ಗ್ರಾಮ ವಾಸ್ತವ್ಯದಲ್ಲಿ ಸಂಜೆ ವರೆಗೆ ಏನೇನು ನಡೆಯಿತು?
ಯಾದಗಿರಿ, ಜೂನ್ 21: ಬಹು ನಿರೀಕ್ಷೆ ಹುಟ್ಟಿಸಿರುವ ಕುಮಾರಸ್ವಾಮಿ ಅವರು ಜನತಾ ದರ್ಶನ ಸಂಜೆಯ ವರೆಗೆ ಯಾವುದೇ ಅಡ್ಡಿ-ಆತಂಕ ಇಲ್ಲದೆ ನಿರೀಕ್ಷೆಯಂತೆ ಸಾಗಿದೆ.
ಯಾದಗಿರಿ ಜಿಲ್ಲೆ, ಗುರಮಿಟ್ಕಲ್ ತಾಲ್ಲೂಕು, ಚಂಡ್ರಕಿ ಗ್ರಾಮದಲ್ಲಿಂದು ನಡೆದ ಜನತಾದರ್ಶನ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಅವರು ಬೆಳಿಗ್ಗಿನಿಂದ ಸಂಜೆ ವರೆಗೂ ಶಾಂತಚಿತ್ತರಾಗಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು.
ಸ್ವಯಂ ಉದ್ಯೋಗ, ಭೂಮಿ ಮಂಜೂರಾತಿ ,ಸಾಮಾಜಿಕ ಭದ್ರತಾ ಯೋಜನೆಗಳಡಿ ಮಾಸಾಶನ,ವಸತಿ ಸೌಕರ್ಯ ಮೊದಲಾದ ಬೇಡಿಕೆಗಳೊಂದಿಗೆ ಬಂದ ಜನರ ಸಂಕಷ್ಟಗಳನ್ನು ಸಹಾನುಭೂತಿಯಿಂದ ಆಲಿಸಿದರು.
ಗ್ರಾಮ ವಾಸ್ತವ್ಯಕ್ಕೆ ಚಾಲನೆ:ನಿರೀಕ್ಷೆ ಹೆಚ್ಚಿಸಿದ ಕುಮಾರಸ್ವಾಮಿ ಭಾಷಣ
ಈ ಮಧ್ಯೆ ವೇದಿಕೆಯ ಮುಂಭಾಗದಲ್ಲಿ ವಿಕಲಚೇತನರು ಜಮಾವಣೆಯಾಗಿದ್ದನ್ನು ಗಮನಿಸಿದ ಮುಖ್ಯಮಂತ್ರಿಗಳು, ವಿಕಲಚೇತನರು ತೊಂದರೆಪಟ್ಟುಕೊಂಡು ಮುಖ್ಯವೇದಿಕೆಗೆ ಬರುವುದು ಬೇಡ, ಸ್ವತಃ ತಾವೇ ಅಲ್ಲಿಗೆ ಬರುವುದಾಗಿ ತಿಳಿಸಿದರು. ವೇದಿಕೆಯ ಮುಂಭಾಗದಲ್ಲಿದ್ದ ವಿಕಲಚೇತನರ ಬಳಿ ತೆರಳಿ ಅವರ ಮನವಿಗಳನ್ನು ಪಡೆದು, ಅಹವಾಲುಗಳನ್ನು ಸ್ವೀಕರಿಸಿದರು.
ಊಟವಿಲ್ಲದೆ ಕೆಲಸ ಮಾಡಿದ ಕುಮಾರಸ್ವಾಮಿ
ಜನತಾದರ್ಶನದಲ್ಲಿ ನಿರತರಾದ ಮುಖ್ಯಮಂತ್ರಿಗಳು ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದನ್ನು ಕಂಡು, ತಾವು ಎಲ್ಲಿಯೂ ಹೋಗುವುದಿಲ್ಲ ರಾತ್ರಿ 8 ಗಂಟೆಯಾದರೂ ಸರಿ ನಿಮ್ಮ ಮನವಿಗಳನ್ನು ಸ್ವೀಕರಿಸುತ್ತೇನೆ, ಆತುರ ಪಡಬೇಡಿ ಎಂದು ಮನವಿ ಮಾಡಿದರು.ವೇದಿಕೆಯಿಂದ ಕದಲದೇ ಮಧ್ಯಾಹ್ನದ ಭೋಜನವನ್ನೂ ಸ್ವೀಕರಿಸದೇ ಜನತಾ ದರ್ಶನ ನಡೆಸಿದರು.
ಮಂಡ್ಯದ ನವಿಲುಮಾರನಹಳ್ಳಿಗಿರುವ ಖ್ಯಾತಿ ಏನು ಗೊತ್ತಾ?
