ಕಾಶ್ಮೀರ ವಿವಾದದಲ್ಲಿ ಹಸ್ತಕ್ಷೇಪ: ವಿಶ್ವಸಂಸ್ಥೆಯಲ್ಲಿ ಚೀನಾಗೆ ಮತ್ತೆ ಮುಖಭಂಗ
ವಾಷಿಂಗ್ಟನ್, ಜನವರಿ 16: ಜಮ್ಮು ಮತ್ತು ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯಲ್ಲಿ ಪಾಕಿಸ್ಥಾನದ ಪರವಾಗಿ ಹೋರಾಡುತ್ತಿರುವ ಚೀನಾ ಭದ್ರತಾ ಮಂಡಳಿಯಲ್ಲಿ ಮತ್ತೊಮ್ಮೆ ಮುಚ್ಚಿದ ಬಾಗಿಲ ಸಭೆ ನಡೆಸುವ ಮೂಲಕ ಭಾರತವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ನಡೆಸಿತ್ತು. ಆದರೆ ಅದು ಪುನಃ ಮುಖಭಂಗ ಅನುಭವಿಸಿದೆ.
ಆಫ್ರಿಕಾದ ದೇಶವೊಂದಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮುಚ್ಚಿದ ಬಾಗಿಲಿನ ಸಭೆ ನಡೆಸಲಾಗಿತ್ತು. ಈ ವೇಳೆ 'ಯಾವುದೇ ಇತರೆ ವ್ಯಾವಹಾರಿಕ ಅಂಶಗಳ' ಅಜೆಂಡಾ ಅಡಿಯಲ್ಲಿ ಕಾಶ್ಮೀರ ವಿವಾದವನ್ನು ಪ್ರಸ್ತಾಪಿಸಲು ಚೀನಾ ಉದ್ದೇಶಪೂರ್ವಕ ಪ್ರಯತ್ನ ನಡೆಸಿತು. ಆದರೆ ಈ ವಿಚಾರವನ್ನು ಚರ್ಚಿಸಲು ಇದು ಸೂಕ್ತ ಸ್ಥಳವಲ್ಲ ಎಂದು ಜಾಗತಿಕ ಉನ್ನತ ಸಂಸ್ಥೆ ಹೇಳಿದೆ.
ಭಾರತದಿಂದ ಪಾಕಿಸ್ತಾನಕ್ಕೆ ಪಂಚ್, ಚೀನಾಗೆ ಯಾಕೆ ಚೌಚೌ ಬಾತ್?
ಚೀನಾ ಹೊರತುಪಡಿಸಿ ಇತರೆ ದೇಶಗಳು ಸಭೆಯ ಬಳಿಕ ಅದು ಅನೌಪಚಾರಿಕ ಪ್ರಸ್ತಾಪ ಎಂದು ಹೇಳಿಕೆ ನೀಡಿವೆ. ಇದರಿಂದ ಕಾಶ್ಮೀರ ವಿವಾದವನ್ನು ಕೆದಕುವ ಮೂಲಕ ಭಾರತ-ಪಾಕಿಸ್ತಾನ ಜಗಳದಲ್ಲಿ ಬಿಸಿ ಕಾಯಿಸಿಕೊಳ್ಳುವ ಚೀನಾ ಪ್ರಯತ್ನ ಪುನಃ ವಿಫಲವಾಗಿದೆ.
ಉದ್ವಿಗ್ನತೆ ಹೆಚ್ಚಲಿದೆ
ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಪಾಕಿಸ್ತಾನ ದೇಶಗಳ ಉದ್ವಿಗ್ನ ಪರಿಸ್ಥಿತಿ ಮತ್ತಷ್ಟು ಕೈಮೀರಲಿದೆ ಎಂದು ವಿಶ್ವಸಂಸ್ಥೆಯಲ್ಲಿನ ಚೀನಾದ ರಾಯಭಾರಿ ಝಾಂಗ್ ಜುನ್ ಹೇಳಿದರು. ಮಾತುಕತೆಯ ಮೂಲಕ ಒಂದು ಪರಿಹಾರ ಕಂಡುಕೊಳ್ಳಲು ವಿಶ್ವಸಂಸ್ಥೆ ಎರಡೂ ದೇಶಗಳಿಗೆ ಉತ್ತೇಜನ ನೀಡಲಿದೆ ಎಂಬ ಭರವಸೆ ಇದೆ ಎಂದರು.
