ಮಾ. 7ರಿಂದ ಮೂರು ದಿನ ಐಕೂರ ನರಸಿಂಹಾಚಾರ್ಯರರ ಆರಾಧನೆ
ಶಹಾಪುರ, ಮಾರ್ಚ್ 06 : ಐಕೂರ ನರಸಿಂಹಾಚಾರ್ಯರ ಆರಾಧನಾ ಮಹೋತ್ಸವವು ಮಾರ್ಚ್ 7, 8 ಹಾಗೂ 9ರಂದು ಐಕೂರ ಗ್ರಾಮದಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ.
ಫಾಲ್ಗುಣ ಶುದ್ದ ಪ್ರತಿಪದಾ, ದ್ವಿತೀಯಾ ಹಾಗೂ ತೃತೀಯಾ ಈ ಮೂರು ದಿನಗಳ ಕಾಲ ಐಕೂರಾಚಾರ್ಯರ ಪುಣ್ಯಾರಾಧನೆ ನಡೆಯಲಿದ್ದು, ಸುಪ್ರಭಾತ, ಹರಿಕಥಾಮೃತಸಾರ ಪಾರಾಯಣ, ಪ್ರವಚನ ಜರುಗಲಿವೆ. ಭಕ್ತಿಸಂಗೀತ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ.
ಮಾರ್ಚ್ 7ರಂದು ಸುಪ್ರಭಾತ, ಹರಿಕಥಾಮೃತಸಾರ ಪಾರಾಯಣ, ಪಂಡಿತ ಕರ್ನೂಲ ಶ್ರೀನಿವಾಸಾಚಾರ್ಯ ಬೆಂಗಳೂರು ಇವರಿಂದ ಪ್ರವಚನ. ಸಾಯಂಕಾಲ ಖ್ಯಾತ ಗಾಯಕರಾದ ಶೇಷಗಿರಿದಾಸ ಅವರಿಂದ ದಾಸವಾಣಿ.
8ರಂದು ಮಧ್ಯಾರಾಧನೆ ದಿನ, ಹರಿಕಥಾಮೃತಸಾರ ಪಾರಾಯಣ, ಕೊಪ್ಪಳದ ಪಂ. ರಘುಪ್ರೇಮಾಚಾರ್ಯ ಅವರಿಂದ ಹಾಗೂ ಪಂಡಿತ ಕರ್ನೂಲ ಶ್ರೀನಿವಾಸಾಚಾರ್ಯ, ಬೆಂಗಳೂರು ಇವರಿಂದ ಪ್ರವಚನ. ಸಾಯಂಕಾಲ ರಾಯಚೂರಿನ ಖ್ಯಾತ ಗಾಯಕರಾದ ವರದೇಂದ್ರ ಗಂಗಾಖೇಡ ಅವರಿಂದ ದಾಸವಾಣಿ. ರಘೋತ್ತಮದಾಸ ಇವರಿಂದ ಕೊಳಲುವಾದನ.
ಮಾರ್ಚ್ 9 ಭಾನುವಾರದಂದು ಉತ್ತರಾಧನೆ. ಸುಪ್ರಭಾತ, ಹರಿಕಥಾಮೃತಸಾರ ಪಾರಾಯಣ, ಪ್ರವಚನ ಜರುಗಲಿವೆ ಎಂದು ನರಸಿಂಹಮೂರ್ತಿ ಜೋಶಿ ಐಕೂರ ಇವರು ತಿಳಿಸಿದ್ದಾರೆ.
ವಿಶ್ವಪ್ರೇಮವೇ ರಾಮನೊಲಿಮೆಯ ದಾರಿ ಐಕೂರ ನರಸಿಂಹಾಚಾರ್ಯರರ ತತ್ವ
ಈಗಿನ ಯಾದಿಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಪುಟ್ಟ ಗ್ರಾಮ ಐಕೂರ ಗ್ರಾಮದಲ್ಲಿ ವೆಂಕಟಾರ್ಯ ಹಾಗೂ ಸೀತಾಂಬೆಯ ಪುತ್ರನಾಗಿ ಜನಿಸಿದ ಐಕೂರ ನರಸಿಂಹಾಚಾರ್ಯರರು 18ನೇ ಶತಮಾನದಲ್ಲಿಯೇ ವಿಶ್ವ ಪ್ರೇಮಕ್ಕೆ ಬೆಲೆ ನೀಡುವ ರೀತಿಯಲ್ಲಿ ನಡೆದುಕೊಂಡ ಮಹಾನ್ ವ್ಯಕ್ತಿ.
ತತ್ವ ಸಿದ್ದಾಂತಗಳನ್ನು ಆಚರಣೆಯಲ್ಲಿ ತರುವುದರ ಜೊತೆಗೆ ತಮ್ಮಲ್ಲಿರುವ ಪಾಂಡಿತ್ಯವನ್ನು ಜನ ಸಮುದಾಯಕ್ಕೆ ಬೋಧಿಸಿ ಅವರ ಬದುಕು ಹಸನಗೊಳ್ಳುವಂತೆ ದೇವರ ಮಹಿಮೆ, ಆಚಾರ ವಿಚಾರಗಳನ್ನು ಆಡು ಭಾಷೆಯಲ್ಲಿ ತಿಳಿಯುವ ಹಾಗೆ ನಕ್ಕುನಲಿಸುತ್ತ ಹುಡುಗರ ಜೊತೆ ಹುಡುಗರಂತೆ ಜೀವನ ಸಾಗಿಸಿದವರು.
