ಶ್ವೇತಭವನದ ಸಹಾಯಕ ಪತ್ರಿಕಾ ಕಾರ್ಯದರ್ಶಿಯಾಗಿ ಭಾರತ ಮೂಲದ ವೇದಾಂತ್ ಪಟೇಲ್
ವಾಷಿಂಗ್ಟನ್, ಡಿಸೆಂಬರ್ 19: ಅಮೆರಿಕದ ಚುನಾಯಿತ ಅಧ್ಯಕ್ಷ ಜೋ ಬೈಡನ್ ಅವರು ಭಾರತ ಮೂಲದ ವೇದಾಂತ್ ಪಟೇಲ್ ಅವರನ್ನು ತಮ್ಮ ಸಹಾಯಕ ಪತ್ರಿಕಾ ಕಾರ್ಯದರ್ಶಿಯನ್ನಾಗಿ ನೇಮಿಸಿದ್ದಾರೆ. ಶ್ವೇತಭವನದ ಸಂವಹನ ಮತ್ತು ಪತ್ರಿಕಾ ಸಿಬ್ಬಂದಿ ತಂಡದ ಹೆಚ್ಚುವರಿ ಸದಸ್ಯರನ್ನು ಬೈಡನ್ ಘೋಷಿಸಿದ್ದು, ಅವರಲ್ಲಿ ವೇದಾಂತ್ ಸೇರಿದ್ದಾರೆ.
ಪ್ರಸ್ತುತ ವೇದಾಂತ್ ಅವರು ಬೈಡನ್ ಅವರ ಪದಗ್ರಹಣ ಸಮಿತಿಯ ಹಿರಿಯ ವಕ್ತಾರರಾಗಿದ್ದು, ಬೈಡನ್ ಪ್ರಚಾರದ ಪ್ರಾದೇಶಿಕ ಸಂವಹನ ನಿರ್ದೇಶಕರೂ ಆಗಿದ್ದಾರೆ. ನೆವಾಡ ಮತ್ತು ವೆಸ್ಟರ್ನ್ ಪ್ರೈಮರಿ ಸ್ಟೇಟ್ಸ್ ಕಮ್ಯುನಿಕೇಷನ್ ಡೈರೆಕ್ಟರ್ ಆಗಿ ಪ್ರಾಥಮಿಕ ಪ್ರಚಾರದಲ್ಲಿ ಅವರು ಕೆಲಸ ಮಾಡಿದ್ದರು.
ಶ್ವೇತಭವನವನ್ನು ಬಿಟ್ಟುಕೊಡುವುದಿಲ್ಲ ಎಂದು ಬೆದರಿಕೆಯೊಡ್ಡಿದ ಡೊನಾಲ್ಡ್ ಟ್ರಂಪ್?
ಇದಕ್ಕೂ ಮುನ್ನ ಭಾರತ ಮೂಲದ ಕಾಂಗ್ರೆಸ್ ಸದಸ್ಯೆ ಪ್ರಮೀಳಾ ಜಯಪಾಲ್ ಅವರ ಸಂವಹನ ನಿರ್ದೇಶಕರಾಗಿ, ಕಾಂಗ್ರೆಸ್ ಸಂಸದ ಮೈಕ್ ಹೊಂಡಾ ಅವರ ಸಂವಹನ ನಿರ್ದೇಶಕರಾಗಿ ಮತ್ತು ಡೆಮಾಕ್ರಟಿಕ್ ರಾಷ್ಟ್ರೀಯ ಸಮಿತಿಯ ಪತ್ರಿಕಾ ಕಾರ್ಯದರ್ಶಿಯಾಗಿದ್ದರು.
ಗುಜರಾತ್ನಲ್ಲಿ ಜನಿಸಿದ ವೇದಾಂತ್ ಅವರು ಕ್ಯಾಲಿಫೋರ್ನಿಯಾದಲ್ಲಿ ಬೆಳೆದವರು. ಕ್ಯಾಲಿಫೋರ್ನಿಯಾ ವಿವಿ ಮತ್ತು ಫ್ಲೋರಿಡಾ ವಿವಿಗಳಲ್ಲಿ ಪದವಿಗಳನ್ನು ಪಡೆದಿದ್ದಾರೆ. ಅವರು ಶ್ವೇತಭವನದ ಪತ್ರಿಕಾ ವಿಭಾಗಕ್ಕೆ ನೇಮಕವಾದ ಭಾರತ ಮೂಲದ ಮೂರನೇ ವ್ಯಕ್ತಿಯಾಗಿದ್ದಾರೆ.
