ಫಲಿತಾಂಶದ ಬಳಿಕ ರಾಜಕೀಯ ನಿವೃತ್ತಿಗೆ ಆಲೋಚಿಸಿದ್ದೆ: ಕುಮಾರಸ್ವಾಮಿ
ನ್ಯೂಜೆರ್ಸಿ, ಜುಲೈ 1: ಕಳೆದ ವರ್ಷ ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿನ ಫಲಿತಾಂಶ ಕಂಡು ರಾಜಕೀಯ ನಿವೃತ್ತಿ ಪಡೆಯಲು ಆಲೋಚಿಸಿದ್ದಾಗಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದರು.
ಅಮೆರಿಕದ ನ್ಯೂಜೆರ್ಸಿಯಲ್ಲಿ ಆದಿಚುಂಚನಗಿರಿ ಮಠದ ವತಿಯಿಂದ ನಿರ್ಮಿಸಲಾಗುತ್ತಿರುವ ಕಾಲ ಭೈರವೇಶ್ವರ ದೇವಸ್ಥಾನದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾಲಭೈರವೇಶ್ವರ ಸನ್ನಿಧಿ ಕನ್ನಡಿಗರನ್ನು ಒಂದಾಗಿಸುವ ವೇದಿಕೆಯಾಗಲಿದೆ : ಎಚ್ಡಿಕೆ
ಹೃದಯದ ಸಮಸ್ಯೆಗೆ ತುತ್ತಾಗಿ ಶಸ್ತ್ರಚಿಕಿತ್ಸೆ ಪಡೆದ ಬಳಿಕ ಮತ್ತೆ ಚುನಾವಣಾ ಅಖಾಡಕ್ಕೆ ಇಳಿದು ಅನಾರೋಗ್ಯವನ್ನು ಲೆಕ್ಕಿಸದೆ ಗೆಲ್ಲುವ ಹಂಬಲದೊಂದಿಗೆ ಪ್ರಚಾರ ನಡೆಸಿದ್ದನ್ನು ನೆನಪಿಸಿಕೊಂಡ ಕುಮಾರಸ್ವಾಮಿ, ಪಕ್ಷ ಕಡಿಮೆ ಸ್ಥಾನಗಳನ್ನು ಪಡೆದುಕೊಂಡಿದ್ದರೂ ಅಧಿಕಾರಕ್ಕೆ ಬಂದಿದ್ದು ಕಾಲಭೈರವೇಶ್ವರ ದೇವರ ಆಶೀರ್ವಾದದಿಂದ ಎಂದು ಹೇಳಿಕೊಂಡರು. ಫಲಿತಾಂಶದ ದಿನ ಬೆಳಿಗ್ಗೆ ಕಾಲಭೈರವೇಶ್ವರ ದೇವರ ದರ್ಶನ ಪಡೆದಿದ್ದು, ಇನ್ನೊಂದು ಮಾರ್ಗದಲ್ಲಿ ಫಲಿಸಿತ್ತು ಎಂದು ಹೇಳಿದರು.
ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಮತ್ತು ಗುಜರಾತಿನ ಅರ್ಷ ವಿದ್ಯಾಮಂದಿರದ ಪರಮಾತ್ಮಾನಂದ ಸ್ವಾಮೀಜಿ ಹಾಗೂ ಮೈಸೂರಿನ ಸಚ್ಚಿದಾನಂದ ಗಣಪತಿ ಸ್ವಾಮೀಜಿ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನ್ಯೂಜೆರ್ಸಿಯ ಸಾಂಸ್ಕೃತಿಕ ಕೇಂದ್ರದ ಬಗ್ಗೆ ಕುಮಾರಸ್ವಾಮಿ ಮೆಚ್ಚುಗೆ
ಚುನಾವಣೆಯಲ್ಲಿ ಸೋತ ಹತಾಶೆಯಿಂದ ರಾಜಕೀಯ ನಿವೃತ್ತಿ ಯೋಚನೆ ಮಾಡಿದ್ದಾಗಿ ಈ ಹಿಂದೆಯೂ ಅವರು ಹೇಳಿಕೊಂಡಿದ್ದರು.
