'ಅಕ್ಬರ್' ದಿ ಗ್ರೇಟ್: ಸೈಯದ್ ಅಕ್ಬರುದ್ದೀನ್ ಉತ್ತರಕ್ಕೆ ಪಾಕ್ ಪತ್ರಕರ್ತರು ಗಪ್ಚುಪ್!
ವಾಷಿಂಗ್ಟನ್, ಆಗಸ್ಟ್ 17: ಜಮ್ಮು ಮತ್ತು ಕಾಶ್ಮೀರದ ವಿಚಾರದಲ್ಲಿ ಭಾರತ ತೆಗೆದುಕೊಂಡ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಅನೌಪಚಾರಿಕ ಸಭೆ ನಡೆಸುವಲ್ಲಿ ಯಶಸ್ವಿಯಾದ ಚೀನಾ ಮತ್ತು ಪಾಕಿಸ್ತಾನಗಳು, ಅದರಿಂದ ಬಂದ ಫಲಿತಾಂಶದಿಂದ ಪೆಚ್ಚಾಗಿವೆ.
ಜಾಗತಿಕಮಟ್ಟದಲ್ಲಿ ಭಾರತಕ್ಕೆ ಮುಖಭಂಗ ಮಾಡುತ್ತೇವೆ ಎಂಬ ಹುಮ್ಮಸ್ಸಿನೊಂದಿಗೆ ಹೊರಟಿದ್ದ ಪಾಕಿಸ್ತಾನ ಮತ್ತು ಅದಕ್ಕೆ ಬೆಂಬಲವಾಗಿರುವ ಚೀನಾ ಎರಡೂ ತಾವೇ ಮುಖಭಂಗ ಅನುಭವಿಸಿವೆ. ಇದು ಅನೌಪಚಾರಿಕ ಸಭೆಯಾಗಿದ್ದರಿಂದ ಇಲ್ಲಿ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದು ಅನ್ವಯವಾಗುವುದಿಲ್ಲ.
ವಿಡಿಯೋ: ಪಾಕಿಸ್ತಾನಿ ಪತ್ರಕರ್ತರಿಗೆ 'ಸ್ನೇಹ ಹಸ್ತ' ನೀಡಿದ ಭಾರತ ರಾಯಭಾರಿ
ಈ ನಡುವೆ ವಿಶ್ವಸಂಸ್ಥೆಯಲ್ಲಿನ ಭಾರತದ ರಾಯಭಾರಿ ಸಯ್ಯದ್ ಅಕ್ಬರುದ್ದೀನ್ ಅವರು ಶುಕ್ರವಾರ ನಡೆದುಕೊಂಡ ಬಗೆ ವ್ಯಾಪಕ ಮೆಚ್ಚುಗೆಗೆ ಒಳಗಾಗಿದೆ. ಪಾಕಿಸ್ತಾದ ಪತ್ರಕರ್ತರು ಕೇಳಿದ ಉರಿಯುವ ಪ್ರಶ್ನೆಗಳಿಗೆ ಅಷ್ಟೇ ತಣ್ಣನೆಯ ಮತ್ತು ಹಾಸ್ಯದ ದಾಟಿಯಲ್ಲಿ ಉತ್ತರ ನೀಡುವ ಮೂಲಕ ಅವರನ್ನು ಕಕ್ಕಾಬಿಕ್ಕಿಯನ್ನಾಗಿಸಿದ ಅಕ್ಬರುದ್ದೀನ್ ಅವರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಯ ಮಹಾಪೂರವೇ ಹರಿಯುತ್ತಿದೆ.
ಈ ಮೊದಲು ವಿದೇಶಾಂಗ ವ್ಯವಹಾರಗಳ ವಕ್ತಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶ ಪ್ರವಾಸದ ಸಂದರ್ಭಗಳಲ್ಲಿ ಅವರ ವಕ್ತಾರರಾಗಿದ್ದ ಅಕ್ಬರುದ್ದೀನ್ ಅವರು, ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರನ್ನು ಎದುರಿಸಿದರು.
