'ಪಾಕಿಸ್ತಾನವು ಜಾಗತಿಕವಾಗಿ ಭಯೋತ್ಪಾದಕರನ್ನು ಉತ್ಪಾದಿಸುತ್ತಿದೆ'
ನವದೆಹಲಿ, ಆಗಸ್ಟ್ 04: ಪಾಕಿಸ್ತಾನವು ಭಯೋತ್ಪಾದಕರನ್ನು ಉತ್ಪಾದಿಸುತ್ತಿದೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ಟಿಎಸ್ ತಿರುಮೂರ್ತಿ ಆರೋಪ ಮಾಡಿದ್ದಾರೆ.
ಪಾಕಿಸ್ತಾನವು ಭಯೋತ್ಪಾಕರ ಜಾಗತಿಕ ರಾಜಧಾನಿಯಾಗಿದೆ. ಜಾಗತಿಕವಾಗಿ ಭಯೋತ್ಪಾದನಾ ಸಂಸ್ಥೆಗಳು ಎಂದು ಘೋಷಿಸಲಾಗಿರುವ ಜಮಾತ್ ಉದ್ ದವಾ, ಲಷ್ಕರ್ ಎ ತೊಯ್ಬಾ, ಜೈಷ್ ಎ ಮೊಹಮ್ಮದ್ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಸೇರಿ ಅನೇಕ ಭಯೋತ್ಪಾದನಾ ಸಂಸ್ಥೆಗಳ ಪಾಕಿಸ್ತಾನವನ್ನು ಸುರಕ್ಷಿತ ಅಡಗುತಾಣವನ್ನಾಗಿ ಮಾಡಿಕೊಂಡಿವೆ ಎಂದು ಆರೋಪಿಸಿದ್ದಾರೆ.
ಜಲಾಲಾಬಾದ್ ಜೈಲಿನಲ್ಲಿ ರಕ್ತದೋಕುಳಿ ಹರಿಸಿದ ಉಗ್ರ
ಕಳೆದ ಏಪ್ರಿಲ್ನಲ್ಲಿ ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ಪ್ರತಿನಿಧಿಯಾಗಿ ನೇಮಕಗೊಂಡಿರುವ ತಿರುಮೂರ್ತಿ ಅವರು ಸೈಯದ್ ಅಕ್ಬರುದ್ದೀನ್ ಅವರಿಂದ ತೆರವಾಗಲಿರುವ ಸ್ಥಾನವನ್ನು ತುಂಬಲಿದ್ದಾರೆ.
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರೇ ಖುದ್ದಾಗಿ ತಮ್ಮ ರಾಷ್ಟ್ರದಲ್ಲಿ 40 ಸಾವಿರ ಉಗ್ರರು ಇರುವುದಾಗಿ ಅಧಿಕೃತ ಹೇಳಿಕೆ ನೀಡಿದ್ದಾರೆ. ಅಲ್ಖೈದಾ ಮತ್ತು ಐಸಿಸ್ ಸೇರಿ ಜಾಗತಿಕ ಭಯೋತ್ಪಾದನಾ ಸಂಸ್ಥೆಗಳಿಗೆ ಪಾಕಿಸ್ತಾನದಿಂದ ಧನಸಹಾಯ ಹೋಗುತ್ತದೆ ಎಂಬ ಸಂಗತಿಯನ್ನು ವಿಶ್ವಸಂಸ್ಥೆಯ ಅನಲಿಟಿಕಲ್ ಸಪೋರ್ಟ್ ಆ್ಯಂಡ್ ಸ್ಯಾಂಕ್ಷನ್ಸ್ ಮಾನಿಟರಿಂಗ್ ಟೀಮ್ನ 26ನೇ ವರದಿಯಲ್ಲಿ ತಿಳಿಸಲಾಗಿದೆ ಎಂದು ಪ್ರಸ್ತಾಪಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ವಿವಾದವನ್ನು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಸ್ತಾಪಿಸುವ ಪಾಕ್ನ ಪ್ರಯತ್ನಗಳು ಹೊಸದೇನಲ್ಲ. ಆದರೆ, ಪಾಕ್ನ ವಿದೇಶಾಗ ಸಚಿವರು ಇತ್ತೀಚೆಗೆ ಈ ವಿಷಯವಾಗಿ ತೆಳೆದಿರುವ ವಿಷಯಕ್ಕೆ ವಿರುದ್ಧವಾಗಿ, 1965ರ ನಂತರದಲ್ಲಿ ಭಾರತ ಮತ್ತು ಪಾಕ್ ವಿವಾದಗಳ ಕುರಿತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆ ನಡೆದಿಲ್ಲ ಎಂದು ತಿಳಿಸಿದ್ದಾರೆ.
ಐಸಿಸ್ ಮತ್ತು ಅಲ್ಖೈದಾ ಸಂಘಟನೆಗಳ ಬಗ್ಗೆ ವರದಿಗಳನ್ನು ಸಲ್ಲಿಸಲಾಗುತ್ತದೆ. 1267 ಸಮಿತಿಯ ವ್ಯಾಪ್ತಿಯಲ್ಲಿ ಮಾಹಿತಿ ಸಲ್ಲಿಸಲಾಗುತ್ತಿದೆ. ಇಂತಹ ಸಂಘಟನೆಗಳಿಗೆ ಆಶ್ರಯ ನೀಡಿ, ಪೋಷಿಸುವ ವಿಷಯದಲ್ಲಿ ಪಾಕಿಸ್ತಾನದ ನೇರ ಪಾಲ್ಗೊಳ್ಳುವಿಕೆ ಕುರಿತು ಈ ವರದಿಗಳಲ್ಲಿ ಪ್ರಸ್ತಾಪವಾಗುತ್ತಲೇ ಇವೆ ಎಂದು ತಿಳಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ವಿವಾದಗಳನ್ನು ಜಾಗತಿಕರಣಗೊಳಿಸುವ ಪಾಕಿಸ್ತಾನದ ಪ್ರಯತ್ನಗಳನ್ನು ತಿರುಮೂರ್ತಿ ಟೀಕಿಸಿದ್ದಾರೆ. ಪಾಕಿಸ್ತಾನದ ಈ ರೀತಿಯ ಎಲ್ಲ ಪ್ರಯತ್ನಗಳು ವಿಫಲವಾಗಿವೆ ಎಂದು ಹೇಳಿದ್ದಾರೆ.