ಚಿಕಿತ್ಸೆ ಬಳಿಕ ಹೋರಾಟ ಮಾಡಿದ್ದೆ
ಎರಡನೆಯ ಬಾರಿ ಹೃದಯ ಚಿಕಿತ್ಸೆಯಾದ ಬಳಿಕ ಒಂದು ತಿಂಗಳು ವಿಶ್ರಾಂತಿ ಪಡೆದು ಚುನಾವಣೆಯ ಹೋರಾಟಕ್ಕೆ ಇಳಿದಿದ್ದೆ. ಸತತವಾಗಿ ಶ್ರಮ ಹಾಕಿ ಪಕ್ಷದ ಗೆಲುವಿಗಾಗಿ ಕೆಲಸ ಮಾಡಿದ್ದೆ. ಫಲಿತಾಂಶದ ದಿನ ಬೆಳಿಗ್ಗೆ ಕಾಲಭೈರವೇಶ್ವರನ ದರ್ಶನ ಪಡೆಯಬೇಕು ಎಂದು ನಿರ್ಮಲಾನಂದ ಶ್ರೀಗಳು ಹೇಳಿದ್ದರು. ಅವರ ಸೂಚನೆಯಂತೆ ಅಂದು ಬೆಳಿಗ್ಗೆಯೇ ಆದಿಚುಂಚನಗಿರಿಯಲ್ಲಿ ದರ್ಶನ ಪಡೆದು ಬೆಂಗಳೂರಿಗೆ ಮರಳಿದ್ದೆ. ಆದರೆ, ಫಲಿತಾಂಶ ನೋಡಿ ಬೇಸರವಾಗಿತ್ತು ಎಂದು ಕುಮಾರಸ್ವಾಮಿ ಹೇಳಿದರು.
ನಿವೃತ್ತಿಗೆ ನಿರ್ಧರಿಸಿದ್ದೆ
ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಆರೋಗ್ಯವನ್ನೂ ಲೆಕ್ಕಿಸದೆ ಕೆಲಸ ಮಾಡಿದ್ದೆ. ಫಲಿತಾಂಶ ನೋಡಿದಾಗ ಇಷ್ಟ ಹೋರಾಡಿದರೂ ಜನರು ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲವೇನೋ ಎಂಬ ಅನಿಸಿಕೆ ಮೂಡಿತ್ತು. ಹೀಗಾಗಿ ರಾಜಕೀಯ ನಿವೃತ್ತಿ ಪಡೆದುಕೊಳ್ಳಲು ನಿರ್ಧರಿಸಿದ್ದೆ ಎಂದು ವಿವರಿಸಿದರು.
ಸ್ಪರ್ಧಿಸಿದ್ದು ಆಕಸ್ಮಿಕ, ಇನ್ನು ಮುಂದೆ ಚುನಾವಣೆಗೆ ನಿಲ್ಲುವುದಿಲ್ಲ: ದೇವೇಗೌಡ
ಕಾಲಭೈರವೇಶ್ವರನ ಶಕ್ತಿ
ಆದರೆ, ಕೆಲ ಹೊತ್ತಿನಲ್ಲಿಯೇ ಕಾಂಗ್ರೆಸ್ ಕಡೆಯಿಂದ ಅಚ್ಚರಿಯ ರೀತಿಯಲ್ಲಿ ಕರೆ ಬಂತು. ನೀವೇ ಮುಖ್ಯಮಂತ್ರಿ ಆಗಬೇಕು ಎಂದು ಕಾಂಗ್ರೆಸ್ ಹೇಳಿತು. ಅನಾರೋಗ್ಯದಿಂದ ಸುಧಾರಿಸಿಕೊಂಡು ಎರಡನೆಯ ಬಾರಿ ಸಿಎಂ ಆಗಿ ಕೆಲಸ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ. ಆದರೆ, ಇದೇ ನೋಡಿ ಕಾಲಭೈರವೇಶ್ವರ ಶಕ್ತಿ ಎಂದು ಕುಮಾರಸ್ವಾಮಿ ಹೇಳಿದರು.
ಪರಂಪರೆ ಸಾರಲು ವೇದಿಕೆ
125 ವರ್ಷಗಳ ಹಿಂದೆ ಸ್ವಾಮಿ ವಿವೇಕಾನಂದರು ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿ, ಧರ್ಮ ಜಾಗೃತಿ ಮೂಡಿಸಿದ್ದರು. ಧರ್ಮ ಜೀವನ ಪಥ. ಜಾತಿ-ಪಂಥದ ಎಲ್ಲೆ ಮೀರಿದ್ದು ಎಂಬ ವಿಶಾಲ ತತ್ವವನ್ನು ಸಾರಿದರು. ಈಗ ಇಲ್ಲಿ ನಿರ್ಮಾಣವಾಗುತ್ತಿರುವ ಕಾಲಭೈರವೇಶ್ವರ ದೇವಾಲಯವೂ ಸಹ ಕನ್ನಡಿಗರಿಗೆ ಒಂದು ಶ್ರದ್ಧಾ ಕೇಂದ್ರವಾಗಿ, ಸಾಂಸ್ಕೃತಿಕ ಕೇಂದ್ರವಾಗಿ ರೂಪುಗೊಳ್ಳಲಿದೆ. ಈ ದೇವಾಲಯವು ಕನ್ನಡಿಗರು ಒಂದಾಗಲು, ತಮ್ಮ ಸಂಸ್ಕೃತಿ, ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು, ಆಚರಿಸಲು ಒಂದು ವೇದಿಕೆಯನ್ನು ಒದಗಿಸಲಿದೆ ಎಂದು ಕುಮಾರಸ್ವಾಮಿ ಹೇಳಿದರು.