ಕೊಚ್ಚಿಹೋಗುವಷ್ಟು ಮಳೆಯಾದರೂ ಯಾದಗಿರಿಯ ಈ ಪ್ರದೇಶದಲ್ಲಿ ಕುಡಿವ ನೀರಿಲ್ಲ!
ಯಾದಗಿರಿ, ಅಕ್ಟೋಬರ್ 19: ಅದು ದ್ವೀಪದಂತಿರುವ ನಡುಗಡ್ಡೆ. ಪ್ರವಾಹ ಬಂದಾಗಲೆಲ್ಲ ಆ ಊರು ಸುದ್ದಿಯಲ್ಲಿರುತ್ತೆ. ಬಳಿಕ ಅವರತ್ತ ಯಾರೂ ಕಣ್ಣು ಹಾಯಿಸಲ್ಲ. ಅಲ್ಲಿನ ಜನರ ಬದುಕಂತೂ ದುಸ್ತರವಾಗಿದೆ. ಅವರಿಗೆ ಶುದ್ಧ ಕುಡಿಯುವ ನೀರೂ ಸಿಗಲ್ಲ. ಮಳೆಗಾಲದಲ್ಲಿ ಕೃಷ್ಣಾ ನದಿಯ ಮೊರೆ ಹೋದರೆ ಇನ್ನೂ ಬೇಸಿಗೆಯಲ್ಲಿ ಜೀವಜಲಕ್ಕಾಗಿ ಪಾಚಿಗಟ್ಟಿದ ನದಿಯ ನೀರನ್ನೇ ಅವಲಂಬಿಸಬೇಕು. ಅದೇ ನೀಲಕಂಠರಾಯನಗಡ್ಡಿ. ಮಳೆಗಾಲ, ಪ್ರವಾಹದ ದಿನಗಳಲ್ಲಿ ನೆನಪಾಗುವ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದ್ವೀಪದಂಥ ಪ್ರದೇಶ.
ನಾಗರಿಕ ಜಗತ್ತಿನ ಸಂಪರ್ಕ ಇಲ್ಲದಿರುವ 60ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿರುವ ಊರು. ಇಲ್ಲಿ ಮೂಲಸೌಕರ್ಯಗಳು ಮರೀಚಿಕೆ. ಇದ್ದರೂ ಇಲ್ಲದಂತೆ. ಸ್ವಾತಂತ್ರ್ಯಗೊಂಡು ಏಳು ದಶಕಗಳ ಹೊಸ್ತಿಲಲ್ಲಿದ್ದರೂ ಆ ಜನರಿಗೆ ಮಾತ್ರ ಯಾವುದೂ ಪ್ರಯೋಜನಕ್ಕೆ ಬಂದಿಲ್ಲ. ನೀಲಕಂಠರಾಯನಗಡ್ಡಿಯಲ್ಲಿ ಬೇಸಿಗೆ ವೇಳೆ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗುತ್ತೆ.
ಮಳೆಗಾಲದಲ್ಲಿ ಇಲ್ಲಿನ ಜನ ಕುಡಿಯಲು ಕೃಷ್ಣಾ ನದಿಯ ನೀರನ್ನೇ ಅವಲಂಬಿಸಿದ್ದಾರೆ. ಬೇಸಿಗೆಯಲ್ಲಿ ನದಿ ಬತ್ತುವುದರಿಂದ ಪಾಚಿಗಟ್ಟಿದ ನೀರೇ ನೀಲಕಂಠರಾಯನಗಡ್ಡಿ ಜನರಿಗೆ ಜೀವಜಲವಾಗುತ್ತೆ. ಕಕ್ಕೇರಾ ಪುರಸಭೆ ವ್ಯಾಪ್ತಿಗೆ ಬರುವ ನಡುಗಡ್ಡೆ ನೀಲಕಂಠರಾಯನಗಡ್ಡಿಯಲ್ಲಿ ಸುಮಾರು 300ಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ. ಸ್ಥಳೀಯರ ಮನೆ ಬಳಕೆ, ಕುಡಿಯಲು ಕೃಷ್ಣಾ ನದಿಯ ನೀರೇ ಗತಿ.
ವರ್ಷದ ಹಿಂದೆ ನೀಲಕಂಠರಾನಗಡ್ಡಿಯಲ್ಲಿ ಬೋರ್ವೆಲ್ ಹಾಕಿಸಲಾಗಿದೆ. ಆದರೆ ಸರಿಯಾಗಿ ನೀರು ಬರಲ್ಲ. ಬೋರ್ವೆಲ್ ನೀರು ಸೇವನೆಯಿಂದ ಆರೋಗ್ಯ ಕೆಡುತ್ತಿದೆ ಎಂದು ಜನರು ಬಳಕೆ ನಿಲ್ಲಿಸಿದ್ದಾರೆ. ನಡುಗಡ್ಡೆಯ ಜನರಿಗೆ ಶುದ್ಧ ಹಾಗೂ ಶಾಶ್ವತ ಕುಡಿಯುವ ನೀರಿನ ಯೋಜನೆಯ ಅಗತ್ಯವಿದೆ. ಪಟ್ಟಣ ಪಂಚಾಯತಿ, ಪುರಸಭೆ ನಗರಸಭೆ ಎಂದರೆ ಅಭಿವೃದ್ಧಿಯ ಸೂಚಕಗಳು. ಆದರೆ ನಡುಗಡ್ಡೆ ನೀಲಕಂಠರಾಯನಗಡ್ಡಿ ಮಾತ್ರ ಇದಕ್ಕೆ ಅಪವಾದ.
ನಡುಗಡ್ಡೆ ನಿವಾಸಿಗಳಿಗೆ ಕುಡಿಯಲು ನೀರೇ ಸಿಗುತ್ತಿಲ್ಲ ಇನ್ನೂ ಮೂಲಸೌಭ್ಯಗಳ ಮಾತು ದೂರ. ಇನ್ನಾದರೂ ನೀಲಕಂಠರಾಯನಗಡ್ಡಿ ಜನರಿಗೆ ಕುಡಿಯಲು ಶುದ್ಧ ಹಾಗೂ ಸಮರ್ಪಕ ನೀರು ಸಿಗಲಿ. ಈ ನಿಟ್ಟಿನಲ್ಲಿ ಅಧಿಕಾರಿಗಳು ಎಚ್ಚೆತ್ತುಕೊಳ್ಳಲಿ.