ಅಫ್ಘಾನಿಸ್ತಾನದಲ್ಲಿ ಭಾರತದ ಹೂಡಿಕೆಯ ಭವಿಷ್ಯವೇನು?
2001ರಲ್ಲಿ ತಾಲಿಬಾನ್ ಆಡಳಿತವನ್ನು ಉರುಳಿಸಿ ಅಮೆರಿಕ ಅಧಿಕಾರ ವಹಿಸಿಕೊಂಡ ನಂತರ ಅಫ್ಘಾನಿಸ್ತಾನದಲ್ಲಿ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಭಾರತದಿಂದ ಶತಕೋಟಿ ಡಾಲರ್ಗಳಷ್ಟು ಹಣವನ್ನು ಖರ್ಚು ಮಾಡಲಾಗಿದೆ.
ಹೆದ್ದಾರಿ ನಿರ್ಮಾಣ, ಆಹಾರ ಸರಬರಾಜು, ಶಾಲೆಗಳ ನಿರ್ಮಾಣ ಸೇದಿದಂತೆ ಅಫ್ಘಾನಿಸ್ತಾನವನ್ನು ಮರು ನಿರ್ಮಾಣ ಮಾಡಲು ಹಣ ಮತ್ತು ಮಾನವ ಶ್ರಮ ಎರಡನ್ನೂ ಬಳಕೆ ಮಾಡಿದೆ. ಆದರೆ, ಅನುಕೂಲಕರ ವಾತಾವರಣದಲ್ಲಿ ಮಾತ್ರ ಬದುಕಲು ಸಾಧ್ಯವಿರುವುದರಿಂದ ಅಫ್ಘಾನಿಸ್ತಾನದಲ್ಲಿ ರೂಪಿಸಲಾದ ಭಾರತೀಯ ಯೋಜನೆಗಳಿಗೆ ನಿಯಮಿತ ನಿರ್ವಹಣೆಯ ಅವಶ್ಯವೂ ಇದೆ ಎಂದು ಭಾರತೀಯ ಆರ್ಥಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಅಫ್ಘನ್ನಲ್ಲಿ ಭಾರತದ ಹೂಡಿಕೆಗಳಿವು?
ಅಫ್ಘಾನಿಸ್ತಾನದ ಅಭಿವೃದ್ಧಿಗಾಗಿ ಭಾರತವೂ ಶತಕೋಟಿ ಡಾಲರ್ಗಳಷ್ಟು ಹಣವನ್ನು ಖರ್ಚು ಮಾಡಿ, ಪ್ರಮುಖವಾಗಿ ನವದೆಹಲಿಯ ಯೋಜನೆಗಳಲ್ಲಿ ಭಾರತದಿಂದ ಅಫ್ಘಾನಿಸ್ತಾನಕ್ಕೆ ಸಂಪರ್ಕಿಸಲು ಸಹಾಯಕವಾಗುವಂತೆ 150 ದಶಲಕ್ಷ ಡಾಲರ್ಗಳಷ್ಟು ಮೌಲ್ಯದ ಜರಂಜ್-ದೇಲಾರಾಮ್ ನೈರುತ್ಯ ಹೆದ್ದಾರಿ ನಿರ್ಮಾಣ ಮಾಡಲಾಯಿತು. ಇದು 2019ರಲ್ಲಿ ಪೂರ್ಣಗೊಂಡಿತು. ಇದೀಗ ಈ ರಸ್ತೆಯು ಇರಾನ್ನ ಚಬಹಾರ್ ಬಂದರಿನ ಮೂಲಕ ಅಫ್ಘಾನಿಸ್ತಾನದೊಂದಿಗೆ ವ್ಯಾಪಾರ ವಹಿವಾಟು ನಡೆಸಲು ಅನುಕೂಲ ಮಾಡಿಕೊಟ್ಟಂತಾಗಿದೆ. ಮುಖ್ಯವಾಗಿ ಭಾರತಕ್ಕೂ ಅನುಕೂಲವಾಗಿದೆ.
