2012ರಿಂದ 2016ರ ವರೆಗೆ ಭಾರತದ ಅಭಿವೃದ್ಧಿ ವೇಗ ಚೆನ್ನಾಗಿತ್ತು: ರಾಜನ್
ವಾಷಿಂಗ್ಟನ್, ನವೆಂಬರ್ 10 : ಅಪನಗದೀಕರಣ ಹಾಗೂ ಜಿಎಸ್ ಟಿ ಜಾರಿಯಿಂದ ಭಾರತದ ಆರ್ಥಿಕ ಪ್ರಗತಿಗೆ ಹಿನ್ನಡೆಯಾಯಿತು. ಸದ್ಯದ ಏಳು ಪರ್ಸೆಂಟ್ ಅಭಿವೃದ್ಧಿ ದರ ದೇಶದ್ ಅಗತ್ಯವನ್ನು ಪೂರೈಸಲು ಸಾಕಾಗುವುದಿಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಗವರ್ನರ್ ರಘುರಾಮ್ ರಾಜನ್ ಅಭಿಪ್ರಾಯ ಪಟ್ಟಿದ್ದಾರೆ.
ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಬರ್ಕ್ಲೇ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಮಾತನಾಡಿದ ಅವರು, 2012ರಿಂದ 2016ರ ವರೆಗೆ ಭಾರತದ ಅಭಿವೃದ್ಧಿ ವೇಗ ಚೆನ್ನಾಗಿತ್ತು. ಆದರೆ ಈ ಎರಡರಿಂದ (ಅಪನಗದೀಕರಣ, ಜಿಎಸ್ ಟಿ ಜಾರಿ) ಹಿನ್ನಡೆ ಆಯಿತು ಎಂದು ಅವರು ಹೇಳಿದ್ದಾರೆ.
ಆರ್ ಬಿಐ ಹಾಗೂ ಕೇಂದ್ರ ಸರಕಾರದ ಸಂಬಂಧ ವಿವರಿಸಿದ ರಘುರಾಮ್ ರಾಜನ್
ಅಪನಗದೀಕರಣ, ಜಿಎಸ್ ಟಿ ಜಾರಿಯಿಂದ ಮೇಲಿಂದ ಮೇಲೆ ಆಘಾತವಾಗಿ ಭಾರತದ ಅಭಿವೃದ್ಧಿ ಮೇಲೆ ಪರಿಣಾಮ ಬೀರಿತು. ಜಾಗತಿಕ ಆರ್ಥಿಕತೆ ಮೇಲ್ ಸ್ತರಕ್ಕೆ ಸಾಗುವಾಗಲೇ ಭಾರತದ ಆರ್ಥಿಕತೆ ಕುಸಿತ ಕಂಡಿತು ಎಂದು "ಭಾರತದ ಭವಿಷ್ಯ" ಎಂಬ ಬಗ್ಗೆ ಉಪನ್ಯಾಸ ನೀಡುತ್ತಾ ರಾಜನ್ ಹೇಳಿದ್ದಾರೆ.
