'ಮ.ಮೋ.ಸಿಂಗ್- ರಘುರಾಮ್ ರಾಜನ್ ಕಾಲದಲ್ಲಿ ಬ್ಯಾಂಕ್ ಗಳ ಸ್ಥಿತಿ ಕೆಟ್ಟದಾಗಿತ್ತು'
ನ್ಯೂಯಾರ್ಕ್, ಅಕ್ಟೋಬರ್ 16: ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ ಹಾಗೂ ಆರ್ ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದ ಕಾಲದಲ್ಲಿ ಭಾರತದ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳು 'ಕೆಟ್ಟ ಕಾಲವನ್ನು' ಕಂಡವು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಆರೋಪಿಸಿದ್ದಾರೆ.
ಕೊಲಂಬಿಯಾ ಯೂನಿವರ್ಸಿಟಿ ಸ್ಕೂಲ್ ಆಫ್ ಇಂಟರ್ ನ್ಯಾಷನಲ್ ಅಂಡ್ ಪಬ್ಲಿಕ್ ಅಫೇರ್ಸ್ ನಲ್ಲಿ ಮಾತನಾಡಿ, ಎಲ್ಲ ಸಾರ್ವಜನಿಕ ವಲಯದ ಬ್ಯಾಂಕ್ ಗಳಿಗೆ 'ಜೀವದಾನ' ನೀಡುವುದು ಮೊದಲ ಕರ್ತವ್ಯ ಆಗಿದೆ ಎಂದು ಆಕೆ ಹೇಳಿದ್ದಾರೆ.
ನಿರ್ಮಲಾ ಸೀತಾರಾಮನ್ ನಿರ್ಧಾರವನ್ನು ಹೊಗಳಿದ ಆನಂದ್ ಮಹೀಂದ್ರಾ
ಪ್ರತಿಕ್ರಿಯೆ ನೀಡುವುದಕ್ಕೆ ಕೆಲ ನಿಮಿಷ ತೆಗೆದುಕೊಳ್ತೀನಿ. ಅದ್ಭುತ ತಜ್ಞರಾಗಿ ರಘುರಾಮ್ ರಾಜನ್ ಅವರನ್ನು ನಾನು ಗೌರವಿಸುತ್ತೇನೆ. ಆದ್ದರಿಂದ ಭಾರತದ ಆರ್ಥಿಕತೆ ಸಂಕಷ್ಟದಲ್ಲಿದ್ದಾಗ ರಿಸರ್ವ್ ಬ್ಯಾಂಕ್ ಗೆ ಅವರನ್ನು ಆಯ್ಕೆ ಮಾಡಲಾಯಿತು ಎಂದು ನಿರ್ಮಲಾ ಹೇಳಿದ್ದಾರೆ.
ತಮ್ಮ ಅಧಿಕಾರದ ಎರಡನೇ ಅವಧಿಯಲ್ಲಿ ನರೇಂದ್ರ ಮೋದಿ ಅವರ ಸರ್ಕಾರವು ಆರ್ಥಿಕತೆಗೆ ಬೇಕಾದದ್ದನ್ನು ಮಾಡಲಿಲ್ಲ. ನಾಯಕತ್ವ ಕೇಂದ್ರೀಕೃತವಾಗಿತ್ತು. ಆರ್ಥಿಕ ಪ್ರಗತಿ ಹೇಗೆ ಸಾಧಿಸಬೇಕು ಎಂಬ ಸ್ಪಷ್ಟ ದೃಷ್ಟಿಕೋನದ ಕೊರತೆ ಇತ್ತು ಎಂದು ಈಚೆಗೆ ರಘುರಾಮ್ ರಾಜನ್ ಹೇಳಿದ್ದರ ಬಗ್ಗೆ ಪ್ರಶ್ನಿಸಲಾಯಿತು.
ಅದಕ್ಕೆ ಉತ್ತರಿಸಿದ ನಿರ್ಮಲಾ ಸೀತಾರಾಮನ್, ರಘುರಾಮ್ ರಾಜನ್ ಅವರು ರಿಸರ್ವ್ ಬ್ಯಾಂಕ್ ಅಧ್ಯಕ್ಷರಾಗಿದ್ದ ಸಮಯದಲ್ಲಿ ಬ್ಯಾಂಕ್ ಸಾಲಗಳ ಸಮಸ್ಯೆ ಇತ್ತು. ಕೆಲವು ನಾಯಕರ ಫೋನ್ ಕರೆಗಳ ಆಧಾರದಲ್ಲಿ ಸಾಲ ನೀಡಲಾಗುತ್ತಿತ್ತು. ಇಂದಿಗೂ ಸಾರ್ವಜನಿಕ ವಲಯದ ಬ್ಯಾಂಕ್ ಗಳು ಸರ್ಕಾರದಿಂದ ಬರುವ ಹಣದ ಮೂಲಕವೇ ಸಮಸ್ಯೆಯಿಂದ ಹೊರಬರಲು ಎದುರು ನೋಡುತ್ತವೆ ಎಂದರು.
ಮನ್ ಮೋಹನ್ ಸಿಂಗ್ ಪ್ರಧಾನಿ ಆಗಿದ್ದರು. ಆಗ ಸ್ಪಷ್ಟ ದೃಷ್ಟಿಕೋನ ಇತ್ತು ಎಂದು ರಘುರಾಮ್ ಅವರು ಒಪ್ಪಿಕೊಳ್ಳುತ್ತಾರಾ ಎಂದು ನಿರ್ಮಲಾ ಸೀತಾರಾಮನ್ ಹೇಳಿದಾಗ ದೊಡ್ಡ ಮಟ್ಟದಲ್ಲಿ ನಗು ತೇಲಿಬಂತು.
ಈ ಮಾತನ್ನು ಗೌರವದಿಂದಲೇ ಹೇಳ್ತಿದ್ದೀನಿ. ಯಾರನ್ನೂ ನಾನು ತಮಾಷೆ ಮಾಡ್ತಿಲ್ಲ. ಈ ರೀತಿ ಅಭಿಪ್ರಾಯಗಳು ಬರುತ್ತವೆ ಎಂದು ಹೇಳಿದ್ದೀನಿ. ರಘುರಾಮ್ ರಾಜನ್ ಹೇಳಿದ ಪ್ರತಿ ಪದದ ಮೇಲೂ ಅನುಮಾನ ಪಡಲು ಕಾರಣಗಳಿಲ್ಲ ಎಂದರು.