ಜಾನಪದ ಕಲೆಗೆ ಜೀವ ತುಂಬುವ ಹಾದಿಯಲ್ಲಿ ಅಮರಯ್ಯಸ್ವಾಮಿ ಹಿರೇಮಠ
ಯಾದಗಿರಿ, ಅಕ್ಟೋಬರ್ 24: ಜಾನಪದ ಕಲೆ ಈ ನೆಲದ ಸಾರ, ಈ ಕಲೆಯನ್ನು ಉಳಿಸಿ ಬೆಳೆಸಬೇಕು, ನಮ್ಮ ಮುಂದಿನ ಪೀಳಿಗೆಗೆ ಜಾನಪದದ ಮಹತ್ವ ತಿಳಿಸಬೇಕು ಎಂಬ ಮಹತ್ವಾಕಾಂಕ್ಷೆಯೊಂದಿಗೆ ಹೆಜ್ಜೆ ಇಟ್ಟಿರುವ ಅಮರಯ್ಯಸ್ವಾಮಿ ಹಿರೇಮಠ ಜಾಲಿಬೆಂಚಿ ಅವರು ಸುರಪುರದಲ್ಲಿ ಚಿರಪರಿಚಿತ. ಜಾನಪದ ಕಲೆಯಲ್ಲಿ ಅತೀವ ಆಸಕ್ತಿ ತಳೆದಿರುವ ಅವರು ಈಚೆಗೆ ಕರ್ನಾಟಕ ಜಾನಪದ ಅಕಾಡೆಮಿಗೆ ನೂತನ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಸುರಪುರ ತಾಲೂಕಿನ ಜಾಲಿಬೆಂಚಿ ಗ್ರಾಮದವರಾದ ಅಮರಯ್ಯಸ್ವಾಮಿ ಜಾನಪದ ಅಕಾಡೆಮಿಗೆ ಆಯ್ಕೆಯಾದ ಯುವ ಸದಸ್ಯರೂ ಆಗಿರುವುದು ವಿಶೇಷ. ಸಾಹಿತ್ಯ, ಸಾಂಸ್ಕೃತಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅವರಲ್ಲಿ ಜಾನಪದ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ. ಅಮರಯ್ಯ ಸ್ವಾಮಿ ಹಿರೇಮಠ ಬಹುಮುಖ ಪ್ರತಿಭೆಯೂ ಹೌದು.
ಉಡುಪಿಯ ಹುಲಿವೇಷದ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು!
Recommended Video
ಪುಟ್ಟರಾಜ ಗವಾಯಿಗಳ ಆಶೀರ್ವಾದ: ಪುಟ್ಟರಾಜ ಗವಾಯಿಗಳ ಗರಡಿಯಲ್ಲಿ ಹನ್ನೆರಡು ವರ್ಷ ಪಳಗಿದ ಅಮರಯ್ಯಸ್ವಾಮಿ ಅವರಿಗೆ ಸಂಗೀತದ ಒಡನಾಟವೂ ಜೊತೆಗಿದೆ. ಎಂ.ಎ. ಬಿಎಡ್ ಪೂರೈಸುವುದರೊಂದಿಗೆ ಸಂಗೀತವೂ ಆಸಕ್ತಿಯಾಗಿ ಅವರ ಜೊತೆಗಿದೆ. ಪುರಾಣ, ಪ್ರವಚನ, ಕೀರ್ತನೆಗಳನ್ನು ಹಾಡುವುದು ಅವರ ಹವ್ಯಾಸಗಳಲ್ಲಿ ಒಂದು. ಸಾಹಿತ್ಯ, ನಾಟಕದೊಂದಿಗೂ ನಂಟು ಬೆಳೆಸಿಕೊಂಡಿದ್ದಾರೆ.
ಶಿಕ್ಷಣ ಸಂಸ್ಥೆಯ ಸ್ಥಾಪನೆ: ಅಮರಯ್ಯಸ್ವಾಮಿ ತಮ್ಮದೇ ಶಿಕ್ಷಣ ಸಂಸ್ಥೆಯನ್ನೂ ಸ್ಥಾಪಿಸಿದ್ದಾರೆ. ಗ್ರಾಮಾಂತರ ಪ್ರದೇಶದಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಹಣಸಗಿಯ ಕಲ್ಲದೇವನ ಹಳ್ಳಿಯಲ್ಲಿ ಶಾಲೆಯನ್ನು ನಡೆಸುತ್ತಿದ್ದು, ಅಲ್ಲಿ 480 ಮಕ್ಕಳು ಕಲಿಯುತ್ತಿದ್ದಾರೆ. ಕೇವಲ ಶಿಕ್ಷಣವಲ್ಲದೇ "ಶಿಕ್ಷಣದೊಂದಿಗೆ ಕಲೆ" ಎಂಬ ಧ್ಯೇಯದೊಂದಿಗೆ ಸಂಗೀತ, ಜಾನಪದ ಕಲೆಗಳ ಅರಿವಿಗೂ ಮಕ್ಕಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಶಾಲೆಗೆ ಹೊಂದಿಕೊಂಡಂತೆ ಸಂಸ್ಕೃತ ಶಾಲೆಯೂ ಇದೆ.
