ಯಾದಗಿರಿಯ ಬಡ ದಂಪತಿಗೆ ಮುಂಬೈನಿಂದ ಸೋನು ಸೂದ್ ಸಹಾಯ!
ಬೆಂಗಳೂರು, ಆ. 26: ರೀಲ್ ಲೈಫ್ ವಿಲನ್, ರೀಯಲ್ ಲೈಫ್ನ ಹೀರೊ ಸೋನು ಸೂದ್ ಅವರು ಮತ್ತೊಂದು ಮಾದರಿ ಕೆಲಸ ಮಾಡಿದ್ದಾರೆ. ಈ ಬಾರಿ ಕರ್ನಾಟಕದ ಬಡ ದಂಪತಿಗೆ ಸೋನು ಸೂದ್ ಹೃದಯ ಮಿಡಿದಿದೆ. ಒಂದೇ ಒಂದು ವಾಟ್ಸಪ್ ಮೆಸೇಜ್ನಿಂದ ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಆಸರೆಯಾಗಿದ್ದಾರೆ. ಲಾಕ್ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರ ಸಂಕಷ್ಟಕ್ಕೆ ನೆರವಾಗಿದ್ದ ಸೂದ್ ಅವರು ಇದೀಗ ಮತ್ತೆ ಬಡವರ ಕಷ್ಟಕ್ಕೆ ಮರುಗಿದ್ದಾರೆ.
Recommended Video
ಕೇವಲ ಮರಗುವುದು ಅಷ್ಟೇ ಅಲ್ಲ, ಈ ಬಾರಿ ಸೋನು ಸೂದ್ ಅವರು ಕರ್ನಾಟಕ ಯಾದಗಿರಿ ಜಿಲ್ಲೆಯ ಬಡ ದಂಪತಿಗೆ ಸಹಾಯ ಮಾಡಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಯಾದಗಿರಿ ತಾಲೂಕಿನ ರಾಮಸಮುದ್ರ ಗ್ರಾಮದ ನಾಗರಾಜ್ ಮತ್ತು ಪದ್ಮಾ ಎಂಬ ಬಡ ದಂಪತಿಗೆ ಒಂದೆಡೆ ಸಂತೊಷ ಮತ್ತೊಂದೆಡೆ ಭವಿಷ್ಯದ ಬಗ್ಗೆ ಆತಂಕ ಎದುರಾಗಿತ್ತು. ಅದಕ್ಕೆ ಕಾರಣ ದಂಪತಿಗೆ ಜನಿಸಿದ್ದ ತ್ರಿವಳಿ ಮಕ್ಕಳು. ನಾಗರಾಜ್ ಅವರ ಪತ್ನಿ ಪದ್ಮಾ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಅತಿಯಾದ ರಕ್ತಸ್ರಾವದಿಂದ ಪದ್ಮಾ ಅವರು ಜೀವನ್ಮರಣ ಮಧ್ಯೆ ಹೋರಾಡಿದ್ದರು. ಇದೇ ಸಂದರ್ಭದಲ್ಲಿ ಆ ಬಡ ದಂಪತಿಗೆ ದೇವರಂತೆ ಸಹಾಯಕ್ಕೆ ಬಂದಿದ್ದಾರೆ, ಬಾಲಿವುಡ್ ನಟ ಸೋನು ಸೂದ್ ಅವರು.
ತ್ರಿವಳಿ ಮಕ್ಕಳ ಜನನ: ಆತಂಕದಲ್ಲಿ ಕುಟುಂಬಸ್ಥರು!
