ಯಾದಗಿರಿ: 'ನನ್ನನ್ನು ಡಿಸಿಎಂ ಮಾಡು' ಎಂದು ದೇವರಿಗೆ ಪತ್ರ ಬರೆದ ಸಚಿವ ಶ್ರೀರಾಮುಲು
ಯಾದಗಿರಿ, ಸೆಪ್ಟೆಂಬರ್ 17: "ನನ್ನನ್ನು ಕರ್ನಾಟಕದ ಉಪ ಮುಖ್ಯಮಂತ್ರಿಯನ್ನಾಗಿ ಮಾಡು ದೇವರೇ' ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ಗೋನಾಲ ಗ್ರಾಮದ ಗಡೇ ದುರ್ಗಾದೇವಿಗೆ ಪತ್ರ ಬರೆದಿದ್ದಾರೆ.
Recommended Video
ಸದ್ಯ ರಾಜ್ಯದಲ್ಲಿ ಕೊರೊನಾ ವೈರಸ್, ಡ್ರಗ್ಸ್ ಬಿರುಗಾಳಿ ಹಾಗೂ ಅತಿವೃಷ್ಟಿಯಿಂದಾದ ಹಾನಿ ಮಧ್ಯೆಯೇ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ, ಮುಖ್ಯಮಂತ್ರಿ ಬದಲಾವಣೆ ಸುದ್ದಿ ಕೂಡ ಬಹಳ ಸದ್ದು ಮಾಡುತ್ತಿದೆ.
ನಾನೂ ಬಳ್ಳಾರಿ ದುರ್ಗಮ್ಮನ ಗುಡಿಗೆ ಬರ್ತಿನಿ, ನೀನು ಬಾ: ಸಚಿವ ಶ್ರೀರಾಮುಲುಗೆ ಸವಾಲು
ಆಡಳಿತ ಪಕ್ಷ ಬಿಜೆಪಿಯ ಹಿರಿಯ ಶಾಸಕರು ಕೂಡಾ ಸರ್ಕಾರದಲ್ಲಿ ಸೂಕ್ತ ಸ್ಥಾನಮಾನಕ್ಕಾಗಿ ತೆರೆಮೆರೆಯಲ್ಲಿ ಭಾರೀ ಕಸರತ್ತು ನಡೆಸುತ್ತಿದ್ದಾರೆ. ಆದರೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ಮಾತ್ರ ನನ್ನನ್ನು ಉಪ ಮುಖ್ಯಮಂತ್ರಿ ಮಾಡು ತಾಯಿ ಅಂತ ದೇವರ ಮೊರೆ ಹೋಗಿದ್ದಾರೆ.
ಉಪ ಮುಖ್ಯಮಂತ್ರಿ ಸ್ಥಾನಕ್ಕಾಗಿ ಗಡೇ ದುರ್ಗಾದೇವಿ ಮೊರೆ ಹೋಗಿರುವ ಸಚಿವ ಬಿ.ಶ್ರೀರಾಮುಲು, ಡಿಸಿಎಂ ಸ್ಥಾನ ನೀಡು ಎಂದು ಇಂಗ್ಲಿಷ್ ನಲ್ಲಿ ಪತ್ರ ಬರೆದಿದ್ದಾರೆ. ಕಲಬುರಗಿಯ ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಿದ್ದ ಸಚಿವ ಶ್ರೀರಾಮುಲು, ದೇವಿಯ ದರ್ಶನಕ್ಕೆಂದೆ ಒಂದು ದಿನ ಮುಂಚೆಯೇ ಯಾದಗಿರಿ ಜಿಲ್ಲೆಗೆ ಬಂದಿದ್ದಾರೆ.
ನೇರವಾಗಿ ಗೋನಾಲಕ್ಕೆ ತೆರಳಿ ಗಡೇ ದುರ್ಗಾದೇವಿ ದರ್ಶನ ಪಡೆದರು. ಬಳಿಕ ದೇವಸ್ಥಾನದ ಪೂಜಾರಿ ಮರಿಸ್ವಾಮಿ ಅವರ ಮಾರ್ಗದರ್ಶನದಂತೆ, ದೇವಿಯ ಗರ್ಭಗುಡಿಯೊಳಗೆ ತೆರಳಿ ತಮ್ಮ ಪತ್ರವನ್ನು ದೇವಿಯ ಪಾದದ ಬಳಿ ಇಟ್ಟಿದ್ದಾರೆ. ಇದಕ್ಕೂ ಮುಂಚೆ ದೇವಸ್ಥಾನದ ಅರ್ಚಕ ಮರಿಸ್ವಾಮಿಯವರನ್ನು ತಮ್ಮ ನಿವಾಸಕ್ಕೆ ಕರೆಸಿದ್ದರು. ಮಾತುಕತೆ ಬಳಿಕ ದೇವಸ್ಥಾನಕ್ಕೆ ಬಂದಿದ್ದಾರೆ ಎಂದು ತಿಳಿದು ಬಂದಿದೆ.
ಈ ಹಿಂದೆ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರು ಗೋನಾಲ ಗ್ರಾಮಕ್ಕೆ ಭೇಟಿ ನೀಡಿ ಗಡೇ ದುರ್ಗಾ ದೇವಿಯ ದರ್ಶನ ಪಡೆದಿದ್ದರು. ಅಂದು ಕೂಡಾ ಡಿ.ಕೆ.ಶಿವಕುಮಾರ್ ತಮ್ಮನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡುವಂತೆ ಪತ್ರ ಬರೆದಿದ್ದರು ಎನ್ನಲಾಗಿದೆ.
ಪತ್ರದ ಬೆನ್ನಲ್ಲೇ ಡಿ.ಕೆ.ಶಿವಕುಮಾರ್ ಅವರಿಗೆ ಅಧ್ಯಕ್ಷ ಪಟ್ಟ ಲಭಿಸಿತು ಅನ್ನುವುದು ಭಕ್ತರ ನಂಬಿಕೆ. ಇದೀಗ ಶ್ರೀರಾಮುಲು ಅವರು ಸಹ ದೇವಿಯ ದರ್ಶನ ಪಡೆದು, ತಮ್ಮನ್ನು ಉಪ ಮುಖ್ಯಮಂತ್ರಿ ಮಾಡುವಂತೆ ಪತ್ರದ ಮೂಲಕ ಕೇಳಿಕೊಂಡಿದ್ದಾರೆ.