ಭಾರತಕ್ಕೆ ಸಹಾಯಹಸ್ತ ಚಾಚಲು ನಾವು ದೃಢ ಸಂಕಲ್ಪ ಮಾಡಿದ್ದೇವೆ: ಕಮಲಾ ಹ್ಯಾರಿಸ್
ವಾಷಿಂಗ್ಟನ್, ಮೇ 8: ಹಲವು ವರ್ಷಗಳಿಂದ, ಇಂಡಿಯಾಸ್ಪೊರಾ ಮತ್ತು ಅಮೇರಿಕನ್ ಇಂಡಿಯಾ ಫೌಂಡೇಶನ್ನಂತಹ ಡಯಾಸ್ಪೋರಾ (ಭಾರತೀಯ ಸಮುದಾಯ) ಗುಂಪುಗಳು ಅಮೆರಿಕ ಮತ್ತು ಭಾರತದ ನಡುವೆ ಸೇತುವೆಗಳಾಗಿವೆ. ಅಲ್ಲದೆ, ಕಳೆದ ವರ್ಷ ನೀವು ಕೋವಿಡ್-19 ಪರಿಹಾರ ಕಾರ್ಯಗಳಿಗೆ ಮಹತ್ವದ ಕೊಡುಗೆಗಳನ್ನು ನೀಡಿದ್ದೀರಿ, ನಿಮ್ಮೆಲ್ಲ ಕೆಲಸಕ್ಕೆ ಧನ್ಯವಾದಗಳು ಎಂದು ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹೇಳಿದ್ದಾರೆ.
ನಿಮ್ಮಲ್ಲಿ ಅನೇಕರಿಗೆ ತಿಳಿದಿರುವಂತೆ, ನನ್ನ ಕುಟುಂಬದ ಹಿಂದಿನ ತಲೆಮಾರುಗಳು ಭಾರತದಿಂದ ಬಂದಿವೆ. ನನ್ನ ತಾಯಿ ಭಾರತದಲ್ಲಿ ಹುಟ್ಟಿ ಬೆಳೆದವರು. ಇಂದಿಗೂ ನನ್ನ ಕುಟುಂಬದ ಅನೇಕ ಸದಸ್ಯರು ಭಾರತದಲ್ಲಿ ವಾಸಿಸುತ್ತಿದ್ದಾರೆ. ಭಾರತದ ಕ್ಷೇಮವು ಅಮೆರಿಕಕ್ಕೆ ಅತ್ಯಂತ ಮುಖ್ಯವಾದ ವಿಷಯವಾಗಿದೆ ಎಂದರು.
ಭಾರತದಲ್ಲಿ ಕೋವಿಡ್-19 ಸೋಂಕುಗಳು ಮತ್ತು ಸಾವುಗಳ ಸಂಖ್ಯೆಯ ಹೆಚ್ಚಳವು ಅತ್ಯಂತ ದಾರುಣವಾದದ್ದು. ನಿಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡವರಿಗೆ ನನ್ನ ಮನದಾಳದ ಸಂತಾಪಗಳು. ಭಾರತದ ಪರಿಸ್ಥಿತಿಯ ಭೀಕರ ಸ್ವರೂಪ ಸ್ಪಷ್ಟವಾದ ತಕ್ಷಣ ನಮ್ಮ ಆಡಳಿತವು ಕ್ಷಿಪ್ರ ಕ್ರಮಗಳನ್ನು ತೆಗೆದುಕೊಂಡಿದೆ.
ಏಪ್ರಿಲ್ 26ರ ಸೋಮವಾರ ನಮ್ಮ ಅಧ್ಯಕ್ಷರಾದ ಜೋ ಬೈಡೆನ್ ಅವರು ಪ್ರಧಾನಿಯವರೊಂದಿಗೆ ಮಾತನಾಡಿ, ಬೆಂಬಲ ವ್ಯಕ್ತಪಡಿಸಿದರು. ಏಪ್ರಿಲ್ 30 ಶುಕ್ರವಾರದ ಹೊತ್ತಿಗೆ ಅಮೆರಿಕದ ಸೇನೆ ಸದಸ್ಯರು ಮತ್ತು ನಾಗರಿಕರು ಆಗಲೇ ಪರಿಹಾರದ ಸಾಮಗ್ರಿಗಳ ವಿತರಣೆ ಕಾರ್ಯದಲ್ಲಿ ನಿರತರಾಗಿದ್ದರು ಎಂದು ಹೇಳಿದ್ದಾರೆ.
