ಯಾದಗಿರಿಯಲ್ಲಿ ಮಂಗಳಮುಖಿ ಮೇಲೆ ಮಾರಣಾಂತಿಕ ಹಲ್ಲೆ; ಚಿಕಿತ್ಸೆ ಫಲಿಸದೇ ಸಾವು
ಯಾದಗಿರಿ, ಅಕ್ಟೋಬರ್ 26: ಮಂಗಳಮುಖಿಯೊಬ್ಬರ ಮೇಲೆ ಹಲ್ಲೆ ನಡೆಸಿ ದುಷ್ಕರ್ಮಿಗಳು ಪರಾರಿಯಾಗಿದ್ದು, ಚಿಕಿತ್ಸೆ ಫಲಿಸದೇ ಮಂಗಳಮುಖಿ ಸಾವನ್ನಪ್ಪಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಅಕ್ಟೋಬರ್ 17ರಂದು ಸುರಪುರ ತಾಲೂಕಿನ ಮಾಲಗತ್ತಿ ಗ್ರಾಮದ ಬಳಿ ರೇಣುಕಾ ಎಂಬ ಮಂಗಳಮುಖಿ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಹಲ್ಲೆ ನಡೆಸಿದವರು, ಇವರು ಸತ್ತಿರಬಹುದು ಎಂದುಕೊಂಡು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಆದರೆ ಕೆಲ ಹೊತ್ತಿನ ಬಳಿಕ ಅವರಿಗೆ ಪ್ರಜ್ಞೆ ಬಂದಿದೆ. ಬಳಿಕ ಸ್ಥಳೀಯರು ಸುರಪುರ ತಾಲೂಕಿನ ಆಸ್ಪತ್ರೆಗೆ ದಾಖಲಿಸಿದ್ದರು. ಹೆಚ್ಚಿನ ಚಿಕಿತ್ಸೆಗೆ ಕಲಬುರ್ಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ನಿನ್ನೆ ರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಕಲಬುರ್ಗಿ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಚಿಕ್ಕ ವಯಸ್ಸಿನಲ್ಲೇ ತಂದೆ ತಾಯಿ ಕಳೆದುಕೊಂಡಿದ್ದ ಮುಸಲ್ಮಾನ್ ಕುಟುಂಬದ ಸಲ್ಮಾನ್ ಮುಂದೆ ಮಂಗಳಮುಖಿಯಾಗಿ ಬದಲಾಗಿ ರೇಣುಕಾ ಎಂದು ಹೆಸರು ಬದಲಿಸಿಕೊಂಡಿದ್ದರು. ಈ ಕಾರಣಕ್ಕೇ ಒಡಹುಟ್ಟಿದವರಿಂದಲೂ ದೂರವಾಗಿ ಮಂಗಳಮುಖಿಯರೊಂದಿಗೆ ಬದುಕುತ್ತಿದ್ದರು.
ಹಲ್ಲೆಗೆ ಕಾರಣ, ಉದ್ದೇಶ ತಿಳಿದುಬಂದಿಲ್ಲ. ರೇಣುಕಾ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾರೆ, ಈ ಸಂಬಂಧ ಪೊಲೀಸರು ಪಾರದರ್ಶಕವಾಗಿ ತನಿಖೆ ನಡೆಸಬೇಕು ಎಂದು ಮಂಗಳಮುಖಿಯರು ಮನವಿ ಮಾಡಿಕೊಂಡಿದ್ದಾರೆ. ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.