ಈಗಲೇ ಮಾತುಕತೆ ಆರಂಭಿಸೋಣ
ಸುದ್ದಿಗೋಷ್ಠಿಯ ವೇಳೆ ಪಾಕಿಸ್ತಾನ ಪತ್ರಕರ್ತರೊಬ್ಬರು, 'ಪಾಕಿಸ್ತಾನದೊಂದಿಗೆ ಯಾವಾಗ ಮಾತುಕತೆ ಆರಂಭಿಸುತ್ತೀರಿ?' ಎಂದು ಪ್ರಶ್ನಿಸಿದರು. ಕೂಡಲೇ ವೇದಿಕೆಯಿಂದ ಕೆಳಗಿಳಿದು ಪತ್ರಕರ್ತರತ್ತ ನಡೆದ ಅಕ್ಬರುದ್ದೀನ್, 'ಗೆಳೆಯ ಈಗಲೇ ಇಲ್ಲಿಂದಲೇ ನಿಮ್ಮ ಮೂಲಕ ಮಾತುಕತೆ ಆರಂಭಿಸೋಣ. ನಿಮ್ಮ ಹಸ್ತಲಾಘವ ನೀಡಿ' ಎಂದು ತಮಾಷೆ ಮಾಡುತ್ತಾ ಅವರ ಕೈಕುಲುಕಿದರು.
'ಶಿಮ್ಲಾ ಒಪ್ಪಂದಕ್ಕೆ ನಾವು ಬದ್ಧರಾಗಿದ್ದೇವೆ ಎಂಬುದನ್ನು ಸ್ಪಷ್ಟಪಡಿಸುವ ಮೂಲಕ ನಾವು ಈಗಾಗಲೇ ನಮ್ಮ ಸ್ನೇಹದ ಹಸ್ತವನ್ನು ಚಾಚಿದ್ದೇವೆ. ಪಾಕಿಸ್ತಾನದ ಕಡೆಯಿಂದ ಪ್ರತಿಕ್ರಿಯೆಗೆ ನಾವು ಕಾಯೋಣ' ಎಂದು ಹೇಳಿದರು.
ಇಲ್ಲಿ ಬಂದವರು ಹಾಗೆ ಹೋದರು
ಭದ್ರತಾ ಮಂಡಳಿಯ ಸಭೆ ನಡೆದ ಬಳಿಕ ಪಾಕಿಸ್ತಾನದ ಕಾಯಂ ಪ್ರತಿನಿಧಿ ಮಲೀಹಾ ಲೋಧಿ ಮತ್ತು ಚೀನಾದ ಕಾಯಂ ಪ್ರತಿನಿಧಿ ಝಾಂಗ್ ಜುನ್, ಪತ್ರಕರ್ತರ ಯಾವುದೇ ಪ್ರಶ್ನೆಗಳಿಗೆ ಉತ್ತರ ನೀಡದೆ ಅಲ್ಲಿಂದ ತೆರಳಿದ್ದರು. ಆದರೆ, ಅಲ್ಲಿ ಸುದ್ದಿಗಾರರಿಗೆ ಮುಖಾಮುಖಿಯಾದ ಅಕ್ಬರುದ್ದೀನ್, ಖಡಕ್ ಉತ್ತರಗಳನ್ನು ನೀಡಿದರು.
'ಇಲ್ಲಿಗೆ ಬಂದ ಜನರು ಸುಮ್ಮನೆ ಹೊರಟುಬಿಟ್ಟರು. ಆದರೆ, ಮುಕ್ತ ಪ್ರಜಾಪ್ರಭುತ್ವದ ಪ್ರತಿನಿಧಿಯಾದ ನಾನು ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧನಿದ್ದೇನೆ' ಎಂದು ಪಾಕಿಸ್ತಾನ ಮತ್ತು ಚೀನಾ ಪ್ರತಿನಿಧಿಗಳ ಕುರಿತು ಬಾಣ ಬಿಟ್ಟರು.
ನಿಮ್ಮ ಪ್ರಶ್ನೆಗಳನ್ನು ಶೂಟ್ ಮಾಡಬಹುದು ಎಂದು ಅಕ್ಬರುದ್ದೀನ್, ಪಾಕಿಸ್ತಾನದ ಪತ್ರಕರ್ತರನ್ನು ಉದ್ದೇಶಿಸಿ ಹೇಳಿದರು.
ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಮತ್ತೆ ಮುಖಭಂಗ, ಸಿಕ್ಕಿದ್ದು ಚೀನಾ ಬೆಂಬಲ ಮಾತ್ರ
ಮಾತುಕತೆ ಆರಂಭಿಸಲು ಭಯೋತ್ಪಾದನೆ ನಿಲ್ಲಿಸಿ
'ನೆರೆಯ ದೇಶಗಳೊಂದಿಗೆ ಭಾರತ ಏಕೆ ಸಂಪರ್ಕ ಹೊಂದಿಲ್ಲ. ಮಾತುಕತೆಯ ಮನವಿಗಳಿಗೆ ಭಾರತ ಏಕೆ ಸ್ಪಂದಿಸುತ್ತಿಲ್ಲ?' ಎಂದು ಪಾಕಿಸ್ತಾನದ ಪತ್ರಕರ್ತರೊಬ್ಬರು ಕೇಳಿದರು. ಅದಕ್ಕೆ ಅಕ್ಬರುದ್ದೀನ್, 'ಮಾತುಕತೆ ಆರಂಭಿಸಲು ಭಯೋತ್ಪಾದನೆ ನಿಲ್ಲಿಸಿ' ಎಂದು ತೀಕ್ಷ್ಣ ಉತ್ತರ ನೀಡಿದರು.
'ದೇಶಗಳು ಪರಸ್ಪರ ವ್ಯವಹರಿಸುವ ಸಂದರ್ಭದಲ್ಲಿ ದೇಶಗಳು ವ್ಯವಹಾರಕ್ಕೆ ಸಾಮಾನ್ಯ ರಾಜತಾಂತ್ರಿಕ ಮಾರ್ಗಗಳನ್ನು ಬಳಸಿಕೊಳ್ಳುತ್ತವೆ. ಆದರೆ, ಭಯೋತ್ಪಾದನೆಯನ್ನು ಬಳಸಿ ಪ್ರಯತ್ನಿಸುವುದು ಮತ್ತು ನಿಮ್ಮ ಗುರಿಯನ್ನು ಮುಂದಿಡುವುದು ಸಾಮಾನ್ಯವಾಗಿ ದೇಶಗಳು ವರ್ತಿಸುವ ರೀತಿಯದ್ದಲ್ಲ. ಭಯೋತ್ಪಾದನೆಯ ಚಟುವಟಿಕೆಗಳು ಇರುವ ಸಂದರ್ಭದಲ್ಲಿ ಯಾವುದೇ ಪ್ರಜಾಪ್ರಭುತ್ವವಾದಿ ದೇಶ ಮಾತುಕತೆಯನ್ನು ಬಯಸುವುದಿಲ್ಲ ಅಥವಾ ಒಪ್ಪುವುದಿಲ್ಲ' ಎಂದರು.
ಕಾಶ್ಮೀರವು ಭಾರತದ ಆಂತರಿಕ ವಿಚಾರ
ಕಾಶ್ಮೀರವು ಭಾರತದ ಆಂತರಿಕ ವಿಚಾರ ಎಂದು ಆಕಸ್ಮಿಕವಾಗಿ ಹೇಳಿದ ಪಾಕ್ ಪತ್ರಕರ್ತನಿಗೆ ಅಕ್ಬರುದ್ದೀನ್ ಧನ್ಯವಾದ ಹೇಳಿದರು. ಪರಿಚ್ಛೇದ 370ರ ವಿಚಾರವೆತ್ತಿದ ಪತ್ರಕರ್ತ, 'ಅದು ಭಾರತದ ಆಂತರಿಕ ವಿಚಾರವಾಗಿರಬಹುದು' ಎಂದರು. ಕೂಡಲೇ ಅವರಿಗೆ ಪ್ರತಿಕ್ರಿಯೆ ನೀಡಿದ ಅಕ್ಬರುದ್ದೀನ್, 'ಅದನ್ನು ಒಪ್ಪಿಕೊಂಡಿದ್ದಕ್ಕೆ ಧನ್ಯವಾದಗಳು' ಎಂದು ಹೇಳಿದರು.
