ಕೊರೊನಾ ಅಂತ್ಯ ಯಾವಾಗ, ವಿಶ್ವ ಆರೋಗ್ಯ ಸಂಸ್ಥೆ ಹೇಳುವುದೇನು?
ವಾಷಿಂಗ್ಟನ್, ಅಕ್ಟೋಬರ್ 25: ಕೊರೊನಾ ಸೋಂಕು ವಿಶ್ವದಾದ್ಯಂತ ಹಬ್ಬಿದ್ದು, ಜನರು ಹೈರಾಣಾಗಿದ್ದಾರೆ, ಅಂತ್ಯಗೊಳ್ಳುವುದು ಯಾವಾಗ ಎನ್ನುವ ಪ್ರಶ್ನೆ ಜನರನ್ನು ಕಾಡುತ್ತಿದೆ.
ವಿಶ್ವವು ಯಾವಾಗ ಕೊರೊನಾ ಸೋಂಕನ್ನು ತೊಡೆದುಹಾಕಬೇಕು ಎಂದುಕೊಳ್ಳುತ್ತದೆಯೋ ಅಂದು ಸೋಂಕು ಅಂತ್ಯವಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಡೈರೆಕ್ಟರ್ ಜನರಲ್ ಟೆಡ್ರೋಸ್ ಅಧಾನಮ್ ಹೇಳಿದ್ದಾರೆ.
''ಇದೆಲ್ಲವೂ ನಮ್ಮ ಕೈಯಲ್ಲಿ, ನಾವು ಕೊರೊನಾ ಸೋಂಕನ್ನು ಎಂದು ಅಂತ್ಯಗೊಳಿಸಬೇಕು ಎನ್ನುತ್ತೇವೋ ಅಂದು ಅಂತ್ಯಗೊಳ್ಳುತ್ತದೆ'' ಎಂದಿದ್ದಾರೆ.
ನಮಗೆ ಅಗತ್ಯವಿರುವ ಎಲ್ಲಾ ಸಾಧನಗಳಿವೆ, ಪರಿಣಾಮಕಾರಿ ಸಾರ್ವಜನಿಕ ಆರೋಗ್ಯ ಉಪಕರಣಗಳು ಹಾಗೂ ವೈದ್ಯಕೀಯ ಸಾಧನಗಳಿವೆ ಆದರೆ ಇವುಗಳನ್ನು ಸರಿಯಾಗಿ ಬಳಕೆ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇಡೀ ವಿಶ್ವಕ್ಕೆ ಮಹಾಮಾರಿ ಕೊರೊನಾ ಹಂಚಿದ ನೆರೆಯ ಚೀನಾದಲ್ಲಿ ಮತ್ತೆ ಭಯಾನಕ ವೈರಸ್ ಹರಡುವಿಕೆಯ ಸುಳಿವು ಕಂಡುಬಂದಿದೆ. ಈಗ ಬ್ರಿಟನ್ನಲ್ಲೂ ಕೊರೊನಾ ವೈರಸ್ನ AY4.2 ಹೊಸ ತಳಿ ಪತ್ತೆಯಾಗಿದೆ.
ಯುರೋಪ್ ದೇಶದಲ್ಲಿನ ಕೊರೊನಾ ವೈರಸ್ ಪ್ರಕರಣಗಳಲ್ಲಿ ಶೇಕಡಾ 7 ರಷ್ಟು ಏರಿಕೆಯಾಗಿದೆ ವಾರದಲ್ಲಿ ಕೊರೋನಾದಿಂದ ಮೃತಪಡುತ್ತಿರುವವರ ಸಂಖ್ಯೆ ಶೇಕಡಾ 1.9 ರಷ್ಟು ಏರಿಕೆಯಾಗಿದೆ.
