ನ್ಯೂಯಾರ್ಕ್ ನಲ್ಲಿ ಕೊರೊನಾ ಬಾಧಿತರಿಗೆ ಸಿಖ್ ಸಮುದಾಯದಿಂದ ಅನ್ನ ದಾಸೋಹ
ನ್ಯೂಯಾರ್ಕ್ (ಅಮೆರಿಕ), ಮಾರ್ಚ್ 24: ಕೊರೊನಾ ವೈರಾಣು ಆತಂಕದ ಕಾರಣಕ್ಕೆ ಸ್ವಯಂಪ್ರೇರಿತರಾಗಿ ಮನೆಯಲ್ಲೇ ಉಳಿದಿರುವ ಅಮೆರಿಕನ್ನರಿಗಾಗಿ ನ್ಯೂಯಾರ್ಕ್ ನಲ್ಲಿ ಸಿಖ್ ಕೇಂದ್ರ ಅದ್ಭುತವಾದ ಕೆಲಸ ಮಾಡುತ್ತಿದೆ. ಮನೆಯಲ್ಲೇ ತಯಾರಿಸಿದ ಅಡುಗೆಯನ್ನು 30,000ಕ್ಕೂ ಹೆಚ್ಚು ಪೊಟ್ಟಣಗಳನ್ನು ತಲುಪಿಸುತ್ತಿದೆ.
ನ್ಯೂಯಾರ್ಕ್ ನ ಮೇಯರ್ ಕಚೇರಿಯು ಸಿಖ್ ಸಮುದಾಯದವರನ್ನು ಭೇಟಿ ಮಾಡಿ, ಆಹಾರದ ಪೊಟ್ಟಣಗಳಿಗಾಗಿ ಕೇಳಿದೆ. ಆ ನಂತರ ಅಲ್ಲಿನ ಪ್ರದೇಶದಲ್ಲಿ ಇರುವ ಸರ್ಕಾರಿ ಸಂಸ್ಥೆಗಳಿಗೆ ಒಪ್ಪಿಸಿ, ಆಹಾರ ಪೊಟ್ಟಣಗಳ ವಿತರಣೆಗೆ ಸೂಚಿಸಲಾಗಿದೆ. ಆ ಸಂಸ್ಥೆಗಳು ನ್ಯೂಯಾರ್ಕ್ ನಲ್ಲಿನ ಕೊರೊನಾ ಬಾಧಿತರಿಗೆ ಉಚಿತವಾಗಿ ಆಹಾರ ವಿತರಣೆ ಮಾಡುತ್ತಿವೆ. ಅಂದಹಾಗೆ ಕೊರೊನಾದಿಂದ ವಿಪರೀತ ಸಮಸ್ಯೆಗೆ ಒಳಗಾಗಿರುವ ಅಮೆರಿಕದ ನಗರಗಳಲ್ಲಿ ನ್ಯೂಯಾರ್ಕ್ ಕೂಡ ಒಂದು.
ಡೆಡ್ಲಿ ಕೊರೊನಾ ಹೊಡೆತಕ್ಕೆ ತತ್ತರಿಸಿ ಹೋದ ದೊಡ್ಡಣ್ಣ ಅಮೆರಿಕ
ಈ ಬಗ್ಗೆ ಅಮೆರಿಕನ್ ಗುರುದ್ವಾರ ಪ್ರಬಂಧಕ ಸಮಿತಿಯ ಸಮನ್ವಯಕಾರ ಹಿಮತ್ ಸಿಂಗ್ ಎಎನ್ ಐ ಸುದ್ದಿ ಸಂಸ್ಥೆ ಜತೆಗೆ ಮಾತನಾಡಿ, ಸಿಖ್ ಸ್ವಯಂಸೇವಕರು ಸಸ್ಯಾಹಾರಿ ಆಹಾರವನ್ನು ವಿತರಿಸುತ್ತಿದ್ದಾರೆ. ಅದರಲ್ಲಿ ಡ್ರೈ ಫ್ರೂಟ್ಸ್, ಅನ್ನ ಹಾಗೂ ಅದರ ಜತೆಗೆ ಬೇಕಾದ ಪದಾರ್ಥಗಳು ಇರುತ್ತವೆ ಎಂದಿದ್ದಾರೆ.
