ಯಾದಗಿರಿ; ಸತ್ತ ವ್ಯಕ್ತಿಗೆ ಬಂತು ಬೂಸ್ಟರ್ ಡೋಸ್ ಮೆಸೇಜ್!
ಯಾದಗಿರಿ, ಮೇ 11: ಕೋವಿಡ್ 4ನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. 18 ವರ್ಷ ಮೇಲ್ಪಟ್ಟ ಎಲ್ಲರೂ ಸಹ ಕೋವಿಡ್ ಬೂಸ್ಟರ್ ಡೋಸ್ ಪಡೆಯಲು ಅನುಮತಿ ನೀಡಲಾಗಿದೆ.
ಯಾದಗಿರಿ ಆರೋಗ್ಯ ಇಲಾಖೆ ಬೂಸ್ಟರ್ ಡೋಸ್ ನೀಡಿಕೆ ವಿಚಾರದಲ್ಲಿ ಎಡವಟ್ಟು ಮಾಡಿಕೊಂಡಿದೆ. ಕಳೆದ ಜನವರಿ ತಿಂಗಳಲ್ಲಿಯೇ ಸತ್ತು ಹೋದ ವ್ಯಕ್ತಿಯ ಮೊಬೈಲ್ಗೆ ಯಶಸ್ವಿಯಾಗಿ ಕೋವಿಡ್ ಲಸಿಕೆ ನೀಡಿದ್ದೇವೆ ಎಂದು ಸಂದೇಶ ಕಳಿಸಲಾಗಿದೆ.
ವ್ಯಕ್ತಿ ಸತ್ತು ಹೋದ ಮೂರು ತಿಂಗಳಿಗೆ 2ನೇ ಡೋಸ್ ನೀಡಿದ್ದಾಗಿ ಮೆಸೇಜ್ ಬಂದಿದೆ. ಈಗ ಕೋವಿಡ್ ಬೂಸ್ಟರ್ ಡೋಸ್ ನೀಡಿರುವ ಬಗ್ಗೆ ಸಂದೇಶ ರವಾನಿಸಲಾಗಿದೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿಯ ಮುರಾರಿರಾವ್ ಎಂಬುವವರಿಗೆ ಈ ಸಂದೇಶ ಬಂದಿದೆ. ಮುರಾರಿರಾವ್ಗೆ ಮೇ 9ರಂದು ಲಸಿಕೆ ನೀಡಿರುವ ಸಂದೇಶ ಬಂದಿದೆ. ಅಲ್ಲದೇ ಪ್ರಮಾಣ ಪತ್ರವೂ ಕೋವಿನ್ ವೆಬ್ ಸೈಟ್ನಲ್ಲಿ ಇದೆ.
ಕೋವಿಡ್ ಬಲಿಯಾಗಿದ್ದರು; ಮುರಾರಿರಾವ್ ಶಿಂಧೆ ಕೋವಿಡ್ಗೆ ಬಲಿಯಾಗಿದ್ದರು. ಸತ್ತ ಮೂರು ತಿಂಗಳ ಬಳಿಕ 2ನೇ ಡೋಸ್ ನೀಡಿದ್ದಾಗಿ ಮೆಸೇಜ್ ಬಂದಿತ್ತು. ಬೂಸ್ಟರ್ ಡೋಸ್ ಪಡೆದಿರುವ ಸಂದೇಶ ಮೊಬೈಲ್ಗೆ ಬಂದಿದೆ.
ನೀವು ಬೂಸ್ಟರ್ ಡೋಸ್ಗೆ ಅರ್ಹರು ಎಂದು ಮೇ 4 ರಂದು ಸಂದೇಶ ಬಂದಿತ್ತು. ಆದರೆ ಮೇ 9ರಂದು ಕೋವಿಶೀಲ್ಡ್ ಯಶಸ್ವಿಯಾಗಿ ನೀಡಲಾಗಿದೆ ಎಂಬ ಸಂದೇಶ ಬಂದಿದೆ. ವ್ಯಕ್ತಿಯ ಕುಟುಂಬಸ್ಥರು ಶಹಾಪೂರ ತಾಲೂಕು ಮಟ್ಟದ ಆರೋಗ್ಯ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋವಿಡ್ ಮೂರನೇ ಡೋಸ್ ಅಭಿಯಾನದಲ್ಲಿ ಗಮನಾರ್ಹ ಸಾಧನೆ ಮಾಡಿದ್ದೇವೆ ಎಂದು ಬಿಂಬಿಸಿಕೊಳ್ಳಲು ಸತ್ತವರಿಗೂ ಲಸಿಕೆ ಹಾಗೂ ಲಸಿಕೆ ಪಡೆಯದಿದ್ದವರಿಗೂ ಲಸಿಕೆ ಕೊಟ್ಟಿರುವ ಸಂದೇಶಗಳು ಬಂದಿದ್ದು, ಆರೋಗ್ಯ ಇಲಾಖೆ ವಿರುದ್ಧ ಜನರು ವ್ಯಂಗ್ಯವಾಡಿದ್ದಾರೆ.
ಕಳೆದ ಮೂರು ದಿನಗಳಿಂದ ಹಿಂದೆ ರಾಮನಗರದಲ್ಲಿಯೂ ಇದೇ ಮಾದರಿ ಪ್ರಕರಣ ಕಂಡು ಬಂದಿತ್ತು. ಈಗ ಯಾದಗಿರಿಯಲ್ಲಿ ಕಂಡು ಬಂದಿದೆ. ಆದರೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಇದ್ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ.
Recommended Video