ಒಂದೇ ದಿನ ಬ್ರಿಟನ್ನಲ್ಲಿ 52,000 ಕೊರೊನಾ ಹೊಸ ಕೇಸ್ಗಳು ಪತ್ತೆಯಾಗಿವೆ. ಜುಲೈ 17ರ ಬಳಿಕ ಯುಕೆನಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಿ್ತ್ತು. ಆದರೆ ಅಕ್ಟೋಬರ್ ತಿಂಗಳ ಮಧ್ಯಭಾಗದಲ್ಲಿ ಯುಕೆನಲ್ಲಿ 50,000 ಕೊರೋನಾ ಪ್ರಕರಣ ದಾಖಲಾಗಿದೆ. ಇದು ಜುಲೈ ಬಳಿಕ ದಾಖಲಾದ ಅತ್ಯಧಿಕ ಕೊರೋನಾ ಪ್ರಕರಣವಾಗಿದೆ.
ರಷ್ಯಾದಲ್ಲೂ ಕೂಡ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು ನಿನ್ನೆ ಒಂದೇ ದಿನ 37,000 ಪ್ರಕರಣಗಳು ಪತ್ತೆಯಾಗಿವೆ ಹಾಗೂ 1,000 ಜನ ಕೊರೊನಾಗೆ ಬಲಿಯಾಗಿದ್ದಾರೆ. ಉಕ್ರೇನ್ ನಲ್ಲಿ 22,415 ಕೊರೊನಾ ಪ್ರಕರಣಗಳು ದಾಖಲಾಗಿದ್ದು ಇದೇ ಮೊದಲ ಬಾರಿಗೆ ಇಷ್ಟು ಕೇಸ್ಗಳು ದಾಖಲಾಗಿವೆ.
ಭಾರತ 100 ಕೋಟಿ ಲಸಿಕೆ ಗಡಿ ದಾಟಿದ ಸಂಭ್ರಮದಲ್ಲಿದೆ. ಇತ್ತ ಕೊರೊನಾ ಕೂಡ ನಿಯಂತ್ರಣದಲ್ಲಿದೆ. ಹೀಗಾಗಿ 100 ಕೋಟಿ ಲಸಿಕೆ ಸಾಧನೆಯನ್ನು ಭಾರತ(India) ಆಚರಿಸಿದೆ. ಆದರೆ ಇದರ ಬೆನ್ನಲ್ಲೇ ಚೀನಾ, ರಷ್ಯಾ ಮತ್ತು ಬ್ರಿಟನ್ಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಆತಂಕ ಸ್ಱಷ್ಟಿಸಿದೆ. ಹೀಗಾಗಿ ಮತ್ತೆ ಕಠಿಣ ನಿರ್ಬಂಧಗಳು ಜಾರಿ ಕುರಿತು ಗಂಭೀರ ಚರ್ಚೆ ನಡೆಯುತ್ತಿದೆ.
ರಷ್ಯಾ, ಜರ್ಮನಿ, ಬ್ರಿಟನ್, ಚೀನಾದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಮತ್ತೆ ಹೆಚ್ಚಾಗುತ್ತಿದ್ದರೂ ರಾಜ್ಯದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಸೋಂಕು ಹೆಚ್ಚಾಗುವ ಸಾಧ್ಯತೆಗಳು ಕಡಿಮೆ. ಆದರೆ ಈ ವರ್ಷಾಂತ್ಯದವರೆಗೂ ಕೋವಿಡ್ ಮೂರನೇ ಅಲೆಯ ಆತಂಕ ಇದ್ದೇ ಇದೆ ಎಂದು ರಾಜ್ಯದ ಕೋವಿಡ್ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಕೋವಿಡ್ ಮೂರನೇ ಅಲೆ ಅಕ್ಟೋಬರ್, ನವೆಂಬರ್ನಲ್ಲಿ ಬರುವ ಸಾಧ್ಯತೆ ಕಡಿಮೆ ಆಗಿರಬಹುದು. ಆದರೆ ಮೂರನೇ ಅಲೆಯ ಆತಂಕ ಇದ್ದೇ ಇದೆ. ಮುಂದಿನ ಮೂರು ತಿಂಗಳುಗಳ ಕಾಲ ಕೋವಿಡ್ ಶಿಷ್ಟಾಚಾರಗಳನ್ನು ಚಾಚೂ ತಪ್ಪದೆ ಪಾಲಿಸಬೇಕು ಎಂದು ಡಾ. ಸಿ.ಎನ್. ಮಂಜುನಾಥ್ ತಿಳಿಸಿದರು.
