ಅಮೆರಿಕದಲ್ಲಿ ದುಷ್ಕರ್ಮಿಗಳ ಕೃತ್ಯ: ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸ
ಕ್ಯಾಲಿಫೋರ್ನಿಯಾ, ಜನವರಿ 30: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿನ ಉದ್ಯಾನವೊಂದರಲ್ಲಿ ಇರುವ ಮಹಾತ್ಮ ಗಾಂಧಿ ಅವರ ಪ್ರತಿಮೆಯೊಂದಕ್ಕೆ ಅಪರಿಚಿತ ದುಷ್ಕರ್ಮಿಗಳು ಹಾನಿಮಾಡಿದ್ದಾರೆ. ಇದು ಅಮೆರಿಕದಲ್ಲಿರುವ ಭಾರತೀಯ ಸಮುದಾಯದವರಲ್ಲಿ ಆಘಾತ ಮೂಡಿಸಿದ್ದು, ಈ ದ್ವೇಷ ಅಪರಾಧದ ಬಗ್ಗೆ ತನಿಖೆ ನಡೆಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
6 ಅಡಿ ಎತ್ತರ ಮತ್ತು 650 ಪೌಂಡ್ (294 ಕೆಜಿ) ತೂಕದ ಮಹಾತ್ಮ ಗಾಂಧಿ ಅವರ ಕಂಚಿನ ಪ್ರತಿಮೆಯು ಉತ್ತರ ಕ್ಯಾಲಿಫೋರ್ನಿಯಾದ ಸಿಟಿ ಆಫ್ ಡೇವಿಸ್ನ ಸೆಂಟ್ರಲ್ ಪಾರ್ಕ್ನಲ್ಲಿದ್ದು, ಅದರ ಪಾದದ ಭಾಗಗಳನ್ನು ಕತ್ತರಿಸಲಾಗಿದ್ದು, ಅರ್ಧ ತಲೆಯನ್ನು ಕೆತ್ತಿ ವಿರೂಪಗೊಳಿಸಲಾಗಿದೆ. ಮುಖದ ಒಂದು ಭಾಗ ನಾಪತ್ತೆಯಾಗಿದೆ. ಪ್ರತಿಮೆ ನಿಲ್ಲಿಸಿದ್ದ ಸ್ಥಳದಿಂದ ಉರುಳಿಬಿದ್ದಿದೆ. ಪ್ರತಿಮೆಯ ಕಾಲುಗಳು ಮಾತ್ರ ಅದನ್ನು ನಿಲ್ಲಿಸಿದ್ದ ಜಾಗದಲ್ಲಿದೆ.
ಕೃಷಿ ನೀತಿ ವಿರೋಧಿ ಪ್ರತಿಭಟನೆ; ಮಹಾತ್ಮ ಗಾಂಧಿ ಪ್ರತಿಮೆಗೆ ಅವಮಾನ
ಜನವರಿ 27ರ ಬೆಳಿಗ್ಗೆ ಪಾರ್ಕ್ನ ಸಿಬ್ಬಂದಿಯೊಬ್ಬರು ಮಹಾತ್ಮ ಗಾಂಧಿ ಪ್ರತಿಮೆ ಹಾನಿಗೊಂಡಿರುವುದನ್ನು ಕಂಡು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಪ್ರತಿಮೆಯನ್ನು ಅಲ್ಲಿಂದ ತೆರವುಗೊಳಿಸಿ ಸುರಕ್ಷಿತ ಸ್ಥಳದಲ್ಲಿ ಇರಿಸಲಾಗುತ್ತಿದ್ದು, ಅದನ್ನು ಸರಿಪಡಿಸುವವರೆಗೂ ಬೇರೆಡೆ ಇರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂದೆ ಓದಿ.
ಗಂಭೀರವಾಗಿ ಪರಿಗಣನೆ
ಈ ಪ್ರತಿಮೆಗೆ ಯಾವಾಗ ಹಾನಿ ಮಾಡಲಾಗಿತ್ತು ಮತ್ತು ಅದರ ಹಿಂದಿನ ಉದ್ದೇಶವೇನು ಎನ್ನುವುದು ತನಿಖಾಧಿಕಾರಿಗಳಿಗೆ ಇನ್ನೂ ಗೊತ್ತಾಗಿಲ್ಲ. 'ಈ ಪ್ರತಿಮೆಯು ಡೇವಿಸ್ನ ಈ ಭಾಗದ ಜನತೆಗೆ ಸಾಂಸ್ಕೃತಿಕ ಹೆಗ್ಗುರುತಾಗಿತ್ತು. ಈ ಘಟನೆಯನ್ನು ನಾವು ಬಹಳ ಗಂಭೀರವಾಗಿ ಪರಿಗಣಿಸಿದ್ದೇವೆ' ಎಂದು ಡೇವಿಸ್ ಪೊಲೀಸ್ ಇಲಾಖೆ ಮುಖ್ಯಸ್ಥ ಪಾಲ್ ಡೊರೊಶೊವ್ ತಿಳಿಸಿದ್ದಾರೆ.
