'ಫೆಬ್ರವರಿ ವರೆಗೆ ಮಾತ್ರ ಯಡಿಯೂರಪ್ಪ ಸಿಎಂ, ಆಮೇಲೆ ಬೇರೆಯವರು'
ಯಾದಗಿರಿ, ಸೆಪ್ಟೆಂಬರ್ 13: ಮೈತ್ರಿ ಸರ್ಕಾರದ ಅವಧಿಯಲ್ಲಿ ಯಡಿಯೂರಪ್ಪ ವಿರುದ್ಧ ಆಪರೇಷನ್ ಕಮಲದ ಆಡಿಯೋ ಬಿಡುಗಡೆ ಮಾಡಿದ್ದ ಜೆಡಿಎಸ್ ಮುಖಂಡ ಶರಣುಗೌಡ ಕುಂದಕೂರ ಈಗ ಮತ್ತೊಂದು ಬಾಂಬ್ ಸ್ಫೋಟಿಸಿದ್ದಾರೆ.
Recommended Video
ಗುರುಮಿಟ್ಕಲ್ ಜೆಡಿಎಸ್ ಶಾಸಕ ನಾಗನಗೌಡ ಕುಂದಕೂರ ಅವರ ಪುತ್ರ ಶರಣಗೌಡ ಅವರು, ಈ ಹಿಂದೆ ಯಡಿಯೂರಪ್ಪ ಅವರು ತಮ್ಮೊಂದಿಗೆ ಆಪರೇಷನ್ ಕಮಲದ ಬಗ್ಗೆ ಮಾತನಾಡಿದ್ದ ಆಡಿಯೋ ಅನ್ನು ಬಿಡುಗಡೆ ಮಾಡಿದ್ದರು.
ಜೆಡಿಎಸ್ ಇಂದು ಗುರ್ಮಿಟ್ಕಲ್ನಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, 'ಯಡಿಯೂರಪ್ಪ ಅವರ ವಿರುದ್ಧ ಆಪರೇಷನ್ ಕಮಲ ಆಡಿಯೋ ಪ್ರಕರಣವನ್ನು ಮತ್ತೆ 'ರೀ ಓಪನ್' ಮಾಡುವಂತೆ ಬಿಜೆಪಿಗರೇ ನನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ' ಎಂದು ಹೇಳಿದ್ದಾರೆ.
ಸಿಎಂ ಯಡಿಯೂರಪ್ಪ ಅವರಿಗೆ ಅವರದೇ ಪಕ್ಷದ ಮುಖ್ಯ ನಾಯಕರೊಬ್ಬರು ಖೆಡ್ಡಾ ತೋಡುತ್ತಿದ್ದಾರೆ. ಈಗಾಗಲೇ ಆ ನಾಯಕರು ತನ್ನ ಜತೆ ಪೋನ್ ನಲ್ಲಿ ಮಾತುಕತೆ ನಡೆಸಿದ್ದಾರೆ. ನನ್ನ ಮುಖಾಂತರ ಕೆಲ ಬಿಜೆಪಿಯವರೇ ಬಿಎಸ್ವೈಗೆ ಹಳ್ಳ ತೋಡುತ್ತಿದ್ದಾರೆ. ಯಡಿಯೂರಪ್ಪ ಅವರ ಅಸ್ತಿತ್ವ ಈಗ ನನ್ನ ಕೈಲಿದೆ ಎಂದು ಶರಣಗೌಡ ಹೇಳಿದ್ದಾರೆ.