ಸುತ್ತಲಿನ ಜನತೆ ಎಷ್ಟೇ ದುಗುಡದಿಂದ ಬಂದಾಗ, ಮಾತಿನ ಜಾಣ್ಮೆಯಿಂದ ಪರಿಹಾರ ಒದಗಿಸಿಕೊಡುತ್ತಿದ್ದರು. ಇವರ ಅಂತರುಪಾಸನೆ, ಬೋಧನೆ, ಜನಸೇವೆ ಮಾಡುವ ರೀತಿ ಜನರನ್ನಾಕರ್ಷಿಸತೊಡಗಿದವು. ಅವರಿಗೆ ಆರೂಢ ರೀತ್ಯಾ ರಾಜಯೋಗವು ಜಾತಕಕ್ಕನುಸರಿಸಿ ಇದ್ದುದರಿಂದಲೂ ವಿಧೇಯರಾದ, ಭಕ್ತಿವಂತರಾದ ಶಿಷ್ಯ ಸಂಗ್ರಹವು ನಡದೇ ನಡೆಯಿತು. ಈ ಕಾರಣದಿಂದ ದೇಶ ಸಂಚಾರವೂ ಅನಿವಾರ್ಯವಾಗಿ ಬಂತು.
ಇವರ ಗ್ರಾಮವು ಕಲಬುರ್ಗಿಯ ಜಿಲ್ಲೆಯಲ್ಲಿದೆ. ಸಂಚಾರ ರಾಯಚೂರು ಜಿಲ್ಲೆ, ಕಲಬುರ್ಗಿ ಜಿಲ್ಲೆ, ಭಾಗ್ಯನಗರ ಮುಂತಾದ ಕಡೆಗೆಲ್ಲ ನಡೆಯಿತು. ತಮ್ಮ ಆಯುಷ್ಯದ ಮೂರು ಪಾಲು ಸಂಚಾರದಲ್ಲಿಯೇ ಕಳೆದರೆಂದರೆ ತಪ್ಪಾಗದು. ಮನೆಯಲ್ಲಿ ಮಂತಿಕೆಯ ಸಕಲ ಸಾಧನಗಳಿದ್ದರೂ ಅವರ ಲೋಕಸೇವೆಯ ಆಕಾಂಕ್ಷೆಯು ಮನೆಯಲ್ಲಿಯೇ ಕುಳಿತಿರುವಂತೆ ಮಾಡಲಿಲ್ಲ. ಬಡಜನತೆಯ ಕಲ್ಯಾಣಕ್ಕೋಸ್ಕರ ಆಚಾರ್ಯರು ತಮ್ಮಿಡೀ ಜೀವನ ಸವೆಸಿದರು.
ಮಧ್ವ ಮತದ ತತ್ವಕ್ಕನುಸರಿಸಿ ಜೀವನ ಒಂದು ಸತ್ಯ, ಜೀವನದಲ್ಲಿ ವಿಹಿತ ಕರ್ಮಗಳನ್ನು ಮಾಡಬೇಕು. ಸಂಸಾರವೆಂದರೆ ಈ ಪರಿವಾರವನ್ನು ಈ ಸಮಾಜವನ್ನು ಬಿಟ್ಟು ಓಡಿ ಹೋಗುವದಲ್ಲ ಎಂಬುದನ್ನು ಆಚಾರ್ಯರು ಮನದಟ್ಟಾಗಿ ಬೋಧಿಸಿ, ಶಿಷ್ಯರಿಗೆ ಈ ನಿತ್ಯ ಜೀವನದಲ್ಲಿ ಬರುವ ಎಡರುಗಳನ್ನು ಹೇಗೆ ನಿರ್ಲಿಪ್ತತೆಯಿಂದ ತಪ್ಪಿಸಿಕೊಳ್ಳಬೇಕೆಂಬುದನ್ನು ತೋರಿಸುತ್ತಿದ್ದರು. ಪರರಿಗೆ ಎಡರು ಬಂದಾಗ ಆಚಾರ್ಯರು ಯಾವ ಕಷ್ಟಕ್ಕೂ ಹಿಂಜರಿಯದೆ, ತೀರ ಸಾಮಾನ್ಯರಂತೆ ಎಲ್ಲರೊಡನೆ ಬೆರೆತು ಅದನ್ನು ನಿವಾರಿಸುವುದನ್ನು ಆಚಾರ್ಯರು ಮಾಡುತ್ತಿದ್ದರು.
ಈ ಆಚಾರ್ಯರು ತಾವು ಹರಿಪಾದ ಸೇರುವ ಮುನ್ನ ಯಾರಿಂದಲೂ ಸೇವೆ ಮಾಡಿಸಿಕೊಳ್ಳದೇ ತಮ್ಮ ಇಹಲೋಕದ ದಾರಿ ಗೊತ್ತಾದರೂ ಕೂಡ ಎಲ್ಲರನ್ನು ದೂರಕಳಿಸಿ ತಾವೊಬ್ಬರೇ ಉಳಿದು ವ್ಯಯ ಸಂವತ್ಸರ ಫಾಲ್ಗುಣ ಶುದ್ಧ ದ್ವಿತೀಯಾದಂದು ಹರಿಪಾದ ಸೇರಿದರು.
ವಿಶ್ವಪ್ರೇಮವೇ ರಾಮ ನೊಲಿಮೆಯದಾರಿ ಎಂದು ಜನಸಮುದಾಯಕ್ಕೆ ತಿಳಿಹೇಳಿ ಸಾಧನೆ ಮಾಡಿತೋರಿದ ಪರಮ ಪೂಜ್ಯ ಐಕೂರಾಚಾರ್ಯರ ಪುಣ್ಯಾರಾಧನೆ ಕಾರ್ಯಕ್ರಮವು ಮೂರು ದಿನಗಳ ಕಾಲ ಶಹಾಪುರ ತಾಲೂಕಿನ ಐಕೂರ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗುವುದು.