ಬಾಲಕೋಟ್ ದಾಳಿ ಯಶಸ್ವಿ ಎನ್ನುವುದಕ್ಕೆ ಸಿಕ್ಕಿತು ಮತ್ತೊಂದು ಪುರಾವೆ
ವಾಷಿಂಗ್ಟನ್ ಡಿಸಿ, ಮಾರ್ಚ್ 13 : ಬಾಲಕೋಟ್ ನಲ್ಲಿ 200ಕ್ಕೂ ಹೆಚ್ಚು ಜೈಷ್-ಎ-ಮೊಹಮ್ಮದ್ ಉಗ್ರರು, ಭಾರತದ ದಾಳಿ ನಡೆಯುವುದಕ್ಕೂ ಮುಂಚೆ ಇದ್ದರು ಎಂಬುದಕ್ಕೆ ಪುರಾವೆ ಸಿಕ್ಕಿದೆಯೆಂಬ ಮಾಹಿತಿ ಬಯಲಾದ ಮರುದಿನವೇ, ಏರ್ ಸ್ಟ್ರೈಕ್ ಯಶಸ್ವಿಯಾಗಿ ಎಂಬುದನ್ನು ಪುಷ್ಟೀಕರಿಸುವಂಥ ಮತ್ತೊಂದು ಮಾಹಿತಿ ತೇಲಿಬಂದಿದೆ.
ಅದೇನೆಂದರೆ, ಬಾಲಕೋಟ್ ನಲ್ಲಿ ಭಾರತೀಯ ವಾಯು ಸೇನೆ ಏರ್ ಸ್ಟ್ರೈಕ್ ಮಾಡಿದ ನಂತರ, ಅಲ್ಲಿ 200ಕ್ಕೂ ಹೆಚ್ಚು ಉಗ್ರರು ಸತ್ತಿದ್ದಾರೆಂದು ಪಾಕಿಸ್ತಾನದ ಸೇನೆ ಒಪ್ಪಿಕೊಂಡಿದ್ದು ಮಾತ್ರವಲ್ಲ, ಅವರ ದೇಹಗಳನ್ನು ಬಾಲಕೋಟ್ ನಿಂದ ಖೈಬರ್ ಪಖಟುಂಖ್ವಾ ಮತ್ತು ಇತರ ಗುಡ್ಡಗಾಡು ಪ್ರದೇಶಕ್ಕೆ ಸ್ಥಳಾಂತರಿಸಲಾಯಿತು.
ಏರ್ಸ್ಟ್ರೈಕ್ ಬಳಿಕ ಬಾಲಕೋಟ್ನಿಂದ 200 ಉಗ್ರರ ಶವಗಳ ರವಾನೆ: ಅಮೆರಿಕ ಹೋರಾಟಗಾರರು
ಈ ಮಾಹಿತಿಯನ್ನು ಪಾಕಿಸ್ತಾನದ ಗಿಲ್ಗಿಟ್ ಮೂಲದ, ಅಮೆರಿಕದಲ್ಲಿ ನೆಲೆಸಿರುವ ಚಳವಳಿಗಾರ ಸೆಂಗೆ ಹಸ್ನನ್ ಸೆರಿಂಗ್ ಎಂಬುವವರು ಟ್ವೀಟ್ ಮಾಡಿದ್ದು, ಪಾಕಿಸ್ತಾನ ಸರಕಾರಕ್ಕೆ ಬೆಂಬಲವಾಗಿ ನಿಂತು ಹೋರಾಡುವ ಈ ಮುಜಾಹಿದ್ ಗಳಿಗೆ ಅಲ್ಲಾಹು ವಿಶೇಷ ಕೊಡುಗೆ ನೀಡುತ್ತಾನೆ ಎಂದು ಪಾಕ್ ಮಿಲಿಟರಿ ಹೇಳಿದ್ದಾಗಿ ಟ್ವೀಟ್ ಮಾಡಿದ್ದಾರೆ.