ಮುದ್ದಾದ ತ್ರಿವಳಿ ಮಕ್ಕಳು
ಯಾದಗಿರಿ ತಾಲೂಕಿನ ರಾಮಸಮುದ್ರ ಗ್ರಾಮದ ಪದ್ಮಾ-ನಾಗರಾಜ್ ಎಂಬ ದಂಪತಿ ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಲಾಕ್ಡೌನ್ನಿಂದಾಗಿ ಮೂರು ತಿಂಗಳುಗಳ ಹಿಂದೆ ಸ್ವಗ್ರಾಮಕ್ಕೆ ಬಂದು ನೆಲೆಸಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ದಂಪತಿಗೆ ತ್ರಿವಳಿ ಮಕ್ಕಳು ಜನಿಸಿದ್ದಾರೆ. ಮೂರು ದಿನಗಳ ಹಿಂದೆ ಯಾಗರಿಗಿ ಜಿಲ್ಲಾಸ್ಪತ್ರೆಯಲ್ಲಿ ಮುದ್ದಾಗ ಮೂರು ಮಕ್ಕಳಿಗೆ ಪತ್ನಿ ಪದ್ಮಾ ಅವರು ಜನ್ಮನೀಡಿದ್ದಾರೆ. ಮೂರೂ ಮಕ್ಕಳು ಆರೋಗ್ಯವಾಗಿದ್ದು, ಅತಿಯಾದ ರಕ್ತಸ್ರಾವದಿಂದ ತಾಯಿಗೆ ರಕ್ತದ ಕೊರತೆ ಆಗಿತ್ತು. ಓ ನೆಗೆಟಿವ್ ರಕ್ತ ಹೊಂದಿಸಲು ಪತಿ ಪರದಾಡಿದ್ದರು.
ಕೊನೆಗೆ ಹಾಗೂ ಹಣ ಹೊಂದಿಸಿಕೊಂಡು ನಾಗರಾಜ್ ಅವರು 15 ಸಾವಿರ ರೂ. ನೀಡಿ ಖಾಸಗಿ ಆಸ್ಪತ್ರೆಯಿಂದ ರಕ್ತ ಖರೀದಿಸಿ ತಂದು ಪತ್ನಿಯ ಜೀವ ಉಳಿಸಿಕೊಂಡಿದ್ದರು. ಆದರೆ ಹೆರಿಗೆ ಬಳಿಕ ಉಪಯೋಗಿಸಲು ಕೂಡಿಟ್ಟಿದ್ದ ಹಣ ರಕ್ತ ಖರೀದಿಗೆ ಖಾಲಿಯಾಗಿತ್ತು. ಜೊತೆಗೆ ಮೂರು ಮಕ್ಕಳಿಗೆ ತಾಯಿಯ ಹಾಲು ಸಾಕಾಗುತ್ತಿರಲಿಲ್ಲ. ಆದರೆ ಹಾಲು ತರಲು ನಾಗರಾಜ್ ಬಳಿ ಹಣವಿರಲಿಲ್ಲ. ಇದು ಮಾದ್ಯಮಗಳಲ್ಲಿ ಸುದ್ದಿಯಾಗಿತ್ತು. ಇದೇ ಸುದ್ದಿ ಸೋನು ಸೂದ್ ಅವರಿಗೂ ತಲುಪಿತ್ತು. ಅದು ಹೇಗೆ?
ಅದೊಂದು ವಾಟ್ಸಪ್ ಮೆಸೇಜ್
ತ್ರಿವಳಿ ಮಕ್ಕಳು ಜನಿಸಿದ್ದರಿಂದ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಈಡಾಗಿದ್ದು ಹಾಗೂ ಯಾರಾದರೂ ಸಹಾಯ ಮಾಡುವಂತೆ ಮಾದ್ಯಮಗಳ ಮೂಲಕ ದಂಪತಿ ಮನವಿ ಮಾಡಿಕೊಂಡಿದ್ದರು. ಇದೇ ಸಂದರ್ಭದಲ್ಲಿ ಸ್ಥಳೀಯ ಪತ್ರಿಕೆಯೊಂದರ ವರದಿಗಾರ ಮಲ್ಲು ಹತ್ತಿಕೂಣಿ ಎಂಬುವರು ತಾವು ಸುದ್ದಿ ಬರೆಯುವುದರೊಂದಿಗೆ, ನಾಗರಾಜ್ ದಂಪತಿ ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಬಾಳಿವುಡ್ ನಟ ಸೋನು ಸೂದ್ ಅವರಿಗೆ ವಾಟ್ಸಪ್ ಮೂಲಕ ಬಡ ದಂಪತಿಯ ಸಂಕಷ್ಟವನ್ನು ಸೂದ್ ಅವರ ಗಮನಕ್ಕೆ ತಂದಿದ್ದಾರೆ. ಮೇಸೇಜ್ ನೋಡಿದ ಸೋನು ಸೂದ್ ಅವರು ತಕ್ಷಣವೇ ಸ್ಪಂದಿಸಿದ್ದಾರೆ.
