ಜೆಡಿಎಸ್ v/s ಪೊಲೀಸ್ ಇಲಾಖೆ ಕಿತ್ತಾಟ ತಾರಕಕ್ಕೆ: ಯಾದಗಿರಿ ಪ್ರಕ್ಷುಬ್ಧ
ಯಾದಗಿರಿ, ಅಕ್ಟೋಬರ್ 23: ಜಿಲ್ಲೆಯಲ್ಲಿ ಜೆಡಿಎಸ್ ಮತ್ತು ಪೊಲೀಸರ ನಡುವಣ ಕಿತ್ತಾಟ ತಾರಕ್ಕೇರಿದೆ. ಜೆಡಿಎಸ್ ವರಿಷ್ಠ ದೇವೇಗೌಡ ಸಹ ಇಂದು ರಂಗ ಪ್ರವೇಶ ಮಾಡಿದ್ದು ಪರಿಸ್ಥಿತಿ ಬೇಗನೇ ತಿಳಿಗೊಳ್ಳುವ ಲಕ್ಷಣಗಳು ಗೋಚರವಾಗುತ್ತಿಲ್ಲ.
ಆಗಿದ್ದಿಷ್ಟು, ಕೆಲವು ದಿನಗಳ ಹಿಂದಷ್ಟೆ ಯಾದಗಿರಿಗೆ ಸಿಎಂ ಯಡಿಯೂರಪ್ಪ ಭೇಟಿ ನೀಡಿದ್ದರು. ಗುರ್ಮಿಟ್ಕಲ್ ಕ್ಷೇತ್ರಕ್ಕೆ ಅನುದಾನ ಕಡಿತ ಮಾಡಿರುವ ಬಗ್ಗೆ ಅಸಮಾಧಾನಗೊಂಡಿದ್ದ ಜೆಡಿಎಸ್ ಕಾರ್ಯಕರ್ತರು ಸಿಎಂ ವಾಹನವನ್ನು ಅಡ್ಡಗಟ್ಟಿ ಕಪ್ಪುಬಾವುಟ ಪ್ರದರ್ಶಿಸಿದ್ದರು.
ಘಟನೆ ನಡೆದ ಕೂಡಲೇ ಪಿಎಸ್ಐ ಬಾಪುಗೌಡ ಎಸ್.ಪಾಟೀಲ್ ನೇತೃತ್ವದಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಹಲವರನ್ನು ವಶಕ್ಕೆ ಪಡೆದಿದ್ದರು. ಅದರಲ್ಲಿ ಗುರ್ಮಿಟ್ಕಲ್ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರು ಪುತ್ರ ಜೆಡಿಎಸ್ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಶರಣಗೌಡ ಕಂದಕೂರು ಅವರ ಬೆಂಬಲಿಗರನ್ನೂ ವಶಕ್ಕೆ ಪಡೆಯಲಾಗಿತ್ತು.
ಪೊಲೀಸರ ವಿರುದ್ಧ ಸರಣಿ ಆರೋಪ ಮಾಡಿದ ಶರಣಗೌಡ ಕಂದಕೂರು
ಘಟನೆ ನಡೆದ ಮರುದಿನ ಶರಣಗೌಡ ಕಂದಕೂರು ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದ್ದರು. 'ನನ್ನ ಮೇಲಿನ ವೈಯಕ್ತಿಕ ದ್ವೇಷದಿಂದ ಅಮಾಯಕರನ್ನು ಪೊಲೀಸರು ಬಂಧಿಸಿ ಚಿತ್ರಹಿಂಸೆ ನೀಡಿದ್ದಾರೆ. ಕುಡಿಯಲು ನೀರು ಸಹ ನೀಡದೆ, ವಿಪರೀತ ಥಳಿಸಿದ್ದಾರೆ. ಬಾಯಿಗೆ ಬಂದೂಕು ತುರುಕಿ ಕೊಲ್ಲುವುದಾಗಿ ಹೆದರಿಸಿದ್ದಾರೆ' ಎಂದು ಆಕ್ರೋಶ ಹೊರಹಾಕಿದ್ದರು. ಶರಣಗೌಡ ಕಂದಕೂರು ಅವರು ಪಿಎಸ್ಐ ಬಾಪುಗೌಡ ಎಸ್.ಪಾಟೀಲ್ ಮೇಲೆ ಎಸ್ಪಿ ಅವರಿಗೆ ದೂರು ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸಹ ಆಗಿತ್ತು.
