ಲಖಿಂಪುರ್ ಖೇರಿಯಲ್ಲಿ ನಡೆದ ರೈತರ ಹತ್ಯೆ ಖಂಡಿಸಿದ ನಿರ್ಮಲಾ ಸೀತಾರಾಮನ್
ವಾಷಿಂಗ್ಟನ್, ಅಕ್ಟೋಬರ್ 13: ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ನಡೆದ ರೈತರ ಹತ್ಯೆಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಖಂಡಿಸಿದ್ದಾರೆ.
ಅಮೆರಿಕೆಗೆ ಸರ್ಕಾರದ ಕೆಲಸದ ನಿಮಿತ್ತ ಭೇಟಿ ನೀಡಿರುವ ನಿರ್ಮಲಾ ಸೀತಾರಾಮನ್ ಬೋಸ್ಟನ್ ನಲ್ಲಿದ್ದು, ಹಾರ್ವರ್ಡ್ ಕೆನಡಿ ಸ್ಕೂಲ್ ನಲ್ಲಿ ನಡೆದ ಸಂವಾದಲ್ಲಿ ಮಾತನಾಡುತ್ತ ಈ ಹೇಳಿಕೆ ನೀಡಿದ್ದಾರೆ. ಸಂವಾದದಲ್ಲಿ ಲಖಿಂಪುರದ ಹಿಂಸಾಚಾರದ ಬಗ್ಗೆ ನಿರ್ಮಲಾ ಸೀತಾರಾಮನ್ ಅವರಿಗೆ ಪ್ರಶ್ನೆ ಕೇಳಲಾಗಿತ್ತು.
ಯುಪಿ ರೈತರ ಹತ್ಯೆ: 'ಕೇವಲ ಒಂದು ಸಹಾನುಭೂತಿಯ ಮಾತು ಸಾಕು ಮೋದಿಜಿ' ಎಂದ ಸಿಬಲ್
ಈ ಘಟನೆ ಬಗ್ಗೆ ಪ್ರಧಾನಿ ಹಾಗೂ ಹಿರಿಯ ಸಚಿವರು ಮೌನವೇಕೆ ವಹಿಸಿದ್ದಾರೆ?. ಪ್ರಧಾನಿ ಹಾಗೂ ಹಿರಿಯ ಸಚಿವರು ಏಕೆ ಈ ರೀತಿಯ ಘಟನೆಗಳ ಬಗ್ಗೆ ಒಂದೇ ಒಂದು ಮಾತನ್ನೂ ಆಡುತ್ತಿಲ್ಲ? ಇಂತಹ ಘಟನೆಗಳ ಬಗ್ಗೆ ಪ್ರಶ್ನಿಸಿದಾಗ ಏಕೆ ರಕ್ಷಣಾತ್ಮಕ ಪ್ರತಿಕ್ರಿಯೆ ಬರುತ್ತಿದೆ ಎಂಬುದೇ ಮೊದಲಾದ ಪ್ರಶ್ನೆಗಳನ್ನು ನಿರ್ಮಲಾ ಸೀತಾರಾಮನ್ ಅವರನ್ನು ಕೇಳಲಾಯಿತು.
"ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಲಖಿಂಪುರ ಖೇರಿ ಹಿಂಸಾಚಾರ ಘಟನೆ ಖಂಡನೀಯವಾದದ್ದು ನಮ್ಮಲ್ಲಿ ಪ್ರತಿಯೊಬ್ಬರೂ ಅದನ್ನೇ ಹೇಳುತ್ತಿದ್ದಾರೆ. ಹಾಗೆಯೇ ಬೇರೆ ಕಡೆಗಳಲ್ಲಿ ಇಂತಹ ಘಟನೆಗಳು ನಡೆದಾಗಲೂ ಅದು ಆತಂಕದ ವಿಷಯವೇ ಆಗಿರುತ್ತದೆ" ಎಂದು ಹೇಳಿದ್ದಾರೆ.
ಭಾರತದಲ್ಲಿ ಹಲವು ಭಾಗಗಳಲ್ಲಿ ಈ ರೀತಿಯ ಘಟನೆಗಳು ನಡೆದಿವೆ. ಅಮಾರ್ತ್ಯಸೇನ್ ಸೇರಿದಂತೆ ಭಾರತವನ್ನು ತಿಳಿದಿರುವ ನೀವೆಲ್ಲರೂ ಕೇವಲ ಬಿಜೆಪಿ ಸರ್ಕಾರವಿರುವ ಉತ್ತರ ಪ್ರದೇಶದಲ್ಲಿಯಷ್ಟೇ ಅಲ್ಲದೇ ಇತರ ಭಾಗಗಳಲ್ಲಿ ನಡೆದ ಕೃತ್ಯಗಳ ಬಗ್ಗೆ ಧ್ವನಿ ಎತ್ತಬೇಕೆಂದು ನಿರೀಕ್ಷಿಸುವೆ.
ಈಗ ನನ್ನ ಸಂಪುಟ ಸಹೋದ್ಯೋಗಿಯ ಪುತ್ರ ಬಹುಶಃ ಸಮಸ್ಯೆಗೆ ಸಿಲುಕಿರಬಹುದು ಹಾಗೂ ಅದು ಅವರಲ್ಲದೇ ಬೇರೆ ಯಾರೂ ಮಾಡಿಲ್ಲದೇ ಇರಬಹುದು ಆದರೆ ಕಾನೂನಿನ ಪ್ರಕ್ರಿಯೆಗಳು ಪೂರ್ಣಗೊಂಡು ನೈಜತೆ ಸಾಬೀತಾಗಬೇಕು" ಎಂದು ಸೀತಾರಾಮನ್ ಹೇಳಿದ್ದಾರೆ.
