ಆಸ್ಟ್ರೇಲಿಯಾ ಪ್ರಧಾನಿ ಹೆಸರು ಮರೆತು ಮುಜುಗರಕ್ಕೆ ಒಳಗಾದ ಜೋ ಬೈಡನ್
ವಾಷಿಂಗ್ಟನ್, ಸೆಪ್ಟೆಂಬರ್ 16: ತುಂಬು ಸಭೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಅವರ ಹೆಸರನ್ನು ಮರೆತು ಮುಜುಗರಕ್ಕೆ ಒಳಗಾದ ಘಟನೆ ನಡೆದಿದೆ.
ಭದ್ರತಾ ಪಾಲುದಾರಿಕೆ ವಿಚಾರವಾಗಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಹೆಸರನ್ನೇ ಜೋ ಬೈಡನ್ ಮರೆತಿದ್ದರು.
ಯುಎಸ್ ಅಧ್ಯಕ್ಷ ಜೋ ಬೈಡನ್ ಆಯೋಜಿಸಿದ ಕ್ವಾಡ್ ಶೃಂಗಸಭೆಗೆ ಪ್ರಧಾನಿ ಮೋದಿ
ಅಮೆರಿಕ ಅಧ್ಯಕ್ಷ ಜೋ ಬೈಡನ್ ಬುಧವಾರ ಹೊಸ ಭದ್ರತಾ ಪಾಲುದಾರಿಕೆಗಾಗಿ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಆಸ್ಟ್ರೇಲಿಯಾ, ಅಮೆರಿಕ ಹಾಗೂ ಯುಕೆ ಸೇರಿ 'AUKUS' ಎನ್ನುವ ತ್ರಿಪಕ್ಷೀಯ ಭದ್ರತಾ ಪಾಲುದಾರಿಕೆಯನ್ನು ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಜೋ ಬೈಡನ್ ಅವರು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಅವರ ಹೆಸರು ಮರೆತು ಮುಜುಗರಕ್ಕೆ ಒಳಗಾದರು. ಗೋಷ್ಠಿ ಸಮಯದಲ್ಲಿ ಧನ್ಯವಾದಗಳು ಬೋರಿಸ್ ಎಂದು ಹೇಳುತ್ತಾ ಯುಕೆ ಪ್ರಧಾನಿಯಡೆಗೆ ನೋಡಿದರು, ಬಳಿಕ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಅವರ ಕಡೆಗೆ ತಿರುಗಿದಾಗ ಬೈಡನ್ ಅವರ ಹೆಸರನ್ನು ಮರೆತಂತೆ ತೋರುತ್ತಿತ್ತು.
ಅಮೆರಿಕ ಅಧ್ಯಕ್ಷ ಜೋ ಬೈಡನ್ ಸೆಪ್ಟೆಂಬರ್ 24 ರಂದು ಮೊದಲ ಬಾರಿಗೆ ಆಯೋಜಿಸಿರುವ ಕ್ವಾಡ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಮತ್ತು ಜಪಾನ್ ಪ್ರಧಾನಿ ಯೋಶಿಹೈಡ್ ಸುಗಾ ಭಾಗವಹಿಸಲಿದ್ದಾರೆ ಎಂದು ಶ್ವೇತಭವನ ಸೋಮವಾರ ಪ್ರಕಟಿಸಿದೆ.
ಸೆಪ್ಟೆಂಬರ್ 25 ರಂದು ನ್ಯೂಯಾರ್ಕ್ ನಲ್ಲಿ ನಡೆಯಲಿರುವ ವಿಶ್ವಸಂಸ್ಥೆ ಸಾಮಾನ್ಯಸಭೆಯ 76 ನೇ ಅಧಿವೇಶನದ ಉನ್ನತ ಮಟ್ಟದ ವಿಭಾಗದ 'ಸಾಮಾನ್ಯ ಚರ್ಚೆಯನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಂಗಳವಾರ ತಿಳಿಸಿದೆ.
ಕ್ವಾಡ್ ಶೃಂಗಸಭೆಯಲ್ಲಿ ಮಾರ್ಚ್ 12 ರಂದು ನಡೆದಿದ್ದ ಮೊದಲ ವರ್ಚುಯಲ್ ಶೃಂಗಸಭೆಯ ನಂತರ ಆಗಿರುವ ಪ್ರಗತಿಯಲ್ಲಿ ನಾಯಕರು ಪರಾಮರ್ಶಿಸಲಿದ್ದು, ಹಂಚಿಯ ಹಿತಾಸಕ್ತಿಯ ಪ್ರಾದೇಶಿಕ ಸಮಸ್ಯೆಗಳ ಕುರಿತಂತೆ ಚರ್ಚೆ ನಡೆಸಲಿದ್ದಾರೆ ಎಂದು ಎಂಇಎ ಹೇಳಿದೆ.
ಸಮಕಾಲೀನ ಜಾಗತಿಕ ಸಮಸ್ಯೆಗಳಾದ ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು, ಸಂಪರ್ಕ ಮತ್ತು ಮೂಲಸೌಕರ್ಯ, ಸೈಬರ್ ಭದ್ರತೆ, ಕಡಲ ಭದ್ರತೆ, ಮಾನವೀಯ ನೆರವು, ವಿಪತ್ತು ಪರಿಹಾರ, ಹವಾಮಾನ ಬದಲಾವಣೆ ಮತ್ತು ಶಿಕ್ಷಣದ ಬಗ್ಗೆ ನಾಯಕರು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ ಎಂದು ಅದು ಹೇಳಿದೆ.
ಕೋವಿಡ್-19 ವಿರುದ್ಧದ ಹೋರಾಟ, ಹವಾಮಾನ ಬಿಕ್ಕಟ್ಟು, ಇಂಡೋ- ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ, ಸಮೃದ್ದಿ ಮತ್ತು ಭದ್ರತೆ ಸ್ಥಾಪಿಸುವಲ್ಲಿ ಉಭಯ ದೇಶಗಳು ಹೇಗೆ ಜೊತೆಯಾಗಿ ಕೆಲಸ ಮಾಡಬಹುದು ಎಂಬುದರ ಬಗ್ಗೆ ನಾಯಕರು ಚರ್ಚಿಸಲಿದ್ದಾರೆ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಜಿನ್ ಸಾಕಿ ಹೇಳಿದ್ದಾರೆ.
21 ನೇ ಶತಮಾನದ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಉಭಯ ದೇಶಗಳ ನಡುವೆ ಬಾಂಧವ್ಯ ವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ಜೊತೆಗ ಇಂಡೋ- ಪೆಸಿಫಿಕ್ ಪ್ರದೇಶದಲ್ಲಿ ತೊಡಗಿಸಿಕೊಳ್ಳುವ ಬೈಡನ್- ಹ್ಯಾರಿಸ್ ಆಡಳಿತದ ಆದ್ಯತೆಯನ್ನು ತೋರಿಸುತ್ತದೆ ಎಂದು ಸಾಕಿ ತಿಳಿಸಿದ್ದಾರೆ.