ಇದಲ್ಲದೆ, ಪ್ರಮುಖ ಯೋಜನೆಯಾಗಿ ಕಾಬೂಲ್ನಲ್ಲಿ ಅಫ್ಘಾನ್ ಸಂಸತ್ ಭವನ, ವಿದ್ಯುತ್ ಉತ್ಪಾದನಾ ಅಣೆಕಟ್ಟು ಹಾಗೂ ಕೃಷಿಗೆ ಅಗತ್ಯವಿರುವ ನೀರಾವರಿ ಸೌಲಭ್ಯಕ್ಕೂ ನೆರವು ನೀಡಿತು. ಶಾಲೆ, ಆಸ್ಪತ್ರೆಗಳನ್ನು ನಿರ್ಮಿಸಿ, ಅಫ್ಘಾನ್ ಅಧಿಕಾರಿಗಳಿಗೆ ಭಾರತೀಯ ಮಿಲಿಟರಿ ಅಕಾಡೆಮಿಗಳಲ್ಲಿ ತರಬೇತಿ ಹಾಗೂ ತಾಂತ್ರಿಕ ಸಹಾಯವನ್ನೂ ನೀಡಿತು. ಅದರಂತೆಯೇ ಭಾರತದಲ್ಲಿ ಅಧ್ಯಯನ ಮಾಡುತ್ತಿರುವ ಅಫ್ಘನ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನೂ ನೀಡುತ್ತಿದೆ.
ಈ ಬೆನ್ನಲ್ಲೇ 2017ರಲ್ಲಿ ಭಾರತವು ನವದೆಹಲಿ ಮತ್ತು ಕಾಬೂಲ್ ನೇರ ವಾಯು ಸರಕು ಕಾರಿಡಾರ್ ಸ್ಥಾಪಿಸಿದ್ದರಿಂದ ಭಾರತ ಮತ್ತು ಅಫ್ಘಾನ್ ದೇಶಗಳ ನಡುವಿನ ವ್ಯಾಪಾರ ವಹಿವಾಟು ಹೆಚ್ಚಾಯಿತು. ಈ ಯೋಜನೆಗಳ ಹೊರತಾಗಿ ಭಾರತವು 2005ರ ನಂತರ ಶಿಕ್ಷಣ, ಆರೋಗ್ಯ, ನೀರು ನಿರ್ವಹಣೆ ಮತ್ತು ಕ್ರೀಡಾ ಸೌಲಭ್ಯಗಳನ್ನು ಒಳಗೊಂಡಂತೆ ವಿವಿಧ ಸಣ್ಣ ಮತ್ತು ಮಧ್ಯಮ-ಪ್ರಮಾಣದ ಯೋಜನೆಗಳನ್ನು ಅಭಿವೃದ್ಧಿಪಡಿಸಲು ಸುಮಾರು 120 ದಶಲಕ್ಷ ಡಾಲರ್ಗಳಷ್ಟು ಸಂಪನ್ಮೂಲವನ್ನು ಹೂಡಿಕೆ ಮಾಡಿತು. ನಂತರ 2015ರಲ್ಲಿ ಕಾಬೂಲ್ನಲ್ಲಿ ವೈದ್ಯಕೀಯ ರೋಗನಿರ್ಣಯ ಕೇಂದ್ರ, ಜುಲೈ 2020ರಲ್ಲಿ ಶಾಲೆಗಳು ಹಾಗೂ ಬೃಹತ್ ರಸ್ತೆಗಳನ್ನು ನಿರ್ಮಿಸುವ 2.5 ಮಿಲಿಯನ್ ಡಾಲರ್ ಮೌಲ್ಯದ ಐದು ಒಪ್ಪಂದಗಳಿಗೆ ಸಹಿ ಹಾಕಿತು.
