ಭಗವಂತ ಖೂಬಾಗೆ ಗುಂಡಿನ ಸ್ವಾಗತ; ಪೊಲೀಸ್ ಕಾನ್ಸ್ಟೇಬಲ್ ಅಮಾನತು
ಯಾದಗಿರಿ, ಆಗಸ್ಟ್ 19; ಯಾದಗಿರಿಯಲ್ಲಿ ಜನಾಶೀರ್ವಾದ ಯಾತ್ರೆಯಲ್ಲಿ ಪಾಲ್ಗೊಳ್ಳಲು ಬೀದರ್ ಸಂಸದ ಮತ್ತು ಕೇಂದ್ರ ರಸಗೊಬ್ಬರ, ರಾಸಾಯನಿಕ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಆಗಮಿಸಿದಾಗ ಗಾಳಿಯಲ್ಲಿ ಗುಂಡು ಹಾರಿಸಿ ಸ್ವಾಗತಿಸಲಾಗಿತ್ತು. ಈ ಘಟನೆ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ರಾತ್ರಿ ಯಾದಗಿರಿ ಗ್ರಾಮೀಣ ಠಾಣೆ ಪೊಲೀಸರು ಮೊನಪ್ಪ, ಶರಣಪ್ಪ, ನಿಂಗಪ್ಪ, ದೇವಿಂದ್ರಪ್ಪ ಎಂಬುವವರನ್ನು ಬಂಧಿಸಿದ್ದಾರೆ. ಘಟನೆ ಕುರಿತು ಎಫ್ಐಆರ್ ದಾಖಲಾಗಿದ್ದು, ತನಿಖೆ ನಡೆಸಿದೆ.
ಭಗವಂತ ಖೂಬಾಗೆ ಗುಂಡಿನ ಸ್ವಾಗತ; ಅಮಾಯಕ ರೈತರ ಬಂಧನ
ಗುರುವಾರ ಯಾದಗಿರಿ ಗ್ರಾಮೀಣ ಠಾಣೆಯ ಪೊಲೀಸ್ ಕಾನ್ಸ್ಟೇಬಲ್ಗಳಾದ ವೀರೇಶ್, ಸಂತೋಷ್, ಮೆಹಬೂಬ್ ಅಮಾನತು ಮಾಡಲಾಗಿದೆ. ಪೊಲೀಸರ ಸಮ್ಮುಖದಲ್ಲಿಯೇ ನಾಲ್ವರು ನಾಡ ಬಂದೂಕು ಮೂಲಕ ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ವಿಡಿಯೋ; ಯಾದಗಿರಿಯಲ್ಲಿ ಕೇಂದ್ರ ಸಚಿವರಿಗೆ ಗುಂಡಿನ ಸ್ವಾಗತ!
ಜನಾಶೀರ್ವಾದ ಯಾತ್ರೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಭಗವಂತ ಖೂಬಾಗೆ ಯಾದಗಿರಿ ಜಿಲ್ಲೆಯ ಯರಗೊಳ ಗ್ರಾಮದಲ್ಲಿ ಬುಧವಾರ ಅದ್ದೂರಿ ಸ್ವಾಗತ ಕೋರಲಾಗಿತ್ತು. ಈ ಸಂದರ್ಭದಲ್ಲಿ ನಾಡಬಂದೂಕಿನಿಂದ ಗುಂಡು ಹಾರಿಸಿ ಸ್ವಾಗತ ಕೋರಲಾಗಿತ್ತು. ಈ ಘಟನೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.
ಕೇಂದ್ರ ಸಚಿವರ ಜನಾಶೀರ್ವಾದ ಯಾತ್ರೆ: ಮಾಜಿ ಸಿಎಂ ಎಚ್ಡಿಕೆ ವ್ಯಂಗ್ಯ
ಗುಂಡು ಹಾರಿಸಿದ ಆರೋಪದ ಮೇಲೆ ಪೊಲೀಸರು ಬಂಧಿಸಿರುವ ಎಲ್ಲಾ ಆರೋಪಿಗಳು ರೈತರು. ಬೆಳೆ ನಾಶ ಮಾಡುವ ಪ್ರಾಣಿಗಳನ್ನು ಓಡಿಸಲು ನಾಡ ಬಂದೂಕು ಹಿಡಿದುಕೊಂಡು ಕಾವಲು ಕಾಯುತ್ತಿದ್ದರು. ಮಾಜಿ ಸಚಿವ ಬಾಬೂರಾವ್ ಚಿಂಚಿನಸೂರ ಮತ್ತು ಯಾದಗಿರಿ ಶಾಸಕ ವೆಂಕಟರೆಡ್ಡಿ ಬಂದೂಕಿನಿಂದ ಸ್ವಾಗತಿಸಲು ಸೂಚಿಸಿದ ಕಾರಣ ಗುಂಡು ಹಾರಿಸಿದ್ದರು.