ಯಡಿಯೂರಪ್ಪಗೆ ಧಮ್ಕಿ ಹಾಕಿದ ಶರಣಗೌಡ
ಇದೇ ಸಂದರ್ಭದಲ್ಲಿ ಯಡಿಯೂರಪ್ಪಗೆ ಧಮ್ಕಿ ಸಹ ಹಾಕಿದ ಅವರು, 'ಇನ್ನೆರಡು ದಿನದಲ್ಲಿ ಗುರಮಿಟ್ಕಲ್ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡದೇ ಹೋದರೆ, ಆ ಬಿಜೆಪಿ ನಾಯಕರನ್ನು ಭೇಟಿಯಾಗಿ ಆಪರೇಷನ್ ಕಮಲ ಆಡಿಯೋ ಪ್ರಕರಣವನ್ನು ರೀ ಓಪನ್ ಮಾಡಿಸುತ್ತೇನೆ' ಎಂದು ಹೇಳಿದರು.
ಫೆಬ್ರವರಿಯಲ್ಲಿ ಯಡಿಯೂರಪ್ಪ ರಾಜೀನಾಮೆ?
'ಯಡಿಯೂರಪ್ಪ ಅವರು ಫೆಬ್ರವರಿಯಲ್ಲಿ ಬಜೆಟ್ ಮಂಡನೆ ಮಾಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ. ಅವರ ಎದುರಾಳಿ ಬಳಗದ ಒಬ್ಬರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ' ಈ ಬಗ್ಗೆ ತಮಗೆ ಮಾಹಿತಿ ಇದೆ ಎಂದು ಶರಣಗೌಡ ಹೇಳಿದರು.
'ಶೋಭಾ ಕರಂದ್ಲಾಜೆ ಬಳಿ ಹೋಗದಂತೆ ಮಕ್ಕಳು ತಡೆದಿದ್ದಾರೆ'
ಯಡಿಯೂರಪ್ಪ ಅವರ ಸಿಎಂ ಪಟ್ಟದ ಕಾಲಾವಧಿ ಕೇವಲ ಐದಾರು ತಿಂಗಳು ಮಾತ್ರ. ಇದರಿಂದ ಅವರು ಹತಾಶೆಗೆ ಒಳಗಾಗಿದ್ದಾರೆ. ಇತ್ತೀಚೆಗೆ ಸಂಸದೆ ಶೋಭಾ ಕರಂದ್ಲಾಜೆ ಅವರು ಯಡಿಯೂರಪ್ಪ ಅವರ ಅಕ್ಕ-ಪಕ್ಕ ಕಾಣಿಸಿಕೊಳ್ಳುತ್ತಿಲ್ಲ. ಶೋಭಾ ಕರಂದ್ಲಾಜೆ ಹತ್ತಿರಕ್ಕೆ ಬಿಎಸ್ವೈ ಹೋಗದಂತೆ ಅವರ ಮಕ್ಕಳಾದ ವಿಜಯೇಂದ್ರ ಮತ್ತು ಸಂಸದ ರಾಘವೇಂದ್ರ ಬಿಡುತ್ತಿಲ್ಲ ಎಂದೂ ಶರಣಗೌಡ ಕಂದಕೂರ ಲೇವಡಿ ಮಾಡಿದ್ದಾರೆ.
ಆಪರೇಷನ್ ಕಮಲ ಆಡಿಯೋ ಬಿಡುಗಡೆ ಮಾಡಿದ್ದ ಶರಣಗೌಡ
ಶರಣಗೌಡ ನಾಯಕ್ ಅವರೊಂದಿಗೆ ಬಿಎಸ್ವೈ, ಹಾಸನ ಶಾಸಕ ಪ್ರೀತಂ ಗೌಡ ಹಾಗೂ ಮತ್ತೊಬ್ಬ ಬಿಜೆಪಿ ಶಾಸಕ ಆಪರೇಷನ್ ಕಮಲದ ವಿಷಯ ಮಾತನಾಡಿದ್ದಾಗಿ ಅವರು ಮಾಧ್ಯಮಗಳೊಂದಿಗೆ ಹೇಳಿದ್ದರು. ಇದರ ಬಗ್ಗೆ ಆಡಿಯೋ ಒಂದನ್ನು ಸಹ ಬಿಡುಗಡೆ ಮಾಡಿ, ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು.