ಸಿದ್ದರಾಮಯ್ಯ ಬಿಜೆಪಿಯಿಂದ ಕೇಂದ್ರ ಸಚಿವರಾಗ್ತಾರೆ: ಚಿಂಚನಸೂರ
ಯಾದಗಿರಿ, ಮಾರ್ಚ್ 4: ಸಿದ್ದರಾಮಯ್ಯ ಅವರು ಬಿಜೆಪಿಗೆ ಬಂದು ಕೇಂದ್ರ ಸಚಿವರಾಗುತ್ತಾರೆ ಎಂದು ಸಚಿವ ಬಾಬುರಾವ್ ಚಿಂಚನಸೂರ್ ಹೇಳಿದ್ದಾರೆ.
ಯಾದಗಿರಿಯಲ್ಲಿ ಈ ಬಗ್ಗೆ ಮಾತನಾಡಿರುವ ಅವರು, ಜೆಡಿಎಸ್ ಶಾಸಕ ಜೆ.ಟಿ.ದೇವೇಗೌಡ ಸೇರಿದಂತೆ ಬಹುತೇಕ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ.
ಇದರ ಜೊತೆಗೆ ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಕಾಂಗ್ರೆಸ್ ಶಾಸಕರು ಬಿಜೆಪಿ ಸೇರುತ್ತಾರೆ. ಹುಮ್ನಾಬಾದ್ ಕಾಂಗ್ರೆಸ್ ಶಾಸಕ ರಾಜಶೇಖರ್ ಪಾಟೀಲ್ ಅವರು ಕೂಡ ಬಿಜೆಪಿ ಸೇರಲಿದ್ದಾರೆಂದು ಚಿಂಚನಸೂರ ಹೇಳಿದ್ದಾರೆ.
ಮಾಜಿ ಸಿಎಂ ಮತ್ತು ಹಾಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಶೀಘ್ರದಲ್ಲಿಯೇ ಬಿಜೆಪಿ ಸೇರಲಿದ್ದು, ಪಕ್ಷ ಸೇರ್ಪಡೆಯಾದ ನಂತರ ಕೇಂದ್ರ ಸಚಿವರಾಗುತ್ತಾರೆ ಎಂದಿದ್ದಾರೆ.
ಇದೇ ವೇಳೆ ನೀವು ನಿಮ್ಮ ಹಿಂಬಾಲಕ ಚೇಲಾಗಳ ಮಾತುಗಳನ್ನು ಕೇಳುತ್ತೀರಾ. ಅವರಿಗೆ ಕಡಿವಾಣ ಹಾಕಬೇಕು ಇಲ್ಲದಿದ್ದರೆ ಮತ್ತೆ ಚುನಾವಣೆ ಹೇಗೆ ಗೆಲ್ಲುತ್ತಿಯಾ ನಾನು ನೋಡುತ್ತೆನೆಂದು ಬಾಬುರಾವ್ ಚಿಂಚನಸೂರಗೆ, ಕಬ್ಬಲಿಗ ಸಮಾಜದ ಮುಖಂಡ ಜಿ.ವೆಂಕಟೇಶ್ ಸಾವಾಲು ಎಸೆದಿದ್ದಾರೆ.
ಚಿಂಚನಸೂರ ಸುದ್ದಿಗೋಷ್ಠಿ ನಡೆಸುತ್ತಿದ್ದ ವೇಳೆ ವೆಂಕಟೇಶ್ ಚಿಂಚನಸೂರಗೆ ತರಾಟೆಗೆ ತೆಗೆದುಕೊಂಡು ಅವಾಜ್ ಹಾಕಿದರು. ನಿಮ್ಮ ಮನೆ ಬಾಗಿಲಿಗೆ ಬಂದರೆ ತಾಸುಗಟ್ಟಲೆ ಕಾಯಿಸಿ, ಹೊರಗೆ ತಳ್ಳುತ್ತೀರಾ ಎನ್ನುವ ಆಕ್ರೋಶವೂ ಕೇಳಿಬಂದಿತ್ತು.