ಬಾಲಕೋಟ್ ನಲ್ಲಿ ಜೈಷ್-ಎ-ಮೊಹಮ್ಮದ್ ಸಂಘಟನೆಗೆ ಸೇರಿದೆ 200ಕ್ಕೂ ಹೆಚ್ಚು ಉಗ್ರರನ್ನು ದಾಳಿ ನಡೆದ ಮರುದಿನವೇ ಸ್ಥಳಾಂತರಿಸಲಾಯಿತು ಎಂದು ಉರ್ದು ಮಾಧ್ಯಮಗಳು ವರದಿ ಮಾಡಿದ್ದಾಗಿ ಸೆರಿಂಗ್ ಅವರು ತಿಳಿಸಿದ್ದಾರೆ. ಈ ದಾಳಿಯಲ್ಲಿ ಜೈಷ್ ಸಂಘಟನೆಗೆ ಸೇರಿದೆ ಹದಿನೆಂಟಕ್ಕೂ ಹೆಚ್ಚು ಕಮಾಂಡರ್ ಗಳು ಕೂಡ ಸಾವಿಗೀಡಾಗಿದ್ದಾರೆ.
|
ಮೀಡಿಯಾಗೆ ಅಲ್ಲಿಗೆ ಹೋಗಲು ಏಕೆ ಬಿಡುತ್ತಿಲ್ಲ?
ಈ ಬಗ್ಗೆ ಎಎನ್ಐ ಜೊತೆ ಮಾತನಾಡುತ್ತಿದ್ದ ಅವರು, ಈ ವಿಡಿಯೋ ಎಷ್ಟು ನಿಖರವಾಗಿದೆಯೆಂಬುದು ಗೊತ್ತಿಲ್ಲ. ಆದರೆ, ಬಾಲಕೋಟ್ ನಲ್ಲಿ ಜರುಗಿದ ಅತ್ಯಂತ ಪ್ರಮುಖವಾದ ಸಂಗತಿಯನ್ನು ಪಾಕಿಸ್ತಾನ ಖಂಡಿತವಾಗಿ ಮುಚ್ಚಿಡುತ್ತಿದೆ. ಅಲ್ಲಿ ಆದ ಹಾನಿ ಎಷ್ಟೆಂದು ತಿಳಿಯಲು ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಮಾಧ್ಯಮಕ್ಕೆ ಅವಕಾಶ ಮಾಡಿ ಕೊಡಲಾಗುತ್ತಿಲ್ಲ. ಅಲ್ಲಿ ಅರಣ್ಯ ಪ್ರದೇಶಕ್ಕೆ ಮಾತ್ರ ಹಾನಿಯಾಗಿದೆ ಎಂದು ಪಾಕಿಸ್ತಾನ ಹೇಳುತ್ತಲೇ ಇದೆ. ಆದರೆ, ಅಲ್ಲಿಗೆ ಹೋಗಲು ಮಾಧ್ಯಮಕ್ಕೆ ಏಕೆ ಅವಕಾಶ ಮಾಡಿಕೊಡುತ್ತಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.
ಮೃತ ದೇಹಗಳನ್ನು ಖೈಬರ್ ಗೆ ಸ್ಥಳಾಂತರ
ಅದೇ ಸಮಯದಲ್ಲಿ ಜೈಷ್-ಎ-ಮೊಹಮ್ಮದ್ ಸಂಘಟನೆ, ಅಲ್ಲಿ ಮದ್ರಸಾ ಇತ್ತೆಂದು ಒಪ್ಪಿಕೊಂಡಿದೆ. ವೈಮಾನಿಕ ದಾಳಿಯಾದ ಮರುದಿನವೇ ಅಲ್ಲಿಂದ ಹಲವಾರು ಮೃತ ದೇಹಗಳನ್ನು ಬಾಲಕೋಟ್ ನಿಂದ ಖೈಬರ್ ಪಖಟುಂಖ್ವಾ ಗುಡ್ಡಗಾಡು ಪ್ರದೇಶಕ್ಕೆ ರವಾನಿಸಲಾಯಿತು ಎಂದು ಹಲವಾರು ಸ್ಥಳೀಯ ಉರ್ದು ಮಾಧ್ಯಮಗಳು ವರದಿ ಮಾಡಿವೆ. ಬಾಲಕೋಟ್ ನಲ್ಲಿ ಭಾರತೀಯ ವಾಯು ಸೇನೆ ಅತ್ಯಂತ ಯಶಸ್ವಿಯಾಗಿ ದಾಳಿ ನಡೆಸಿ, ಅಲ್ಲಿನ ನೆಲೆಗಳನ್ನು ಧ್ವಂಸ ಮಾಡಿತು ಎಂಬುದಕ್ಕೆ ಬೇಕಾದಷ್ಟು ಸಾಕ್ಷ್ಯಗಳು ಲಭಿಸಿವೆ. ಇದು ಸುಳ್ಳಾಗಿದ್ದರೆ ಪಾಕಿಸ್ತಾನ ಸರಕಾರ ಅಥವಾ ಮಿಲಿಟರಿ, ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ಅಲ್ಲಿಗೆ ಹೋಗಿ ವೀಕ್ಷಿಸಲು ಏಕೆ ಅನುಮತಿ ನೀಡುತ್ತಿಲ್ಲ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.