'ಪರಿಚ್ಛೇದ 370 ಭಾರತದ ಸಂವಿಧಾನದಲ್ಲಿ ಒಳಗೊಂಡಿದೆ' ಎಂದಾಗ 'ಧನ್ಯವಾದಗಳು, ಭಾರತವು ಅದನ್ನು ಒಳಗೊಂಡಿದೆ' ಎಂದರು.
ಭಾರತವು ಮುಕ್ತ ಪ್ರಜಾಪ್ರಭುತ್ವ ಎನ್ನುವ ಕಲ್ಪನೆಗೆ ಕಾಶ್ಮೀರದಲ್ಲಿ ಹೇರಿರುವ ನಿರ್ಬಂಧಗಳು ಕಳಂಕ ತಂದಿವೆಯಲ್ಲ ಎಂದು ಮತ್ತೊಬ್ಬರು ಪ್ರಶ್ನಿಸಿದರು. 'ನಮ್ಮ ಪ್ರಜಾಪ್ರಭುತ್ವದ ಸಮೃದ್ಧಿಯನ್ನು ಬಲಪಡಿಸಲು ಸಾರ್ವಜನಿಕ ಆದೇಶಗಳು ಅಗತ್ಯವಾಗಿರುತ್ತವೆ. ಯಾವುದೇ ಸಾರ್ವಜನಿಕ ಆದೇಶವಿಲ್ಲದೆ ಪ್ರಜಾಪ್ರಭುತ್ವ ಕಾರ್ಯನಿರ್ವಹಿಸಲಾಗದು. ಅಲ್ಲಿ ಸಕಾರಣ ನಿರ್ಬಂಧಗಳಿವೆ ಮತ್ತು ಅಲ್ಲಿ ನಿರ್ಬಂಧಗಳಿರುವುದು ನಮಗೆ ಗೊತ್ತಿದೆ ಹಾಗೂ ಅವುಗಳನ್ನು ಸಡಿಲಿಸಲಾಗುತ್ತಿದೆ ಎಂದು ಹೇಳಿದರು.
ಭಾರತದ ಮೇಲಿನ ಸಿಟ್ಟಿಗೆ ಪಾಕ್ನಲ್ಲಿ ಬಾಲಿವುಡ್ ಸಿಡಿಗಳು ಪುಡಿಪುಡಿ
ಮಾನವಹಕ್ಕುಗಳ ಉಲ್ಲಂಘನೆ ಬಗ್ಗೆ ವಿಶ್ವಸಂಸ್ಥೆಯೇ ಹೇಳಿಲ್ಲ
ಭಾರತೀಯ ಪಡೆಗಳಿಂದ ಮಾನವಹಕ್ಕುಗಳ ಉಲ್ಲಂಘನೆಯಾಗುತ್ತಿವೆ ಎಂದು ಜಾಗತಿಕ ಸಂಸ್ಥೆಗಳು ಹೇಳುತ್ತಿವೆ. ಆದರೆ, ಪಾಕಿಸ್ತಾನ ಭಯೋತ್ಪಾದನೆ ಪ್ರೋತ್ಸಾಹಿಸುತ್ತಿದೆ ಎಂದು ನೀವು ಹೇಳುತ್ತೀರಿ? ಎಂದು ಮತ್ತೊಂದು ಪ್ರಶ್ನೆ ತೂರಿಬಂತು.
'ನೀವು ಜಾಗತಿಕ ಸಂಸ್ಥೆಗಳು ಎಂಬ ಪದವನ್ನು ಯಾವ ರೀತಿ ಅರ್ಥೈಸಿದ್ದೀರಿ ನನಗೆ ಗೊತ್ತಿಲ್ಲ. ವಿಶ್ವಸಂಸ್ಥೆ ಈವರೆಗೂ ಭಾರತದ ಬಗ್ಗೆ ಏನನ್ನೂ ಹೇಳಿಲ್ಲ. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ, ಮಾನವ ಹಕ್ಕುಗಳಿಗೆ ಭಾರತ ಹೊಂದಿರುವ ಬದ್ಧತೆಯ ಬಗ್ಗೆ ಇಲ್ಲಿ ಆಕ್ಷೇಪ ಕೇಳಿಬಂದಿಲ್ಲ. 'ಎಲ್ಲ ಪುರುಷರೂ ಸಮಾನರು' ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಘೋಷಣೆಯಲ್ಲಿದ್ದ ವಾಕ್ಯವನ್ನು, 'ಎಲ್ಲ ಮನುಷ್ಯರೂ ಸಮಾನರು' ಎಂದು ಬದಲಿಸಲು ಕಾರಣ ಭಾರತ. ಪುರುಷರು ಮತ್ತು ಮಹಿಳೆಯರು ಸಮಾನರು ಎಂಬುದನ್ನು ಹೇಳಿದವರು ನಾವು.
