23 ಕೊರೊನಾ ವೈರಸ್ ಸೋಂಕಿತರನ್ನೇ ಬಿಟ್ಟು ಕಳಿಸಿತಾ ಜಿಲ್ಲಾಡಳಿತ?
ಯಾದಗಿರಿ, ಜೂನ್.05: ನೊವೆಲ್ ಕೊರೊನಾ ವೈರಸ್ ಹರಡುವಿಕೆ ಭೀತಿ ನಡುವೆಯೂ ಜಿಲ್ಲಾಡಳಿತ ತೋರಿದ ನಿರ್ಲಕ್ಷ್ಯವು ಇಂದು ಜಿಲ್ಲಾದ್ಯಂತ ಜನರು ಆತಂಕದಲ್ಲೇ ದಿನ ಕಳೆಯುವಂತಾ ಪರಿಸ್ಥಿತಿ ನಿರ್ಮಾಣವಾಗಿ ಬಿಟ್ಟಿದೆ.
Recommended Video
ಸರ್ಕಾರಿ ಕ್ವಾರೆಂಟೈನ್ ಕೇಂದ್ರದಲ್ಲಿದ್ದ 23 ಜನರನ್ನು ಇತ್ತೀಚಿಗಷ್ಟೇ ಯಾದಗಿರಿ ಜಿಲ್ಲಾಡಳಿತವು ಬಿಡುಗಡೆ ಮಾಡಿತ್ತು. ಹಾಗೆ ಬಿಡುಗಡೆಯಾದ 23 ಮಂದಿಗೆ ಕೊರೊನಾ ವೈರಸ್ ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿದೆ.
ಬ್ರೇಕಿಂಗ್: ರಾಜ್ಯದಲ್ಲಿ 24 ಗಂಟೆಗಳಲ್ಲೇ 267 ಕೊವಿಡ್-19 ಕೇಸ್!
ಕೊರೊನಾ ವೈರಸ್ ಸೋಂಕು ತಗಲಿರುವ ಬಗ್ಗೆ ಶಂಕೆ ಹಿನ್ನೆಲೆಯಲ್ಲಿ ಕ್ವಾರೆಂಟೈನ್ ನಲ್ಲಿದ್ದ ಶಂಕಿತರ ರಕ್ತ ಹಾಗೂ ಗಂಟಲು ಮಾದರಿಯನ್ನು ಸಂಗ್ರಹಿಸಿ ವೈದ್ಯಕೀಯ ತಪಾಸಣೆಗೆ ಕಳುಹಿಸಿ ಕೊಡಲಾಗಿತ್ತು. ಆದರೆ ವರದಿ ಮುನ್ನವೇ 23 ಜನರನ್ನು ಬಿಡುಗಡೆ ಮಾಡಿದ್ದು ಜಿಲ್ಲಾಡಳಿತದ ಯಡವಟ್ಟಿಗೆ ಹಿಡಿದ ಕೈಗನ್ನಡಯಾಗಿದೆ.
ಕ್ವಾರೆಂಟೈನ್ ಕೇಂದ್ರದಲ್ಲಿ 16 ಮಂದಿ
ಮಹಾರಾಷ್ಟ್ರದಿಂದ ಯಾದಗಿರಿಗೆ ಆಗಮಿಸಿದ ಎಲ್ಲ ವಲಸಿಗರನ್ನು ಕ್ವಾರೆಂಟೈನ್ ಕೇಂದ್ರದಲ್ಲಿ ಇರಿಸಲಾಗಿತ್ತು. ಇತ್ತೀಚಿಗಷ್ಟೇ 23 ಮಂದಿ ಬಿಡುಗಡೆಯಾಗಿ ಮನೆಗೆ ತೆರಳಿದ್ದು 16 ಜನರನ್ನಷ್ಟೇ ಸರ್ಕಾರಿ ಕ್ವಾರೆಂಟೈನ್ ಕೇಂದ್ರದಲ್ಲಿ ಇರಿಸಿಕೊಂಡಿದ್ದು, ಉಳಿದವರು ಹೋಮ್ ಕ್ವಾರೆಂಟೈನ್ ನಲ್ಲಿ ಇರುವಂತೆ ಸೂಚನೆ ನೀಡಲಾಗಿತ್ತು.
