ಬೆಂಗಳೂರಲ್ಲಿ ಪೆರಿಫೆರಲ್ ರಿಂಗ್ ರಸ್ತೆ, ಸಬ್ ಅರ್ಬನ್ ಯೋಜನೆಗೆ ಒತ್ತು:ಸಿಎಂ
ಬೆಂಗಳೂರು, ಜುಲೈ 6: ಬೆಂಗಳೂರಲ್ಲಿ ಪೆರಿಫೆರಲ್ ರಿಂಗ್ ರಸ್ತೆ ಹಾಗೂ ಸಬ್ಅರ್ಬನ್ ಯೋಜನೆಗೆ ಹೆಚ್ಚು ಉತ್ತು ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ನ್ಯೂ ಜೆರ್ಸಿಯಲ್ಲಿ ಮಾತನಾಡಿದ ಅವರು ಬೆಂಗಳೂರು ಅಭಿವೃದ್ಧಿಗೆ ಬೇಕಾದ ಯೋಜನೆಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಇನ್ನು ಮೆಟ್ರೋ ರೈಲು ನಿಲ್ದಾಣವನ್ನು ಕಟ್ಟಿಕೊಡುವುದರಿಂದ , ಜಯದೇವ, ಕಿದ್ವಾಯಿ ಆಸ್ಪತ್ರೆಗಳಲ್ಲಿ ಶಸ್ರ್ತಚಿಕಿತ್ಸಾ ಕೊಠಡಿಗಳು, ಆಸ್ಪತ್ರೆ ಸೌಲಭ್ಯಗಳನ್ನು ಕಲ್ಪಿಸುವುದರ ಜೊತೆಗೆ ಕೆರೆ ಸಂರಕ್ಷಣೆಯಿಂದ ಶೌಚಾಲಯ ನಿರ್ಮಿಸುವವರೆಗೆ ಕರ್ನಾಟಕಕ್ಕೆ ಇನ್ಫೋಸಿಸ್ ಪ್ರತಿಷ್ಠಾನದ ಕೊಡುಗೆ ಅತ್ಯಂತ ಅಪರೂಪದ್ದು. ಸಿ.ಎಸ್.ಆರ್ ಎನ್ನುವ ವಿಶೇಷಣದಡಿ ಅದರ ವ್ಯಾಪ್ತಿಯನ್ನೂ ಮೀರಿ ಮಾನವತೆಯನ್ನು ಮೆರೆದ ಸುಸ್ಪಷ್ಟ ನಿದರ್ಶನಗಳಿವು ಎಂದು ಹೇಳಿದರು.
ಅಮೆರಿಕದಲ್ಲಿ ನಮ್ಮ ಸಂಸ್ಕೃತಿ ಪಸರಿಸುತ್ತಿರುವ ಭಾರತೀಯರು
ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ, ಇದನ್ನು ದೂರದ ಅಮೆರಿಕೆಯಲ್ಲೂ ಜೀವಂತವಾಗಿರಿಸಿದ, ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು" ಎನ್ನುವ ಕವಿವಾಣಿಯನ್ನು ನಿಜವಾಗಿಸಿದ ನೀವು ನಿಜವಾಗಿಯೂ ಅಭಿನಂದನಾರ್ಹರು. ಕನ್ನಡದ ಮಣ್ಣಲ್ಲಿ ಹುಟ್ಟಿ, ಬದುಕನ್ನರಸುತ್ತಾ ಬಹುದೂರ ಬಂದಿರುವ ನೀವು. ನಿಮ್ಮ ಬೇರುಗಳನ್ನು ಮರೆಯದೆ ಬೆಳೆಯುತ್ತಿರುವುದು ತುಂಬ ಹೃದ್ಯ. ಕನ್ನಡತನ ಎಂದರೆ ಒಂದು ಪ್ರದೇಶದಲ್ಲಿ ಕನ್ನಡ ಮಾತನಾಡುವವರ ಬದುಕಲ್ಲ, ಬರಿಯ ಕನ್ನಡ ಭಾಷೆಯೂ ಅಲ್ಲ. ಅದೊಂದು ಅನನ್ಯ ಜೀವನ ರೀತಿ. ತಾನೂ ಬೆಳೆದು ಇತರರನ್ನೂ ಬೆಳೆಸುವ ಅಪೂರ್ವವಾದೊಂದು ಸಂಸ್ಕøತಿ.