ನಾನಿದ್ದೇನೆ ಆತಂಕ ಬೇಡ
ವರದಿಗಾರ ಮಲ್ಲು ಹತ್ತಿಕೂಣಿ ಅವರ ವಾಟ್ಸ್ ಆ್ಯಪ್ ಮೆಸೇಜ್ಗೆ ಸೋನು ಸೂದ್ ಅವರು ತಮ್ಮ ತಂಡದ ಮುಖ್ಯಸ್ಥ ಗೋವಿಂದ ಅಗರವಾಲ್ ಮೂಲಕ, ನಾಗರಾಜ್ ಕುಟುಂಬಕ್ಕೆ ಎರಡು ತಿಂಗಳಿಗೆ ಆಗುವಷ್ಟು ಆಹಾರ ಸಾಮಾಗ್ರಿಯನ್ನು ಕೋರಿಯರ್ ಮೂಲಕ ಕಳುಹಿಸಿಕೊಡಲಾಗುವುದು ಎಂದು ನಾಗರಾಜ್ ವಾಟ್ಸಪ್ಗೂ ಸಹ ಮೆಸೆಜ್ ಕಳಿಸಿದ್ದಾರೆ.
ತಕ್ಷಣವೇ ಸ್ಪಂದನೆ ಮಾಡಿರುವ ಸೋನು ಸೂದ್ ಅವರು, ಆಹಾರ ವಸ್ತುಗಳನ್ನು ಕಳಿಸಿದ್ದೇವೆ. ನಾವು ಜವಾಬ್ದಾರಿ ತೆಗೆದುಕೊಳ್ಳುತ್ತೇವೆ. ಅಗತ್ಯವಿದ್ದರೆ ತಕ್ಷಣ ಕರೆ ಮಾಡಿ. ಮಕ್ಕಳ ಕುರಿತು ಗಮನ ಕೊಡುವಂತೆ ತಿಳಿಸಿ ಎಂದು ಪ್ರತಿಕ್ರಿಯಿಸಿ ಮೆಸೇಜ್ ಮಾಡಿದ್ದಾರೆ.
ಆರ್ಥಿಕ ಸಹಾಯದ ಭರವಸೆ
ಜೊತೆಗೆ ಮಕ್ಕಳ ಚಿಕಿತ್ಸೆಗೆ ಬೇಕಾಗುವ ಆರ್ಥಿಕ ಸಹಾಯ ಮತ್ತು ಕುಟುಂಬ ನಿರ್ವಹಣೆಗೆ ಸಹಾಯ ಮಾಡುವುದಾಗಿ ಸೋನು ಸೂದ್ ಭರವಸೆ ನೀಡಿದ್ದಾರೆ. ಸದ್ಯ ಏಕಕಾಲಕ್ಕೆ ಮೂವರು ಗಂಡು ಮಕ್ಕಳ ಜನ್ಮ ನೀಡಿದ್ದ ದಂಪತಿ, ಆಕಾಶವೇ ಕಳಚಿ ಬಿತ್ತೆಂಬ ಸ್ಥಿತಿಯಲ್ಲಿದ್ದಾಗ, ಸೋನು ಸೂದ್ ಸಹಾಯದ ಹಸ್ತ ನೀಡಿ ತಮ್ಮ ಹೃದಯ ವೈಶಾಲತೆಯನ್ನ ದೂರದ ಯಾದಗಿರಿವರೆಗೂ ವಿಸ್ತರಿಸಿದ್ದಾರೆ. ಕೊರೊನಾ ಆರ್ಭಟದಿಂದ ಮುಂಬೈನಲ್ಲಿ ಸಿಲುಕಿದ್ದ ಸಾವಿರಾರು ಜನರನ್ನ ಸ್ವತಃ ಖರ್ಚಿನಲ್ಲಿ ಅವರವರ ಊರುಗಳಿಗೆ ತೆರಳಲು ಸಹಾಯ ಮಾಡಿ ಮಾನವೀಯತೆ ಮೆರೆದಿದ್ದ ಸೋನು ಸೂದ್, ಇದೀಗ ಹಮ್ ಆಪ್ ಕೇ ಸಾಥ್ ಹೈ ಅಂತಾ ಭರವಸೆ ನೀಡಿರುವುದಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಸೋನು ಸೂದ್ ಅವರಿಗೆ ನಮ್ಮ ಕಡೆಯಿಂದಲೂ ಒಂದು ಸಲಾಂ ಹೇಳೋಣ!