ಯಾರಿಗೆ ಮನೆಯಿಂದ ಸೂಪರ್ ಮಾರ್ಕೆಟ್ ಗೆ ಹೋಗಿ ಆಹಾರ ಪದಾರ್ಥ ಖರೀದಿಸಲು ಸಾಧ್ಯವಿಲ್ಲವೋ ಅಂಥ ಹಿರಿಯರಿಗೆ ವಿತರಣೆ ಮಾಡುವ ಸಂಸ್ಥೆಗಳು ಆಹಾರ ನೀಡುತ್ತಿವೆ. ವಿಶೇಷ ಚೇತನರು, ಮನೆಯೇ ಇಲ್ಲದವರು, ತಮ್ಮ ಮಕ್ಕಳನ್ನು ನೋಡಿಕೊಂಡು ಮನೆಯಿಂದ ಹೊರಗೆ ಬರಲಾರದ ಒಂಟಿ ಪೋಷಕರಿಗೆ ಆಹಾರ ಒದಗಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
'ಕೊರೊನಾ ವಿಚಾರದಲ್ಲಿ ಚೀನಾ ಬಗ್ಗೆ ನಮಗೆ ಬೇಸರ ಇದೆ': ಟ್ರಂಪ್ ಹೀಗೆ ಹೇಳಿದ್ದೇಕೆ?
ಈ ಹಿಂದೆ ದಿನಸಿ ಪದಾರ್ಥಗಳನ್ನು ಗುರುದ್ವಾರಕ್ಕೆ ದೇಣಿಗೆ ನೀಡಲಾಗಿತ್ತು. ಅವುಗಳನ್ನು ಈಗ ಬಳಸಲಾಗುತ್ತಿದೆ. ಅಷ್ಟೇ ಅಲ್ಲ, ಗುರುದ್ವಾರಕ್ಕೆ ಬಂದ ಹಣವನ್ನೂ ಈ ಉದ್ದೇಶಕ್ಕೆ ಬಳಸಲಾಗುತ್ತಿದೆ. ಯುನೈಟೆಡ್ ಸಿಖ್ಸ್ ಎಂಬ ಎನ್ ಜಿಒ ಯುನೈಟೆಡ್ ಸ್ಟೇಟ್ಸ್ ಪೂರ್ತಿ ಇದ್ದು, ಉದಾರವಾಗಿ ದೇಣಿಗೆ ನೀಡುವಂತೆ ಮನವಿ ಮಾಡಲಾಗುತ್ತಿದೆ.
ಶಾಪಿಂಗ್ ಸೆಂಟರ್ ಗಳಲ್ಲಿ ಜನರಿಗೆ ಆಹಾರ ಸಿಗುತ್ತಿಲ್ಲ ಎಂಬುದು ಗೊತ್ತಾಯಿತು. ಆಗಿನಿಂದ ನಮ್ಮಿಂದ ಸಾಧ್ಯವಾದಷ್ಟು ಜನರಿಗೆ ಸಹಾಯ ಮಾಡಲು ಆರಂಭಿಸಿದೆವು ಎನ್ನುತ್ತಾರೆ ಮತ್ತೊಬ್ಬ ಸಮನ್ವಯಕಾರ ಡಾ.ಪ್ರೀತಿಪಾಲ್ ಸಿಂಗ್. ಅಮೆರಿಕದಲ್ಲಿನ ಸರ್ಕಾರಿ ಸಂಸ್ಥೆಗಳು ಕೊರೊನಾ ವೈರಸ್ ವಿರುದ್ಧ ನಡೆಸುತ್ತಿರುವ ಹೋರಾಟಕ್ಕೆ ಸಿಖ್ ಸಮುದಾಯದ ಸ್ವಯಂಸೇವಕರು ಮನಸಾರೆ ಹೊಗಳುತ್ತಾರೆ.
ದೇಶದಾದ್ಯಂತ, ವಿಶ್ವದಾದ್ಯಂತ ಇರುವ ಗುರುದ್ವಾರಗಳಿಗೆ ನಾವು ಮನವಿ ಮಾಡಿದ್ದೇವೆ. ಕೊರೊನಾದಿಂದ ತೊಂದರೆಗೆ ಸಿಲುಕಿರುವವರಿಗೆ, ಅದರಲ್ಲೂ ಭಾರತೀಯ ವಿದ್ಯಾರ್ಥಿಗಳಿಗೆ ಆಹಾರ, ಉಳಿದುಕೊಳ್ಳುವ ವ್ಯವಸ್ಥೆ ನೀಡುವಂತೆ ಕೇಳಿದ್ದೇವೆ ಎಂದು ಶ್ರೀ ಅಕಲ್ ತಖ್ತ್ ಸಾಹಿಬ್ ಮತ್ತು ಸಿಖ್ ಧರ್ಮ ಗುರು ಜತೇದಾರ್ ಹರ್ ಪ್ರೀತ್ ಸಿಂಗ್ ತಿಳಿಸಿದ್ದಾರೆ.