ಗ್ರಾಮ ವಾಸ್ತವ್ಯಕ್ಕೆ ಚಾಲನೆ:ನಿರೀಕ್ಷೆ ಹೆಚ್ಚಿಸಿದ ಕುಮಾರಸ್ವಾಮಿ ಭಾಷಣ
ಯಾದಗಿರಿ, ಜೂನ್ 21: ಕುಮಾರಸ್ವಾಮಿ ಅವರ ಒಲವಿನ ಕಾರ್ಯಕ್ರಮ 'ಗ್ರಾಮ ವಾಸ್ತವ್ಯ' ಇಂದು ಅಧಿಕೃತವಾಗಿ ಪ್ರಾರಂಭವಾಗಿದೆ. ಯಾದಗಿರಿ ಜಿಲ್ಲೆ, ಗುರ್ಮಿಟ್ಕಲ್ ತಾಲ್ಲೂಕಿನ ಚಂಡರಕಿ ಗ್ರಾಮದಲ್ಲಿ ದೀಪ ಬೆಳಗುವ ಮೂಲಕ ಕುಮಾರಸ್ವಾಮಿ ಅವರು 'ಗ್ರಾಮ ವಾಸ್ತವ್ಯ' ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಿಎಂ ಕುಮಾರಸ್ವಾಮಿ, ಗ್ರಾಮ ವಾಸ್ತವ್ಯ ಎಂಬುದು ಗಾಂಧೀಜಿ ಅವರ ಪರಿಕಲ್ಪನೆ, ಇದು ಕೇವಲ ಗಿಮಿಕ್ ಅಲ್ಲ, ನಿಮ್ಮ ಅವಹಾಲು ಅರ್ಜಿಗಳನ್ನು ತೆಗೆದುಕೊಂಡು ಹೋಗಲು ಅಲ್ಲ ಬಂದಿರುವುದು, ನಿಮ್ಮ ಸಮಸ್ಯೆ ನಿವಾರಿಸಲು ಬಂದಿದ್ದೇನೆ ಎಂದು ಹೇಳಿದರು.
ಮಧ್ಯಂತರ ಚುನಾವಣೆ ಬಗ್ಗೆ ದೇವೇಗೌಡರ ಹೇಳಿಕೆಗೆ ಎಚ್ಡಿಕೆ ಪ್ರತಿಕ್ರಿಯೆ
ಜಿಲ್ಲೆಯ ಎಲ್ಲ ಸಮಸ್ಯೆಗಳ ಪಟ್ಟಿಯನ್ನು ಅಧಿಕಾರಿಗಳು, ಶಾಸಕರು ನೀಡಿದ್ದಾರೆ. ಸಮಸ್ಯೆಗಳ ಪರಿಹಾರಕ್ಕೆ ಇಲ್ಲಿಂದಲೇ ಆದೇಶ ನೀಡಲಾಗುವುದು, ದೀರ್ಘ ಅವಧಿ ಬೇಕಾದ ಸಮಸ್ಯೆಗಳನ್ನಷ್ಟೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಎಲ್ಲರೂ ಯಾವುದೇ ಆತರ ಇಲ್ಲದೆ, ಸಾವಕಾಶವಾಗಿ ತಮ್ಮ ಅವಹಾಲುಗಳನ್ನು ಸಲ್ಲಿಸಬೇಕು ಎಂದು ಕುಮಾರಸ್ವಾಮಿ ಹೇಳಿದರು.
ಯಾದಗಿರಿಗೆ ವೈದ್ಯಕೀಯ ಕಾಲೇಜು ಬೇಡಿಕೆ ಬಗ್ಗೆ ಸ್ಪಷ್ಟನೆ ನೀಡಿದ ಕುಮಾರಸ್ವಾಮಿ, ವೈದ್ಯಕೀಯ ಕಾಲೇಜು ಕಟ್ಟುವುದಕ್ಕಿಂತಲೂ ಪ್ರಮುಖವಾಗಿ ಜಿಲ್ಲಾ ಆಸ್ಪತ್ರೆಯ ಅಭಿವೃದ್ಧಿ ನನ್ನ ಆದ್ಯತೆ ಆಗಿದೆ. ಅದಕ್ಕೆ ಇಂದು ಚಾಲನೆ ನೀಡಿದ್ದೇವೆ, ಜೊತೆಗೆ 300 ಹಾಸಿಗೆಗಳ ಆಸ್ಪತ್ರೆಗೆ ಕೆಲವು ದಿನಗಳಲ್ಲಿ ಮತ್ತೆ ಚಾಲನೆ ನೀಡುತ್ತೇವೆ ಎಂದು ಅವರು ಹೇಳಿದರು.
ನೀರು ಕೊಡುತ್ತೇವೆ, ಅದನ್ನು ಸರಿಯಾಗಿ ಬಳಸಿ:ಎಚ್ಡಿಕೆ
ಯಾದಗಿರಿಯನ್ನು ಬರದ ಜಿಲ್ಲೆ ಪಟ್ಟಿಯಿಂದ ಹೊರತೆಗೆಯುವಂತೆ ಸರ್ವ ಸೌಕರ್ಯವನ್ನು ಕೊಡಲು ನಮ್ಮ ಸರ್ಕಾರ ಬದ್ಧವಾಗಿದೆ. ಮಹಾರಾಷ್ಟ್ರದಲ್ಲಿ ಅನುಸರಿಸುತ್ತಿರುವ ಕೃಷಿ ಪದ್ಧತಿಯೊಂದನ್ನು ನಮ್ಮ ಅಧಿಕಾರಿಗಳು ಅಭ್ಯಾಸ ಮಾಡಿದ್ದಾರೆ, ಆ ನಿಟ್ಟಿನಲ್ಲಿ ಇಲ್ಲಿ ಪ್ರಯೋಗ ಆಗಬೇಕಿದೆ, ನಾವು ನೀರು ಕೊಡುತ್ತೇವೆ, ನೀವದನ್ನು ಸರಿಯಾಗಿ ಬಳಸಬೇಕು ಅಷ್ಟೆ ಎಂದ ಕುಮಾರಸ್ವಾಮಿ, ಕೃಷಿ ಪದ್ಧತಿ ಬಿತ್ತರವಾಗುತ್ತಿದ್ದ ಟಿವಿ ಕಡೆ ರೈತರ ಗಮನ ಸೆಳೆದರು.