ಬಿಜೆಪಿ ಸರ್ಕಾರವಿರುವ ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂಬ ಕಾರಣಕ್ಕೆ ಅಷ್ಟೇ ಅಲ್ಲದೇ ದೇಶದ ಯಾವುದೇ ಭಾಗದಲ್ಲಿ ಈ ರೀತಿಯ ಘಟನೆಗಳು ನಡೆದರೂ ಅದರ ಬಗ್ಗೆ ಧ್ವನಿ ಎತ್ತಬೇಕು ಎಂದು ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟಿದ್ದಾರೆ.
ಭಾರತದ ವಿವಿಧ ಭಾಗಗಳಲ್ಲಿ ಇಂಥದ್ದೇ ಹಲವು ಸಮಸ್ಯೆಗಳಿವೆ ಪ್ರತಿ ಬಾರಿ ಸಮಸ್ಯೆ ಸೃಷ್ಟಿಯಾದಾಗಲೂ ಖ್ಯಾತ ಅರ್ಥ ಶಾಸ್ತ್ರಜ್ಞ ಡಾ. ಅಮಾರ್ಥ್ಯಸೇನ್ ಸೇರಿದಂತೆ ಭಾರತವನ್ನು ಸರಿಯಾಗಿ ಬಲ್ಲವರೆಲ್ಲರೂ ಆ ಬಗ್ಗೆ ಧ್ವನಿ ಎತ್ತಬೇಕು.
ಈ ಘಟನೆ ಸಂಪೂರ್ಣವಾಗಿ ಖಂಡನೀಯವಾದದ್ದು, ನಮ್ಮಲ್ಲಿ ಎಲ್ಲರೂ ಅದನ್ನೇ ಹೇಳುತ್ತಿದ್ದಾರೆ, ಆದರೆ ಇದೇ ರೀತಿ ದೇಶದ ಬೇರೆ ಕಡೆ ಇಂಥದ್ದೇ ಘಟನೆಗಳು ಸಂಭವಿಸಿದಾಗ ಅವುಗಳನ್ನು ಏಕೆ ಅಮಾನವಾಗಿ ನೋಡುವುದಿಲ್ಲ ಎನ್ನುವ ಪ್ರಶ್ನೆ ಕಾಡುತ್ತಿದೆ ಎಂದರು.
ಈಗ ನನ್ನ ಸಚಿವ ಸಂಪುಟದ ಸಹೋದ್ಯೋಗಿಯ ಮಗ ಬಹುಶಃ ತೊಂದರೆಯಲ್ಲಿದ್ದಾನೆ ಅನಿಸುತ್ತಿದೆ. ಆ ಘಟನೆಗೆ ಆತನೇ ಕಾರಣ , ಬೇರೆ ಯಾರೂ ಅಲ್ಲ ಎಂದು ಅಂದಾಜಿಸಲಾಗುತ್ತಿದೆ. ನ್ಯಾಯಾಲಯದಲ್ಲಿ ಈ ಕುರಿತು ವಿಚಾರಣೆ ನಡೆಯುತ್ತಿದ್ದು, ಈ ಆರೋಪದ ಬಗ್ಗೆ ಸ್ಪಷ್ಟ ಮಾಹಿತಿ ದೊರೆಯಲಿದೆ ಎಂದು ಹೇಳಿದರು.
ಲಖಿಂಪುರ್ ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ ಎಂಟು ಜನರು ಸಾವನ್ನಪ್ಪಿದ್ದರು. ಇನ್ನೂ ಹಲವರು ಗಾಯಗೊಂಡಿದ್ದಾರೆ. ಮೃತಪಟ್ಟವರಲ್ಲಿ ನಾಲ್ವರು ರೈತರಾಗಿದ್ದು, ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರನ್ನು ಸ್ವಾಗತಿಸಲು ಬಿಜೆಪಿ ಕಾರ್ಯಕರ್ತರು ಓಡಿಸುತ್ತಿದ್ದ ವಾಹನಗಳನ್ನು ರೈತರ ಮೇಲೆ ಹರಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೆ, ಆ ಎರಡು ಕಾರುಗಳಲ್ಲಿ ಒಂದು ಕಾರನ್ನು ಓಡಿಸುತ್ತಿದ್ದುದು ಕೇಂದ್ರ ಗೃಹ ಸಚಿವಾಲಯದ ರಾಜ್ಯ ಖಾತೆ ಸಚಿವ ಅಜಯ್ ಮಿಶ್ರಾ ಅವರ ಮಗ ಆಶಿಶ್ ಮಿಶ್ರಾ ಎಂದು ರೈತರು ಆರೋಪಿಸಿದ್ದರು. ಹೀಗಾಗಿ, ಆತನನ್ನು ಬಂಧಿಸಬೇಕೆಂಬ ಒತ್ತಾಯ ಹೆಚ್ಚಾಗಿತ್ತು.
ಲಖಿಂಪುರ ಖೇರಿಯ ಹಿಂಸಾಚಾರದ ಬಳಿಕ ಅಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇಲ್ಲಿ ಮೃತಪಟ್ಟವರ ಕುಟುಂಬಗಳನ್ನು ಭೇಟಿಯಾಗಲು ಬಂದಿದ್ದ ಪ್ರಿಯಾಂಕಾ ಗಾಂಧಿ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ತಂದೆಯ ಊರು ಲಖೀಂಪುರ ಖೇರಿಯ ಟಿಕೂನಿಯಾ ಎಂಬಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರು ಮುಖ್ಯ ಅತಿಥಿಯಾಗಿ ಆಗಮಿಸಬೇಕಿತ್ತು. ಆದರೆ ಕೇಶವ ಪ್ರಸಾದ್ ಇದ್ದ ಕಾರನ್ನು ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರು ತಡೆದಿದ್ದರು.