ನೂರಾರು ಜೈಷ್ ಉಗ್ರರು ಹತ್ಯೆಯಾಗಿದ್ದಕ್ಕೆ ಸಿಕ್ಕಿದೆ ಬಲವಾದ ಸಾಕ್ಷ್ಯ!
ಇಪ್ಪತ್ತೊಂದು ನಿಮಿಷದಲ್ಲಿ ಎಲ್ಲವೂ ಧ್ವಂಸ
ಬಾಲಕೋಟ್ ನಲ್ಲಿ ಏರ್ ಸ್ಟ್ರೈಕ್ ನಡೆದ ಸಮಯದಲ್ಲಿಯೇ 200ಕ್ಕೂ ಹೆಚ್ಚು ಮೊಬೈಲ್ ಸಿಗ್ನಲ್ ಗಳು ಸಿಕ್ಕಿದ ನಂತರವೇ, ಅಲ್ಲಿ ಉಗ್ರರು ಇರುವುದನ್ನು ಖಚಿತಪಡಿಸಿಕೊಂಡು ಭಾರತೀಯ ವಾಯು ಸೇನೆ ಫೆಬ್ರವರಿ 26ರಂದು ಏರ್ ಸ್ಟ್ರೈಕ್ ನಡೆಸಿತ್ತು. ಜೊತೆಗೆ ಮಜಫರಾಬಾದ್ ಮತ್ತು ಚಾಕೋಟಿ ಎಂಬಿಲ್ಲಿಯೂ ಬೆಳಿಗ್ಗೆ 3.45ರ ಸುಮಾರಿಗೆ ದಾಳಿ ನಡೆಸಿ ಕೇವಲ 21 ನಿಮಿಷಗಳಲ್ಲಿ ಎಲ್ಲವನ್ನೂ ಧ್ವಂಸಗೊಳಿಸಿತ್ತು. ದಾಳಿ ನಡೆಯುತ್ತಿದ್ದಂತೆ ಆ ಎಲ್ಲ 200ಕ್ಕೂ ಹೆಚ್ಚು ಮೊಬೈಲ್ ಸಿಗ್ನಲ್ ಗಳು ಕೂಡ ಕಾಣೆಯಾಗಿದ್ದವು. ಆದರೆ, ಈ ಏರ್ ಸ್ಟ್ರೈಕ್ ನಡೆಸಿದ ನಂತರ ಪಡೆದ ಯಶಸ್ಸಿನ ಬಗ್ಗೆ ಸಾಕ್ಷ್ಯ ಕೊಡುವಂತೆ ಕಾಂಗ್ರೆಸ್ ಪಕ್ಷ ಸೇರಿದಂತೆ ವಿರೋಧ ಪಕ್ಷಗಳು ಆಗ್ರಹಿಸುತ್ತಲೇ ಇದ್ದವು. ಇದಕ್ಕೆ ತಿರುಗೇಟು ನೀಡಿದ್ದ ಭಾರತೀಯ ವಾಯು ಸೇನೆ, ಗುರಿಯಿಟ್ಟು ವೈರಿಗಳ ನೆಲೆ ಧ್ವಂಸಗಳಿಸುವುದಷ್ಟೇ ಸೇನೆಯ ಕೆಲಸ, ಹೆಣಗಳನ್ನು ಎಣಿಸುವುದಲ್ಲ ಎಂದಿತ್ತು.