ನಮ್ಮ ಸಂವಿಧಾನವು ತೆರೆದ ಪುಸ್ತಕ. ನಮ್ಮ ಶಾಸಕಾಂಗದಲ್ಲಿ ನಡೆಯುವುದನ್ನು ಮುಚ್ಚಿಡುವುದಿಲ್ಲ. ನೀವು ಟಿವಿ ಹಚ್ಚಿ ನೋಡಿ, ಭಾರತದಲ್ಲಿರುವ ವಿವಿಧ ಧ್ವನಿಗಳು ನಿಮಗೆ ಕಾಣಿಸುತ್ತವೆ. ಹಾಗೊಮ್ಮೆ ನಮ್ಮ ದೇಶದಲ್ಲಿ ಸಮಸ್ಯೆ ಇದ್ದರೆ ನಮ್ಮದೇ ದೇಶದ ನ್ಯಾಯಾಲಯಗಳು ಸರಿಪಡಿಸುತ್ತವೆ. ಜಾಗತಿಕ ಸಂಸ್ಥೆಗಳು ದೇಶದ ಆಂತರಿಕ ವ್ಯವಹಾರಗಳಲ್ಲಿ ಮೂಗು ತೂರಿಸುವ ಅಗತ್ಯವಿಲ್ಲ. ನಮ್ಮ ಬದುಕು ಹೇಗೆ ಇರಬೇಕು ಎಂದು ನಿರ್ದೇಶಿಸುವ ಅಗತ್ಯ ಕೂಡ ಇಲ್ಲ.
ಪಾಕ್ ಮತ್ತು ಚೀನಾದ್ದು ಜಾಗತಿಕ ಅಭಿಪ್ರಾಯವಲ್ಲ
ಭದ್ರತಾ ಮಂಡಳಿಯಲ್ಲಿ ಗೋಪ್ಯ ಸಮಾಲೋಚನೆ ಬಳಿಕ ಎರಡು ದೇಶಗಳು ತಮ್ಮ ಹೇಳಿಕೆಗಳನ್ನೇ ಅಂತಾರಾಷ್ಟ್ರೀಯ ಸಮುದಾಯದ ಅಭಿಪ್ರಾಯ ಎಂಬಂತೆ ಬಿಂಬಿಸಲು ಪ್ರಯತ್ನಿಸುತ್ತಿವೆ. ಭದ್ರತಾ ಮಂಡಳಿ ಯಾವ ರೀತಿ ಕಾರ್ಯ ನಿರ್ವಹಿಸುತ್ತದೆ ಎನ್ನುವುದು ನಿಮಗೆ ತಿಳಿದಿದೆ. ಅದನ್ನು ನಾನು ವಿವರಿಸುವ ಅಗತ್ಯವಿಲ್ಲ ಎಂದು ಭಾವಿಸುತ್ತೇನೆ. ಭದ್ರತಾ ಮಂಡಳಿ ವ್ಯವಸ್ಥಿತವಾಗಿ ಕೆಲಸ ಮಾಡುತ್ತದೆ. ಅದರ ನಿರ್ಣಯಗಳನ್ನು ಅಧ್ಯಕ್ಷರು ಪ್ರಕಟಿಸುತ್ತಾರೆ. ಕೆಲವು ದೇಶಗಳು ತಮ್ಮ ಹೇಳಿಕೆಗಳನ್ನೇ ಜಾಗತಿಕ ಅಭಿಪ್ರಾಯ ಎಂಬಂತೆ ಬಿಂಬಿಸಲು ಯತ್ನಿಸುತ್ತಿರುವುದರಿಂದ ನಾನು ನಿಮ್ಮ ಮುಂದೆ ನಮ್ಮ ದೇಶದ ನಿಲುವನ್ನು ಸ್ಪಷ್ಟಪಡಿಸಲು ನಿರ್ಧರಿಸಿದ್ದೇನೆ.