ಜಿಲ್ಲೆ ತಾಂಡಾದಲ್ಲಿ ಕೊವಿಡ್-19 ಸೋಂಕಿತರ ರೌಂಡ್ಸ್
ಯಾದಗಿರಿ ಜಿಲ್ಲಾಡಳಿತವು 23 ಜನರನ್ನು ಹೋಮ್ ಕ್ವಾರೆಂಟೈನ್ ನಲ್ಲಿ ಇರುವಂತೆ ಖಡಕ್ ಎಚ್ಚರಿಕೆ ನೀಡಿ ಬಿಡುಗಡೆ ಮಾಡಿತು. ಆದರೆ ನಂತರದಲ್ಲಿ ಆಗಿದ್ದೇ ಬೇರೆ. ಜಿಲ್ಲೆಯ ಅಲ್ಲಿಪುರ, ಕಂಚಗಾರಹಳ್ಳಿ ತಾಂಡಾದಲ್ಲಿ ಕೊರೊನಾ ವೈರಸ್ ಸೋಂಕಿತರು ಬೀದಿ ಬೀದಿ ಸುತ್ತಿದ್ದಾರೆ. ಇದರಿಂದ ತಾಂಡಾದ ಜನರಲ್ಲಿ ಸೋಂಕು ಹರಡುವ ಆತಂಕ ಮನೆ ಮಾಡಿದೆ.
200 ಮಂದಿಯ ಜೊತೆಗೆ ಸೋಂಕಿತರ ಸಂಪರ್ಕ
ಸರ್ಕಾರಿ ಕ್ವಾರೆಂಟೈನ್ ಕೇಂದ್ರದಿಂದ ವರದಿ ಬರುವ ಮುನ್ನವೇ ಬಿಡುಗಡೆಯಾದ ಕೊರೊನಾ ವೈರಸ್ ಸೋಂಕಿತರು ಸುಮಾರು 200ಕ್ಕೂ ಅಧಿಕ ಜನರ ಜೊತೆಗೆ ಪ್ರಾಥಮಿಕ ಸಂಪರ್ಕವನ್ನು ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು, ಈ ಪಟ್ಟಿಯಲ್ಲಿ ಜಿಲ್ಲಾಡಳಿತದ ಕಂದಾಯ ಅಧಿಕಾರಿಗಳು ಮತ್ತು ಪೊಲೀಸರೂ ಕೂಡಾ ಸೇರಿದ್ದಾರೆ ಎಂದು ಹೇಳಲಾಗುತ್ತಿದೆ.
ಎರಡನೇ ಬಾರಿಗೆ ಎಡವಿತಾ ಯಾದಗಿರಿಯ ಜಿಲ್ಲಾಡಳಿತ?
ಕೊರೊನಾ ವೈರಸ್ ಸೋಂಕಿನ ವರದಿ ಬರುವ ಮೊದಲೇ ಕ್ವಾರೆಂಟೈನ್ ಕೇಂದ್ರಗಳಿಂದ ಜನರನ್ನು ಬಿಡುಗಡೆ ಆಗಿರುವುದು ಇದೇ ಮೊದಲೇನಲ್ಲ. ಕಳೆದ ಒಂದು ವಾರದ ಹಿಂದೆಯಷ್ಟೇ ಜಿಲ್ಲಾಡಳಿತವು ಒಬ್ಬ ವ್ಯಕ್ತಿಯನ್ನು ಕ್ವಾರೆಂಟೈನ್ ಕೇಂದ್ರದಿಂದ ರಿಲೀಸ್ ಮಾಡಿತ್ತು. ಅದಾಗಿ ಮರುದಿನವೇ ವ್ಯಕ್ತಿಯಲ್ಲಿ ಕೊರೊನಾ ವೈರಸ್ ಸೋಂಕು ತಗಲಿರುವುದು ದೃಢಪಟ್ಟಿತ್ತು. ಜಿಲ್ಲೆಯಲ್ಲಿ ಇದುವರೆಗೂ 299 ಜನರಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದ್ದು, ಈ ಪೈಕಿ 27 ಜನರು ಗುಣಮುಖರಾಗಿದ್ದಾರೆ. ಬಾಕಿ ಉಳಿದ 271 ಮಂದಿ ಸೋಂಕಿತರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಜಿಲ್ಲೆಯಲ್ಲಿ ಮಹಾಮಾರಿಗೆ ಒಬ್ಬರು ಬಲಿಯಾಗಿದ್ದಾರೆ.