ಮುಖ್ಯವಾಗಿ 2020 ವೇಳೆಯಲ್ಲಿ ನಡೆದ ಜಿನೀವಾ ಸಮ್ಮೇಳನದಲ್ಲಿ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ನವದೆಹಲಿಯ ಕಾಬೂಲ್ ಜಿಲ್ಲೆಯಲ್ಲಿ ಶತೂಟ್ ಅಣೆಕಟ್ಟೆಯನ್ನು ನಿರ್ಮಿಸಲಾಗುವುದು ಎಂದು ಘೋಷಿಸಿದ್ದರು. ಇದರಿಂದ ಅಫ್ಘಾನಿಸ್ತಾನಕ್ಕೆ 2 ಮಿಲಿಯನ್ಗಳಿಗೂ ಅಧಿಕ ಮಟ್ಟದಲ್ಲಿ ಕುಡಿಯುವ ನೀರು ಸರಬರಾಜು ಆಗಲಿದೆ ಎಂದಿದ್ದ ಅವರು, ಇದೇ ವೇಳೆ 80 ದಶಲಕ್ಷ ಡಾಲರ್ಗಳಷ್ಟು ಮೌಲ್ಯದ 100 ಪ್ರಮುಖ ಯೋಜನೆಗಳನ್ನು ಭಾರತ ಕೈಗೊಳ್ಳಲಿದೆ ಎಂಬ ಭರವಸೆಯನ್ನು ನೀಡಿದ್ದರು.
ಈ ಬೆಳವಣಿಗೆಯನ್ನು ಗಮನಿಸಿರುವ ಹಡ್ಸನ್ ಇನ್ಸ್ಟಿಟ್ಯೂಟ್ನ ನಿರ್ದೇಶಕಿ ಅಪರ್ಣಾ ಪಾಂಡೆ, ''ಅಫ್ಘಾನಿಸ್ತಾನದಲ್ಲಿ ಭಾರತದ ಹೂಡಿಕೆ ಗಮನಾರ್ಹವಾಗಿದ್ದು, ತಾಲಿಬಾನ್ ಆಡಳಿತ ವಹಿಸಿಕೊಂಡ ಮಾತ್ರಕ್ಕೆ ನಶಿಸಿ ಹೋಗುವುದಿಲ್ಲ'' ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಭಾರತ ಹೂಡಿಕೆ ಮಾಡಿದ್ದೇಕೆ?
1996-2001ರ ಅವಧಿಯಲ್ಲಿ ಇಸ್ಲಾಮಿಕ್ ಮೂಲವಾದಿ ಗುಂಪುಗಳು ಅಫ್ಘಾನಿಸ್ತಾನವನ್ನು ಆಳುತ್ತಿದ್ದಾಗ, ತಾಲಿಬಾನ್ ಆಡಳಿತವನ್ನು ಪ್ರತಿರೋಧಿಸಿತ್ತು. ತದನಂತರ 2001ರಲ್ಲಿ ತಾಲಿಬಾನ್ನ ಮೊದಲ ಸರ್ಕಾರ ಅಧಃಪತನಗೊಂಡ ನಂತರ, ನವದೆಹಲಿಯು ದೇಶದಲ್ಲೇ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳುವ ಅವಕಾಶ ಕಂಡುಕೊಂಡಿತು.
ಇದರಿಂದ 2010-2013ರ ಅವಧಿಯಲ್ಲಿ ಅಫ್ಘಾನಿಸ್ತಾನದಲ್ಲಿ ಭಾರತದ ರಾಯಭಾರಿಯಾಗಿದ್ದ ಗೌತಮ್ ಮುಖೋಪಾಧ್ಯಾಯ, ಸಾರ್ವಜನಿಕರ ನಂಬಿಕೆ ಮತ್ತು ರಾಜಕೀಯ ಸದ್ಭಾವನೆಯನ್ನು ಗಳಿಸುವುದು ಭಾರತದ ಮುಖ್ಯಉದ್ದೇಶವಾಗಿದ್ದು, ಈ ಹಿನ್ನೆಲೆಯಲ್ಲಿ ಅಫ್ಘಾನ್ನಲ್ಲಿ ಹೂಡಿಕೆ ಮಾಡಲಾಗುತ್ತಿದೆ. ಆದರೆ, ಭಾರತವು ಯಾವುದೇ ರೀತಿಯಲ್ಲೂ ಹಣಕಾಸಿನ ನೆರವನ್ನು ರಾಜಕೀಯ ಪರಿಮಿತಿಗೆ ಬಳಸಲು ಇಚ್ಚಿಸುವುದಿಲ್ಲ. ಇದು ಭಾರತದ ಕೊಡುಗೆ ಎಂದು ಡಿಡಬ್ಲ್ಯೂಗೆ ತಿಳಿಸಿದ್ದರು.