ನಮ್ಮ ದೇಶದ ಸಂವಿಧಾನದ 370ನೇ ವಿಧಿಗೆ ಸಂಬಂಧಿಸಿದಂತೆ ಕೆಲವರು ತಗಾದೆ ಎತ್ತುತ್ತಿದ್ದಾರೆ. ಇದು ಸಂಪೂರ್ಣವಾಗಿ ಭಾರತದ ಆಂತರಿಕ ವಿಚಾರ ಎನ್ನುವುದು ನಮ್ಮ ಹಿಂದಿನ ಮತ್ತು ಈಗಿನ ನಿಲುವು. ಆಂತರಿಕ ವಿಚಾರಗಳಲ್ಲಿ ಹೊರಗಿನವರ ಪ್ರವೇಶವನ್ನು ನಾವು ಸಹಿಸುವುದಿಲ್ಲ.
ಭಾರತದ ನಿರ್ಧಾರವನ್ನು ಸ್ವಾಗತಿಸಲಾಗಿದೆ
ಜಮ್ಮು ಮತ್ತು ಕಾಶ್ಮೀರ, ಲಡಾಕ್ನಲ್ಲಿ ಆಡಳಿತ ಸುಧಾರಣೆ ಮತ್ತು ಸಾಮಾಜಿಕ ಆರ್ಥಿಕ ಅಭಿವೃದ್ಧಿಗಾಗಿ ಭಾರತ ಸರ್ಕಾರ ಮತ್ತು ಸಂಸತ್ತು ಇತ್ತೀಚೆಗೆ ತೆಗೆದುಕೊಂಡ ನಿರ್ಧಾರಗಳು ನಿಮಗೆ ತಿಳಿದಿರಬಹುದು. ಜಮ್ಮು ಮತ್ತು ಕಾಶ್ಮೀರದ ಮುಖ್ಯ ಕಾರ್ಯದರ್ಶಿ ರಾಜ್ಯದಲ್ಲಿ ಸಾಮಾನ್ಯ ಸ್ಥಿತಿ ಮೂಡಿಸಲು ಅಗತ್ಯವಿರುವ ಹಲವು ಕ್ರಮಗಳನ್ನು ತೆಗೆದುಕೊಂಡಿದ್ದಾರೆ.
ಈ ನಿರ್ಧಾರಗಳನ್ನು ಭದ್ರತಾ ಮಂಡಳಿಯ ಗೋಪ್ಯ ಸಭೆಯಲ್ಲಿ ಶ್ಲಾಘಿಸಲಾಗಿದೆ. ಈ ನಿಟ್ಟಿನಲ್ಲಿಯೇ ಜಾಗತಿಕ ಸಮುದಾಯ ಮುನ್ನಡೆಯಬೇಕು ಎಂದು ಅಭಿಪ್ರಾಯಪಟ್ಟಿರುವುದಾಗಿ ಗೊತ್ತಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಿಸಿರುವ ಎಲ್ಲ ನಿರ್ಬಂಧಗಳನ್ನು ತೆರವುಗೊಳಿಸಲು ಬದ್ಧರಾಗಿದ್ದೇವೆ ಎಂಬುದನ್ನು ಪುನರುಚ್ಚರಿಸುತ್ತೇವೆ. ನಮ್ಮ ವಿದೇಶಾಂಗ ನೀತಿಗಳಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಕಾಶ್ಮೀರದಲ್ಲಿನ ಬದಲಾವಣೆಗಳು ನಮ್ಮ ಆಂತರಿಕ ಸಂಗತಿ. ಅಲ್ಲಿ ಶಾಂತಿ ನೆಲೆಸುವಂತೆ ಮಾಡಲು ನಾವು ಬದ್ಧರಾಗಿದ್ದೇವೆ. ಈ ವಿಚಾರಕ್ಕೆ ಮಾಡಿರುವ ಎಲ್ಲ ಒಪ್ಪಂದಗಳಿಗೂ ಭಾರತ ಬದ್ಧವಾಗಿರುತ್ತದೆ.