ವರ್ಷಕ್ಕೆ ಏಳು ಪರ್ಸೆಂಟ್ ನಂತೆ ಅಭಿವೃದ್ಧಿ ದರ ಅಂದರೆ ಇಪ್ಪತ್ತೈದು ವರ್ಷಕ್ಕೆ "ಬಹಳ ಬಹಳ ಪ್ರಬಲ" ಪ್ರಗತಿ. ಆದರೆ ಇನ್ನೂ ಒಂದು ರೀತಿಯಲ್ಲಿ ಹೇಳಬೇಕು ಅಂದರೆ ಹೊಸದಾಗಿ ಹಿಂದೂಗಳು ಹಾಕಿಕೊಂಡಿರುವ ಲೆಕ್ಕಚಾರವಿದು, ಇದಕ್ಕೂ ಮುನ್ನ ಈ ದರ 3.5% ಇತ್ತು. ಜಾಗತಿಕ ಪ್ರಗತಿಗೂ ಭಾರತಕ್ಕೂ ನಂಟಿದೆ. ಭಾರತವು ಮುಕ್ತ ಆರ್ಥಿಕತೆ ಹೊಂದಿದೆ. ಈ ಜಗತ್ತು ಬೆಳೆದಂತೆಲ್ಲ ಭಾರತ ಕೂಡ ಹೆಚ್ಚು ಹೆಚ್ಚು ಬೆಳವಣಿಗೆ ಸಾಧಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಸವಾಲುಗಳು ಈಗಲೂ ಕೊನೆಯಾಗಿಲ್ಲ
2017ರಲ್ಲಿ ಏನಾಯಿತು ಅಂದರೆ, ಇಡೀ ಜಗತ್ತು ಮೇಲಕ್ಕೆ ಏರುತ್ತಾ ಇತ್ತು. ಆದರೆ ಭಾರತ ಕೆಳಗೆ ಹೋಯಿತು. ಈ ಎರಡು ಹೊಡೆತಗಳು ಏನಿದ್ದವು ಅದು ನಿಜವಾಗಲೂ ದೊಡ್ಡ ಹೊಡೆತಗಳಾದವು. ಇವೆರಡರ ಸಲುವಾಗಿ ನಾವು ಹಿಂದೆ ಉಳಿದೆವು. ಆ ನಂತರ ಭಾರತದ ಅಭಿವೃದ್ಧಿ ಚೇತರಿಸಿಕೊಂಡರೂ ತೈಲ ದರದ ಸಮಸ್ಯೆ ಎದುರಾಯಿತು. ತೈಲ ದರ ಮೇಲಕ್ಕೆ ಹೋಗುತ್ತಿರುವುದರಿಂದ ಭಾರತದ ಆರ್ಥಿಕತೆಗೆ ಚೇತರಿಸಿಕೊಳ್ಳುವುದು ಸ್ವಲ್ಪ ಕಷ್ಟವೇ ಇದೆ. ಅಪನಗದೀಕರಣ ಹಾಗೂ ಜಿಎಸ್ ಟಿ ಜಾರಿಯ ಆರಂಭದ ಸಮಸ್ಯೆಗಳಿಂದ ಹೊರಬಂದರೂ ಇನ್ನೂ ಪೂರ್ತಿಯಾಗಿ ಸವಾಲುಗಳು ಕೊನೆಯಾಗಿಲ್ಲ ಎಂದಿರುವ ಅವರು, ಅನುತ್ಪಾದಕ ಆಸ್ತಿ (ಎನ್ ಪಿಎ) ಬಗ್ಗೆ ಕೇಳಿದ ಪ್ರಶ್ನೆಗೆ, ಇಂಥ ಸನ್ನಿವೇಶದಲ್ಲಿ "ಎಲ್ಲವನ್ನು ಸ್ವಚ್ಛಗೊಳಿಸುವುದೇ" ಪರಿಹಾರ ಎಂದಿದ್ದಾರೆ.
ತಿಂಗಳಿಗೆ ಹತ್ತು ಲಕ್ಷ ಉದ್ಯೋಗ ಸೃಷ್ಟಿ ಆಗಬೇಕು
