ಮೊದಲು ಜಾಗ ಖಾಲಿ ಮಾಡಿ; ಪಾಕ್ ಪ್ರಧಾನಿ ಇಮ್ರಾನ್ ಸುಳ್ಳು ಪ್ರಚಾರಕ್ಕೆ ಭಾರತದ ಪ್ರಬಲ ಉತ್ತರ
ನ್ಯೂಯಾರ್ಕ್, ಸೆಪ್ಟೆಂಬರ್ 25: ವಿಶ್ವ ಸಂಸ್ಥೆಯ 76ನೇ ಸಭೆಯಲ್ಲಿ (ಯುಎನ್ಜಿಎ) ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭಾಷಣವನ್ನು 'ಸುಳ್ಳು ಹಾಗೂ ದುರುದ್ದೇಶಪೂರಿತ' ಎಂದು ಕರೆದಿರುವ ಭಾರತೀಯ ಪ್ರತಿನಿಧಿ ಸ್ನೇಹಾ ದುಬೇ, ಪಾಕಿಸ್ತಾನಕ್ಕೆ ದೃಢವಾದ ಸಂದೇಶ ನೀಡಿದ್ದಾರೆ.
ಪಾಕ್ ಪ್ರಧಾನಿ ಇಮ್ರಾನ್ ಖಾನ್ಗೆ ಉತ್ತರಿಸಿರುವ ಭಾರತದ ಪ್ರತಿನಿಧಿ, 'ದುರದೃಷ್ಟವಶಾತ್, ಪಾಕಿಸ್ತಾನದ ನಾಯಕರು ವಿಶ್ವಸಂಸ್ಥೆ ಒದಗಿಸಿದ ವೇದಿಕೆಗಳನ್ನು ನನ್ನ ದೇಶದ ವಿರುದ್ಧ ಸುಳ್ಳು ಹಾಗೂ ದುರುದ್ದೇಶಪೂರಿತ ಪ್ರಚಾರವನ್ನು ಮಾಡಲು ಬಳಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಭಯೋತ್ಪಾದಕರು ಉಚಿತ ಪಾಸ್ನೊಂದಿಗೆ ಓಡಾಡಿಕೊಂಡಿರುವ ದೇಶವನ್ನು ದುಃಖಕರ ಸ್ಥಿತಿಯಂತೆ ವಿಶ್ವದ ಗಮನವನ್ನು ಬೇರೆಡೆಗೆ ಸೆಳೆಯಲು ವ್ಯರ್ಥ ಪ್ರಯತ್ನ ಮಾಡುವುದು ಕೂಡ ಇದೇ ಮೊದಲಲ್ಲ' ಎಂದು ಹೇಳಿದ್ದಾರೆ.
ಯುಎನ್ಜಿಎ ಸಭೆಯಲ್ಲಿ ವರ್ಚುಯಲ್ ಆಗಿ ಭಾಷಣ ಮಾಡಿದ್ದ ಇಮ್ರಾನ್ ಖಾನ್, ಕಾಶ್ಮೀರ ವಿಚಾರವನ್ನು ಪ್ರಸ್ತಾಪಿಸಿದ್ದರು ಹಾಗೂ ಈ ಸಂಬಂಧ ಭಾರತೀಯ ಸರ್ಕಾರವನ್ನು ಟೀಕಿಸಿದ್ದರು. ಈಚೆಗೆ ಇದೇ ವಿಷಯದ ಕುರಿತು ಖಾನ್ ಭಾರತವನ್ನು ಹಲವಾರು ಬಾರಿ ಟೀಕಿಸಿದ್ದರು.
'ಪಾಕಿಸ್ತಾನ ಭಯೋತ್ಪಾದಕರನ್ನು ಆಶ್ರಯಿಸುವ, ಅವರಿಗೆ ನೆರವಾಗುವ ಹಾಗೂ ಸಕ್ರಿಯವಾಗಿ ಬೆಂಬಲ ನೀಡುವ ನೀತಿಯನ್ನು ಹೊಂದಿದೆ ಎಂಬುದನ್ನು ಸದಸ್ಯ ರಾಷ್ಟ್ರಗಳಿಗೆ ತಿಳಿದಿರುವ ಸಂಗತಿ' ಎಂಬುದನ್ನು ಭಾರತೀಯ ಪ್ರತಿನಿಧಿ ಒತ್ತಿಹೇಳಿದರು. ಇಸ್ಲಾಮಾಬಾದ್ ತಾನು ಕಾನೂನುಬಾಹಿರವಾಗಿ ಆಕ್ರಮಣ ಮಾಡಿಕೊಂಡಿರುವ ಎಲ್ಲಾ ಪ್ರದೇಶಗಳನ್ನು ತಕ್ಷಣವೇ ತೊರೆಯಬೇಕು ಎಂದು ಕರೆ ನೀಡಿದರು.
