ಲಸಿಕೆ ಪೇಟೆಂಟ್, ಆದಾಯದ ಬಗ್ಗೆ ಯೋಚಿಸುವ ಸಮಯ ಇದಲ್ಲ: WHO
ವಾಷಿಂಗ್ಟನ್, ಮೇ 11: ಲಸಿಕೆ ಪೇಟೆಂಟ್ ಹಾಗೂ ಆದಾಯದ ಬಗ್ಗೆ ಯೋಚಿಸುವ ಸಮಯ ಇದಲ್ಲ, ಭಾರತದಲ್ಲಿ ನಿತ್ಯ ಕೊರೊನಾ ಸೋಂಕು ಹೆಚ್ಚುತ್ತಿದೆ, ಅದನ್ನು ಕಡಿಮೆ ಮಾಡುವ ಕುರಿತು ಆಲೋಚಿಸಬೇಕಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಈ ಕುರಿತು ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್ಒ) ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಅವರು, 'ಭಾರತದಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಮತ್ತು ಸಾವಿನ ಪ್ರಮಾಣ ಏರಿಕೆಯಾಗುತ್ತಿರುವುದು ಆತಂಕಕಾರಿಯಾಗಿದೆ. ದೇಶದಲ್ಲಿ ನಿಖರವಾದ ಅಂಕಿ-ಅಂಶಗಳನ್ನು ಅಂದಾಜಿಸಲು ಸರ್ಕಾರ ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದ್ದಾರೆ.
ಕೋವಿಡ್ 19: 12-15 ವರ್ಷದವರೆಗೆ ಫೈಜರ್ ಲಸಿಕೆ ಬಳಕೆಗೆ ಅಮೆರಿಕ ಅನುಮತಿ
ದೇಶದಲ್ಲಿನ ಸೋಂಕು ಪ್ರಸರಣ ಹೆಚ್ಚಳಕ್ಕೆ ಕೊರೋನಾ ವೈರಸ್ ರೂಪಾಂತರವೇ ಕಾರಣ ಎಂದು ಹೇಳಿರುವ ಅವರು, 'ರೂಪಾಂತರ ವೈರಸ್ನ ಹರಡುವಿಕೆ, ಅದರಿಂದ ಆಗುವ ರೋಗದ ತೀವ್ರತೆ, ಲಸಿಕೆ ಪಡೆದುಕೊಂಡವರಲ್ಲಿನ ಪ್ರತಿಕಾಯ ಪ್ರತಿಕ್ರಿಯೆಗಳ ಬಗ್ಗೆ ಭಾರತದಲ್ಲಿ ಅಧ್ಯಯನ ನಡೆಯುತ್ತಿದೆ. ದೇಶದ ವಿವಿಧ ಪ್ರದೇಶಗಳಲ್ಲಿನ ಸಂಪೂರ್ಣ ಚಿತ್ರಣದ ಮಾಹಿತಿ ಕಲೆಹಾಕಬೇಕಬೇಕೆಂದು ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ.
ಲಸಿಕೆಗಳ ಮೇಲಿನ ಪೇಟೆಂಟ್ಗೆ ಅರ್ಜಿ ಸಲ್ಲಿಸದ ಕುರಿತು ಅಮೆರಿಕದ ನಿರ್ಧಾರವನ್ನು ಬೆಂಬಲಿಸಿರುವ ಸೌಮ್ಯ ಸ್ವಾಮಿನಾಥನ್ ಅವರು, ಪೇಟೆಂಟ್, ಆದಾಯದ ಕುರಿತು ಚಿಂತಿಸುವ ಸಮಯ ಇದಲ್ಲ. ಇಡೀ ಜಗತ್ತೇ ಕೊರೊನಾ ಆರ್ಭಟಕ್ಕೆ ತುತ್ತಾಗಿದೆ. ಇಡೀ ಜಗತ್ತು ಒಗ್ಗೂಡಿ ಕೊರೊನಾ ಸಾಂಕ್ರಾಮಿಕದ ವಿರುದ್ಧ ಒಗ್ಗೂಡಿ ಹೋರಾಡಬೇಕಿದೆ. ಇಲ್ಲಿ ಯಾವುದೇ ರೀತಿಯ ಲಾಭದ ವಿಚಾರ ಬರಬಾರದು ಎಂದೂ ಹೇಳಿದ್ದಾರೆ.
ಕೊರೊನಾ ಸೋಂಕು ಸಾಂಕ್ರಾಮಿಕ ಪರಿಸ್ಥಿತಿ ತುಂಬಾ ಆತಂಕಕಾರಿಯಾಗಿದೆ. ಭಾರತ ಮತ್ತು ಆಗ್ನೇಯ ದೇಶಗಳಲ್ಲಿ ವರದಿಯಾಗುತ್ತಿರುವ ಪ್ರಕರಣಗಳು, ದೈನಂದಿನ ಸಾವಿನ ಸಂಖ್ಯೆ ತುಂಬಾ ಕಳವಳಕಾರಿಯಾಗಿದೆ. ಈ ಬಗ್ಗೆ ನಮಗೆ ಮಾಹಿತಿಗಳು ಲಭ್ಯವಾಗುತ್ತಿದ್ದು, ಇಷ್ಟು ಪ್ರಮಾಣದ ಪ್ರಕರಣಗಳನ್ನು ನಾವು ಅಂದಾಜಿಸಿರಲಿಲ್ಲ.
ಪ್ರಪಂಚದ ಪ್ರತಿಯೊಂದು ದೇಶವೂ ಸೋಂಕು ಮತ್ತು ಸಾವಿನ ಪ್ರಕರಣಗಳನ್ನು ನಿಜವಾದ ಸಂಖ್ಯೆಗಿಂತ ಕಡಿಮೆ ಅಂದಾಜಿಸಿದ್ದವು. ಸರ್ಕಾರಗಳು ನಿಖರವಾದ ಸಂಖ್ಯೆಯನ್ನು ವರದಿ ಮಾಡಲು ಅಭ್ಯಾಸಗಳನ್ನು ಹೆಚ್ಚಿಸಬೇಕು.
ಇದು ಉತ್ತಮ ಅಂಕಿ-ಅಂಶ ಮತ್ತು ಉತ್ತಮ ನೀತಿಗಳು ಏನಾಗುತ್ತಿದೆ ಎಂಬುದರತ್ತ ನಿರ್ದೇಶನ ನೀಡಬಹುದು. ನೆನಪಿರಲಿ, ಜನರು ಕೇವಲ ಕೋವಿಡ್ನಿಂದಲೇ ಮೃತಪಡುತ್ತಿಲ್ಲ. ಆರೋಗ್ಯಸೇವೆ ಪಡೆದುಕೊಳ್ಳಲಾಗದೆ ಇತರೆ ಖಾಯಿಲೆಗಳಿಂದಲೂ ಜೀವ ಕಳೆದುಕೊಳ್ಳುತ್ತಿದ್ದಾರೆʼ ಎಂದೂ ಅವರು ಎಚ್ಚರಿಸಿದ್ದಾರೆ.