ನೀರಾವರಿ ಕಾಮಗಾರಿಗಳಲ್ಲಿ ಲೋಪ ಆದರೆ ಸಹಿಸುವುದಿಲ್ಲ: ಜಾರಕಿಹೊಳಿ
ಯಾದಗಿರಿ, ಮೇ 5: ನೀರಾವರಿ ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡಬೇಕು. ಇಲ್ಲದಿದ್ದರೇ ಯಾವುದೇ ಕಾರಣಕ್ಕು ಸಹಿಸುವುದಿಲ್ಲ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದ್ದಾರೆ..
ಯಾದಗಿರಿ ಜಿಲ್ಲೆಯ ನಾರಾಯಣಪುರ ಜಲಾಯಶಯಕ್ಕೆ ಭೇಟಿ ನೀಡಿ, ಸ್ಥಳ ಪರಿಶೀಲಿಸಿದ ನಂತರ ನಾರಾಯಣಪುರದಲ್ಲಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಅವರು ಮಾತನಾಡಿದರು.
ಕೊರೊನಾ ತಡೆಗೆ ಅಧಿಕಾರಿಗಳಿಗೆ ರಮೇಶ್ ಜಾರಕಿಹೊಳಿ ಸೂಚನೆ
ಏತ ನೀರಾವರಿ ಕಾಮಗಾರಿಗಳನ್ನು ಕೈಗೊಳ್ಳುವಾಗ ನೀರಿನ ಹಂಚಿಕೆಗೆ ಒಳಪಟ್ಟಿದ್ದರೆ ಮಾತ್ರ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಬಸವಸಾಗರ ಜಲಾಶಯದ ನೀರಿನ ಲಭ್ಯತೆಗೆ ಅನುಗುಣವಾಗಿ ಹೊಸ ಯೋಜನೆಗಳನ್ನು ರೂಪಿಸಬೇಕು. ಈಗಾಗಲೇ ಕೈಗೊಂಡಿರುವ ಕಾಮಗಾರಿಗಳನ್ನು ಗುಣಮಟ್ಟ ಕಾಯ್ದುಕೊಂಡು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ತಾಕೀತು ಮಾಡಿದರು.
ಇಂಜಿನೀಯರ್ಗಳ ವಿರುದ್ಧ ಶಿಸ್ತು ಕ್ರಮ
ಕೋವಿಡ್-19 ಸಂಬಂಧ ಲಾಕ್ಡೌನ್ ವಿಧಿಸಿದರೂ ಕೃಷಿ ಚಟುವಟಿಕೆಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ. ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ಕೈಗೊಳ್ಳಬಹುದಾಗಿದೆ. ನೀರಾವರಿಗೆ ಸಂಬಂಧಪಟ್ಟ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಕಾರ್ಯನಿರ್ವಹಿಸಬೇಕು. ರೈತರ ವಿಷಯದಲ್ಲಿ ನಿರ್ಲಕ್ಷ್ಯ ತಾಳುವ ಅಧಿಕಾರಿಗಳು ಅಥವಾ ಇಂಜಿನೀಯರ್ಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಸ್ಕಾಡಾ ಅಟೊಮೇಶನ್ ಯಶಸ್ವಿಯಾಗಿದೆ
ನೀರಿನ ಸದ್ಬಳಕೆ ಸಂಬಂಧ ನಾರಾಯಣಪುರ ಜಲಾಯಶ ಎಡದಂಡೆ ಕಾಲುವೆಗೆ ಅಳವಡಿಸಿರುವ ಸ್ಕಾಡಾ ಅಟೊಮೇಶನ್ (ಸ್ವಯಂ ಚಾಲಿತ) ಫೇಸ್-1 ಕಾಮಗಾರಿ ಪ್ರಥಮ ಹಂತದಲ್ಲಿ ಪ್ರಾಯೋಗಿಕವಾಗಿ ಯಶಸ್ವಿಯಾಗಿದೆ. ನೀರು ಪೋಲು ತಡೆಯುವ ಮತ್ತು ಕೊನೆಭಾಗದ ರೈತರಿಗೆ ನೀರು ಒದಗಿಸುವ ಈ ಮಾದರಿ ರಾಜ್ಯದ ಎಲ್ಲಾ ಜಲಾನಯನ ಪ್ರದೇಶದಲ್ಲಿ ಅಳವಡಿಸಲು ಚಿಂತನೆ ನಡೆಸಲಾಗುವುದು. ಫೇಸ್-1 ಕಾಮಗಾರಿ ಯಶಸ್ವಿಯನ್ನು ಆಧರಿಸಿ ಪ್ರಗತಿಯಲ್ಲಿರುವ ಫೇಸ್-2 ಕಾಮಗಾರಿಯನ್ನು ಕೂಡ ಪೂರ್ಣಗೊಳಿಸಲು ಅವರು ನಿರ್ದೇಶನ ನೀಡಿದರು.