ಸಚಿವರ ಸ್ಪಷ್ಟನೆ; ನಾಡ ಬಂದೂಕಿನಿಂದ ಗುಂಡು ಹಾರಿಸಿ ಸ್ವಾಗತಿಸಿದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಭಗವಂತ ಖೂಬಾ, "ನಾಡಬಂದೂಕು ಮೂಲಕ ಗುಂಡು ಹಾರಿಸಿ ಸ್ವಾಗತ ಕೋರಿಲ್ಲ. ಈ ಭಾಗದಲ್ಲಿ ಹಳೆಯ ವ್ಯವಸ್ಥೆ ಇದೆ. ಇತಿಹಾಸ ತೆಗೆದು ನೋಡಿ, ಪಟಾಕಿ ಪುಡಿ ಹಾಕಿ ಶಬ್ಧ ಮಾಡಿದ್ದಾರೆ ಅಷ್ಟೇ" ಎಂದು ಸ್ಪಷ್ಟನೆ ನೀಡಿದ್ದರು.
"ಗುಂಡು ಹಾರಿಸಿಲ್ಲ, ಘಟನೆಯನ್ನು ತಿರುಚಬೇಡಿ. ಗುಂಡು ಹಾರಿಸಿದ್ದರೆ ನಾನೇ ಕರೆದು ಮಾತನಾಡುತ್ತಿದ್ದೆ. ತಪ್ಪು ಮಾಡಿದ್ದರೆ ಸರ್ಕಾರ ಕ್ರಮ ಕೈಗೊಳ್ಳಲಿದೆ" ಎಂದು ಹೇಳಿದ್ದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸಹ ಘಟನೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. "ಗುಂಡು ಹಾರಿಸಿ ಸ್ವಾಗತಿಸುವುದು ಯಾವ ಸಂಸ್ಕೃತಿ?. ಗುಂಡು ಅಲ್ಲಿ ಸೇರಿದ್ದ ಜನರಲ್ಲಿ ಯಾರಿಗಾದರೂ ತಗುಲಿದ್ದರೆ ಯಾರು ಜವಾಬ್ದಾರಿಯಾಗುತ್ತಿದ್ದರು" ಎಂದು ಬಿಜೆಪಿ ನಾಯಕರನ್ನು ಪ್ರಶ್ನೆ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಜುಲೈನಲ್ಲಿ ಸಂಪುಟ ವಿಸ್ತರಣೆ ಮಾಡಿದ್ದರು. ಆಗ ಕರ್ನಾಟಕದಿಂದ ಪ್ರಧಾನಿ ಮೋದಿ ಸಂಪುಟಕ್ಕೆ ರಾಜೀವ್ ಚಂದ್ರಶೇಖರ್, ಶೋಭಾ ಕರಂದ್ಲಾಜೆ, ಎ. ನಾರಾಯಣಸ್ವಾಮಿ ಮತ್ತು ಭಗವಂತ ಖೂಬಾ ಸೇರ್ಪಡೆಗೊಂಡಿದ್ದಾರೆ.
ಈ ನಾಲ್ವರು ಸಚಿವರು ಮೋದಿ ಸೂಚನೆಯಂತೆ ಕೋವಿಡ್ ಕಾಲದಲ್ಲಿ ರಾಜ್ಯದಲ್ಲಿ 'ಜನಾಶೀರ್ವಾದ ಯಾತ್ರೆ' ನಡೆಸುತ್ತಿದ್ದಾರೆ. ಕೇಂದ್ರದ ಯೋಜನೆಗಳ ಕುರಿತು ಜನರಿಗೆ ಮಾಹಿತಿಯನ್ನು ನೀಡುತ್ತಿದ್ದಾರೆ. ಭಗವಂತ ಖೂಬಾ ನೇತೃತ್ವದ ತಂಡ ಬುಧವಾರ ರಾಯಚೂರು ಮತ್ತು ಯಾದಗಿರಿಯಲ್ಲಿ ಜನಾಶೀರ್ವಾದ ಯಾತ್ರೆ ನಡೆಸಿತು. ಈ ಯಾತ್ರೆಗಾಗಿ ಯಾದಗಿರಿಗೆ ಸಚಿವರು ಆಗಮಿಸಿದಾಗ ನಾಡ ಬಂದೂಕಿನಿಂದ ಗುಂಡು ಹಾರಿಸಿ ಸ್ವಾಗತಿಸಲಾಗಿತ್ತು.
ಪೊಲೀಸರು ಗುಂಡು ಹಾರಿಸಿದ ಆರೋಪ ಮೇಲೆ ನಾಲ್ವರನ್ನು ಬಂಧಿಸಿದ್ದಾರೆ. ಸಚಿವರು ಬಂದಾಗ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಮೂವರು ಪೊಲೀಸ್ ಸಿಬ್ಬಂದಿಗಳನ್ನು ಅಮಾನತುಗೊಳಿಸಿದ್ದಾರೆ. ಆದರೆ ಮಾಜಿ ಸಚಿವ ಬಾಬೂರಾವ್ ಚಿಂಚಿನಸೂರ ಮತ್ತು ಇತರ ನಾಯಕರು ಕೈಯಲ್ಲಿ ಬಂದೂಕು ಹಿಡಿದು ಫೋಟೋಗೆ ಫೋಸ್ ಕೊಟ್ಟಿದ್ದರು. ಅವರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗುತ್ತದೆ? ಎಂದು ಕಾದು ನೋಡಬೇಕು.