ತಮಿಳು ಕವಿಯ ಮಾತನ್ನು ವಿಶ್ವಸಂಸ್ಥೆಯಲ್ಲಿ ಉಲ್ಲೇಖಿಸಿದ ಮೋದಿ
ವಿಶ್ವಸಂಸ್ಥೆ, ಸೆಪ್ಟೆಂಬರ್ 28: ವಿಶ್ವಸಂಸ್ಥೆಯಲ್ಲಿ 74ನೇ ಯುಎನ್ಜಿಎ ಸಮ್ಮೇಳನದಲ್ಲಿ ಮಾತನಾಡುವ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಮೂರು ಸಾವಿರ ವರ್ಷಗಳ ಹಿಂದೆ ಇದ್ದ ತಮಿಳು ಕವಿ ಮತ್ತು ತತ್ವಜ್ಞಾನಿ ಕಣಿಯನ್ ಪೂಂಗುಂದ್ರನಾರ್ ಅವರ ಮಾತನ್ನು ಉಲ್ಲೇಖಿಸಿದರು.
ಜಗತ್ತಿನ ಎಲ್ಲ ಜನರ ನಡುವೆ ಮಧುರ ಬಾಂಧವ್ಯದ ಭಾವನೆಯನ್ನು ಬಿತ್ತುವ ಮತ್ತು ಭಾರತದಲ್ಲಿನ ವಿವಿಧತೆಯಲ್ಲಿ ಏಕತೆಯ ಮಹತ್ವವನ್ನು ವರ್ಣಿಸುವ ಸಂದರ್ಭದಲ್ಲಿ ಮೋದಿ ಅವರು ಕಣಿಯನ್ ಬರೆದ ತಮಿಳಿನ ಬರಹವನ್ನು ಪ್ರಸ್ತಾಪಿಸಿದರು.
ಇಮ್ರಾನ್ ಖಾನ್ 'ರಕ್ತಪಾತ' ಭಾಷಣಕ್ಕೆ ಭಾರತದ ತಿರುಗೇಟು
'ನಾವು ಎಲ್ಲ ಸ್ಥಳಗಳಲ್ಲಿಯೂ ಸಂಬಂಧದ ಭಾವವನ್ನು ಬಿತ್ತುತ್ತಿದ್ದೇವೆ ಮತ್ತು ಎಲ್ಲರನ್ನೂ ನಮ್ಮವರೆಂದು ಭಾವಿಸುತ್ತೇವೆ' ಎಂಬ ತಮಿಳು ಕವಿಯ 3 ಸಾವಿರ ವರ್ಷದ ಪದ್ಯವನ್ನು ಮೋದಿ ವಾಚಿಸಿದರು.
125 ವರ್ಷಗಳ ಹಿಂದೆ ಆಧ್ಯಾತ್ಮಿಕ ಗುರು ಸ್ವಾಮಿ ವಿವೇಕಾನಂದ ಅವರು ಷಿಕಾಗೋದಲ್ಲಿ ನಡೆದ ವಿಶ್ವ ಧಾರ್ಮಿಕ ಸಂಸತ್ನಲ್ಲಿ ಅಂತಃಕಲಹದ ಬದಲು ಸೌಹಾರ್ದತೆ ಮತ್ತು ಶಾಂತಿಯ ಸಂದೇಶವನ್ನು ನೀಡಿದ್ದರು ಎಂದು ಹೇಳಿದರು.
ವಿಶ್ವಸಂಸ್ಥೆಯಲ್ಲಿ ಪ್ರಧಾನಿ ಭಾಷಣ; ಎಲ್ಲಿಯ ಇಮ್ರಾನ್, ಎಲ್ಲಿಯ ಮೋದಿ ಎಂದ ಕಾಂಗ್ರೆಸ್ ಮುಖಂಡ
ಭಾರತವು ಜಗತ್ತಿನ ಅತಿ ದೊಡ್ಡ ಸ್ವಚ್ಛತಾ ಅಭಿಯಾನವನ್ನು ಐದು ತಿಂಗಳಲ್ಲಿ ಪೂರ್ಣಗೊಳಿಸಿದೆ. ದೇಶದಲ್ಲಿ 11 ಕೋಟಿ ಶೌಚಾಲಯಗಳನ್ನು ನಿರ್ಮಿಸಿದೆ. ಮುಂದಿನ ಐದು ವರ್ಷಗಳಲ್ಲಿ 15 ಕೋಟಿ ಜನರಿಗೆ ನಿರಂತರ ನೀರಿನ ಪೂರೈಕೆಯಾಗಲಿದೆ. 1.15 ಲಕ್ಷ ಕಿಮೀ ಹೆಚ್ಚುವರಿ ರಸ್ತೆಗಳನ್ನು ನಿರ್ಮಿಸಲಾಗುತ್ತದೆ. 2025ರ ವೇಳೆಗೆ ಭಾರತವು ಕ್ಷಯರೋಗದಿಂದ ಸಂಪೂರ್ಣ ಮುಕ್ತಗೊಳ್ಳಲಿದೆ ಎಂದು ಮೋದಿ ತಿಳಿಸಿದರು.
'ಸಬ್ ಕಾ ಸಾತ್, ಸಬ್ ಕಾ ವಿಕಾಸ್' ಘೋಷಣೆಯನ್ನು ವಿಶ್ವಸಂಸ್ಥೆಯಲ್ಲಿ ಪುನರುಚ್ಚರಿಸಿದ ಮೋದಿ, ಇದು ತಮ್ಮ ಸರ್ಕಾರಕ್ಕೆ ಸ್ಫೂರ್ತಿಯಾಗಿದ್ದು, ಭಾರತದ ಅಭಿವೃದ್ಧಿಯ ಕಥೆ ಇತರೆ ದೇಶಗಳಿಗೂ ಸ್ಫೂರ್ತಿಯಾಗಬಹುದು ಎಂದರು.
'ನಾನು ಇಲ್ಲಿಗೆ ಬರುವಾಗ ವಿಶ್ವಸಂಸ್ಥೆಯ ಗೋಡೆಗಳ ಮೇಲೆ ಏಕ ಬಳಕೆಯ ಪ್ಲಾಸ್ಟಿಕ್ ಬಳಕೆ ಬೇಡ' ಎಂಬ ಬರಹ ಓದಿದೆ. ನಮ್ಮ ದೇಶವನ್ನು ಏಕ ಬಳಕೆಯ ಪ್ಲಾಸ್ಟಿಕ್ನಿಂದ ಮುಕ್ತಗೊಳಿಸುವ ಬೃಹತ್ ಅಭಿಯಾನ ನಡೆಸುತ್ತಿದ್ದೇವೆ ಎಂದು ನಿಮಗೆ ತಿಳಿಸಲು ಹರ್ಷಿಸುತ್ತೇನೆ' ಎಂದು ಹೇಳಿದರು.
ಭಯೋತ್ಪಾದನೆಯ ವಿರುದ್ಧ ಅಂತಾರಾಷ್ಟ್ರೀಯ ಸಮುದಾಯ ಒಗ್ಗಟ್ಟಿನಿಂದ ನಿಲ್ಲಬೇಕಿದೆ. ಭಯೋತ್ಪಾದನೆಯು ಯಾವುದೋ ಒಂದು ದೇಶಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೇ ಅತಿ ದೊಡ್ಡ ಸವಾಲಾಗಿದೆ. ಆದರೆ ಭಯೋತ್ಪಾದನೆ ವಿಚಾರದಲ್ಲಿ ಒಗ್ಗಟ್ಟು ಕಾಣಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.