ನೀರಾವರಿಯಿದ ವಂಚಿತವಾಗಿರುವ ಪ್ರದೇಶಗಳಿಗೆ ನೀರಾವರಿ ಸೌಲಭ್ಯ
ನಾರಾಯಣಪುರ ಬಲದಂಡೆ ಕಾಲುವೆಯ 19ನೇ ಕಿ.ಮೀ ನಿಂದ ಉಗಮಗೊಳ್ಳುವ ವಿತರಣಾ ಕಾಲುವೆ 5ಎ ಲಿಂಗಸೂಗೂರು ಮತ್ತು ಮಸ್ಕಿ ಕ್ಷೇತ್ರಗಳಲ್ಲಿ ನೀರಾವರಿಯಿದ ವಂಚಿತವಾಗಿರುವ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ತಾಂತ್ರಿಕ ಸಾಧ್ಯಾಸಾಧ್ಯತೆ ಪರಿಶೀಲಿಸಿ ವರದಿ ಸಲ್ಲಿಸಲು ಸೂಚಿಸಿದರು. ರಾಂಪೂರ ಮತ್ತು ನಂದವಾಡಗಿ ಏತ ನೀರಾವರಿ ಕಾಮಗಾರಿಗಳನ್ನು ಕೂಡ ತ್ವರಿತವಾಗಿ ಪೂರ್ಣಗೊಳಿಸಲು ಸಚಿವರು ಸೂಚಿಸಿದರು.
ಕೋವಿಡ್ ತಪಾಸಣೆ ಮಾಡಿಸಿಕೊಂಡ ಸಚಿವ
ಯಾದಗಿರಿಗೆ ಬಂದ ತಕ್ಷಣ ಸಚಿವ ರಮೇಶ್ ಜಾರಕಿಹೊಳಿಗೆ ಕೋವಿಡ್ ತಪಾಸಣೆ ಮಾಡಲಾಯಿತು. ಯಾದಗಿರಿಯಲ್ಲಿ ಯಾವುದೇ ಕೊವಿಡ್ ಪಾಸಿಟಿವ್ ಪ್ರಕರಣಗಳು ಕಂಡು ಬಂದಿಲ್ಲ. ಈ ಸಂದರ್ಭದಲ್ಲಿ ಲೋಕಸಭಾ ಸದಸ್ಯರಾದ ರಾಜಾ ಅಮರೇಶ್ವರ ನಾಯಕ, ಶಾಸಕರಾದ ನರಸಿಂಹ ನಾಯಕ (ರಾಜೂಗೌಡ), ಬಸವನಗೌಡ ದದ್ದಲ, ಡಾ.ಶಿವರಾಜ ಪಾಟೀಲ್, ಮಾಜಿ ಶಾಸಕರಾದ ಪ್ರತಾಪಗೌಡ ಪಾಟೀಲ್, ಮಾನಪ್ಪ ಡಿ.ವಜ್ಜಲ್ ಅವರು ಉಪಸ್ಥಿತರಿದ್ದರು.