ಈಗಾಗಲೇ ನಾವು ಮರುಪೂರಣ ಮಾಡಬಹುದಾದ ಆಮ್ಲಜನಕ ಸಿಲಿಂಡರ್ಗಳನ್ನು ಭಾರತಕ್ಕೆ ತಲುಪಿಸಿದ್ದೇವೆ. ಅಂತೆಯೇ ಆಮ್ಲಜನಕ ಸಾಂದ್ರಕಗಳನ್ನು ಕೂಡ ಕಳುಹಿಸಿಕೊಟ್ಟಿದ್ದೇವೆ, ಇನ್ನೂ ಹೆಚ್ಚಿನ ಸಹಾಯ ಬರಲಿದೆ. ಇದರ ಜೊತೆಗೆ N95 ಮಾಸ್ಕ್ ಗಳನ್ನು ಕೂಡ ರವಾನೆ ಮಾಡಿದ್ದೇವೆ, ಇನ್ನಷ್ಟು ರವಾನೆಗೆ ಸಿದ್ಧವಾಗಿವೆ. ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ನಾವು ರೆಮ್ಡೆಸಿವಿರ್ ಗಳನ್ನು ತಲುಪಿಸಿದ್ದೇವೆ ಎಂದು ಕಮಲಾ ಹ್ಯಾರಿಸ್ ಮಾಹಿತಿ ನೀಡಿದರು.
ಏತನ್ಮಧ್ಯೆ, ಕೋವಿಡ್-19 ಲಸಿಕೆಗಳ ಪೇಟೆಂಟ್ಗಳನ್ನು ತೆಗೆದುಹಾಕಲು ನಮ್ಮ ಸಂಪೂರ್ಣ ಬೆಂಬಲವನ್ನು ಘೋಷಿಸಿದ್ದೇವೆ. ಇದರಿಂದ ಭಾರತ ಮತ್ತು ಇತರ ರಾಷ್ಟ್ರಗಳು ತಮ್ಮ ಜನರಿಗೆ ಹೆಚ್ಚು ವೇಗವಾಗಿ ಮತ್ತು ದಕ್ಷವಾಗಿ ಲಸಿಕೆ ನೀಡಲು ಸಹಾಯಕವಾಗುತ್ತದೆ. ಭಾರತ ಮತ್ತು ಅಮೆರಿಕ ವಿಶ್ವದಲ್ಲೇ ಅತಿ ಹೆಚ್ಚು ಕೋವಿಡ್-19 ಪ್ರಕರಣಗಳನ್ನು ಹೊಂದಿವೆ.
ಈ ಸಾಂಕ್ರಾಮಿಕ ರೋಗದ ಆರಂಭದಲ್ಲಿ, ನಮ್ಮ ಆಸ್ಪತ್ರೆಗಳು ತುಂಬಿ ತುಳುಕುತ್ತಿದ್ದಾಗ ಭಾರತ ನಮ್ಮ ನೆರವಿಗೆ ಬಂದಿತ್ತು. ಇಂದು ಭಾರತದ ಸಂಕಷ್ಟದ ಸಮಯದಲ್ಲಿ ಸಹಾಯಹಸ್ತ ಚಾಚಲು ನಾವು ದೃಢ ಸಂಕಲ್ಪ ಮಾಡಿದ್ದೇವೆ ಎಂದರು.
ನಾವು ಇದನ್ನು ಭಾರತದ ಸ್ನೇಹಿತರಾಗಿ, ಕ್ವಾಡ್ನ ಸದಸ್ಯರಾಗಿ ಮತ್ತು ಜಾಗತಿಕ ಸಮುದಾಯದ ಭಾಗವಾಗಿ ಮಾಡುತ್ತಿದ್ದೇವೆ. ನಾವು ರಾಷ್ಟ್ರಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸಿದರೆ ಈ ಕಷ್ಟದ ಸಮಯವನ್ನು ದಾಟುವುದು ನಿಶ್ಚಿತ ಎಂದು ಭಾರತೀಯ-ಅಮೆರಿಕನ್ ಕಮಲಾ ಹ್ಯಾರಿಸ್ ಹೇಳಿದರು.