ಮನೆಯ ಸುತ್ತ ಗನ್ ಹಿಡಿದು ತಿರುಗುತ್ತಿದ್ದಾರೆ: ಶರಣಗೌಡ ಆರೋಪ
ಪಿಎಸ್ಐ ಬಾಪುಗೌಡ.ಎಸ್.ಪಾಟೀಲ್ ನನ್ನ ವಿರುದ್ಧ ವೈಯಕ್ತಿಕ ದ್ವೇಷ ಸಾಧಿಸುತ್ತಿದ್ದಾರೆ. ಘಟನೆ ನಡೆದ ದಿನ ನಾನು ಊರಿನಲ್ಲಿರದಿದ್ದರೂ ನನ್ನ ಮೇಲೆ ಪ್ರಕರಣ ದಾಖಲಿಸಿದ್ದಾರೆ. ನನ್ನ ಮನೆಯ ಬಳಿ ರಾತ್ರಿ ವೇಳೆ ಬಂದೂಕು ಹಿಡಿದುಕೊಂಡು ಓಡಾಡುತ್ತಿದ್ದಾರೆ. ಕಪ್ಪುಬಾವುಟ ತೋರಿದ ಪ್ರಕರಣಕ್ಕೆ ನನ್ನನ್ನು ಕಾರಣಕರ್ತನನ್ನಾಗಿ ಮಾಡಲು ಅಮಾಯಕರಿಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಶರಣಗೌಡ ಅವರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಪೊಲೀಸರಿಂದಲೂ ಪರೋಕ್ಷ ಪ್ರತಿಭಟನೆ
ಆದರೆ ಮತ್ತೊಂದೆಡೆ ಪೊಲೀಸರು ಸಹ ಪರೋಕ್ಷ ಪ್ರತಿಭಟನೆ ಆರಂಭ ಮಾಡಿದ್ದು, ಪಿಎಸ್ಐ ಬಾಪುಗೌಡ.ಎಸ್.ಪಾಟೀಲ್ ಅವರನ್ನು ಅಮಾನತು ಮಾಡುವುದಾದರೆ ನಮ್ಮನ್ನೂ ಅಮಾನತ್ತು ಮಾಡಿ ಎಂದು ಪಟ್ಟು ಹಿಡಿದಿದ್ದಾರೆ. ಒಬ್ಬ ಕಾನ್ಸ್ಟೇಬಲ್ ರವೀಂದ್ರಕುಮಾರ್ ಈಗಾಗಲೇ ರಾಜೀನಾಮೆ ಪತ್ರ ಸಹ ನೀಡಿಬಿಟ್ಟಿದ್ದಾರೆ.
ದೇವೇಗೌಡರ ಬೆಂಬಲದಿಂದ ಪ್ರತಿಭಟನೆ ಹೆಚ್ಚಾಗಿದೆ
ಹಿರಿಯ ಪೊಲೀಸ್ ಅಧಿಕಾರಿಗಳು ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನ ಮಾಡುತ್ತಿದ್ದಾರಾದರೂ ಜೆಡಿಎಸ್ ಕಾರ್ಯಕರ್ತರು ಪಟ್ಟು ಸಡಿಲಿಸುತ್ತಿಲ್ಲ. ಇದಕ್ಕೆ ಇಂದು ದೇವೇಗೌಡ ಸಹ ಸಾಥ್ ನೀಡಿದ್ದು ಕಾರ್ಯಕರ್ತರಿಗೆ ಇನ್ನಷ್ಟು ಹುಮ್ಮಸ್ಸು ತುಂಬಿದೆ. ದೇವೇಗೌಡ ಅವರು ಇಂದು ಯಾದಗಿರಿಗೆ ಆಗಮಿಸಿದ್ದು, ಪೊಲೀಸರ ವಿರುದ್ಧ ಪ್ರತಿಭಟನೆಯಲ್ಲಿ ಅವರು ಭಾಗಿಯಾಗಿದ್ದಾರೆ.
ಆಪರೇಷನ್ ಕಮಲ ಆಡಿಯೋ ಬಿಡುಗಡೆ ಮಾಡಿದ್ದ ಶರಣಗೌಡ ಕಂದಕೂರು
ಯಡಿಯೂರಪ್ಪ ಅವರ ಆಪರೇಷನ್ ಕಮಲ ಆಡಿಯೋ ಬಿಡುಗಡೆ ಮಾಡಿದ್ದು ಇದೇ ಶರಣಗೌಡ ಕುಂದಕೂರ, ಹಾಗಾಗಿ ಯಡಿಯೂರಪ್ಪ ಅವರು ಪೊಲೀಸರ ಮೂಲಕ ವೈಷಮ್ಯ ತೀರಿಸಿಕೊಳ್ಳುವ ಯತ್ನ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಕಾರ್ಯಕರ್ತರು ಆರೋಪಿಸಿದ್ದಾರೆ.
ನಿಷೇಧಾಜ್ಞೆ ಜಾರಿ ಮಾಡಿರುವ ಪೊಲೀಸರು
ಜಿಲ್ಲೆಯಲ್ಲಿ ಪರಿಸ್ಥಿತಿ ಬಿಗುವಾಗಿರುವ ಕಾರಣ ಪೊಲೀಸರು ಈಗಾಗಲೇ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ದೇವೇಗೌಡರ ಆಗಮನದಿಂದ ಪ್ರತಿಭಟನೆ ಇನ್ನಷ್ಟು ಜೋರು ಪಡೆಯುವ ಸಾಧ್ಯತೆ ಇದೆ.