ಹಿಂಸಾಚಾರ ನಡೆಸಲು ಯತ್ನ
'ಕಾಶ್ಮೀರದಲ್ಲಿ ಏನೋ ನಡೆದುಬಿಟ್ಟಿದೆ ಎಂಬಂತೆ ಬಿಂಬಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಅದು ಸತ್ಯಕ್ಕೆ ದೂರ. ಒಂದು ದೇಶವು ಜಿಹಾದ್ ಎಂಬ ಪದ ಬಳಸುವ ಮೂಲಕ ಭಾರತದಲ್ಲಿ ಹಿಂಸಾಚಾರ ನಡೆಸಲು ಯತ್ನಿಸುತ್ತಿದೆ. ಆ ದೇಶದ ನಾಯಕರು ಅದನ್ನು ಬೆಂಬಲಿಸುತ್ತಿದ್ದಾರೆ. ಪಾಕಿಸ್ತಾನ ಅಥವಾ ಭಾರತದ ಜತೆಗೆ ಯಾವುದೇ ದೇಶದ ಸಮಸ್ಯೆ ಅಥವಾ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದು. ಆದರೆ, ಜಿಹಾದ್ನ ಅಪಾಯಗಳ ಬಗ್ಗೆ ಚೆನ್ನಾಗಿ ತಿಳಿದವರೇ ಅದನ್ನು ಮಾತನಾಡುತ್ತಿದ್ದಾರೆ.
ಕಾಶ್ಮೀರದಲ್ಲಿ ಹಿಂಸಾಕೃತ್ಯ ನಡೆದಿಲ್ಲ
ಹತ್ತು ದಿನಗಳಿಂದ ಕಾಶ್ಮೀರ ಕಣಿವೆಯಲ್ಲಿ ಒಂದೂ ಹಿಂಸಾಕೃತ್ಯ ನಡೆದಿಲ್ಲ. ಸಾವುನೋವು ಸಂಭವಿಸಿಲ್ಲ. ರೋಗ ಬರುವ ಮೊದಲು ಎಚ್ಚರಿಕೆವಹಿಸುವುದು ಒಳಿತಲ್ಲವೇ? ಈಗ ನಾವು ತೆಗೆದುಕೊಂಡಿರುವುದು ಮುಂಜಾಗ್ರತಾ ಕ್ರಮಗಳನ್ನು ಮಾತ್ರ. ಉಗ್ರರು ದೇಶದ ಜನರ ರಕ್ತ ಹರಿಸುವುದನ್ನು ತಡೆಯಲು ಇಂತಹ ಕ್ರಮಗಳು ಅನಿವಾರ್ಯವಾಗಿತ್ತು. ಕೆಲವೊಮ್ಮೆ ಇಂತಹ ಕ್ರಮಗಳು ನಿರ್ಬಂಧಗಳಿಗೆ ಕಾರಣವಾಗುತ್ತವೆ.
ನಿರ್ಬಂಧವನ್ನು ಯಾವಾಗ, ಎಷ್ಟು ಸಡಿಲಿಸಬೇಕು ಎನ್ನುವ ನಿರ್ಧಾರವನ್ನು ಆಡಳಿತಗಾರರು ತೆಗೆದುಕೊಳ್ಳಬೇಕು. ಇಲ್ಲಿರುವ ಪತ್ರಕರ್ತರು ಮತ್ತು ರಾಜತಾಂತ್ರಿಕರು ಅಲ್ಲ. ವಿಶ್ವದ ಇತರೆಡೆ ಮತ್ತು ಈ ಹಿಂದೆ ಜಮ್ಮು ಮತ್ತು ಕಾಶ್ಮೀರದಲ್ಲಿ ಇಂತಹ ದೊಡ್ಡ ನಿರ್ಣಯ ತೆಗೆದುಕೊಂಡಾಗ ದೊಡ್ಡ ಸಂಖ್ಯೆಯ ಸಾವುನೋವು ಸಂಭವಿಸುತ್ತಿತ್ತು. ಆದರೆ, ಈ ಬಾರಿ ಹಾಗೇನೂ ಆಗಿಲ್ಲ.