ಯಾದಗಿರಿಯಲ್ಲಿ ಕುಡಿಯುವ ನೀರಿಗೇ ವಿಷ ಬೆರೆಸಿದ ಕಿಡಿಗೇಡಿಗಳು
ಯಾದಗಿರಿ, ಜನವರಿ 10: ಚಾಮರಾಜನಗರ ಜಿಲ್ಲೆಯ ಸುಳವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ಸೇವಿಸಿ 17 ಮಂದಿ ಮೃತಪಟ್ಟಿರುವ ಘಟನೆ ಮಾಸುವ ಮುನ್ನವೇ ಯಾದಗಿರಿಯಲ್ಲಿ ಕುಡಿಯುವ ನೀರಿಗೆ ವಿಷ ಬೆರೆಸಿರುವ ಘಟನೆ ಬುಧವಾರ ನಡೆದಿದೆ.
ಕಿಚ್ಚುಗುತ್ತಿ ಮಾರಮ್ಮ ದೇಗುಲದ ಅಭಿವೃದ್ಧಿಯೇ ಭಕ್ತರ ಜೀವಕ್ಕೆ ಕುತ್ತಾಯಿತಾ?
ಯಾದಗಿರಿಯ ಸುರಪುರ ಗ್ರಾಮದಲ್ಲಿನ ಕುಡಿಯುವ ನೀರಿನ ಟ್ಯಾಂಕ್ನಲ್ಲಿ ಕಿಡಿಗೇಡಿಗಳು ಕ್ರಿಮಿನಾಶಕ ಬೆರೆಸಿದ ಘಟನೆ ನಡೆದಿದೆ. ನೀರಿನ ಟ್ಯಾಂಕ್ನಲ್ಲಿ ಅರ್ಧ ಲೀಟರ್ ನಷ್ಟು ಎಂಡೋ ಸಲ್ಫಾನ್ ಕ್ರಿಮಿನಾಶಕ ಬೆರೆಸಲಾಗಿದೆ. ಈ ಟ್ಯಾಂಕ್ನಿಂದ ತಾಲೂಕಿನ ಶಖಾಪುರ, ತೆಗ್ಗಳ್ಳಿ ಗ್ರಾಮಕ್ಕೆ ನೀರು ಪೂರೈಕೆಯಾಗಿದ್ದು, ನೀರಿನಲ್ಲಿ ಕೆಟ್ಟ ವಾಸನೆ ಬರುತ್ತಿರುವುದನ್ನು ಶಖಾಪುರ ಗ್ರಾಮದ ಪಂಪ್ ಆಪರೇಟರ್ ಮೌನೇಶ್ ಗಮನಿಸಿ ನೀರು ಸೇವಿಸಿದ್ದಾರೆ. ಅಲ್ಲದೆ ಆತನ ತಾಯಿ ನಾಗಮ್ಮ ಕೂಡ ಅಸ್ವಸ್ಥರಾಗಿದ್ದಾರೆ. ತಕ್ಷಣವೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಿಚ್ಚುಗುತ್ತಿ ಮಾರಮ್ಮ ದೇಗುಲ ಸರ್ಕಾರಕ್ಕೊಪ್ಪಿಸಲು ಟ್ರಸ್ಟಿಗಳ ಒಪ್ಪಿಗೆ
ನೀರಿನ ಟ್ಯಾಂಕ್ನಲ್ಲಿ ಕ್ರಿಮಿನಾಶಕ ಬೆರೆಸಿದ ಸುದ್ದಿ ಕಾಡ್ಗಿಚ್ಚಿನಂತೆ ಹರಡಿದ್ದು, ಶಖಾಪುರ, ತೆಗ್ಗಳ್ಳಿ ಗ್ರಾಮಗಳಿಗೆ ತಕ್ಷಣ ನೀರು ಪೂರೈಕೆ ಸ್ಥಗಿತಗೊಳಿಸಲಾಯಿತು.
ನೀರು ಸೇವಿಸದಂತೆ ಗ್ರಾಮಗಳಲ್ಲಿ ಡಂಗುರ ಸಾರಲಾಯಿತು. ಮುದನೂರು ಗ್ರಾಮಕ್ಕೆ ಜಿ.ಪಂ ಸಿಇಒ ಕವಿತಾ ಮನ್ನಿಕೇರಿ ಸುರಪುರ ತಹಸೀಲ್ದಾರ್ ಸುರೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಾದಗಿರಿ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಕೀಟನಾಶಕ ಬೆರೆಸಿದ್ದರಿಂದ ಹಲವರು ಅಸ್ವಸ್ಥರಾಗಿ ಮಹಿಳೆಯೊಬ್ಬರು ಮೃತರಾದ ಘಟನೆಗೆ ಸಂಬಂಧಿಸಿದಂತೆ ಯಾದಗಿರಿ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಂದ ವಿವರ ಪಡೆದಿದ್ದು ಕೂಡಲೇ ಸ್ಥಳ ಪರಿಶೀಲಿಸಿ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಸೂಚಿಸಿದ್ದಾರೆ.
ಈ ಪ್ರಕರಣದ ಆಗ್ಗೆ ತ್ವರಿತವಾಗಿ ತನಿಖೆ ನಡೆಸಿ ಇಂತಹ ದುಷ್ಕೃತ್ಯ ಎಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ನಿರ್ದೇಶನ ನೀಡಿದ್ದಾರೆ.