'ಜಾಗತಿಕ ಒಳಿತಿನ ಬಲ'ವಾಗಿ ಕಾರ್ಯನಿರ್ವಹಿಸಲಿದೆ ಕ್ವಾಡ್ ಸಭೆ; ಮೋದಿ
ರಾಷ್ಟ್ರವ್ಯಾಪಿ ಭಯೋತ್ಪಾದಕರನ್ನು ಬಹಿರಂಗವಾಗಿ ಬೆಂಬಲಿಸುವುದು, ತರಬೇತಿ ನೀಡುವುದು, ಹಣಕಾಸು ಒದಗಿಸುವುದು ಹಾಗೂ ಶಸ್ತ್ರಾಸ್ತ್ರಗಳನ್ನು ಒದಗಿಸುವ ವಿಷಯದಲ್ಲಿ ಜಾಗತಿಕವಾಗಿ ಗುರುತಿಸಲಾದ ದೇಶ ಪಾಕಿಸ್ತಾನ ಎಂಬುದು ಎಲ್ಲಾ ಸದಸ್ಯ ದೇಶಗಳಿಗೆ ತಿಳಿದಿದೆ. ಆದರೂ ನನ್ನ ದೇಶದ ವಿರುದ್ಧ ದುರುದ್ದೇಶಪೂರಿತ ಪ್ರಚಾರವನ್ನು ಮಾಡುತ್ತಲೇ ಇದ್ದಾರೆ ಎಂದು ದುಬೆ ಆರೋಪಿಸಿದರು.
'ಜಮ್ಮು ಕಾಶ್ಮೀರ ಹಾಗೂ ಲಡಾಖ್ನ ಸಂಪೂರ್ಣ ಕೇಂದ್ರಾಡಳಿತ ಪ್ರದೇಶಗಳು ಭಾರತದ ಅವಿಭಾಜ್ಯ ಅಂಗವಾಗಿದೆ. ಪಾಕಿಸ್ತಾನದ ಅಕ್ರಮ ವಶದಲ್ಲಿರುವ ಪ್ರದೇಶಗಳನ್ನು ಇದು ಒಳಗೊಂಡಿದೆ. ಪಾಕಿಸ್ತಾನ ತಾನು ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಎಲ್ಲಾ ಪ್ರದೇಶಗಳಿಂದ ತಕ್ಷಣವೇ ಹಿನ್ನಡೆಯಬೇಕು ಎಂದು ನಾವು ಹೇಳುತ್ತೇವೆ' ಎಂದು ದೃಢವಾದ ಸಂದೇಶ ರವಾನಿಸಿದರು.
ಸೆಪ್ಟೆಂಬರ್ 25 ರಂದು ನ್ಯೂಯಾರ್ಕ್ ನಲ್ಲಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯ (ಯುಎನ್ ಜಿಎ) 76ನೇ ಅಧಿವೇಶನದ ಉನ್ನತ ಮಟ್ಟದ ವಿಭಾಗದ ಸಾಮಾನ್ಯ ಚರ್ಚೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹವಾಮಾನ ಬದಲಾವಣೆ, ಭಯೋತ್ಪಾದನೆ ಹಾಗೂ ಕೊರೊನಾ ವೈರಸ್ ಸಾಂಕ್ರಾಮಿಕ ಸೇರಿದಂತೆ ಜಾಗತಿಕ ಸಮಸ್ಯೆಗಳ ಬಗ್ಗೆ ಮಾತನಾಡಲಿದ್ದಾರೆ.
ಕ್ವಾಡ್ ರಾಷ್ಟ್ರಗಳ ನಾಯಕರ ಶೃಂಗಸಭೆ: ಮಾರಿಸನ್ -ಮೋದಿ ದ್ವಿಪಕ್ಷೀಯ ಸಭೆ
2014ರಲ್ಲಿ ಪ್ರಧಾನಿಯಾಗಿ ನರೇಂದ್ರ ಮೋದಿ ಅಧಿಕಾರವಹಿಸಿಕೊಂಡ ಬಳಿಕ 7ನೇ ಬಾರಿಗೆ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ. ಶನಿವಾರ ಬೆಳಿಗ್ಗೆ ಮೋದಿ ನ್ಯೂಯಾರ್ಕ್ಗೆ ಭೇಟಿ ನೀಡಿದ್ದು, ಅಲ್ಲಿನ ಭಾರತೀಯರು ಮೋದಿಯನ್ನು ಸ್ವಾಗತಿಸಿದ್ದಾರೆ.
ಜಪಾನ್, ಆಸ್ಟ್ರೇಲಿಯಾ ಹಾಗೂ ಅಮೆರಿಕ ನಾಯಕರೊಂದಿಗೆ ಶುಕ್ರವಾರ ಶ್ವೇತಭವನದಲ್ಲಿ ಪ್ರಧಾನಿ ಮೋದಿ ಕ್ವಾಡ್ ಶೃಂಗಸಭೆಯಲ್ಲಿ ಭಾಗವಹಿಸಿದ್ದರು.
ಕ್ವಾಡ್ ನಾಯಕರ ಸಭೆಯಲ್ಲಿ ತಮ್ಮ ಆರಂಭಿಕ ಭಾಷಣದಲ್ಲಿ ಮಾತನಾಡಿದ ಮೋದಿ, 'ಜಾಗತಿಕ ಒಳಿತಿನ ಬಲವಾಗಿ ಕ್ವಾಡ್ ಸಭೆ ಕಾರ್ಯನಿರ್ವಹಿಸಲಿದೆ' ಎಂದು ಹೇಳಿದ್ದಾರೆ. ಭಾರತ, ಅಮೆರಿಕ, ಆಸ್ಟ್ರೇಲಿಯಾ ಹಾಗೂ ಜಪಾನ್ ಸೇರಿದಂತೆ ನಾಲ್ಕು ದೇಶಗಳ ನಡುವಿನ ಸಹಕಾರವು ಇಂಡೋ-ಪೆಸಿಫಿಕ್ನಲ್ಲಿ ಶಾಂತಿ ಹಾಗೂ ಸಮೃದ್ಧಿಯನ್ನು ಖಾತ್ರಿಪಡಿಸಲಿದೆ ಎಂದು ಭರವಸೆ ನೀಡಿದರು.