'ಡ್ಯಾನಿಶ್ ಸಿದ್ದಿಕಿ ಗುರುತು ಪತ್ತೆಹಚ್ಚಿ, ಬಳಿಕ ಕ್ರೂರವಾಗಿ ಕೊಂದ ತಾಲಿಬಾನ್': ವರದಿ
ವಾಷಿಂಗ್ಟನ್, ಜು. 30: ಪುಲಿಟ್ಜರ್ ಪ್ರಶಸ್ತಿ ವಿಜೇತ ಫೋಟೋ ಜರ್ನಲಿಸ್ಟ್ ಡ್ಯಾನಿಶ್ ಸಿದ್ದಿಕಿ ಅಫ್ಘಾನಿಸ್ತಾನದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿಲ್ಲ. ಘರ್ಷಣೆ ಸಂದರ್ಭ ಗುಂಡು ತಗುಲಿ ಸಾವನ್ನಪ್ಪಿಲ್ಲ. ಆದರೆ ತಾಲಿಬಾನಿಗರು ಡ್ಯಾನಿಶ್ ಸಿದ್ದಿಕಿ ಗುರುತನ್ನು ಪರಿಶೀಲನೆ ಮಾಡಿ, "ಕ್ರೂರವಾಗಿ ಕೊಂದಿದೆ" ಎಂದು ಅಮೆರಿಕದ ನಿಯತಕಾಲಿಕವೊಂದರಲ್ಲಿ ಗುರುವಾರ ಪ್ರಕಟವಾದ ವರದಿಯಲ್ಲಿ ತಿಳಿಸಲಾಗಿದೆ.
38 ವರ್ಷ ಪ್ರಾಯದ ಸಿದ್ದಿಕಿ ನಿಧನರಾದಾಗ ಅಫ್ಘಾನಿಸ್ತಾನದಲ್ಲಿ ಇದ್ದರು. ಕಂದಹಾರ್ ನಗರದ ಸ್ಪಿನ್ ಬೋಲ್ಡಾಕ್ ಜಿಲ್ಲೆಯಲ್ಲಿ ಅಫ್ಘಾನ್ ಪಡೆಗಳು ಮತ್ತು ತಾಲಿಬಾನ್ ನಡುವೆ ಘರ್ಷಣೆ ಸಂಭವಿಸಿದಾಗ ಪ್ರಶಸ್ತಿ ವಿಜೇತ ಪತ್ರಕರ್ತ ಕೊಲ್ಲಲ್ಪಟ್ಟರು ಎಂದು ಈ ಹಿಂದೆ ವರದಿಯಾಗಿದೆ.
ಅಫ್ಘಾನಿಸ್ತಾನ ಘರ್ಷಣೆಯಲ್ಲಿ ಭಾರತೀಯ ಫೋಟೊ ಜರ್ನಲಿಸ್ಟ್ ಡ್ಯಾನಿಶ್ ಸಿದ್ದಿಕಿ ಮೃತ್ಯು
ಆದರೆ ವಾಷಿಂಗ್ಟನ್ ಎಕ್ಸಾಮಿನರ್ ವರದಿಯ ಪ್ರಕಾರ, ಪಾಕಿಸ್ತಾನದ ಮೂಲಕ ಗಡಿ ನುಸುಳುವಿಕೆಯನ್ನು ನಿಯಂತ್ರಿಸಲು ಅಫ್ಘಾನ್ ಪಡೆಗಳು ಮತ್ತು ತಾಲಿಬಾನ್ ನಡುವಿನ ಹೋರಾಟದ ವಿಡಿಯೋ ಹಾಗೂ ಚಿತ್ರಗಳನ್ನು ಸೆರೆಹಿಡಿಯಲು ಸಿದ್ದಿಕಿ ಅಫ್ಘಾನ್ ರಾಷ್ಟ್ರೀಯ ಸೇನಾ ತಂಡದೊಂದಿಗೆ ಸ್ಪಿನ್ ಬೋಲ್ಡಾಕ್ ಪ್ರದೇಶಕ್ಕೆ ಪ್ರಯಾಣ ಬೆಳೆಸಿದ್ದರು.
ಆ ಬಳಿಕ ಅಫ್ಘಾನಿಸ್ತಾನದ ಕಂದಹಾರ್ನಲ್ಲಿ ಭದ್ರತಾ ಪಡೆಗಳೊಂದಿಗೆ ತಾಲಿಬಾನ್ ನಡೆಸಿದ ಘರ್ಷಣೆಯ ಸಂದರ್ಭ ಭದ್ರತಾ ಪಡೆಯೊಂದಿಗೆ ಇದ್ದ ಪುಲಿಟ್ಜೆರ್ ಪ್ರಶಸ್ತಿ ಪುರಸ್ಕೃತ ಭಾರತೀಯ ಫೋಟೊ ಜರ್ನಲಿಸ್ಟ್ ಡ್ಯಾನಿಶ್ ಸಿದ್ದಿಕಿ ಗುರುವಾರ ಸಾವನ್ನಪ್ಪಿದ್ದಾರೆ ಎಂದು ಅಫ್ಘಾನಿಸ್ತಾನದ ಭಾರತದ ರಾಯಭಾರಿ ಫರೀದ್ ಮಾಮುಂಡ್ಜೇ ಟ್ವಿಟ್ಟರ್ನಲ್ಲಿ ತಿಳಿಸಿದ್ದರು.