ಜನತಾ ದರ್ಶನಕ್ಕೆ ಮಳೆಯ ಸಿಂಚನ
ಜನತಾದರ್ಶನ ಕಾರ್ಯಕ್ರಮಕ್ಕೆ ವರುಣ ಸಿಂಚನವಾಯಿತು. ಸಂಜೆ 4.15 ರಿಂದ ಪ್ರಾರಂಭವಾದ ಮಳೆಯ ನಡುವೆಯೂ ಮುಖ್ಯಮಂತ್ರಿಗಳ ಜನತಾದರ್ಶನ ನಿರಾತಂಕವಾಗಿ ನಡೆಯಿತು. ಮಳೆ ಬಂದರೂ ಸಹ ಕಾರ್ಯಕ್ರಮಕ್ಕೆ ಅಡಚಣೆಯಾಗಬಾರದೆಂಬ ಮುನ್ನೆಚ್ಚರಿಕೆಯೊಂದಿಗೆ ಜಿಲ್ಲಾಡಳಿತವು ತಗಡುಗಳಿಂದ ಬೃಹತ್ ಸಭಾಂಗಣ ನಿರ್ಮಿಸಿದ್ದರಿಂದ ನೆರೆದಿದ್ದ ಸಾರ್ವಜನಿಕರಿಗೆ ಹಾಗೂ ಕಾರ್ಯಕ್ರಮಕ್ಕೆ ಯಾವುದೇ ತೊಂದರೆಯಾಗಲಿಲ್ಲ.
ಸಾವಿರಾರು ಸಂಖ್ಯೆಯಲ್ಲಿ ನೆರದಿದ್ದ ಜನ
ಸಿಎಂ ಕುಮಾರಸ್ವಾಮಿ ಅವರಿಗೆ ಅವಹಾಲು ಸಲ್ಲಿಸಬೇಕೆಂದು ಸಾವಿರಾರು ಸಂಖ್ಯೆಯಲ್ಲಿ ಚಂಡ್ರಕಿ ಗ್ರಾಮಕ್ಕೆ ಜನರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಹಿರಿಯರು, ಅಂಗವಿಕಲರು, ರೈತರು, ಯುವಕರು ಬಂದಿದ್ದರು. ಅಹವಾಲುಗಳನ್ನು ಸ್ವೀಕರಿಸಲು ಸೂಕ್ತ ವ್ಯವಸ್ಥೆಯನ್ನು ಮಾಡಲಾಗಿತ್ತು. ಕುಮಾರಸ್ವಾಮಿ ಅವರು ಜೊತೆ ಸಚಿವ ಬಂಡೆಪ್ಪ ಕಾಶೆಂಪುರ, ಶಾಸನ ನಾಗನಗೌಡ, ಸಚಿವ ಪ್ರಿಯಾಂಕ್ ಖರ್ಗೆ ಅವರು ಸಹ ಜನರ ಅವಹಾಲು ಕೇಳಿದರು.
ಗ್ರಾಮ ವಾಸ್ತವ್ಯ:ಬೆಂಗಳೂರಿಂದ ಯಾದಗಿರಿಗೆ ರೈಲು ಹತ್ತಿದ ಕುಮಾರಸ್ವಾಮಿ
ಕೆಲ-ಕಾಲ ಗದ್ದಲವೂ ಆಯಿತು
ಜನತಾ ದರ್ಶನದ ವೇಳೆ ಸಣ್ಣ ಗದ್ದಲವೂ ಆಯಿತು. ಜನರ ನೂಕು ನುಗ್ಗಲು ಹೆಚ್ಚಾದ ಕಾರಣ ಗದ್ದಲದ ವಾತಾವರಣ ಉಂಟಾಯಿತು. ಸಿಎಂ ಅವರು ಇಲ್ಲಿಗೆ ಬರಬೇಕು ಎಂದು ಒಂದು ಸಾಲಿನ ಜನ ಪಟ್ಟು ಹಿಡಿದರು, ಸಚಿವರು ಅವರನ್ನು ಸಮಾಧಾನ ಪಡಿಸಿದರು.
ಸಂಜೆಯ ಮೇಲೆ ಸಂವಾದ, ಸಾಂಸ್ಕೃತಿಕ ಕಾರ್ಯಕ್ರಮ
ವೇಳಾಪಟ್ಟಿಯಂತೆ ಸಂಜೆ 6:30 ವರೆಗೆ ಅವಹಾಲು ಸ್ವೀಕಾರ ಮುಗಿಯಲಿದೆ. ಸಂಜೆ ಮೇಲೆ ಕುಮಾರಸ್ವಾಮಿ ಅವರು ರೈತರೊಂದಿಗೆ ಸಂವಾದ ನಡೆಸಲಿದ್ದಾರೆ. ನಂತರ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನೋಡಲಿದ್ದಾರೆ. ನಂತರ ಮಕ್ಕಳು ಶಿಕ್ಷಕರೊಂದಿಗೆ ಊಟ ಮಾಡಿ ಸರ್ಕಾರಿ ಶಾಲೆಯಲ್ಲಿಯೇ ನಿದ್ರಿಸಲಿದ್ದಾರೆ.