ಕನ್ನಡಿಗರು ತಮ್ಮ ಸೌಜನ್ಯ ಸಜ್ಜನಿಕೆಗಳಿಂದ ಎಲ್ಲಿಯೂ ಸಲ್ಲ ಬಲ್ಲ ಸಜ್ಜನರು. ಕನ್ನಡ ತನವನ್ನಿಂದು ತಾವೆಲ್ಲ ಸಾಬೀತು ಪಡಿಸಿದ್ದೀರಿ. "ಅಬುದಾಭಿಯಾದರೇನು? ಅಮೆರಿಕೆಯಾದರೇನು ? ಸಜ್ಜನಿಕೆಯ ಬದುಕಿನ ಕಂಪು ಹರಡಲು ಸರಳ ಮನವಿದ್ದರೆ ಸಾಲದೇನು" ಎಂಬ ಮಾತಿಗೆ ಸಾಕ್ಷಿಯಾಗಿದ್ದೀರಿ.
ಅನೇಕ ಅಪಸ್ವರಗಳ ನಡುವೆಯೂ ಸಮ್ಮಿಶ್ರ ಸರ್ಕಾರ ಸದೃಢವಾಗಿದೆ
ಅನೇಕ ಅಪಸ್ವರಗಳ ನಡುವೆಯೂ ಗಟ್ಟಿಯಾದ ಸೈದ್ಧಾಂತಿಕ ತಳಹದಿಯ ಮೇಲೆ ಜನಹಿತ ಸಾಧಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಗಳನ್ನು ಇಟ್ಟಿದೆ. ಇದು ನನ್ನ ಸರ್ಕಾರದ ಸಾಧನೆಯ ತುತ್ತೂರಿಯನ್ನು ಊದುವ ಪ್ರಯತ್ನ ಎಂದು ಭಾವಿಸಬೇಡಿ. ಇಂದಿನ ರಾಜ್ಯದಲ್ಲಿನ ವಸ್ತು ಸ್ಥಿತಿಯನ್ನು ನಿಮ್ಮ ಮುಂದಿಡುವ ಪುಟ್ಟದೊಂದು ಯತ್ನ ಮಾತ್ರ.
ರಾಜ್ಯ ಆಡಳಿತದ ಹೊಣೆಗಾರಿಕೆ ವಹಿಸಿಕೊಂಡಾಗ ನಮ್ಮ ಆದ್ಯತೆ ಕೃಷಿ ವಲಯಕ್ಕೆ ಬಲ ತುಂಬುವುದು, ಶಿಕ್ಷಣ ಕ್ಷೇತ್ರವನ್ನು ಬಲಪಡಿಸುವುದು, ಆರೋಗ್ಯ ವಲಯಕ್ಕೆ ಪುನಶ್ಚೇತನ ನೀಡುವುದು ಮತ್ತು ಮೂಲಭೂತ ಸೌಲಭ್ಯಗಳನ್ನು ಇನ್ನಷ್ಟು ವೃದ್ಧಿಪಡಿಸುವುದಾಗಿತ್ತು.
ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಸೇವೆ
"ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ" ಆರೋಗ್ಯ ಸೇವೆಗಳು ಕೂಡ ಎಲ್ಲ ವಲಯದಿಂದ ಪ್ರಶಂಸೆಗೆ ಪಾತ್ರವಾದ ಕ್ರಮ.
ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ನಾವಿಟ್ಟಿರುವ ದಾಪುಗಾಲಿನ ಈ ಹೆಜ್ಜೆಗಳು ಎಲ್ಲ ಜನರ ಮೆಚ್ಚುಗೆ ಗಳಿಸಿದೆ. ಸರ್ಕಾರದ ಪ್ರಗತಿಪರ ಹೆಜ್ಜೆಗಳಿಗೆ ಜೊತೆಗೂಡಲು ಇನ್ಫೋಸಿಸ್ ಪ್ರತಿಷ್ಠಾನ, ಅಜೀಂ ಪ್ರೇಮ್ಜಿ ಪ್ರತಿಷ್ಠಾನದೊಂದಿಗೆ ಡಾಗಾ ಸಹೋದರರು ಮೊದಲಾದ ಮಾನವತಾವಾದಿಗಳು ತಮ್ಮ ಪೂರ್ಣ ಮನದ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿಗಳು ತಾವು ಓದಿದ ಶಾಲೆ, ಗ್ರಾಮವನ್ನು ತೆಗೆದುಕೊಳ್ಳುತ್ತಿದ್ದಾರೆ
ಇತ್ತೀಚೆಗೆ ಅನೇಕ ಶಾಲಾ ಕಾಲೇಜುಗಳಲ್ಲಿ ಓದಿದ ಪ್ರಜ್ಞಾವಂತ ಯುವ ಸಮೂಹ ಶಾಲೆಯನ್ನೋ, ಗ್ರಾಮವನ್ನೋ ದತ್ತು ತೆಗೆದುಕೊಂಡು, ಅದರ ಸಮಗ್ರ ಅಭಿವೃದ್ಧಿಯತ್ತ ಗಮನ ಹರಿಸುತ್ತಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಅನೇಕ ಶಾಲಾ ಕಾಲೇಜುಗಳ, ಹಳೆಯ ವಿದ್ಯಾರ್ಥಿ ಸಂಘಗಳು ತಾವು ಕಲಿತ ಶಾಲೆಯ, ತಮ್ಮೂರಿನ ಸರ್ವತೋಮುಖ ಬೆಳವಣಿಗೆಗೆ ಕಂಕಣ ಬದ್ಧರಾಗಿ ದುಡಿಯುತ್ತಿರುವುದು ಅತ್ಯಂತ ಆಶಾದಾಯಕ ಬೆಳವಣಿಗೆ.
ಕರ್ನಾಟಕದಲ್ಲಿ ಪ್ರವಾಸೋದ್ಯಮ, ಶಿಕ್ಷಣ, ಆರೋಗ್ಯ ಪ್ರವಾಸೋದ್ಯಮ,ಸಣ್ಣ ಕೈಗಾರಿಕೆ, ಸಾವಯವ ಕೃಷಿ ಮೊದಲಾದ ಕ್ಷೇತ್ರಗಳಲ್ಲಿ ವಿಪುಲ ಅವಕಾಶಗಳಿವೆ. ಈ ಕ್ಷೇತ್ರಗಳ ಅಗಣಿತ ಸಾಧ್ಯತೆಗಳನ್ನು ಅರಿತುಕೊಂಡು ಆಗುಮಾಡಬಲ್ಲ ಇಚ್ಛಾಶಕ್ತಿಯ ಅಗತ್ಯವೂ ಇದೆ.
ಕರ್ನಾಟಕಕ್ಕೆ ನಿಮ್ಮ ಅನುಭವ, ಬುದ್ಧಿವಂತಿಕೆ ಹಾಗೂ ಸಾಮಥ್ರ್ಯದ ನೆರವು ಹರಿದು ಬರಲಿ. ನಿಮ್ಮೊಂದಿಗೆ ನಾವಿದ್ದೇವೆ. ಒಟ್ಟಿಗೆ ಸೇರಿ ಸುಂದರ- ಸಮೃದ್ಧ- ಸಬಲ ಕರ್ನಾಟಕವೊಂದನ್ನು ಕಟ್ಟೋಣ.