ಭಾರತ ಸರ್ಕಾರದ ದಾನ
ಮಹಾತ್ಮ ಗಾಂಧಿ ಅವರ ಪ್ರತಿಮೆಯನ್ನು ಡೇವಿಸ್ ನಗರಕ್ಕೆ ಭಾರತ ಸರ್ಕಾರ ದೇಣಿಗೆ ನೀಡಿತ್ತು. ಗಾಂಧಿ ವಿರೋಧಿ ಮತ್ತು ಭಾರತ ವಿರೋಧಿ ಸಂಘಟನೆಗಳ ಪ್ರತಿಭಟನೆ ನಡುವೆ ನಾಲ್ಕು ವರ್ಷಗಳ ಹಿಂದೆ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು.
ಮೈಸೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಗಾಂಧಿ ಪ್ರತಿಮೆ ಭಗ್ನಗೊಳಿಸಿದ ಕಿಡಿಗೇಡಿಗಳು
ಪ್ರತಿಮೆ ಸ್ಥಾಪನೆಗೆ ವಿರೋಧ
ಭಾರತದಲ್ಲಿನ ಅಲ್ಪಸಂಖ್ಯಾತರ ಸಂಘಟನೆ (ಒಎಫ್ಎಂಐ) ಈ ಪ್ರತಿಭಟನೆಯ ನೇತೃತ್ವ ವಹಿಸಿತ್ತು. ಪ್ರತಿಮೆ ಸ್ಥಾಪನೆಗೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಆದರೆ ಪ್ರತಿಮೆ ಸ್ಥಾಪನೆ ವಿಚಾರದಲ್ಲಿ ಡೇವಿಸ್ ನಗರದಲ್ಲಿ ಜನಾಭಿಪ್ರಾಯ ಸಂಗ್ರಹಣೆ ನಡೆದು, ಅದರ ಪರ ತೀರ್ಪು ಬಂದಿತ್ತು. ಅದರ ಬಳಿಕ ಒಎಫ್ಎಂಐ, ಪ್ರತಿಮೆ ತೆರವುಗೊಳಿಸಲು ಆಂದೋಲನ ಆರಂಭಿಸಿತ್ತು.
ಭಾರತದ ಹೆಸರು ತೆಗೆಸಲು ಆಗ್ರಹ
2016ರಲ್ಲಿ ಕ್ಯಾಲಿಫೋರ್ನಿಯಾದ ಆರು ಮತ್ತು ಏಳನೇ ತರಗತಿಗಳ ಶಾಲಾ ಪಠ್ಯಪುಸ್ತಕಗಳಲ್ಲಿನ 'ಭಾರತ' ಪದವನ್ನು ತೆಗೆದುಹಾಕಿ ಆ ಜಾಗದಲ್ಲಿ 'ದಕ್ಷಿಣ ಏಷ್ಯಾ' ಪದ ಬಳಸುವಂತೆ ಒಎಫ್ಎಂಐ ಆಂದೋಲನ ನಡೆಸಿತ್ತು. ಪೋಷಕರು ಮತ್ತು ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆ ಬಳಿಕ ಕ್ಯಾಲಿಫೋರ್ನಿಯಾ ಶಿಕ್ಷಣ ಇಲಾಖೆ ವಿವಾದಾತ್ಮಕ ಬದಲಾವಣೆಗಳನ್ನ ಕೈಬಿಟ್ಟಿತ್ತು.
Recommended Video
ಶುಭದಿನ ಎಂದ ಖಲಿಸ್ತಾನ ಗುಂಪು
ಈ ಧ್ವಂಸ ಘಟನೆಯನ್ನು ಕ್ಯಾಲಿಫೋರ್ನಿಯಾದಲ್ಲಿರುವ ಖಲಿಸ್ತಾನ ಪರ ಸಂಘಟನೆ ಶ್ಲಾಘಿಸಿದೆ. ಪ್ರತಿಮೆ ಧ್ವಂಸದ ಫೋಟೊಗಳನ್ನು ಹಂಚಿಕೊಂಡು 'ಈದಿನ ಶುಭದಿನ' ಎಂದು ಖಲಿಸ್ತಾನ ಪರ ಸಂಘಟನೆ ಸದಸ್ಯರು ಹೇಳಿಕೊಂಡಿದ್ದಾರೆ. ವಾಷಿಂಗ್ಟನ್ನಲ್ಲಿ ಕೃಷಿ ಕಾಯ್ದೆಗಳ ವಿರುದ್ಧ ನಡೆದಿದ್ದ ಪ್ರತಿಭಟನೆಯಲ್ಲಿ ಖಲಿಸ್ತಾನಿ ಪರ ಬೆಂಬಲಿಗರು ಗಾಂಧಿ ಪ್ರತಿಮೆಯ ಮುಖಕ್ಕೆ ಬಣ್ಣ ಬಳಿದು ಅವಮಾನಿಸಿದ್ದರು.