ವಿಜಯಪುರ ಪರೀಕ್ಷಾ ಕೇಂದ್ರದ ಬಳಿ ಯುವಕ ಸಾವು; ಪೊಲೀಸ್ ಲಾಠಿಯಿಂದ ಆಯಿತೇ ಅವಘಡ?
ವಿಜಯಪುರ, ಜೂನ್ 27: ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರದ ಬಳಿ ಹೋಗುತ್ತಿದ್ದ ಯುವಕನಿಗೆ ಪೊಲೀಸರು ಲಾಠಿ ಬೀಸಿದ್ದು, ಆತ ಸಾವನ್ನಪ್ಪಿದ ಘಟನೆ ವಿಜಯಪುರದ ಬಸವನ ಬಾಗೇವಾಡಿ ತಾಲೂಕಿನಲ್ಲಿ ನಡೆದಿದೆ. ವಿಜಯಪುರದ ಸಾಗರ ಕಾಂಬಳೆ (19) ಸಾವನ್ನಪ್ಪಿದ ಯುವಕ. ಈ ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ ಅಗರವಾಲ್, ಆ ಯುವಕನ ಮರಣೋತ್ತರ ಪರೀಕ್ಷೆ ನಂತರ ಸ್ಪಷ್ಪ ಮಾಹಿತಿ ಸಿಗಲಿದೆ ಎಂದು ತಿಳಿಸಿದ್ದಾರೆ.
ಕಳೆದ ಎರಡು ದಿನಗಳಿಂದ ರಾಜ್ಯಾದ್ಯಂತ ಎಸ್ಎಸ್ಎಲ್ಸಿ ಪರೀಕ್ಷೆ ನಡೆಯುತ್ತಿದೆ. ಎಲ್ಲಾ ಪರೀಕ್ಷಾ ಕೇಂದ್ರಗಳ ಎದುರು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಆದರೆ, ಪರೀಕ್ಷೆ ನಡೆಯುವ ವೇಳೆ ಬಸವನ ಬಾಗೇವಾಡಿಯ ಹೂವಿನ ಹಿಪ್ಪರಗಿಯಲ್ಲಿನ ವಿಶ್ವಚೇತನ ಪ್ರೌಢ ಶಾಲೆಯ ಪರೀಕ್ಷಾ ಕೇಂದ್ರದ ಎದುರು ಇಬ್ಬರು ಯುವಕರು ಹೋಗುತ್ತಿದ್ದ ವೇಳೆ ಪೊಲೀಸರು ಇವರು ಕಾಪಿ ಚೀಟಿ ನೀಡಲು ಹೊರಟಿದ್ದಾರೆ ಎಂಬ ಅನುಮಾನದಿಂದ ಲಾಠಿ ಬೀಸಿದ್ದಾರೆ.
SSLC ಪರೀಕ್ಷೆ ಮುಗಿಸಿ ಹೊರಟಿದ್ದ ವಿದ್ಯಾರ್ಥಿಗಳಿಗೆ ಲಾರಿ ಡಿಕ್ಕಿ: ಒಬ್ಬ ಸಾವು, ಇಬ್ಬರ ಸ್ಥಿತಿ ಗಂಭೀರ
ಆಗ ಸಾಗರ ಕಾಂಬಳೆ ಎಂಬ ಯುವಕ ಬೈಕ್ ನಿಂದ ಕುಸಿದು ಬಿದ್ದಿದ್ದಾನೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ ಯುವಕ ಸಾವನ್ನಪ್ಪಿದ್ದಾನೆ. ಪೊಲೀಸರ ಹಲ್ಲೆಯಿಂದ ಯುವಕ ಸಾವನ್ನಪ್ಪಿದ್ದಾನೆ. ಆತ ಕಾಪಿ ನೀಡಲು ಹೋಗಿರಲಿಲ್ಲ, ತಂಗಿಯನ್ನು ಪರೀಕ್ಷೆಗೆ ಬಿಡಲು ಹೋಗಿದ್ದ ಎಂದು ಪೋಷಕರು ಆರೋಪಿಸಿದ್ದಾರೆ. ಸಾಗರ್ ಜೊತೆಯಿದ್ದ ಸ್ನೇಹಿತನೂ ತಾವು ಕಾಪಿ ಚೀಟಿ ನೀಡಲು ಹೋಗಿಲ್ಲ ಎಂದು ಹೇಳಿದ್ದಾನೆ. ಆದರೆ, ತಾವು ವಿಚಾರಣೆ ನಡೆಸುವುದಕ್ಕಾಗಿ ವಾಹನವನ್ನು ನಿಲ್ಲಿಸಿದ್ದೇವೆಯೇ ಹೊರತು ಲಾಠಿ ಬೀಸಿಲ್ಲ, ಇದರಿಂದ ಯುವಕ ಸಾವನ್ನಪ್ಪಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ.
ಈ ಪ್ರಕರಣಕ್ಕೆ ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ ಅಗರವಾಲ್, "ಮೃತಪಟ್ಟ ಯುವಕ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಎಂಬ ಮಾಹಿತಿ ಇದೆ. ಘಟನೆ ಸಂದರ್ಭದಲ್ಲಿ ಆತ ಗಾಬರಿಯಾಗಿ ಬಿದ್ದಿದ್ದರಿಂದ ಸಾವನ್ನಪ್ಪಿರುವ ಸಾಧ್ಯತೆ ಇದೆ. ಯುವಕನ ಶವವನ್ನು ಬಸವನ ಬಾಗೇವಾಡಿ ತಾಲೂಕು ಆಸ್ಪತ್ರೆಯಲ್ಲಿ ಇಡಲಾಗಿದೆ. ಮರಣೋತ್ತರ ಪರೀಕ್ಷೆಗೆ ಆದೇಶಿಸಲಾಗಿದೆ. ಪರೀಕ್ಷೆ ವರದಿ ಬಂದ ನಂತರ ಸ್ಪಷ್ಟವಾಗಿ ಎಲ್ಲವೂ ತಿಳಿಯಲಿದೆ ಎಂದು ಹೇಳಿದ್ದಾರೆ.