ಚಿಕ್ಲಿಹೊಳೆ ಜಲಾಶಯ: ಎಚ್ಚರಿಕೆ ಫಲಕ ಅಳವಡಿಕೆಗೆ ಕಾರಣಗಳೇನು?
ಕೊಡಗು, ಮೇ 21: ಕೊಡಗಿನ ಪ್ರಶಾಂತ ತಾಣದಲ್ಲಿ ನಿರ್ಮಿಸಲಾಗಿರುವ ಚಿಕ್ಲಿಹೊಳೆ ಜಲಾಶಯಕ್ಕೆ ಒಂದಷ್ಟು ಪ್ರವಾಸಿಗರು ಬರುತ್ತಾರೆ. ಹೀಗೆ ಬರುವ ಪ್ರವಾಸಿಗರು ಮೋಜು ಮಸ್ತಿಯಲ್ಲಿ ತೊಡಗುವುದಲ್ಲದೆ, ನೀರಿಗಿಳಿದು ಈಜುವ ಸಾಹಸಕ್ಕೂ ಮುಂದಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
ಇದನ್ನರಿತ ಜಿಲ್ಲಾಡಳಿತ ಇದೀಗ ಸೂಚನಾಫಲಕ ಅಳವಡಿಸುವ ಮೂಲಕ ಪ್ರವಾಸಿಗರಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸುವ ಕೆಲಸವನ್ನು ಮಾಡಲಾಗುತ್ತಿದೆ.
ಪ್ರವಾಸಿಗರಿಗೆ ದೂರವಾದ ಚಿಕ್ಲಿಹೊಳೆ ಜಲಾಶಯ
ಹೆಚ್ಚಿನವರಿಗೆ ಹಾರಂಗಿ ಜಲಾಶಯವನ್ನು ಹೊರತುಪಡಿಸಿದರೆ ಕೊಡಗಿನಲ್ಲಿ ಮತ್ತೊಂದು ಪುಟ್ಟದಾದ ಚಿಕ್ಲಿಹೊಳೆ ಜಲಾಶಯ ಪ್ರವಾಸಿಗರನ್ನು ಸೆಳೆಯುತ್ತದೆ. ಆದರೆ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಪೈಕಿ ಕೆಲವರು ಅವ್ಯವಸ್ಥೆಯನ್ನು ಕಂಡು ಹಿಡಿಶಾಪ ಹಾಕಿದರೆ ಮತ್ತೆ ಕೆಲವರು ಮೋಜು ಮಸ್ತಿಗೆ ಸೂಕ್ತ ಸ್ಥಳವೆಂದು ಖುಷಿಪಡುತ್ತಾರೆ.
ಮಡಿಕೇರಿಯಿಂದ ಸುಮಾರು 26 ಕಿ.ಮೀ. ದೂರದಲ್ಲಿ ಚಿಕ್ಲಿಹೊಳೆ ಜಲಾಶಯವಿದೆ. ಇದರ ಸೌಂದರ್ಯವೇನಿದ್ದರೂ ಮಳೆಗಾಲದಲ್ಲಿ ಮಾತ್ರ. ಎರಡು ಗುಡ್ಡದ ನಡುವೆ ಹರಿಯುತ್ತಿದ್ದ ಹೊಳೆಗೆ ಅಡ್ಡಲಾಗಿ ಕಟ್ಟೆಯನ್ನು ಕಟ್ಟಿ ಜಲಾಶಯವನ್ನು ನಿರ್ಮಿಸಲಾಗಿದ್ದು, ಚಿಕ್ಲಿಹೊಳೆ ಜಲಾಶಯವಾಗಿ ಎಲ್ಲರ ಗಮನಸೆಳೆಯುತ್ತಿದೆ.
ಚಿಕ್ಲಿಹೊಳೆಯ ಅರ್ಧ ಚಂದ್ರಾಕೃತಿಯ ತೂಬಿನಲ್ಲಿ ಜಲನರ್ತನ
ಕುಶಾಲನಗರ ಹಾಗೂ ಪಿರಿಯಾಪಟ್ಟಣ ವ್ಯಾಪ್ತಿಯ ಸುಮಾರು 18 ಗ್ರಾಮಗಳ 862 ಹೆಕ್ಟೇರ್ ಪ್ರದೇಶಕ್ಕೆ ನೀರನ್ನು ಒಗದಿಸುವ ಉದ್ದೇಶದಿಂದ ಕಾವೇರಿ ನದಿಯ ಉಪನದಿಯಾದ ಚಿಕ್ಲಿಹೊಳೆಗೆ 1982 ರಲ್ಲಿ ಸುಮಾರು 12 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಆದರೆ ಬ್ರಿಟಿಷರ ಕಾಲದಲ್ಲಿಯೇ ಕೃಷಿಗೆ ನೀರು ಹರಿಸಲು ಇಲ್ಲಿ ಹೊಳೆಗೆ ಅಡ್ಡಲಾಗಿ ಕಟ್ಟೆ ನಿರ್ಮಿಸಲಾಗಿತ್ತು ಎನ್ನಲಾಗಿದೆ. ಸ್ವಾತಂತ್ರ್ಯ ನಂತರ 1978ರಲ್ಲಿ ಶಂಕುಸ್ಥಾಪನೆ ನೆರವೇರಿಸಿ 1982 ರಲ್ಲಿ ಜಲಾಶಯ ನಿರ್ಮಾಣವಾಯಿತು. ಈ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ...
ನಿರ್ಲಕ್ಷ್ಯವಹಿಸಿದ ಅಧಿಕಾರಿಗಳು
ಈ ಜಲಾಶಯದ ಬಗ್ಗೆ ಒಂದಷ್ಟು ಕಾಳಜಿ ವಹಿಸಿ ಅಭಿವೃದ್ಧಿಪಡಿಸಿದ್ದರೆ ಬಹುಶಃ ಇದೊಂದು ಸುಂದರ ಪ್ರವಾಸಿ ತಾಣವಾಗಿ ರೂಪುಗೊಳ್ಳುತ್ತಿತ್ತು. ಆದರೆ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಜಲಾಶಯ ಅಭಿವೃದ್ಧಿ ಕಾಣುವ ಬದಲು ಅಧೋಗತಿಯತ್ತ ಸಾಗತೊಡಗಿದೆ.
ಕಳ್ಳರ ಪಾಲಾದ ಕಬ್ಬಿಣದ ಸರಪಳಿಗಳು
ಜಲಾಶಯದ ಉದ್ದಕ್ಕೂ ನಿರ್ಮಿಸಲಾಗಿದ್ದ ಕಬ್ಬಿಣದ ಸರಪಳಿಗಳು, ಯಂತ್ರೋಪಕರಣಗಳ ಬಿಡಿಭಾಗಗಳು ಕಳ್ಳರ ಪಾಲಾಗಿದೆ. ಅಷ್ಟೇ ಅಲ್ಲ, ನಿರ್ಜನ ಪ್ರದೇಶವಾದುದರಿಂದ ಮೋಜು ಮಸ್ತಿ ಹಾಗೂ ಅನೈತಿಕ ಚಟುವಟಿಕೆಯ ತಾಣವಾಗಿ ಮಾರ್ಪಾಡಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರು ದೂರು ನೀಡುತ್ತಾ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಎಚ್ಚರಿಕೆ ಫಲಕ ಅಳವಡಿಕೆ
ಕೆಲವು ದಿನಗಳ ಹಿಂದೆಯಷ್ಟೆ ಈ ಜಲಾಶಯದ ಹಿನ್ನೀರಿನಲ್ಲಿ ಈಜಲು ತೆರಳಿದ ಇಬ್ಬರು ಸಾವನ್ನಪ್ಪಿದ್ದರು. ಇದುವರೆಗೆ ಈ ಜಲಾಶಯದಲ್ಲಿ ಸುಮಾರು ಏಳು ಮಂದಿ ಸಾವನ್ನಪ್ಪಿದ್ದಾರೆ. ಇದರಿಂದ ಎಚ್ಚೆತ್ತುಗೊಂಡ ಜಿಲ್ಲಾಡಳಿತದ ಇದೀಗ ಇಲ್ಲಿ ಎಚ್ಚರಿಕೆ ಫಲಕವನ್ನು ಅಳವಡಿಸಿದೆ.
ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತದೆಯಾ?
ನದಿ ಆಳವಿದ್ದು, ಪ್ರವಾಸಿಗರು ಮತ್ತು ಸಾರ್ವಜನಿಕರು ನೀರಿಗೆ ಇಳಿಯದಂತೆ, ಮದ್ಯಪಾನ ಹಾಗೂ ಧೂಮಪಾನ ನಿಷೇಧಿತ ಪ್ರದೇಶವೆಂದು ಘೋಷಿಸಿ, ರಾತ್ರಿ ವೇಳೆ ತಂಗುವುದನ್ನು ನಿಷೇಧಿಸಿರುವ ಬಗ್ಗೆ ಎಚ್ಚರಿಕೆಯನ್ನು ನೀಡಲಾಗಿದೆ. ಕೇವಲ ಜಿಲ್ಲಾಡಳಿತ ಫಲಕವನ್ನು ಅಳವಡಿಸಿ ಕೈತೊಳೆದು ಕೊಳ್ಳುತ್ತದೆಯಾ ಅಥವಾ ಇಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತದೆಯಾ ಎಂಬುದನ್ನು ಕಾದುನೋಡಬೇಕಿದೆ.