ಅಪಾಯ ಅರಿಯಬೇಕು
ಕಾಶ್ಮೀರದ ಸದ್ಯದ ಪರಿಸ್ಥಿತಿಯ ಕುರಿತು ಚೀನಾ ಕಳವಳ ಹೊಂದಿದೆ. ಈ ಕಲಹವು ಮತ್ತಷ್ಟು ಬಿಗಡಾಯಿಸುವುದರ ಅಪಾಯವನ್ನು ಎರಡೂ ದೇಶಗಳು ಮನವರಿಕೆ ಮಾಡಿಕೊಳ್ಳಲು ಮತ್ತು ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸಲು ಉಭಯ ದೇಶಗಳಿಗೆ ಉತ್ತೇಜನ ನೀಡುವುದು ಅಗತ್ಯ. ಹೀಗಾಗಿ ಈ ಪ್ರಸ್ತಾಪ ಮಾಡಲಾಗಿದೆ ಎಂದು ಅವರು ಹೇಳಿದರು.
ಚೀನಾ ಬಗ್ಗೆ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ಅಮೆರಿಕ
ಭಾರತ ಮತ್ತು ಪಾಕ್ ವಿವಾದ
ಆದರೆ ಚೀನಾವು ಕಾಶ್ಮೀರದ ಕುರಿತು ವಿಶ್ವಸಂಸ್ಥೆಯ ವೀಕ್ಷಣಾ ಯೋಜನೆಯ ಪರಾಮರ್ಶೆಯನ್ನು ಬಯಸಿತ್ತು. 15 ಸದಸ್ಯರ ಸಮಿತಿಯಲ್ಲಿ ಚೀನಾ ಹೊರತುಪಡಿಸಿ ಉಳಿದ ದೇಶಗಳು, ಉದ್ವಿಗ್ನತೆಯನ್ನು ಶಮನಗೊಳಿಸಬೇಕು ಮತ್ತು ಇದು ದ್ವಿಪಕ್ಷೀಯ ವಿವಾದವಾಗಿರುವುದರಿಂದ ಭಾರತ ಮತ್ತು ಪಾಕಿಸ್ತಾನ ದೇಶಗಳೇ ಪರಿಹರಿಸಿಕೊಳ್ಳಬೇಕು ಎಂದು ಚೀನಾದ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದ್ದಾಗಿ ಫ್ರಾನ್ಸ್ ಪ್ರತಿನಿಧಿ ತಿಳಿಸಿದರು.
ನಮ್ಮ ಧ್ವಜ ಎತ್ತರದಲ್ಲಿ ಹಾರಾಡಿದೆ
'ಇಂದು ವಿಶ್ವಸಂಸ್ಥೆಯಲ್ಲಿ ನಮ್ಮ ಧ್ವಜ ಎತ್ತರದಲ್ಲಿ ಹಾರಾಡಿದೆ. ಸುಳ್ಳು ಧ್ವಜವನ್ನು ಹಾರಿಸಿದವರ ಪ್ರಯತ್ನ ನಮ್ಮ ಅನೇಕ ಸ್ನೇಹಿತರ ಖಡಕ್ ಪ್ರತಿಕ್ರಿಯೆಯಿಂದ ನೆಲಕಚ್ಚಿದೆ. ಸಮಸ್ಯೆಯನ್ನು ನಿವಾರಿಸುವ ಬದಲು ಸುಳ್ಳು ನಾಟಕಗಳನ್ನು ಹೂಡುವ ಪಾಕಿಸ್ತಾನದ ಚಾಳಿಗೆ ತಕ್ಕ ಪಾಠ ದೊರೆತಿದೆ. ಪಾಕಿಸ್ತಾನದ ಮತ್ತು ಪಾಕಿಸ್ತಾನದ ಇತರೆ ಯಾವುದೇ ಪ್ರತಿನಿಧಿಗಳ ನಿರಂತರ ಆಧಾರ ರಹಿತ ಆರೋಪಗಳು ವಿಶ್ವಸಂಸ್ಥೆಯಲ್ಲಿ ಮಾನ್ಯವಾಗುವುದಿಲ್ಲ ಎನ್ನುವುದು ಸಾಬೀತಾಗಿದೆ' ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಪ್ರತಿನಿಧಿ ಸಯ್ಯದ್ ಅಕ್ಬರುದ್ದೀನ್ ಹೇಳಿದ್ದಾರೆ.