ಲಸಿಕೆ ಪಡೆದವರಿಗೂ ಸೋಂಕು ಆತಂಕ: ರಾಜ್ಯದಲ್ಲಿ ಕೋವಿಡ್-19(Covid19) ಪ್ರಕರಣ ಕಡಿಮೆ ಆಗಿರಬಹುದು. ಆದರೆ ವಿದೇಶದಲ್ಲಿ ಇನ್ನೂ ಕೋವಿಡ್ ಪ್ರಕರಣಗಳು ಇವೆ. ಅದೇ ರೀತಿ ಕೋವಿಡ್ ಲಸಿಕೆ ಪಡೆಯಲು ಸಾಕಷ್ಟು ಮಂದಿ ಬಾಕಿಯಿದ್ದಾರೆ. ಲಸಿಕೆ ಪಡೆದವರಿಗೂ ಸೋಂಕು ಬರುವ ಸಾಧ್ಯತೆ ಇದೆ. ಮರಣದ ಪ್ರಮಾಣ ಶೇ.2ರಷ್ಟಿದೆ. ಆದ್ದರಿಂದ ಕೋವಿಡ್ ಮೂರನೇ ಅಲೇ ಬರುವುದೇ ಇಲ್ಲ ಎಂದು ಹೇಳುವ ಸ್ಥಿತಿ ಇಲ್ಲ.
ಕೊರೊನಾ ವೈರಾಣುವಿನ ರೂಪಾಂತರದ ಬಗ್ಗೆ ಏನನ್ನೂ ಹೇಳಲು ಸಾಧ್ಯವಿಲ್ಲ. ವೈರಾಣು ರೂಪಾಂತರಗೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಜನರು ಕೋವಿಡ್ ಮುಗಿದೇ ಹೋಯಿತು ಎಂದು ಬೇಕಾಬಿಟ್ಟಿವರ್ತಿಸಬಾರದು ಎಂದು ಡಾ. ಮಂಜುನಾಥ ಅವರು ಹೇಳಿದರು.
ಕೋವಿಡ್ ಸಲಹಾ ಸಮಿತಿ ಮುಖ್ಯಸ್ಥ ಡಾ. ಎಂ.ಕೆ. ಸುದರ್ಶನ್ ಅವರ ಪ್ರಕಾರ, ದೇಶದಲ್ಲಿ ಸದ್ಯ ಚಾಲ್ತಿಯಲ್ಲಿರುವ ಕೊರೋನಾ ವೈರಾಣು ಪ್ರಭೇದಗಳಿಂದ ಮೂರನೇ ಅಲೆ ಸೃಷ್ಟಿಸಾಧ್ಯವಿಲ್ಲ. ಸದ್ಯ ಕೋವಿಡ್ ಮತ್ತೆ ಏರಿಕೆ ಕಾಣುತ್ತಿರುವ ದೇಶಗಳಲ್ಲಿಯೂ ಹೊಸ ಪ್ರಭೇದ ಕಂಡು ಬಂದಿಲ್ಲ. ಆದ್ದರಿಂದ ನವೆಂಬರ್ ಅಂತ್ಯದವರೆಗೂ ಮೂರನೇ ಅಲೆ ಬರುವ ಸಾಧ್ಯತೆಯಿಲ್ಲ.
ಆದರೆ ನಾವು ಈ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಬೇಕು. ವಿದೇಶದಿಂದ ಬರುವವರ ಕೋವಿಡ್ ಪರೀಕ್ಷೆಯ ಜೊತೆಗೆ ಪಾಸಿಟಿವ್ ಕಂಡು ಬಂದರೆ ಅವರ ಸಂಪರ್ಕ ಪತ್ತೆ ಮತ್ತು ವೈರಾಣು ಪ್ರಬೇಧ ಪತ್ತೆ ಪರೀಕ್ಷೆಯನ್ನು ಆದ್ಯತೆಯ ಮೇಲೆ ನಡೆಸಬೇಕು ಎಂದು ಅವರು ಸಲಹೆ ನೀಡಿದರು.