IMFನ ಪ್ರಥಮ ಉಪ ವ್ಯವಸ್ಥಾಪಕ ನಿರ್ದೇಶಕಿಯಾಗಿ ಬಡ್ತಿ ಪಡೆದ ಮೈಸೂರಿನ ಗೀತಾ ಗೋಪಿನಾಥ್
ವಾಷಿಂಗ್ಟನ್, ಡಿಸೆಂಬರ್ 3: ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯ ಎರಡನೇ ಮುಖ್ಯ ಹುದ್ದೆಯಾದ ಪ್ರಥಮ ಉಪ ವ್ಯವಸ್ಥಾಪಕ ನಿರ್ದೇಶಕಿಯಾಗಿ ಭಾರತೀಯ ಮೂಲದ ಗೀತಾ ಗೋಪಿನಾಥ್ 2022ರ ಜನವರಿಯಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಮೂಲತಃ ಕರ್ನಾಟಕದ ಮೈಸೂರಿನವರಾದ ಗೀತಾ ಗೋಪಿನಾಥ್ ಅಂತಾರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಮುಖ್ಯ ಅರ್ಥಶಾಸ್ತ್ರಜ್ಞೆಯಾಗಿದ್ದು, ಅವರಿಗೆ ಐಎಂಎಫ್ನ ಪ್ರಥಮ ಉಪ ವ್ಯವಸ್ಥಾಪಕ ನಿರ್ದೇಶಕರಾಗಿ ಬಡ್ತಿ ನೀಡಲಾಗಿದೆ ಎಂದು ಐಎಂಎಫ್ ಘೋಷಿಸಿದೆ. ಈ ಮೂಲಕ ಭಾರತ ಮೂಲದ ಗೀತಾ ಗೋಪಿನಾಥ್ಗೆ ಐಎಂಎಫ್ನ ಪ್ರಮುಖ ಹುದ್ದೆಗೆ ಬಡ್ತಿ ಪಡೆದಿದ್ದಾರೆ.
ಐಎಂಎಫ್ನ ಉಪ ವ್ಯವಸ್ಥಾಪಕ ನಿರ್ದೇಶಕ ಜೆಫ್ರಿ ಒಕಾಮೊಟೊ ಅವರ ಅಧಿಕಾರಾವಧಿ 2022ರ ಜನವರಿಯಲ್ಲಿ ಮುಕ್ತಾಯವಾಗಲಿದೆ. ಹೀಗಾಗಿ, ಆ ಹುದ್ದೆಗೆ ಖ್ಯಾತ ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್ರನ್ನು ನೇಮಕ ಮಾಡಲಾಗಿದೆ. ಈಗಾಗಲೇ ಮೂರು ವರ್ಷ ಐಎಂಎಫ್ನ ಮುಖ್ಯ ಅರ್ಥಶಾಸ್ತ್ರಜ್ಞರಾಗಿ ಸೇವೆ ಸಲ್ಲಿಸಿರುವ ಗೀತಾ ಗೋಪಿನಾಥ್ ಮುಂದಿನ ಜನವರಿಯಲ್ಲಿ ಪ್ರಥಮ ಉಪ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಐಎಂಎಫ್ನ ಉಪ ವ್ಯವಸ್ಥಾಪಕ ನಿರ್ದೇಶಕಿಯಾಗಿರುವ ಜೆಫ್ರಿ ಒಕಾಮೊಟೊ ಅವರ ಅಧಿಕಾರಾವಧಿ 2022ರ ಮೊದಲ ತಿಂಗಳು ಮುಕ್ತಾಯವಾಗಲಿದೆ. ಆ ಸ್ಥಾನಕ್ಕೆ ಗೀತಾ ಗೋಪಿನಾಥ್ ಬಡ್ತಿ ಪಡೆದಿದ್ದಾರೆ. ಈ ಮೂಲಕ ಐಎಂಎಫ್ನಲ್ಲಿ ಉನ್ನತ ಸ್ಥಾನಗಳಲ್ಲಿ ಇಬ್ಬರು ಮಹಿಳೆಯರು ಸೇವೆ ಸಲ್ಲಿಸಿದಂತಾಗಲಿದೆ.
ಗೀತಾ ಗೋಪಿನಾಥ್ ಐಎಂಎಫ್ನಲ್ಲಿ ಸಂಶೋಧನಾ ವಿಭಾಗದ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. 2018ರಲ್ಲಿ ಅವರು ಆ ಸ್ಥಾನಕ್ಕೆ ನಿಯುಕ್ತಿಗೊಂಡಿದ್ದರು. ಜನವರಿಯಲ್ಲಿ ಗೀತಾ ಗೋಪಿನಾಥ್ ಅಧಿಕಾರಾವಧಿ ಮುಕ್ತಾಯವಾಗುತ್ತಿತ್ತು. ಹೀಗಾಗಿ, ಅದಾದ ಬಳಿಕ ಗೀತಾ ಗೋಪಿನಾಥ್ ಜನವರಿಯಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದ ಉಪನ್ಯಾಸಕ ಹುದ್ದೆಗೆ ಮರಳುವುದಾಗಿ ಕಳೆದ ಅಕ್ಟೋಬರ್ ತಿಂಗಳಲ್ಲಿ ಘೋಷಿಸಿದ್ದರು. ಆದರೆ, ಜನವರಿಯಲ್ಲಿ ಅವರು ಮತ್ತೆ ಐಎಂಎಫ್ ಪ್ರಮುಖ ಹುದ್ದೆಗೆ ಬಡ್ತಿ ಪಡೆಯುವ ಮೂಲಕ ಹೊಸ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.