'ಯಾರೇ, ಏನೇ ಸಮಸ್ಯೆ ಇದ್ದರೂ ತೆಗೆದುಕೊಂಡು ಬನ್ನಿ'
ವಿರೋಧ ಪಕ್ಷದವರು, ರೈತ ಸಂಘದವರು, ಬೇರೆ ಇತರ ಸಂಘ ಸಂಸ್ಥೆಗಳವರು ಯಾರೇ ಆಗಲಿ ಇಂದು ಬಂದು ನಮ್ಮ ಬಳಿ ಸಮಸ್ಯೆ ಹೇಳಿಕೊಳ್ಳಬಹುದು. ವೈಯಕ್ತಿಕ ಸಮಸ್ಯೆಗಳಾಗಿರಲಿ, ವ್ಯಾಜ್ಯಗಳಾಗಿರಲಿ, ಊರ ಸಮಸ್ಯೆಗಳಾಗಿರಲಿ ಎಂತಹುವೇ ಆಗಿರಲಿ ಹಿಂಜರಿಕೆ ಇಲ್ಲದೆ ಸಮಸ್ಯೆಗಳನ್ನು ಹೇಳಿಕೊಳ್ಳಿ, ನಾನು ನಮ್ಮ ಶಾಸಕರು, ಅಧಿಕಾರಿಗಳು ಪರಿಹಾರ ಮಾಡಿಕೊಡುತ್ತೇವೆ ಎಂದು ಕುಮಾರಸ್ವಾಮಿ ಭರವಸೆ ನೀಡಿದರು.
ಕುಮಾರಸ್ವಾಮಿ ಗ್ರಾಮ ವಾಸ್ತವ್ಯ, ಜನತಾದರ್ಶನಕ್ಕೆ ಚಂಡರಕಿ ಸಿದ್ಧ
ಕೈಗಾರಿಕೆ ಸ್ಥಾಪಿಸಲು ಅಗತ್ಯ ಕ್ರಮ: ಎಚ್ಡಿಕೆ
ಕೆಲವು ಯುವಕರು ಈ ಭಾಗದಲ್ಲಿ ಕೈಗಾರಿಕೆಗಳು ಬೇಕಿವೆ ಎಂದು ಹೇಳಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಕೈಗಾರಿಕೆಗಳನ್ನು ಆಕರ್ಷಣೆ ಮಾಡಲು ಅವರಿಗೆ ರಿಯಾಯಿತಿ ನೀಡಲಾಗುತ್ತದೆ. ಮೂಲಸೌಕರ್ಯಗಳನ್ನು ಒದಗಿಸಿ ಕೈಗಾರಿಕೆಗಳಿಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಕುಮಾರಸ್ವಾಮಿ ಹೇಳಿದರು.
ಊಹಾಪೋಹಗಳನ್ನು ನಂಬಬೇಡಿ: ಕುಮಾರಸ್ವಾಮಿ
ಸರ್ಕಾರದ ಬಗ್ಗೆಯೂ ಮಾತನಾಡಿದ ಕುಮಾರಸ್ವಾಮಿ, ಊಹಾಪೋಹಗಳನ್ನೆಲ್ಲಾ ನಂಬಬೇಡಿ, ನಮ್ಮ ಸರ್ಕಾರ ಸುಭದ್ರವಾಗಿದೆ. ಐದು ವರ್ಷ ನಾನೇ ಅಧಿಕಾರದಲ್ಲಿ ಇರುತ್ತೇನೆ, ವಿರೋಧ ಪಕ್ಷಗಳು ಮಾಡುತ್ತಿರುವ ಎಲ್ಲ ಪ್ರಯತ್ನ ಮಣ್ಣುಪಾಲಾಗಲಿದೆ ಎಂದು ಕುಮಾರಸ್ವಾಮಿ ಹೇಳಿದರು.
ನೇರವಾಗಿ ವೇದಿಕೆ ಏರಿ ಕುಮಾರಸ್ವಾಮಿ ಕಾಲಿಗೆ ಬಿದ್ದ 9ರ ಬಾಲಕ: ಔದಾರ್ಯ ಮೆರೆದಿದ್ದ ಎಚ್ಡಿಕೆ
ಹಲವು ಶಾಸಕರು, ಸಚಿವರು ಭಾಗಿ
ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಸ್ಥಳೀಯ ಶಾಸಕರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಂಜೆ 6:30 ವರೆಗೆ ಕುಮಾರಸ್ವಾಮಿ ಅವರು ಅವಹಾಲು ಸ್ವೀಕಾರ ಮಾಡಲಿದ್ದಾರೆ. ಆ ನಂತರ ರೈತರೊಂದಿಗೆ ಸಂವಾದ ನಡೆಸಿ, ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಿ, ಮಕ್ಕಳು-ಶಿಕ್ಷಕರೊಂದಿಗೆ ಊಟ ಮಾಡಲಿದ್ದಾರೆ.