ಕಸ್ಟಮ್ಸ್ ಪೋಸ್ಟ್ನ ಮೂರನೆಯ ಒಂದು ಮೈಲಿ ಒಳಗೆ ಹೋದಾಗ, ತಾಲಿಬಾನ್ ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ತಂಡವು ಬೇರ್ಪಟ್ಟಿತ್ತು ಎನ್ನಲಾಗಿದೆ. ಸಿದ್ದಕಿ ಜೊತೆಯಲ್ಲಿದ್ದ ಕಮಾಂಡರ್ ಮತ್ತು ಕೆಲವು ಇತರ ವ್ಯಕ್ತಿಗಳು ಬೇರ್ಪಟ್ಟರು ಎಂದು ವರದಿ ತಿಳಿಸಿದೆ. ಬಳಿಕ ಸಿದ್ದಿಕಿ ಮೂವರು ಅಫ್ಘಾನ್ ಪಡೆಯ ವ್ಯಕ್ತಿಗಳ ಜೊತೆ ಉಳಿದರು ಎಂದು ಹೇಳಲಾಗಿದೆ.
ತಾಲಿಬಾನ್ ದಾಳಿಗೆ ತತ್ತರಿಸಿದ ಅಫ್ಘಾನ್ ಮೇಲೆ ಭಾರತದ ಹೂಡಿಕೆ ಎಷ್ಟು?: ಇಲ್ಲಿದೆ ಸಂಪೂರ್ಣ ವಿವರ
ಈ ದಾಳಿಯ ಸಂದರ್ಭದಲ್ಲಿ ಡ್ಯಾನಿಶ್ ಸಿದ್ದಿಕಿ ಒಂದು ಗುಂಡು ತಗುಲಿದೆ. ಈ ಕಾರಣದಿಂದಾಗಿ ಡ್ಯಾನಿಶ್ ಸಿದ್ದಿಕಿ ಮತ್ತು ತಂಡವು ಸ್ಥಳೀಯ ಮಸೀದಿಗೆ ಹೋಗಿ ಅಲ್ಲಿ ಪ್ರಥಮ ಚಿಕಿತ್ಸೆ ಪಡೆದಿದ್ದಾರೆ. ಆದರೆ ಒಬ್ಬ ಪತ್ರಕರ್ತ ಮಸೀದಿಯಲ್ಲಿದ್ದನೆಂಬ ಸುದ್ದಿ ಹರಡುತ್ತಿದ್ದಂತೆ, ತಾಲಿಬಾನ್ ದಾಳಿ ಮಾಡಿತು. ಸ್ಥಳೀಯ ತನಿಖೆಯ ಪ್ರಕಾರ ತಾಲಿಬಾನ್ಗಳು ಮಸೀದಿಯ ಮೇಲೆ ದಾಳಿ ನಡೆಸಿರುವುದು ಸಿದ್ದಿಕಿ ಮಸೀದಿಯಲ್ಲಿ ಇದ್ದಾರೆ ಎಂಬ ಕಾರಣದಿಂದಾಗಿ ಮಾತ್ರ ಎಂದು ಅಮೆರಿಕದ ನಿಯತಕಾಲಿಕವೊಂದರಲ್ಲಿ ಪ್ರಕಟವಾದ ವರದಿಯಲ್ಲಿ ತಿಳಿಸಲಾಗಿದೆ.
"ತಾಲಿಬಾನ್ ಆತನನ್ನು ಸೆರೆಹಿಡಿದಾಗ ಸಿದ್ದಿಕಿ ಜೀವಂತವಾಗಿದ್ದ. ತಾಲಿಬಾನ್ ಸಿದ್ದಿಕಿ ಗುರುತನ್ನು ಪರಿಶೀಲಿಸಿದ ನಂತರ ಆತನನ್ನು ಮತ್ತು ಆತನ ಜೊತೆಗಿದ್ದವರನ್ನು ಗಲ್ಲಿಗೇರಿಸಿತು. ಕಮಾಂಡರ್ ಮತ್ತು ಆತನ ತಂಡದ ಉಳಿದವರು ಆತನನ್ನು ರಕ್ಷಿಸಲು ಪ್ರಯತ್ನಿಸಿದಾಗ ಸಾವನ್ನಪ್ಪಿದರು," ಎಂದು ಅದು ಹೇಳಿದೆ.
