ಅಮೆರಿಕ: ಪೊಲೀಸ್ ಠಾಣೆಗೆ ಶವ ಕೊಂಡೊಯ್ದ ಭಾರತ ಮೂಲದ ಟೆಕ್ಕಿ
ಸ್ಯಾನ್ ಫ್ರಾನ್ಸಿಸ್ಕೋ, ಅಕ್ಟೋಬರ್ 17: ಸಿನಿಮೀಯ ಸನ್ನಿವೇಶವೊಂದರಲ್ಲಿ ಭಾರತ ಮೂಲದ ಅಮೆರಿಕದ ಐಟಿ ಉದ್ಯೋಗಿಯೊಬ್ಬರು ಮೃತದೇಹವನ್ನು ಕಾರಿನಲ್ಲಿರಿಸಿಕೊಂಡು ಪೊಲೀಸ್ ಠಾಣೆಗೆ ಬಂದು ಶರಣಾದ ಘಟನೆ ಉತ್ತರ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ. ಮಾತ್ರವಲ್ಲ, ತಮ್ಮ ಅಪಾರ್ಟ್ಮೆಂಟ್ನಲ್ಲಿ ಇನ್ನೂ ಮೂವರ ಹತ್ಯೆ ಮಾಡಿರುವುದಾಗಿ ಕೂಡ ತಪ್ಪೊಪ್ಪಿಕೊಂಡಿದ್ದಾರೆ.
ಎಲ್ಲ ನಾಲ್ವರೂ ಬಲಿಪಶುಗಳು ಶಂಕಿತ ಕೊಲೆಗಾರ ಶಂಕರ್ ನಾಗಪ್ಪ ಹನಗುಡ್ (53) ಅವರಿಗೆ ಸಂಬಂಧಿಸಿದವರೇ ಆಗಿದ್ದಾರೆ ಎಂದು ರೋಸ್ವಿಲ್ಲೆ ಪೊಲೀಸ್ ಇಲಾಖೆಯ ಕ್ಯಾಪ್ಟನ್ ಜೋಶುವಾ ಸಿಮನ್ ಮಂಗಳವಾರ ತಿಳಿಸಿದ್ದಾರೆ.
ಬೆಂಗಳೂರಲ್ಲಿ ಹಾಡಹಗಲೇ ವೃದ್ಧ ದಂಪತಿ ಬರ್ಬರ ಹತ್ಯೆ
ಕೆಂಪು ಬಣ್ಣದ ಮಾಜ್ದಾ 6 ಕಾರ್ನಲ್ಲಿ ಒಂದು ಶವದೊಂದಿಗೆ ಶಂಕರ್, ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ. ರೋಸ್ವಿಲ್ಲೆಯ ನಿವಾಸಿಯಾಗಿರುವ ಅವರು ಡಾಟಾ ಸ್ಪೆಷಲಿಸ್ಟ್ ಆಗಿ ಸ್ಯಾಕ್ರಮೆಂಟೊ ಪ್ರದೇಶದ ಅನೇಕ ಕಂಪೆನಿಗಳಲ್ಲಿ ಕೆಲಸ ಮಾಡಿದ್ದರು. ಅವರ ವಿರುದ್ಧ ನಾಲ್ಕು ಕೊಲೆಗಳ ಪ್ರಕರಣ ದಾಖಲಾಗಿದ್ದು, ಸೌತ್ ಪ್ಲೇಸರ್ ಜೈಲಿನಲ್ಲಿ ಇರಿಸಲಾಗಿದೆ.
ಈ ಹತ್ಯೆ ಪ್ರಕರಣ ಪ್ರದೇಶದ ಜನರಲ್ಲಿ ಕಳವಳ ಮೂಡಿಸಿದೆ. 1.30 ಲಕ್ಷ ಜನಸಂಖ್ಯೆಯಿರುವ ಪ್ಲೇಸರ್ ಕೌಂಟಿ ಸಿಟಿಯಲ್ಲಿ ತಮಗೆ ನೆನಪಿರುವಂತೆ ಈ ರೀತಿಯ ಕೊಲೆಯ ಘಟನೆ ನಡೆದಿರಲಿಲ್ಲ. ಇದು ಅತೀವ ಖೇದಕರ ಹಾಗೂ ದುಃಖದ ಸನ್ನಿವೇಶವಾಗಿದೆ ಎಂದು ಸಿಮನ್ ಹೇಳಿದ್ದಾರೆ.
ತಪ್ಪೊಪ್ಪಿಗೆ ಹೇಳಿಕೆ ನೀಡಿದ ಆರೋಪಿ
ಶಂಕರ್ ಅವರು ಹತ್ಯೆಯಾದವರಲ್ಲಿ ಒಂದು ಶವವನ್ನು ಕಾರ್ನಲ್ಲಿರಿಸಿಕೊಂಡು ಶಾಸ್ತಾ ಪೊಲೀಸ್ ಇಲಾಖೆಗೆ ತಂದಿದ್ದರು. ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದಂತೆಯೇ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದರು. ಕೂಡಲೇ ಸ್ಥಳಕ್ಕೆ ತೆರಳಿದ ಪೊಲೀಸರು ಆತ ಹೇಳಿದ್ದು ಸತ್ಯವೇ ಅಥವಾ ಸುಳ್ಳೇ ಎಂದು ಪರಿಶೀಲಿಸಿದರು. ಇಂತಹ ಘಟನೆಗಳು ದಿನವೂ ನಡೆಯುವುದಿಲ್ಲ. ಆದರೆ ನಡೆದಾಗ ತೀವ್ರ ನೋವುಂಟುಮಾಡುತ್ತವೆ ಎಂದು ಶಾಸ್ತಾ ಪೊಲೀಸ್ ಮುಖ್ಯಸ್ಥ ಪ್ಯಾರಿಶ್ ಕ್ರಾಸ್ ಹೇಳಿದರು.