ಆದರೆ, ಭಾರತೀಯ ತಜ್ಞರು, ಭಾರತದ ಈ ಹೂಡಿಕೆಯ ಉದ್ದೇಶಗಳು ಅಫ್ಘಾನಿಸ್ತಾನದ ರಾಜಕೀಯ ಮತ್ತು ಪ್ರಜಾಪ್ರಭುತ್ವ ಪರಿವರ್ತನೆಯನ್ನೂ ಒಳಗೊಂಡಿದೆ ಎಂದು ಅಭಿಪ್ರಾಯಪಟ್ಟಿದ್ದರು.
ಆದ್ದರಿಂದ ಶಿವ ನಾಡಾರ್ ವಿಶ್ವವಿದ್ಯಾನಿಲಯದ ತಜ್ಞ ಅತುಲ್ ಮಿಶ್ರಾ, ''ಇಸ್ಲಾಮಿಕ್ ದೇಶದಲ್ಲಿ ರಾಜಕೀಯ ಪರಿವರ್ತನೆಯ ಪ್ರಾಮುಖ್ಯತೆಯನ್ನು ಒಂದು ಪ್ರಜಾಪ್ರಭುತ್ವ ಮತ್ತೊಂದು ಅಂತರ್ಗತ ಆಡಳಿತ ಪ್ರಧಾನವಾಗಿ ವಿವರಿಸುತ್ತದೆ. ಇದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿಯೇ ತನ್ನನ್ನು ರಾಜ್ಯ ನಿರ್ಮಾಪಕರಾಗಿ ನಿಯೋಜಿಸಲಾಗಿದೆ'' ಎಂದು ಹೇಳಿದ್ದರು.
''ಕೂಲಂಕುಶ ಅಧ್ಯಯನಗಳ ನಂತರ, ಭಾರತ ಮತ್ತು ಅಫ್ಘಾನಿಸ್ತಾನವು 2011ರಲ್ಲಿ ಕಾರ್ಯತಂತ್ರದ ಪಾಲುದಾರಿಕೆ ಒಪ್ಪಂದಕ್ಕೆ ಸಹಿ ಹಾಕಿದವು. ಅದರನ್ವಯ ಭಾರತವು ಅಫ್ಘಾನ್ ಸೇನೆಗೆ ಸಹಾಯ ಮಾಡಿತು. ಪಾಕಿಸ್ತಾನವು ಇಸ್ಲಾಮಿಕ್ ಉಗ್ರಗಾಮಿಗಳನ್ನು ಬೆಂಬಲಿಸುತ್ತಿದೆ ಎಂದು ನವದೆಹಲಿ ಪದೇ ಪದೇ ಆರೋಪಿಸುತ್ತಿದ್ದರಿಂದ, ಭಾರತ ವಿರೋಧಿ ಇಸ್ಲಾಮಿಸ್ಟ್ ಉಗ್ರಗಾಮಿಗಳು ಅಫ್ಘಾನಿಸ್ತಾನದಿಂದ ಭಾರತದ ನೆಲದಲ್ಲಿ ದಾಳಿ ನಡೆಸದಂತೆ ಇರಲಿ ಎಂಬುದೂ ನವದೆಹಲಿಯ ನಿರೀಕ್ಷೆಯಾಗಿತ್ತು,'' ಎಂದು ಮಿಶ್ರಾ ಅಭಿಪ್ರಾಯ ಪಟ್ಟಿದ್ದರು.
ಭಾರತ ತಾಲಿಬಾನ್ನೊಂದಿಗೆ ಕೆಲಸ ಮಾಡಲು ಸಾಧ್ಯವೇ?
