ಅಮಿತ್ ಶಾ ಮೇಲೆ ನಿರ್ಬಂಧ ವಿಧಿಸಲು ಅಮೆರಿಕದಲ್ಲಿ ಒತ್ತಾಯ
ವಾಷಿಂಗ್ಟನ್, ಡಿಸೆಂಬರ್ 10: ವಿವಾದಾತ್ಮಕ ಪೌರತ್ವ ತಿದ್ದುಪಡಿ ಮಸೂದೆ ಮಂಡಿಸಿರುವ ಗೃಹ ಸಚಿವ ಅಮಿತ್ ಶಾ ಮೇಲೆ ನಿರ್ಬಂಧ ವಿಧಿಸುವಂತೆ ಅಮೆರಿಕದ ಆಯೋಗವೊಂದು ಆಗ್ರಹಿಸಿದೆ.
'ಪೌರತ್ವ ತಿದ್ದುಪಡಿ ಮಸೂದೆಯು ತಪ್ಪು ದಿಕ್ಕಿನಲ್ಲಿನ ಅಪಾಯಕಾರಿ ತಿರುವು' ಎಂದು ಧಾರ್ಮಿಕ ಸ್ವಾತಂತ್ರ್ಯದ ಕುರಿತಾದ ಅಮೆರಿಕ ಸಂಯುಕ್ತ ಸಂಸ್ಥಾನದ ಆಯೋಗವೊಂದು ಹೇಳಿದೆ.
ಭಾರತದ ಮುಸ್ಲಿಮರು ಭಯಪಡಬೇಕಿಲ್ಲ: ಅಮಿತ್ ಶಾ ಭರವಸೆ
2014ರ ಡಿಸೆಂಬರ್ 31ರವರೆಗೆ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಸ್ತಾನದಿಂದ ಧಾರ್ಮಿಕ ಕಾರಣಗಳಿಂದ ಭಾರತಕ್ಕೆ ನಿರಾಶ್ರಿತರಾಗಿ ಬಂದ ಹಿಂದೂ, ಸಿಖ್, ಜೈನ, ಬೌದ್ಧ, ಕ್ರೈಸ್ತ ಮತ್ತು ಪಾರ್ಸಿ ಸಮುದಾಯದ ಜನರಿಗೆ ಭಾರತದ ಪೌರತ್ವ ನೀಡುವ ಮಸೂದೆ ಇದಾಗಿದೆ. ಇದರಲ್ಲಿ ಮುಸ್ಲಿಮರನ್ನು ಸೇರ್ಪಡೆ ಮಾಡದೆ ಇರುವುದು ವಿವಾದಕ್ಕೆ ಕಾರಣವಾಗಿದೆ.
ಈ ಕುರಿತು ಸೋಮವಾರ ಹೇಳಿಕೆ ಬಿಡುಗಡೆ ಮಾಡಿರುವ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಅಮೆರಿಕನ್ ಆಯೋಗ (ಯುಎಸ್ಸಿಐಆರ್ಎಫ್), ಲೋಕಸಭೆಯಲ್ಲಿ ಅಂಗೀಕಾರವಾದ ಮಸೂದೆಯಿಂದ ತೀವ್ರ ಕಳವಳ ಉಂಟಾಗಿದೆ ಎಂದು ಹೇಳಿದೆ. ಈ ಮಸೂದೆಯನ್ನು ಭಾರತದಲ್ಲಿನ ಲಕ್ಷಾಂತರ ಮುಸ್ಲಿಮರ ಪೌರತ್ವವನ್ನು ಕಿತ್ತುಕೊಳ್ಳುವ ಹುನ್ನಾರವಾಗಿದೆ ಎಂದು ಆರೋಪಿಸಿದೆ.
ಅಮಿತ್ ಶಾ ಮೇಲೆ ನಿರ್ಬಂಧಕ್ಕೆ ಆಗ್ರಹ
'ಕ್ಯಾಬ್ (ಪೌರತ್ವ ತಿದ್ದುಪಡಿ ಮಸೂದೆ) ಸಂಸತ್ನ ಎರಡೂ ಸದನಗಳಲ್ಲಿ ಅಂಗೀಕಾರವಾದರೆ ಅಮೆರಿಕ ಸರ್ಕಾರವು ಗೃಹ ಸಚಿವ ಅಮಿತ್ ಶಾ ಮತ್ತು ಇತರೆ ಪ್ರಮುಖ ನಾಯಕರ ಮೇಲೆ ನಿರ್ಬಂಧ ಹೇರುವುದನ್ನು ಪರಿಗಣಿಸಬೇಕು' ಎಂದು ಆಯೋಗ ಒತ್ತಾಯಿಸಿದೆ.