ಕೆಲವು ದಿನಗಳ ಹಿಂದೆಯೇ ಹತ್ಯೆ
ಸ್ಯಾಕ್ರಮೆಂಟೊದಲ್ಲಿನ ಅಪಾರ್ಟ್ಮೆಂಟ್ಗೆ ತೆರಳಿದ ಪೊಲೀಸರಿಗೆ ಮತ್ತೆ ಮೂರು ಮೃತದೇಹಗಳು ಕಂಡುಬಂದವು. ಈ ನಾಲ್ವರ ಹೆಸರುಗಳನ್ನು ಬಹಿರಂಗಪಡಿಸಲು ಪೊಲೀಸರು ನಿರಾಕರಿಸಿದ್ದಾರೆ. ಆದರೆ ಇಷ್ಟೂ ಮಂದಿ ಶಂಕರ್ ಅವರ ಕುಟುಂಬಕ್ಕೇ ಸೇರಿದವರು ಎಂದು ಖಚಿತಪಡಿಸಿದ್ದು, ಹತ್ಯೆಗೊಳಗಾದವರಲ್ಲಿ ಇಬ್ಬರು ವಯಸ್ಕರು ಮತ್ತು ಇಬ್ಬರು ಅಪ್ತಾಪ್ತ ವಯಸ್ಸಿನವರು ಸೇರಿದ್ದಾರೆ. ಮೇಲ್ನೋಟಕ್ಕೆ ಈ ಹತ್ಯೆಗಳನ್ನು ಕೆಲವು ದಿನಗಳ ಹಿಂದೆಯೇ ಮಾಡಿರುವಂತೆ ಕಾಣಿಸುತ್ತದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಅವರ ಬೇರೆ ಸಂಬಂಧಿ ಪತ್ತೆಯಾದ ಬಳಿಕ ಉಳಿದ ಮಾಹಿತಿ ನಿಡಲಾಗುವುದು ಎಂದು ತಿಳಿಸಿದ್ದಾರೆ.
ನಡು ರಸ್ತೆಯಲ್ಲಿ ಹಿರಿಯ ವರದಿಗಾರರನ್ನು ಕೊಚ್ಚಿ ಕೊಂದ ದುಷ್ಕರ್ಮಿಗಳು
2018ರಲ್ಲಿ ಕೊನೆಯ ಕೆಲಸ
ಶಂಕರ್ ಈ ಕೃತ್ಯ ಎಸಗಿರಲು ಕಾರಣ ಬಹಿರಂಗಪಡಿಸುವುದಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಅವರ ತೆರಿಗೆ ದಾಖಲೆಗಳ ಪ್ರಕಾರ ಆಂತರಿಕ ಕಂದಾಯ ಸೇವೆಯಡಿ ಪ್ರಸಕ್ತ ವರ್ಷ ಅವರು 1,78,603 ಡಾಲರ್ ತೆರಿಗೆ ಬಾಕಿ ಉಳಿಸಿಕೊಂಡಿದ್ದರು ಎಂಬುದು ತಿಳಿದುಬಂದಿದೆ. ಸೋಷಿಯಲ್ ಇಂಟರೆಸ್ಟ್ ಸೊಲ್ಯೂಷನ್ಸ್ ಎಂಬ ಕಂಪನಿಯಲ್ಲಿ ಅವರು 2018ರಲ್ಲಿ ಕೊನೆಯ ಬಾರಿಗೆ ಕೆಲಸ ಮಾಡಿದ್ದರು ಎಂದು ದಾಖಲೆಗಳು ಹೇಳಿವೆ.
ಒಂದೇ ಒಂದು ಪ್ರಕರಣ ದಾಖಲು
ಶಂಕರ್ ಅವರು ಈ ಹಿಂದೆ ಯಾವುದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ನಿದರ್ಶನಗಳಿಲ್ಲ. 2016ರಲ್ಲಿ ಪ್ಲೇಸರ್ ಕೌಂಟಿಯಲ್ಲಿ ವೇಗವಾಗಿ ಕಾರು ಚಾಲನೆ ಮಾಡಿದ್ದು ಮಾತ್ರ ಅವರ ಮೇಲಿದ್ದ ಏಕೈಕ ಪ್ರಕರಣವಾಗಿತ್ತು. ಅವರು 2015ಕ್ಕೂ ಮೊದಲು ದಲ್ಲಾಸ್, ಟೆಕ್ಸಾಸ್, ಮೆರಿಲ್ಯಾಂಡ್ ಮತ್ತು ನ್ಯೂಜೆರ್ಸಿಗಳಲ್ಲಿ ನೆಲೆಸಿದ್ದರು. ವಿವಿಧ ತಂತ್ರಜ್ಞಾನ ಸಂಬಂಧಿ ಕಂಪೆನಿಗಳಲ್ಲಿ ಕೆಲಸ ಮಾಡಿದ್ದರು.