ಮಾತು ಸಾಕು, ಕೆಲಸ ಜಾಸ್ತಿ ಮಾಡಬೇಕಿದೆ: ಪ್ರಧಾನಿ ಮೋದಿ
ನ್ಯೂಯಾರ್ಕ್, ಸೆಪ್ಟೆಂಬರ್ 23: 'ಹವಾಮಾನ ವೈಪರೀತ್ಯದಂತಹ ಗಂಭೀರ ಸವಾಲುಗಳನ್ನು ನಾವು ಕಡಿಮೆಗೊಳಿಸಬೇಕು ಎಂಬುದನ್ನು ನಾವು ಒಪ್ಪಿಕೊಳ್ಳಲೇಬೇಕಿದೆ. ಈಗಿನ ಸಂದರ್ಭದಲ್ಲಿ ನಾವು ಮಾಡುತ್ತಿರುವುದು ಏನಕ್ಕೂ ಸಾಲದು. ನಾವು ಮಾತನಾಡುವುದಕ್ಕಿಂತ ಅದನ್ನು ಕಾರ್ಯರೂಪಕ್ಕೆ ತರುವುದು ಅಗತ್ಯವಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ವಿಡಿಯೋ: 'ಹೌಡಿ ಮೋದಿ' ಯಲ್ಲಿ ಕನ್ನಡ ಸೇರಿ ಹತ್ತು ಭಾಷೆ ಉಲಿದ ಮೋದಿ
ನ್ಯೂಯಾರ್ಕ್ ಭೇಟಿ ಆರಂಭದಲ್ಲಿ ವಿಶ್ವಸಂಸ್ಥೆಯಲ್ಲಿ ಸೋಮವಾರ ಹವಾಮಾನ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಪ್ಯಾರಿಸ್ನಲ್ಲಿ ನಡೆದ ಹವಾಮಾನ ಒಪ್ಪಂದದ ವೇಳೆಯಲ್ಲಿನ ಭಾರತದ ಗುರಿಯಾದ 2022ರ 175 ಗಿಗಾ ವ್ಯಾಟ್ ನವೀಕರಿಸಬಹುದಾದ ಇಂಧನಗಳ ಉತ್ಪಾದನೆಯನ್ನು ಮುಂದೆ 450 ಗಿಗಾವ್ಯಾಟ್ಗೆ ಏರಿಸಲಾಗುವುದು ಎಂದು ಘೋಷಿಸಿದರು.
'ಭಾರತವು ಈ ಸಮಸ್ಯೆಯ ಗಂಭೀರತೆಯ ಬಗ್ಗೆ ಮಾತನಾಡುವುದು ಮಾತ್ರವಲ್ಲ, ಅದರ ಕುರಿತು ಕಾರ್ಯರೂಪದ ನಡೆಗೆ ಮತ್ತು ಮಾರ್ಗಸೂಚಿಯನ್ನು ಮಂಡಿಸಲು ಇಂದು ಇಲ್ಲಿದೆ. ಟನ್ಗಟ್ಟಲೆ ಉಪದೇಶದ ಬದಲು ಒಂದು ಹಿಡಿಯಷ್ಟು ಕಾರ್ಯ ಹೆಚ್ಚು ಪರಿಣಾಮಕಾರಿ ಎನ್ನುವುದನ್ನು ನಾವು ನಂಬುತ್ತೇವೆ' ಎಂದು ಮೋದಿ ಹೇಳಿದರು.
ಜಲ ಸಂರಕ್ಷಣೆಗೆ 50 ಬಿಲಿಯನ್ ಡಾಲರ್
ನೀರಿನ ಸಂರಕ್ಷಣೆ, ನೀರಿನ ಕೊಯ್ಲು ಮತ್ತು ದೇಶದ ನೀರಿನ ಸಂಪನ್ಮೂಲಗಳ ಅಭಿವೃದ್ಧಿಗಾಗಿ ಸಿದ್ಧಪಡಿಸಿರುವ 'ಜಲ್ ಜೀವನ್ ಯೋಜನೆ'ಗೆ ಮುಂದಿನ ಕೆಲವು ದಿನಗಳಲ್ಲಿ ಅಂದಾಜು 50 ಬಿಲಿಯನ್ ಡಾಲರ್ ಹಣ ವ್ಯಯಿಸಲಿದೆ ಎಂದು ಮೋದಿ ತಿಳಿಸಿದರು. ಆದರೆ ಈ ಮೊತ್ತದ ಹೂಡಿಕೆಯನ್ನು ಯಾವ ಸಮಯದ ಚೌಕಟ್ಟಿನಲ್ಲಿ ಮಾಡಲಾಗುತ್ತದೆ ಎಂಬ ಮಾಹಿತಿ ನೀಡಲಿಲ್ಲ.
'ಅಭಿವೃದ್ಧಿಯ ತತ್ವವನ್ನು ತಲುಪಲು ನಾವು ಇಂದು ಶಿಕ್ಷಣ, ಮೌಲ್ಯ ಮತ್ತು ಜೀವನಶೈಲಿಯ ಪ್ರತಿಯೊಂದನ್ನೂ ಪರಿಣಾಮಕಾರಿಯಾಗಿ ತಲುಪಬೇಕಾಗಿದೆ. ನಮ್ಮ ವರ್ತನೆಯಲ್ಲಿ ಬದಲಾವಣೆ ತರಲು ಜಾಗತಿಕ ಜನರ ಚಳವಳಿಯ ಅಗತ್ಯ ನಮಗಿದೆ' ಎಂದು ಅಭಿಪ್ರಾಯಪಟ್ಟರು.