ಮರಾಠಿಗೂ ಅಡಿಯಿಡಲು ಸಜ್ಜಾಗಿದೆ ನಮ್ಮ ಹೆಮ್ಮೆಯ ಯಕ್ಷಗಾನ
ಉತ್ತಮ ನಿರೂಪಕ ಕೂಡ ಹೌದು: ತಮ್ಮ ಮಾತಿನ ಶೈಲಿಯಿಂದಲೇ ಕಲ್ಯಾಣ ಕರ್ನಾಟಕ ಭಾಗದಲ್ಲಿ ಉತ್ತಮ ನಿರೂಪಕ ಎಂದೂ ಅಮರಯ್ಯಸ್ವಾಮಿ ಜಾಲಿಬೆಂಚಿ ಹೆಸರು ಪಡೆದಿದ್ದಾರೆ. ನೂರಾರು ಕಾರ್ಯಕ್ರಮಗಳಿಗೆ ನಿರೂಪಕರಾಗಿದ್ದಾರೆ. ನಿರೂಪಣೆಯೊಂದಿಗೆ ಅವರು ಬಳಸುವ ಗಾದೆ, ವಚನಗಳು, ಕವಿತೆಗಳು, ನಗೆ ಹನಿ, ವಿಭಿನ್ನ ಧಾಟಿ ಜನರನ್ನು ಮನಸೂರೆಗೊಳಿಸಿವೆ. ತಾಲ್ಲೂಕಿನಲ್ಲಿ ಯಾವುದೇ ಸಾಹಿತ್ಯಿಕ, ಧಾರ್ಮಿಕ, ರಾಜಕೀಯ ಕಾರ್ಯಕ್ರಮಗಳಾದರೂ ಅಮರಯ್ಯಸ್ವಾಮಿ ನಿರೂಪಕರಾಗಿರುತ್ತಾರೆ. ಇವರ ಈ ಪ್ರತಿಭೆಗೆ "ಸಭಾ ಸಾರಥಿ", "ಸರ್ ಎಂ ವಿಶ್ವೇಶ್ವರಯ್ಯ ಪ್ರಶಸ್ತಿ", "ಪ್ರವಚನ ಭಾಸ್ಕರ", "ಯುವ ಪ್ರವಚನ ಪಟು" ನಾಡಶ್ರೀ ಪ್ರಶಸ್ತಿಗಳು ದೊರೆತಿವೆ.
ಜಾನಪದ ಕಲೆ ಅಭಿವೃದ್ಧಿಯ ಗುರಿ: ಜಾನಪದ ಕಲೆಯೆಡೆಗೆ ವಿಶೇಷ ಒಲವು ಹೊಂದಿರುವ ಅಮರಯ್ಯಸ್ವಾಮಿ ಅವರು ಜಾನಪದ ಕಲೆಯ ವಿವಿಧ ಪ್ರಕಾರಗಳನ್ನು ತಮ್ಮ ಪ್ರವಚನ ಹಾಗೂ ಉಪನ್ಯಾಸದ ಮೂಲಕ ಪರಿಚಯಿಸುತ್ತಾರೆ. ಜೊತೆಗೆ ತಮ್ಮ ಸಂಸ್ಥೆ ಮೂಲಕ ಜಾನಪದ ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸವನ್ನೂ ಮಾಡುತ್ತಿದ್ದಾರೆ. ಜಾನಪದ ಸಂಘಟನೆಗಳಿಗೆ ಬೆಂಬಲ ನೀಡುತ್ತಿದ್ದಾರೆ. ಇದೀಗ ಜಾನಪದ ಅಕಾಡೆಮಿ ಸದಸ್ಯರಾಗಿದ್ದು, ಅಕಾಡೆಮಿ ಮೂಲಕ ವಿವಿಧ ಜಾನಪದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರ ಬಳಿಗೆ ಜನಪದ ಕಲೆ ಹಾಗೂ ಸಾಹಿತ್ಯವನ್ನು ಕೊಂಡೊಯ್ಯುವ ಗುರಿ ಇಟ್ಟುಕೊಂಡಿದ್ದಾರೆ. ಶಾಲೆಯಿಂದ ಶಾಲೆಗೆ ಜಾನಪದ ಎಂಬ ವಿಶೇಷ ಕಾರ್ಯಕ್ರಮ ರೂಪಿಸುವ ಯೋಜನೆ ಹಮ್ಮಿಕೊಂಡಿದ್ದಾರೆ.