ಭಗವಂತ ಖೂಬಾಗೆ ಗುಂಡಿನ ಸ್ವಾಗತ; ಅಮಾಯಕ ರೈತರ ಬಂಧನ
ಯಾದಗಿರಿ, ಆಗಸ್ಟ್ 18; ಜನಾಶೀರ್ವಾದ ಯಾತ್ರೆಯಲ್ಲಿ ಪಾಲ್ಗೊಳ್ಳಲು ಬೀದರ್ ಸಂಸದ ಮತ್ತು ಕೇಂದ್ರ ರಸಗೊಬ್ಬರ, ರಾಸಾಯನಿಕ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಯಾದಗಿರಿಗೆ ಆಗಮಿಸಿದಾಗ ಗಾಳಿಯಲ್ಲಿ ಗುಂಡು ಹಾರಿಸಿ ಸ್ವಾಗತಿಸಲಾಗಿತ್ತು. ಈ ಘಟನೆ ಕುರಿತು ಎಫ್ಐಆರ್ ಸಹ ದಾಖಲಾಗಿದೆ.
ಬುಧವಾರ ಯಾದಗಿರಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಬಂಧಿತರನ್ನು ಮೊನಪ್ಪ, ಶರಣಪ್ಪ, ನಿಂಗಪ್ಪ, ದೇವಿಂದ್ರಪ್ಪ ಎಂದು ಗುರುತಿಸಲಾಗಿದೆ. ಯಾದಗಿರಿ ಗ್ರಾಮೀಣ ಠಾಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ವಿಡಿಯೋ; ಯಾದಗಿರಿಯಲ್ಲಿ ಕೇಂದ್ರ ಸಚಿವರಿಗೆ ಗುಂಡಿನ ಸ್ವಾಗತ!
ಜನಾಶೀರ್ವಾದ ಯಾತ್ರೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸಚಿವ ಭಗವಂತ ಖೂಬಾಗೆ ಯಾದಗಿರಿ ಜಿಲ್ಲೆಯ ಯರಗೊಳ ಗ್ರಾಮದಲ್ಲಿ ಅದ್ದೂರಿ ಸ್ವಾಗತ ಕೋರಲಾಗಿತ್ತು. ಈ ಸಂದರ್ಭದಲ್ಲಿ ನಾಡಬಂದೂಕಿನಿಂದ ಗುಂಡು ಹಾರಿಸಿ ಸಚಿವರನ್ನು ಸ್ವಾಗತಿಸಲಾಗಿತ್ತು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಬಿಜೆಪಿ ಬ್ಯಾನರ್ ಕಟ್ಟುವಾಗ ಹೊಡೆದು ಓಡಿಸುತ್ತಿದ್ದರು; ಎ. ನಾರಾಯಣಸ್ವಾಮಿ
ಪೊಲೀಸರು ಬಂಧಿಸಿರುವ ಎಲ್ಲರೂ ರೈತರಾಗಿದ್ದಾರೆ. ಬೆಳೆ ನಾಶ ಮಾಡುವ ಪ್ರಾಣಿಗಳನ್ನು ಓಡಿಸಲು ನಾಡ ಬಂದೂಕು ಹಿಡಿದುಕೊಂಡು ಕಾವಲು ಕಾಯುತ್ತಿದ್ದರು. ಮಾಜಿ ಸಚಿವ ಬಾಬೂರಾವ್ ಚಿಂಚಿನಸೂರ ಮತ್ತು ಯಾದಗಿರಿ ಶಾಸಕ ವೆಂಕಟರೆಡ್ಡಿ ಬಂದೂಕಿನಿಂದ ಸ್ವಾಗತಿಸಲು ಸೂಚಿಸಿದ್ದರು ಎಂದು ತಿಳಿದು ಬಂದಿದೆ.
ಕೇಂದ್ರ ಸಚಿವರ ಜನಾಶೀರ್ವಾದ ಯಾತ್ರೆ: ಮಾಜಿ ಸಿಎಂ ಎಚ್ಡಿಕೆ ವ್ಯಂಗ್ಯ
ಬಿಜೆಪಿ ನಾಯಕರ ಮಾತು ಕಟ್ಟಿಕೊಂಡು ರೈತರು ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಆದರೆ ಈಗ ಬಿಜೆಪಿ ನಾಯಕರು ಆರಾಮವಾಗಿ ಓಡಾಡಿಕೊಂಡಿದ್ದಾರೆ. ಗುಂಡು ಹಾರಿಸಿದ ರೈತರು ಮಾತ್ರ ಪೊಲೀಸರ ವಶದಲ್ಲಿದ್ದಾರೆ.
ನಾಡಬಂದೂಕಿನಿಂದ ಗುಂಡು ಹಾರಿಸಿ ಸಚಿವರನ್ನು ಸ್ವಾಗತಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಉತ್ತರ ಪ್ರದೇಶ, ಬಿಹಾರ ಮಾದರಿ ರಾಜಕೀಯ ಕರ್ನಾಟಕದಲ್ಲಿ ಆರಂಭವಾಗಿದೆ ಎಂದು ಜನರು ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಸಚಿವರು ಹೇಳಿದ್ದೇನು?; ಇನ್ನೂ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಸಚಿವ ಭಗವಂತ ಖೂಬಾ, "ನಾಡಬಂದೂಕು ಮೂಲಕ ಗುಂಡು ಹಾರಿಸಿ ಸ್ವಾಗತ ಕೋರಿಲ್ಲ. ಈ ಭಾಗದಲ್ಲಿ ಹಳೆಯ ವ್ಯವಸ್ಥೆ ಇದೆ. ಇತಿಹಾಸ ತೆಗೆದು ನೋಡಿ, ಪಟಾಕಿ ಪುಡಿ ಹಾಕಿ ಶಬ್ಧ ಮಾಡಿದ್ದಾರೆ ಅಷ್ಟೇ" ಎಂದು ಸಮರ್ಥನೆ ನೀಡಿದ್ದರು.
"ಗುಂಡು ಹಾರಿಸಿಲ್ಲ, ಅದನ್ನು ತಿರುಚಬೇಡಿ. ಗುಂಡು ಹಾರಿಸಿದ್ದರೆ ನಾನೇ ಕರೆದು ಮಾತನಾಡುತ್ತಿದ್ದೆ. ತಪ್ಪು ಮಾಡಿದ್ದರೆ ಸರ್ಕಾರ ಕ್ರಮ ಕೈಗೊಳ್ಳಲಿದೆ. ಅದು ನಾಡಬಂದೂಕು ಅಲ್ಲ" ಎಂದು ಸ್ಪಷ್ಟನೆಯನ್ನು ಸಚಿವರು ನೀಡಿದ್ದರು.
ಜುಲೈನಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂಪುಟ ವಿಸ್ತರಣೆ ಮಾಡಿದ್ದಾರೆ. ಕರ್ನಾಟಕದಿಂದ ಪ್ರಧಾನಿ ಮೋದಿ ಸಂಪುಟಕ್ಕೆ ರಾಜೀವ್ ಚಂದ್ರಶೇಖರ್, ಶೋಭಾ ಕರಂದ್ಲಾಜೆ, ಎ. ನಾರಾಯಣಸ್ವಾಮಿ ಮತ್ತು ಭಗವಂತ ಖೂಬಾ ಸೇರ್ಪಡೆಗೊಂಡಿದ್ದಾರೆ. ಈ ನಾಲ್ವರು ಸಚಿವರು ಮೋದಿ ಸೂಚನೆಯಂತೆ ಕೋವಿಡ್ ಕಾಲದಲ್ಲಿ ರಾಜ್ಯದಲ್ಲಿ 'ಜನಾಶೀರ್ವಾದ ಯಾತ್ರೆ' ನಡೆಸುತ್ತಿದ್ದಾರೆ.
ಸಚಿವ ಭಗವಂತ ಖೂಬಾ ನೇತೃತ್ವದ ತಂಡ ಬುಧವಾರ ರಾಯಚೂರು ಮತ್ತು ಯಾದಗಿರಿಯಲ್ಲಿ ಜನಾಶೀರ್ವಾದ ಯಾತ್ರೆ ನಡೆಸಿತು. ಈ ಯಾತ್ರೆಗಾಗಿ ಯಾದಗಿರಿಗೆ ಸಚಿವರು ಆಗಮಿಸಿದಾಗ ನಾಡ ಬಂದೂಕಿನಿಂದ ಗುಂಡು ಹಾರಿಸಿ ಸ್ವಾಗತಿಸಲಾಗಿದ್ದು ವಿವಾದಕ್ಕೆ ಕಾರಣವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಸೂಚನೆಯಂತೆ ಕೇಂದ್ರ ಸಚಿವರು ದೇಶಾದ್ಯಂತ ಜನಾಶೀರ್ವಾದ ಯಾತ್ರೆ ನಡೆಸುತ್ತಿದ್ದಾರೆ. ತೆರೆದ ವಾಹನದಲ್ಲಿ ಯಾತ್ರೆ ನಡೆಸುತ್ತಾ ಮಾರ್ಗದಲ್ಲಿ ಅಲ್ಲಲ್ಲಿ ಚಿಕ್ಕ ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ. ಉದ್ಯಮಿಗಳು, ಗಣ್ಯರ ಜೊತೆ ಸಂವಾದ ಮಾಡುತ್ತಿದ್ದಾರೆ.
Recommended Video
ಬಿಜೆಪಿ ಜನಾಶೀರ್ವಾದ ಯಾತ್ರೆಯನ್ನು ದೇಶದ 150 ಲೋಕಸಭಾ ಕ್ಷೇತ್ರಗಳಲ್ಲಿ ನಡೆಸುತ್ತಿದೆ. ಒಬ್ಬ ಸಚಿವರು ಸುಮಾರು 400 ಕಿ. ಮೀ. ಸಂಚಾರ ಮಾಡಿ ಕೇಂದ್ರ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿಯನ್ನು ನೀಡುತ್ತಿದ್ದಾರೆ.