'ಗೃಹ ಸಚಿವ ಅಮಿತ್ ಶಾ ಅವರು ಲೋಕಸಭೆಯಲ್ಲಿ ಮಂಡಿಸಿರುವ ಧಾರ್ಮಿಕ ಮಾನದಂಡದ ಮಸೂದೆಯಾದ ಪೌರತ್ವ ತಿದ್ದುಪಡಿ ಮಸೂದೆಯ ಅಂಗೀಕಾರದ ಬಗ್ಗೆ ಆಯೋಗ ತೀವ್ರ ಕಳವಳ ಹೊಂದಿದೆ' ಎಂದು ಅದು ಹೇಳಿದೆ.
ಮುಸ್ಲಿಮರನ್ನು ಹೊರಗಿಡುವ ಪ್ರಯತ್ನ
ಪೌರತ್ವ ತಿದ್ದುಪಡಿ ಮಸೂದೆಯು ಧರ್ಮದ ಆಧಾರದಲ್ಲಿ ಪೌರತ್ವದ ನಿರ್ಧರಿಸುವ ಕಾನೂನಾತ್ಮಕ ಮಾನದಂಡವನ್ನು ಸಿದ್ಧಪಡಿಸುತ್ತಿದೆ. ನಿರ್ದಿಷ್ಟವಾಗಿ ಮುಸ್ಲಿಮರನ್ನು ಹೊರತಾಗಿಸಿ ಇತರೆ ವಲಸಿಗರಿಗೆ ಪೌರತ್ವ ನೀಡಲು ಇದು ದಾರಿ ಮಾಡಿಕೊಡಲಿದೆ ಎಂದು ಆಯೋಗ ಆರೋಪಿಸಿದೆ.
ಪೌರತ್ವ ತಿದ್ದುಪಡಿ ಮಸೂದೆ, ರಾಜ್ಯಸಭೆಯಲ್ಲಿ ಎನ್ಡಿಎ ಸಂಖ್ಯಾಬಲ?
ಭಾರತದ ಸಂಸ್ಕೃತಿ, ಸಂವಿಧಾನಕ್ಕೆ ವಿರುದ್ಧ
'ಪೌರತ್ವ ತಿದ್ದುಪಡಿ ಮಸೂದೆಯು ತಪ್ಪು ದಿಕ್ಕಿನಲ್ಲಿನ ಅಪಾಯಕಾರಿ ತಿರುವಾಗಿದೆ. ಅದು ನಂಬಿಕೆಯನ್ನು ಲೆಕ್ಕಿಸದೆ ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ಖಚಿತತೆಯನ್ನು ನೀಡುವ ಭಾರತದ ಜಾತ್ಯತೀತ ಬಹುಸಂಸ್ಕೃತಿಯ ಮತ್ತು ಭಾರತೀಯ ಸಂವಿಧಾನದ ಭವ್ಯ ಇತಿಹಾಸಕ್ಕೆ ವಿರುದ್ಧವಾಗಿ ಓಡುತ್ತಿದೆ. ಲಕ್ಷಾಂತರ ಮುಸ್ಲಿಮರಿಂದ ಪೌರತ್ವವನ್ನು ಕಸಿದುಕೊಳ್ಳುವ ಭಾರತೀಯ ಪೌರತ್ವಕ್ಕೆ ಅಲ್ಲಿನ ಸರ್ಕಾರವು ಧಾರ್ಮಿಕ ಪರೀಕ್ಷೆ ನಡೆಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದೆ.
ಆಯೋಗವನ್ನು ಪರಿಗಣಿಸದ ಭಾರತ
ಸುಮಾರು ಒಂದು ದಶಕದ ಬಳಿಕ ಈಗಿನ ಭಾರತೀಯ ಸರ್ಕಾರವು ಯುಎಸ್ಸಿಐಆರ್ಎಫ್ ನೀಡುವ ವಾರ್ಷಿಕ ವರದಿಗಳನ್ನು ಮತ್ತು ತನ್ನ ಹೇಳಿಕೆಗಳನ್ನು ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದೆ. ಈ ಹಿಂದಿನ ಯುಪಿಎ ಸರ್ಕಾರದ ಅವಧಿಯಿಂದಲೂ ತನ್ನ ಆಂತರಿಕ ವ್ಯವಹಾರಗಳ ಕುರಿತಾದ ಮೂರನೇ ದೇಶದ ವರದಿ ಅಥವಾ ಅಭಿಪ್ರಾಯಗಳನ್ನು ಭಾರತವು ನಿರಂತರವಾಗಿ ಪರಿಗಣಿಸುತ್ತಿಲ್ಲ. ಅಲ್ಲದೆ, ಆಯೋಗದ ಸದಸ್ಯರಿಗೆ ಭಾರತಕ್ಕೆ ಬರಲು ವೀಸಾ ನಿರಾಕರಿಸಲಾಗುತ್ತಿದೆ.