ಮಾಜಿ ಅನರ್ಹರಿಗೆ ಸಚಿವ ಸ್ಥಾನ: ಉಲ್ಟಾ ಹೊಡೆದ ಉಪ ಮುಖ್ಯಮಂತ್ರಿ
ಯಾದಗಿರಿ, ಜನವರಿ 11: ಉಪಚುನಾವಣೆಯಲ್ಲಿ ಗೆದ್ದು ಸಚಿವ ಸ್ಥಾನಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿರುವ 'ಮಾಜಿ ಅನರ್ಹ'ರಿಗೆ ಆಘಾತದ ಮೇಲೆ ಆಘಾತಗಳಾಗುತ್ತಿವೆ.
ಉಪಚುನಾವಣೆಗೆ ಮುನ್ನಾ ಗೆದ್ದ ಎಲ್ಲ 'ಅನರ್ಹ'ರಿಗೂ ಸಚಿವ ಸ್ಥಾನ ನೀಡುತ್ತೇವೆಂದು ಸಿಎಂ ಯಡಿಯೂರಪ್ಪ ಅವರೇ ಪ್ರಚಾರ ಮಾಡಿದ್ದರು. ಆದರೆ ಈಗ ಮುಖ್ಯಮಂತ್ರಿ ನೀಡಿದ್ದ ಭರವಸೆಯನ್ನು ಉಪಮುಖ್ಯಮಂತ್ರಿ ನಿರಾಕರಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, 'ಉಪಚುನಾವಣೆಯಲ್ಲಿ ಗೆದ್ದವರಿಗೆಲ್ಲಾ ಸಚಿವ ಸ್ಥಾನ ಕೊಡುತ್ತೇವೆ ಎಂದು ಎಲ್ಲಿಯೂ ಹೇಳಿರಲಿಲ್ಲ, ಗೆದ್ದವರಿಗೆಲ್ಲಾ ಸಚಿವ ಸ್ಥಾನ ಕೊಡಲು ಸಾಧ್ಯವೂ ಇಲ್ಲ' ಎಂದಿದ್ದಾರೆ.
ಸಚಿವ ಸ್ಥಾನ ಕೊಡಿಸಲು ಹೆಣಗಾಡುತ್ತಿದ್ದಾರೆ ಯಡಿಯೂರಪ್ಪ
ಉಪಚುನಾವಣೆಯಲ್ಲಿ ಗೆದ್ದಿರುವ 11 ಮಾಜಿ ಅನರ್ಹರಿಗೆ ಸಚಿವ ಸ್ಥಾನ ಕೊಡಿಸಲು ಯಡಿಯೂರಪ್ಪ ಹರಸಾಹಸ ಪಡುತ್ತಿದ್ದಾರೆ. ಆದರೆ ಇದಕ್ಕೆ ಹೈಕಮಾಂಡ್ ಒಪ್ಪುತ್ತಿಲ್ಲ. ಅಷ್ಟೇ ಅಲ್ಲ ಯಡಿಯೂರಪ್ಪ ನಿರ್ಣಯಕ್ಕೆ ರಾಜ್ಯ ಬಿಜೆಪಿ ಒಳಗೂ ಸಹಮತವಿಲ್ಲ. ಗೋವಿಂದ ಕಾರಜೋಳ ಹೇಳಿಕೆಯಿಂದ ಇದು ಸ್ಪಷ್ಟವೂ ಆಗಿದೆ.
ಉಪಚುನಾವಣೆಯಲ್ಲಿ ಗೆದ್ದಿರುವ ಕೆಲವರಿಗಷ್ಟೆ ಸಚಿವ ಸ್ಥಾನ
ಉಪಚುನಾವಣೆಯಲ್ಲಿ ಗೆದ್ದಿರುವ 6-7 ಮಾಜಿ ಅನರ್ಹ'ರಿಗೆ ಮಾತ್ರವೇ ಸಚಿವ ಸ್ಥಾನ ನೀಡಬೇಕೆಂದು ಹೈಕಮಾಂಡ್ ಯಡಿಯೂರಪ್ಪ ಅವರಿಗೆ ಸೂಚಿಸಿದೆ. ಆದರೆ ಇದಕ್ಕೆ ಯಡಿಯೂರಪ್ಪ ಒಪ್ಪಿಲ್ಲ. ಈ ಕುರಿತು ಮಾತುಕತೆಗಳು ನಡೆಯುತ್ತಿದ್ದು, ಅಮಿತ್ ಶಾ ರಾಜ್ಯಕ್ಕೆ ಬಂದಾಗ ಈ ಬಗ್ಗೆ ಮಾತುಕತೆ ನಡೆಸಲಿದ್ದಾರೆ.
ರಮೇಶ್ ಜಾರಕಿಹೊಳಿ ಗರಂ
ಉಪಚುನಾವಣೆ ಗೆದ್ದಿರುವ 'ಮಾಜಿ ಅನರ್ಹ'ರು ಹೈಕಮಾಂಡ್ ನಿರ್ಧಾರದಿಂದ ಯಡಿಯೂರಪ್ಪ ಮೇಲೆ ಮುನಿಸಿಕೊಂಡಿದ್ದಾರೆ. ರಮೇಶ್ ಜಾರಕಿಹೊಳಿ ಸತತವಾಗಿ ಯಡಿಯೂರಪ್ಪ ಜೊತೆ ಸಂಪರ್ಕದಲ್ಲಿದ್ದು, ಗೆದ್ದವರಿಗೆ ಮಾತ್ರವಲ್ಲದೇ ಸೋತಿರುವ ಎಂಟಿಬಿ ನಾಗರಾಜು, ಎಚ್.ವಿಶ್ವನಾಥ್ ಗೂ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯ ಮಾಡಿದ್ದಾರೆ.
ಹೈಕಮಾಂಡ್ ಗೆ ಬಳಿ ಅಸಮಾಧಾನ ತೋಡಿಕೊಂಡಿರುವ ಅತೃಪ್ತರು
ಎಲ್ಲಾ 'ಮಾಜಿ ಅನರ್ಹ'ರಿಗೆ ಸಚಿವ ಸ್ಥಾನ ನೀಡಲು ರಾಜ್ಯ ಬಿಜೆಪಿಯ ಹಿರಿಯ ಶಾಸಕರೂ ಸಹ ವಿರೋಧ ವ್ಯಕ್ತಪಡಿಸಿದ್ದಾರೆ. ಮೊದಲ ಸಂಪುಟ ವಿಸ್ತರಣೆಯಲ್ಲಿ ಅವಕಾಶ ಸಿಗದೇ ವಂಚಿತರಾಗಿರುವರ ಬಳಗ ಹೈಕಮಾಂಡ್ ಗೆ ದೂರು ನೀಡಿದೆ. ರೇಣುಕಾಚಾರ್ಯ, ಉಮೇಶ್ ಕತ್ತಿ, ಅರವಿಂಬ ಲಿಂಬಾವಳಿ ಇನ್ನೂ ಕೆಲವರು ಸಚಿವ ಸ್ಥಾನಕ್ಕಾಗಿ ಲಾಭಿ ಮಾಡುತ್ತಿದ್ದಾರೆ.