ರಾಷ್ಟ್ರೀಯ ಭದ್ರತೆ ಎಚ್ಚರಿಕೆ:
ಜೋ ಬೈಡನ್ ಅವರು ಗೆದ್ದಿರುವುದಾಗಿ ಸ್ವತಃ ಎಲೆಕ್ಟೊರಲ್ ಕಾಲೇಜ್ ಘೋಷಿಸಿದ ಬಳಿಕವೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರ ಹಸ್ತಾಂತರಿಸುವ ಕಾರ್ಯಕ್ಕೆ ಮುಂದಾಗುತ್ತಿಲ್ಲ. ಅವರು ಈಗಲೂ ತಮ್ಮ ಸೋಲನ್ನು ಒಪ್ಪಿಕೊಂಡಿಲ್ಲ. ಈ ನಡುವೆ ಅಧಿಕಾರ ಹಸ್ತಾಂತರದ ತಂಡಕ್ಕೆ ಟ್ರಂಪ್ ತಂಡ ವಿವರಣೆ ನೀಡುವುದನ್ನು ಹಠಾತ್ ನಿಲ್ಲಿಸಿದೆ. ಇದು ರಾಷ್ಟ್ರೀಯ ಭದ್ರತೆಗೆ ಮಾರಕವಾಗಲಿದೆ ಎಂದು ಜೋ ಬೈಡನ್ ಎಚ್ಚರಿಕೆ ನೀಡಿದ್ದಾರೆ.
ಬೈಡನ್ ಗೆಲುವಿನ ಅಧಿಕೃತ ಘೋಷಣೆ ಮಾಡಿದ ಎಲೆಕ್ಟೊರಲ್ ಕಾಲೇಜ್
ಈಗಾಗಲೇ ಟ್ರಂಪ್ ತಂಡದಿಂದ ತೀರಾ ಕಡಿಮೆ ಸಹಕಾರ ದೊರಕುತ್ತಿದೆ. ಈ ನಡುವೆ ಪ್ರಕ್ರಿಯೆಯನ್ನು ಇದ್ದಕ್ಕಿದ್ದಂತೆ ನಿಲ್ಲಿಸಿರುವುದು ತಿಳಿದು ಕಳವಳವಾಗಿದೆ ಎಂದು ಬೈಡನ್ ಪರಿವರ್ತನೆ ತಂಡದ ಕಾರ್ಯಕಾರಿ ನಿರ್ದೇಶಕ ಯೊಹಾನ್ನಸ್ ಅಬ್ರಹಾಂ ತಿಳಿಸಿದ್ದಾರೆ.
ಆದರೆ ಸೇನಾ ಅಧಿಕಾರಿಗಳೊಂದಿಗೆ ನಡೆಸಲಾಗುತ್ತಿದ್ದ ಮಾಹಿತಿ ಹಂಚಿಕೆಯ ಪ್ರಕ್ರಿಯೆಯನ್ನು ರಜೆಯ ವಿರಾಮಕ್ಕಾಗಿ ಪರಸ್ಪರ ಒಪ್ಪಂದದೊಂದಿಗೆ ನಿಲ್ಲಿಸಲಾಗಿದೆ ಎಂದು ಟ್ರಂಪ್ ಅವರ ಹಂಗಾಮಿ ರಕ್ಷಣಾ ಕಾರ್ಯದರ್ಶಿ ಕ್ರಿಸ್ ಮಿಲ್ಲರ್ ಹೇಳಿದ್ದಾರೆ. ಈ ಹೇಳಿಕೆ ಸತ್ಯಕ್ಕೆ ದೂರ. ರಜೆ ವಿರಾಮದ ಬಗ್ಗೆ ಯಾವುದೇ ಪರಸ್ಪರ ಒಪ್ಪಂದ ನಡೆದಿಲ್ಲ ಎಂದು ಅಬ್ರಹಾಂ ಹೇಳಿದ್ದಾರೆ.