ಜೈವಿಕ ಇಂಧನ ಬಳಕೆ ಹೆಚ್ಚಳ
ಪೆಟ್ರೋಲ್ ಮತ್ತು ಡೀಸೆಲ್ನಲ್ಲಿ ಜೈವಿಕ ಇಂಧನದ ಬಳಕೆಯ ಪ್ರಮಾಣವನ್ನು ಹೆಚ್ಚಿಸಲು ಗಣನೀಯವಾಗಿ ಹೆಚ್ಚಿಸಲು ಭಾರತ ಚಿಂತನೆ ನಡೆಸಿದೆ. ವಿದ್ಯನ್ಮಾನ ವಾಹನಗಳ ಬಳಕೆಗೆ ಉತ್ತೇಜನ ನೀಡುವ ಮೂಲಕ ಸಾರಿಗೆ ವಲಯವನ್ನು ಹಸಿರನ್ನಾಗಿಸಲು ಭಾರತ ಯೋಜನೆಗಳನ್ನು ರೂಪಿಸಿದೆ ಎಂದು ಹೇಳಿದರು.
ಏಕ ಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳ ನಿಷೇಧ, ಅಂತಾರಾಷ್ಟ್ರಿಯ ಸೋಲಾರ್ ಒಪ್ಪಂದದಲ್ಲಿ ಭಾರತದ ನೇತೃತ್ವದ ಯೋಜನೆ ಮತ್ತು ಭಾರತವು 160 ಮಿಲಿಯನ್ ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕ ಒದಗಿಸಿರುವುದನ್ನು ತಿಳಿಸಿದರು.
ಪಾಕಿಸ್ತಾನದ ಹೆಸರೆತ್ತದೆ ಮಾತಿನಲ್ಲಿ ತಿವಿದ ಪ್ರಧಾನಿ ನರೇಂದ್ರ ಮೋದಿ
ಎರಡು ಅಂತಾರಾಷ್ಟ್ರೀಯ ಯೋಜನೆಗಳು
ಬಳಿಕ ಎರಡು ಅಂತಾರಾಷ್ಟ್ರೀಯ ಯೋಜನೆಗಳನ್ನು ಮೋದಿ ಪ್ರಕಟಿಸಿದರು. ಸ್ವೀಡನ್ ಮತ್ತು ಇತರೆ ದೇಶಗಳ ವೇದಿಕೆಯಲ್ಲಿ ಸರ್ಕಾರಗಳು ಮತ್ತು ಖಾಸಗಿ ವಲಯಗಳು ಜತೆಗೂಡಿ ಕೈಗಾರಿಕೆಗಳಿಗೆ ಕಡಿಮೆ ಕಾರ್ಬನ್ ಮಾರ್ಗೋಪಾಯಗಳನ್ನು ಅಭಿವೃದ್ಧಿಪಡಿಸುವ ಕಾರ್ಯ. ಎರಡನೆಯದು, ವಿಪತ್ತಿನಿಂದ ಬೇಗನೆ ಚೇತರಿಸಿಕೊಳ್ಳುವ ಮೂಲಸೌಕರ್ಯಕ್ಕಾಗಿ ಸಹಭಾಗಿತ್ವ. ಕೇಂದ್ರ ಸಂಪುಟವು ಈ ಯೋಜನೆಗೆ ಕಳೆದ ತಿಂಗಳು ಅನುಮೋದನೆ ನೀಡಿದ್ದು, ತಾಂತ್ರಿಕ ನೆರವು ಮತ್ತು ಯೋಜನೆಗಳಿಗೆ 480 ಕೋಟಿ ರೂ. ಹಂಚಿಕೆ ಮಾಡಿದೆ. ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ಫಿಜಿ, ಮಾಲ್ಡೀವ್ಸ್ನಂತಹ ದ್ವೀಪರಾಷ್ಟ್ರಗಳು ಈ ಸಹಭಾಗಿತ್ವದ ಭಾಗವಾಗಿವೆ.
ಎಸ್ಐಎ ಯೋಜನೆಗೆ 80 ದೇಶಗಳ ಬೆಂಬಲ
ಭಾರತದ ಸೌರಶಕ್ತಿ ಮೈತ್ರಿ ಯೋಜನೆಗೆ (ಎಸ್ಐಎ) ಈಗಾಗಲೇ ಜಗತ್ತಿನ ಸುಮಾರು 80 ದೇಶಗಳು ಕೈಜೋಡಿಸಿವೆ ಎಂದು ಮೋದಿ ಸಂತಸ ವ್ಯಕ್ತಪಡಿಸಿದರು.
ಹವಾಮಾನವನ್ನು ರಕ್ಷಿಸುವುದರ ಕುರಿತು ಮಾತನಾಡುವ ಕಾಲ ಮುಗಿದಿದೆ. ಈಗೇನಿದ್ದರೂ ಜಗತ್ತು ಆ ಕುರಿತು ಕಾರ್ಯರೂಪಕ್ಕೆ ಇಳಿಯುವ ಸಮಯ ಎಂದು ಹೇಳಿದರು.