ಈ ಬಾರಿ ಎಲ್ಲ ಪ್ರಾದೇಶಿಕ ದೇಶಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಇಸ್ಲಾಮಿಸ್ಟ್ ಗುಂಪುಗಳು ಸುಳಿವು ನೀಡಿವೆ. ಆದರೆ, ಭಾರತ ಪಾಕಿಸ್ತಾನದಂತೆಯೇ ತಾಲಿಬಾನ್ ಅನ್ನು ತನ್ನ ಪ್ರತಿಸ್ಪರ್ಧಿ ಎಂದು ಪರಿಗಣಿಸುವುದರಿಂದ, ತಾಲಿಬಾನ್ನೊಂದಿಗೆ ಭಾರತ ಕೆಲಸ ಮಾಡುವುದು ಕಷ್ಟ ಎಂದು ಸಾಬೀತುಮಾಡಬಹುದು ಎಂದು ಮುಖೋಪಾಧ್ಯಾಯ ಹೇಳಿದ್ದಾರೆ.
ಉದಾಹರಣೆಗೆ, ''ತಾಲಿಬಾನ್ ಮೂಲಕ ಮಾನವೀಯ ನೆರವು ನೀಡುವುದು ಒಂದು ಸಂಕೀರ್ಣ ವಿಚಾರ'' ಎಂದು ಅವರು DWಗೆ ತಿಳಿಸಿದರು. ಇದರಿಂದ ಭಾರತವು ಅಫ್ಘಾನಿಸ್ತಾನಕ್ಕೆ ನೀಡುತ್ತಿದ್ದ ನೆರವನ್ನು ಮುಂದುವರಿಸುವುದು ನಿರ್ಣಾಯಕ ಎಂದೂ ಪಾಂಡೆ ಬಲವಾಗಿ ನಂಬಿದ್ದಾರೆ.
1999ರಲ್ಲಿ ಭಾರತೀಯ ಏರ್ಲೈನ್ಸ್ ವಿಮಾನ ಅಪಹರಣಕಾರರಿಗೆ ತಾಲಿಬಾನ್ ಬೆಂಬಲ ನೀಡಿದ್ದು, ಹೆಚ್ಚಿನ ಭಾರತೀಯರ ನೆನಪಿನಲ್ಲಿ ಇನ್ನೂ ಉಳಿದಿದೆ. ಆದ್ದರಿಂದ ನವದೆಹಲಿ ಇನ್ನೂ ತಾಲಿಬಾನ್ ಬಗ್ಗೆ ಸಂಶಯ ಹೊಂದಿದೆ. ಅಮೆರಿಕಾ ಅಫ್ಘಾನಿಸ್ತಾನದಿಂದ ತನ್ನ ಸೇನೆಯನ್ನು ವಾಪಸ್ ಪಡೆದ ನಂತರ ಆ.15ರಂದು ತಾಲಿಬಾನ್ ಕಾಬೂಲನ್ನು ಶೀಘ್ರವಾಗಿ ವಶಪಡಿಸಿಕೊಂಡಿತು. ಅದಾದ ನಂತರವೇ ಭಾರತವು ತನ್ನ ಹತೋಟಿಯನ್ನು ಕಳೆದುಕೊಂಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಆದ್ದರಿಂದ 'ತಾಲಿಬಾನ್ನ ಮುಂದಿನ ಆಡಳಿತವು ಪ್ರಾದೇಶಿಕ ನೆರೆಹೊರೆಯವರೊಂದಿಗೆ ಹೇಗೆ ವ್ಯವಹರಿಸುತ್ತದೆ? ಎಂಬುದನ್ನು ಭಾರತ 'ಕಾದು ನೋಡಬೇಕಿದೆ'. ಅಲ್ಲಿಯವರೆಗೂ ಭಾರತದ ಹೂಡಿಕೆಗಳು ಆಫ್ಘಾನಿಸ್ತಾನದಲ್ಲಿ ಅತಂತ್ರ ಸ್ಥಿತಿಯಲ್ಲೇ ಇರುತ್ತವೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.