾಲ್ವರು ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದರು. ಆದರೆ ಓರ್ವ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಇನ್ನು ಮೂವರ ಸ್ಥಿತಿ ಗಂಭೀರವಾಗಿದೆ.
ಮಾವನಿಗೆ ಬೆಂಕಿಯಿಟ್ಟ ಕಿರಾತಕ ಅಳಿಯ
ಯಾದಗಿರಿ ಜಿಲ್ಲೆಯ ನಾರಾಯಣಪುರದ ಛಾಯ ಕಾಲೋನಿ ಶರಣಪ್ಪ 15 ವರ್ಷಗಳ ಹಿಂದೆ ಹುಲಿಗಮ್ಮ ಎಂಬಾಕೆಯನ್ನು ಮದುವೆಯಾಗಿದ್ದ. ಹುಲಿಗೆಮ್ಮ ಲಿಂಗಸೂರಿನ ಕೆಎಸ್ಆರ್ಟಿಸಿಯಲ್ಲಿ ಮೆಕ್ಯಾನಿಕಲ್ ಆಗಿ ಕೆಲಸವನ್ನು ಮಾಡುತ್ತಿದ್ದಳು. ದಂಪತಿಯ ನಡುವೆ ಸಾಕಷ್ಟು ವೈಮನಸ್ಸಿದ್ದ ಕಾರಣ ಇಬ್ಬರ ನಡುವೆ ಕಳೆದ 14 ತಿಂಗಳಿಂದ ಬೇರೆಯಿದ್ದರು. ದಂಪತಿ ನಡುವಿನ ಕಲಹದ ಸಂಧಾನಕ್ಕೆ ಬಂದ ಮಾವ ಮತ್ತು ಸಂಬಂಧಿಕನ್ನು ಮನೆಯಲ್ಲಿ ಕೂಡಿ ಹಾಕಿ ಆರೋಪಿ ಬೆಂಕಿ ಇಟ್ಟಿದ್ದಾನೆ.
ಆಟೋ ಚಾಲಕನಾಗಿದ್ದ ಶರಣಪ್ಪ
ಹುಲಿಗೆಮ್ಮ ಪತಿ ಆರೋಪಿ ಶರಣಪ್ಪ ಆಟೋ ಚಾಲಕನಾಗಿದ್ದು ಕುಡಿಯುವ ಚಟವನ್ನು ಬೆೆಳೆಸಿಕೊಂಡಿದ್ದ. ಮನೆಯಲ್ಲಿ ಇದೇ ಕಾರಣಕ್ಕೆ ದಂಪತಿಯ ನಡುವೆ ಗಲಾಟೆ ನಡೆದು ಇಬ್ಬರು ಬೇರೆ ಬೇರೆ ವಾಸವಾಗಿದ್ದರು. ಇವರಿಬ್ಬರ ಹೆಸರಿನಲ್ಲಿ ಹಲವು ಸೈಟ್ಗಳಿದ್ದ ಕಾರಣ ಈ ವಿಚಾರಲ್ಲೂ ವೈಮನಸ್ಸು ಉಂಟಾಗಿತ್ತು. ಈ ನಡುವೆ ಪತ್ನಿಯಿಂದ ಡಿವೋರ್ಸ್ ಪಡೆಯಲು ಪತಿ ಪ್ರಯತ್ನವನ್ನು ಮಾಡಿದ್ದ. ಪತ್ನಿ ಹುಲಿಗೆಮ್ಮ ವಿಚ್ಚೇಧನ ನೀಡಲು ನಿರಾಕರಿಸಿದ್ದಳು. ಇದರಿಂದಾಗಿ ಬುದ್ದಿಹೇಳಲು ಹಿರಿಯರು ಆಗಮಿಸಿದ್ದರು.
ಬೆಂಕಿ ಹಚ್ಚಲು ಮಾಡಿದ ಪ್ಲಾನ್ ಏನು?
ಗಂಡ ಹೆಂಡತಿಯ ಜಗಳ ತಾರಕ್ಕೇರಿತ್ತು. ಅಳಿಯನ ಜೊತೆ ಮಾತನಾಡಲು ಮಾವ ತನ್ನ ಮೂವರು ಸಂಬಂಧಿಕರನ್ನು ಜೊತೆಯಲ್ಲೇ ಕರೆತಂದಿದ್ದ. ತಾನು ಬರುವ ಮೊದಲು ಅಳಿಯನಿಗೆ ಫೋನ್ ಮಾಡಿ ಬರುವ ವಿಷಯನ್ನು ತಿಳಿಸಿದ್ದ. ಅಷ್ಟೇ ಆಟೋ ಚಾಲಕ ತನ್ನ ಮನೆಗೆ ಮೊದಲೇ ಪ್ಲಾನ್ ಮಾಡಿ ಪೆಟ್ರೋಲ್ ಅನ್ನು ತಂದಿಟ್ಟಿದ್ದ. ಬಳಿಕ ಮನೆಗೆ ಬಂದವರಿಗೆ ಬೆಂಕಿ ಹಚ್ಚಿದ್ದಾನೆ. ಇದರಿಂದ ಸಿದ್ದರಾಮಪ್ಪ ಮುರಾಳ, ಮುತ್ತಪ್ಪ ಮುರಾಳ, ನಾಗಪ್ಪ, ಶರಣಪ್ಪ ಸರೂರು ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಪೈಕಿ ಒರ್ವ ನಾಗಪ್ಪ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಉಳಿದ ಮೂವರನ್ನು ರಾಯಚೂರು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಆರೋಪಿ ಶರಣಪ್ಪ ಬಂಧಿಸಿದ ಪೊಲೀಸ್
ಯಾದಗಿರಿ ಎಸ್ಪಿ ಡಾ. ಸಿ. ಬಿ. ವೇದಮೂರ್ತಿ ಮಾತನಾಡಿ ""ನಾರಾಯಣಪುರದ ಛಾಯಕಾಲೂನಿಯಲ್ಲಿ ಘಟನೆ ನಡೆದಿದೆ. ಆರೋಪಿ ಶರಣಪ್ಪ ಕೃತ್ಯವೆಸಗಿದ್ದಾನೆ. ಸಾಂಸಾರಿಕ ಕಲಹವನ್ನು ಬಗೆಹರಿಸಿ ಎಂದು ಮಾವ ಮತ್ತು ಸಂಬಂಧಿಕರನ್ನು ಕರೆಸಿಕೊಂಡಿದ್ದ. ಆಗ ಆರೋಪಿ ಶರಣಪ್ಪ ಪೆಟ್ರೋಲ್ ಸುರಿದು ಮನೆಯ ಬೀಗ ಹಾಕಿದ್ದಾನೆ. ಓರ್ವ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಇನ್ನುಳಿದ ಮೂವರ ಸ್ಥಿತಿ ಚಿಂತಾಜನಕವಿದೆ ಆರೋಪಿ ಶರಣಪ್ಪನನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ. ನಾರಾಯಣಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ'' ಎಂದು ಹೇಳಿದ್ದಾರೆ.
Recommended Video