ಕೆಟ್ಟದರ ಜತೆ ವ್ಯವಹಾರ ಪೂರ್ತಿ ಮಾಡಿಕೊಳ್ಳುವುದು ಮುಖ್ಯ. ಸ್ವಚ್ಛ ಬ್ಯಾಲನ್ಸ್ ಶೀಟ್ಸ್, ಬ್ಯಾಂಕ್ ಗಳನ್ನು ಮತ್ತೆ ಹಳಿಗೆ ತರಬಹುದು. ಬ್ಯಾಂಕ್ ಗಳ ಶುದ್ಧೀಕರಣಕ್ಕೆ ಬಹಳ ಸಮಯ ತೆಗೆದುಕೊಂಡಿದೆ. ಅದಕ್ಕೆ ಅರ್ಧ ಕಾರಣ ಏನೆಂದರೆ, ಅಂಥ 'ಕೆಟ್ಟ ಸಾಲ'ದ ಜತೆಗೆ ಹೇಗೆ ವ್ಯವಹಾರ ಮಾಡಬೇಕು ಎಂಬುದಕ್ಕೆ ಸರಿಯಾದ ವಿಧಾನ ಇರಲಿಲ್ಲ. ಏಳು ಪರ್ಸೆಂಟ್ ಗಿಂತ ಅಭಿವೃದ್ಧಿ ದರ ಕೆಳಗೆ ಹೋದರೆ ನಾವೇನೋ ತಪ್ಪು ಮಾಡುತ್ತಿದ್ದೇವೆ ಎಂದರ್ಥ ಎಂದ ಅವರು, ಅದೇ ಆಧಾರವಾಗಿಟ್ಟುಕೊಂಡು ಮುಂದಿನ ಕನಿಷ್ಠ ಹತ್ತು-ಹದಿನೈದು ವರ್ಷ ಭಾರತ ಅಭಿವೃದ್ಧಿ ದಾಖಲಿಸಬೇಕು. ಹೊಸದಾಗಿ ದುಡಿಯುವ ವರ್ಗಕ್ಕೆ ಸೇರುತ್ತಿರುವವರಿಗೆ ತಿಂಗಳಿಗೆ ಹತ್ತು ಲಕ್ಷ ಉದ್ಯೋಗ ಸೃಷ್ಟಿಸಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಭಾರತದ ಪ್ರಗತಿಗೆ ಇರುವ ಮೂರು ಸಮಸ್ಯೆಗಳು
ಭಾರತವು ಮೂರು ಸಮಸ್ಯೆಗಳಿಂದ ಬಳಲುತ್ತಿದೆ. ಮೂಲಸೌಕರ್ಯ ಸಮಸ್ಯೆ ಮೊದಲನೆಯದು. ಮೂಲಸೌಕರ್ಯದಿಂದ ಅಭಿವೃದ್ಧಿ ಆಗಲು ಸಾಧ್ಯವಿದೆ. ಎರಡನೆಯದು ಇಂಧನ ವಲಯ ಗಟ್ಟಿ ಆಗಬೇಕು. ಯಾವ ಜನರಿಗೆ ವಿದ್ಯುತ್ ಸಂಪರ್ಕದ ಅಗತ್ಯವಿದೆ ಅವರಿಗೆ ದೊರೆಯಬೇಕು. ಬ್ಯಾಂಕ್ ಗಳ ಸ್ವಚ್ಛತೆ ದೇಶದ ಪ್ರಗತಿಗೆ ಸವಾಲಾಗಿದೆ. ಇವುಗಳೆಲ್ಲದರ ಜತೆಗೆ ರಾಜಕೀಯ ನಿರ್ಧಾರಗಳ ಕೇಂದ್ರೀಕರಣ ಅಡೆತಡೆಯಾಗಿ ನಿಂತಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಸರ್ದಾರ್ ವಲ್ಲಭಭಾಯ್ ಪಟೇಲ್ ಪುತ್ಥಳಿ ಸ್ಥಾಪನೆ ಉದಾಹರಣೆ
ಭಾರತದಲ್ಲಿ ಕೇಂದ್ರದಿಂದಲೇ ಆಡಳಿತ ನಡೆಸಬೇಕು ಅಂದರೆ ಆಗಲ್ಲ. ಜವಾಬ್ದಾರಿ ತೆಗೆದುಕೊಳ್ಳುವುದಕ್ಕೆ ಬಹಳ ಜನ ಇರುವಾಗ ಮಾತ್ರ ಕೆಲಸ ಆಗಲು ಸಾಧ್ಯ. ಆದರೆ ಸದ್ಯಕ್ಕೆ ಕೇಂದ್ರ ಸರಕಾರವು ಬಹಳ ಕೇಂದ್ರೀಕೃತ ವ್ಯವಸ್ಥೆಯಲ್ಲಿದೆ ಎಂದ ಅವರು, ಸರ್ದಾರ್ ವಲ್ಲಭ ಭಾಯ್ ಪಟೇಲ್ ರ ದೊಡ್ಡ ಪುತ್ಥಳಿ ಸ್ಥಾಪನೆ ಮಾಡಬೇಕು ಎಂದಾಗ ಪ್ರಧಾನಮಂತ್ರಿ ಕಾರ್ಯಾಲಯದ ಒಪ್ಪಿಗೆ ಪಡೆಯಬೇಕಾಯಿತು. ಅಧಿಕಾರ ಕೇಂದ್ರೀಕರಣಕ್ಕೆ ಇದೇ ಒಳ್ಳೆ ಉದಾಹರಣೆ ಎಂದಿದ್ದಾರೆ.