ಈ ಕುರಿತು ಅಂತಾರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜಿವಾ ಪ್ರತಿಕ್ರಿಯೆ ನೀಡಿದ್ದು, "ಜೆಫ್ರಿ ಮತ್ತು ಗೀತಾ ಇಬ್ಬರೂ ನನಗೆ ಒಳ್ಳೆಯ ಸಹೋದ್ಯೋಗಿಗಳು. ಜೆಫ್ರಿ ಹುದ್ದೆ ತೊರೆಯುತ್ತಿರುವುದಕ್ಕೆ ಬೇಸರವಾಗುತ್ತಿದೆ. ಆದರೆ, ಗೀತಾ ಗೋಪಿನಾಥ್ ಆ ಹೊಸ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ ಎಂದು ತಿಳಿದು ನನಗೆ ಖುಷಿಯಾಗಿದೆ," ಎಂದು ಹೇಳಿದ್ದಾರೆ.
"ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಇತಿಹಾಸದಲ್ಲಿ ಮೊದಲ ಮಹಿಳಾ ಮುಖ್ಯ ಅರ್ಥಶಾಸ್ತ್ರಜ್ಞರಾಗಿದ್ದ ಗೀತಾ ಗೋಪಿನಾಥ್, ಐಎಂಎಫ್ನ ಸದಸ್ಯ ರಾಷ್ಟ್ರಗಳಿಂದ ಮೆಚ್ಚುಗೆಯನ್ನು ಗಳಿಸಿದ್ದಾರೆ ಮತ್ತು ಕಠಿಣವಾದ ಕೆಲಸವನ್ನು ಮುನ್ನಡೆಸಿ, ಯಶಸ್ವಿಗೊಳಿಸುವ ಸಾಮರ್ಥ್ಯ ಅವರಲ್ಲಿದೆ," ಎಂದು ಕ್ರಿಸ್ಟಲಿನಾ ಜಾರ್ಜಿವಾ ಹೇಳಿದ್ದಾರೆ.
ತಮಗೆ ಸಿಕ್ಕಿರುವ ಹೊಸ ಜವಾಬ್ದಾರಿಯ ಕುರಿತು ಭಾರತೀಯ ಮೂಲದ ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್ ಸಂತೋಷ ವ್ಯಕ್ತಪಡಿಸಿದ್ದು, "ನನಗೆ ಹೊಸ ಅವಕಾಶ ನೀಡಿದ್ದಕ್ಕಾಗಿ ಕ್ರಿಸ್ಟಲಿನಾ ಜಾರ್ಜಿವಾರಿಗೆ ಧನ್ಯವಾದ ಅರ್ಪಿಸುತ್ತೇನೆ. ಐಎಂಎಫ್ನ ಪ್ರತಿಭಾವಂತರ ಜೊತೆ ಮತ್ತೆ ಕೆಲಸ ಮಾಡುವುದು ನನಗೆ ಸಿಕ್ಕಿರುವ ಅದ್ಭುತವಾದ ಅವಕಾಶ," ಎಂದು ಪ್ರತಿಕ್ರಿಯಿಸಿದ್ದಾರೆ.
ಗೀತಾ ಗೋಪಿನಾಥ್ ಮೈಸೂರಿನಲ್ಲೇ ಹುಟ್ಟಿ ಬೆಳೆದಿದ್ದಾರೆ. ಈಗಲೂ ಗೀತಾ ಗೋಪಿನಾಥ್ ತಂದೆ ಗೋಪಿನಾಥ್ ಮೈಸೂರಿನ ಹೊರ ವಲಯದಲ್ಲಿ ಕೃಷಿ ಮಾಡುತ್ತಿದ್ದಾರೆ. ತಮ್ಮದೇ ಆದ ಫಾರ್ಮ್ಹೌಸ್ ಅನ್ನು ಮೈಸೂರು ನಗರದ ಹೊರವಲಯದಲ್ಲಿ ಹೊಂದಿದ್ದಾರೆ. ಕೊರೊನಾದ ಸಾಂಕ್ರಮಿಕದ ಲಾಕ್ಡೌನ್ ಸಂದರ್ಭದಲ್ಲಿ ತಮ್ಮ ಫಾರ್ಮ್ಹೌಸ್ನಲ್ಲಿದ್ದ ಹಸುಗಳನ್ನು ಬಡವರಿಗೆ ದಾನವಾಗಿ ನೀಡಿದ್ದರು ಎಂಬುದನ್ನು ಸ್ಮರಿಸಬಹುದು.