ಜೈಷ್ ಉಗ್ರನಿಂದ ಆತ್ಮಾಹುತಿ ದಾಳಿ
ಜಮ್ಮು ಮತ್ತು ಕಾಶ್ಮೀರದಲ್ಲಿ ಪುಲ್ವಾಮಾ ಜಿಲ್ಲೆಯಲ್ಲಿ ಫೆಬ್ರವರಿ 14ರಂದು ಪ್ರೇಮಿಗಳ ದಿನವೇ, ಜೈಷ್-ಎ-ಮೊಹಮ್ಮದ್ ಸಂಘಟನೆಯ ಉಗ್ರ ಆದಿಲ್ ಎಂಬಾತ ಕಾಶ್ಮೀರದ ಉಗ್ರ ಆತ್ಮಾಹುತಿ ದಾಳಿ ನಡೆಸಿ ಕೇಂದ್ರ ಪೊಲೀಸ್ ಮೀಸಲು ಪಡೆಯ 40ಕ್ಕೂ ಹೆಚ್ಚು ಜವಾನರನ್ನು ಹತ್ಯೆ ಮಾಡಿದ್ದ. ಜವಾನರು ಹೋಗುತ್ತಿದ್ದ ಬಸ್ಸಿಗೆ ಸ್ಫೋಟಕಗಳನ್ನು ತುಂಬಿದ್ದ ತನ್ನ ಮಾರುತಿ ಇಕೋ ವಾಹನವನ್ನು ಗುದ್ದಿಸಿ ಸ್ಫೋಟಗೊಳಿಸಿದ್ದ. ಇದಾದ ಹನ್ನೆರಡು ದಿನಗಳ ನಂತರ ಭಾರತದ ವಾಯು ಸೇನೆ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಏರ್ ಸ್ಟ್ರೈಕ್ ಮಾಡಿತ್ತು. ಇದೀಗ ಒಂದೊಂದಾಗಿ ಸಾಕ್ಷ್ಯಗಳು ಹೊರಬೀಳುತ್ತಿವೆ ಮತ್ತು ಭಾರತದ ಯಶಸ್ಸಿಗೆ ಪುಷ್ಟಿ ನೀಡುತ್ತಿವೆ.
vಬಾಲಕೋಟ್ ದಾಳಿ ಸುಳ್ಳಾ? ಉಪಗ್ರಹ ಚಿತ್ರಗಳು ಹೇಳುವ ಹೊಸಕತೆ ನಿಜಾನಾ?
ದಾಳಿ ಮಾಡಿದ್ದು ಉಗ್ರರ ಮೇಲೋ ಮರಗಳ ಮೇಲೋ
ಪಾಕ್ ಬೆಂಬಲಿತ ಉಗ್ರರ ಇಲ್ಲಸಲ್ಲದ ಸಂಖ್ಯೆಗಳನ್ನು ಹೇಳಿ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲು ಭಾರತೀಯ ಜನತಾ ಪಕ್ಷ ಯತ್ನಿಸುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಸಭೆಯೊಂದರಲ್ಲಿ, ವೈಮಾನಿಕ ದಾಳಿಯಲ್ಲಿ 250 ಪಾಕ್ ಉಗ್ರರು ಹತರಾಗಿದ್ದಾರೆಂದು ಹೇಳಿಕೆ ನೀಡಿದ್ದರು. ಇದನ್ನೇ ಸಾಬೀತುಪಡಿಸಲು ವಿರೋಧ ಪಕ್ಷದವರು ಪಟ್ಟು ಹಿಡಿದಿದ್ದರು. ಕಾಂಗ್ರೆಸ್ ನಾಯಕ, ಮಾತುಗಾರ ನವಜೋತ್ ಸಿಂಗ್ ಸಿಧು ಅವರು, ಸೇನೆ ದಾಳಿ ಮಾಡಿ ಕೊಂದಿದ್ದು ಉಗ್ರರನ್ನಲ್ಲ, ಅರಣ್ಯದಲ್ಲಿರುವ ಮರಗಳನ್ನು ಬುಡಮೇಲು ಮಾಡಿದೆ ಎಂದು ವ್ಯಂಗ್ಯವಾಡಿದ್ದರು.