"ವ್ಯಾಪಕವಾಗಿ ಪ್ರಸಾರವಾದ ಸಾರ್ವಜನಿಕ ಛಾಯಾಚಿತ್ರವು ಸಿದ್ದಿಕಿ ಮುಖವನ್ನು ಗುರುತಿಸುವುದನ್ನು ತೋರಿಸುತ್ತದೆ. ನಾನು ಇತರ ಛಾಯಾಚಿತ್ರಗಳನ್ನು ಪರಿಶೀಲಿಸಿದ್ದೇನೆ ಮತ್ತು ಸಿದ್ದಿಕಿ ಶವದ ವೀಡಿಯೋವನ್ನು ಕೂಡಾ ಪರಿಶೀಲಿಸಿದ್ದೇನೆ. ತಾಲಿಬಾನ್ ಸಿದ್ದಿಕಿಯನ್ನು ತಲೆಯ ಸುತ್ತ ಹೊಡೆದು ನಂತರ ಆತನ ದೇಹಕ್ಕೆ ಗುಂಡುಗಳನ್ನು ಹೊಡೆದಿದೆ," ಅಮೇರಿಕನ್ ಎಂಟರ್ಪ್ರೈಸ್ ಇನ್ಸ್ಟಿಟ್ಯೂಟ್ನ ಹಿರಿಯ ಸಹವರ್ತಿ ಮೈಕೆಲ್ ರೂಬಿನ್ ಬರೆದಿದ್ದಾರೆ.
ಸಿದ್ದಿಕಿಯನ್ನು ಬೇಟೆಯಾಡಿ ಮರಣದಂಡನೆ ಮಾಡುವ ತಾಲಿಬಾನ್ ನಿರ್ಧಾರ ಮತ್ತು ನಂತರ ದೇಹವನ್ನು ವಿರೂಪಗೊಳಿಸಿರುವುದು, ತಾಲಿಬಾನಿಗರು ಯುದ್ಧದ ನಿಯಮಗಳನ್ನು ಅಥವಾ ಜಾಗತಿಕ ಸಮುದಾಯದ ನಡವಳಿಕೆಯನ್ನು ನಿಯಂತ್ರಿಸುವ ಸಂಪ್ರದಾಯಗಳನ್ನು ಗೌರವಿಸುವುದಿಲ್ಲ ಎಂದು ತೋರಿಸುತ್ತದೆ ಎಂದು ವರದಿ ತಿಳಿಸಿದೆ.
ಸಿದ್ದಿಕಿ ರೊಹಿಂಗ್ಯಾ ಬಿಕ್ಕಟ್ಟಿನ ಸಂದರ್ಭ ರಾಯಿಟರ್ಸ್ ತಂಡದ ಭಾಗವಾಗಿದ್ದರು. 2018 ರಲ್ಲಿ ಪುಲಿಟ್ಜರ್ ಪ್ರಶಸ್ತಿಯನ್ನು ಗೆದ್ದರು. ಅಫ್ಘಾನಿಸ್ತಾನ ಸಂಘರ್ಷ, ಹಾಂಗ್ ಕಾಂಗ್ ಪ್ರತಿಭಟನೆಗಳು ಮತ್ತು ಏಷ್ಯಾ, ಮಧ್ಯಪ್ರಾಚ್ಯ ಮತ್ತು ಯುರೋಪಿನ ಇತರ ಪ್ರಮುಖ ಘಟನೆಗಳ ಛಾಯಾಚಿತ್ರವನ್ನು ಸಿದ್ದಿಕಿ ತೆಗೆದಿದ್ದಾರೆ.
ಜುಲೈ 18 ರಂದು ದೆಹಲಿ ವಿಮಾನ ನಿಲ್ದಾಣಕ್ಕೆ ಸಿದ್ದಿಕಿ ಮೃತ ದೇಹ ಬಂದಿದ್ದು, ಬಳಿಕ ಜಾಮಿಯಾ ನಗರದಲ್ಲಿರುವ ಸಿದ್ದಿಕಿ ಮನೆಗೆ ತರಲಾಗಿತ್ತು. ಪಾರ್ಥಿವ ಶರೀರವನ್ನು ಜಾಮಿಯಾ ಮಿಲಿಯಾ ಇಸ್ಲಾಮಿಯಾ ಸ್ಮಶಾನದಲ್ಲಿ ಸಮಾಧಿ ಮಾಡಲಾಯಿತು. ಅಲ್ಲಿ ಅನೇಕ ಮಂದಿ ಅಂತಿಮ ನಮನ ಸಲ್ಲಿಸಿದರು.
(ಒನ್ಇಂಡಿಯಾ ಸುದ್ದಿ)